
ಬೆಂಗಳೂರು, ಮೇ 10: ಆರ್ಟ್ ಆಫ್ ಲಿವಿಂಗ್ (Art of Living) ಸಂಸ್ಥೆಯ 45ನೇ ವರ್ಷಾಚರಣೆ ಹಾಗೂ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ (Sri Sri Ravi Shankar Guruji) ಅವರ 70ನೇ ಜನ್ಮೋತ್ಸವದ ಅಂಗವಾಗಿ ಬೆಂಗಳೂರಿನ ಕನಕಪುರ ರಸ್ತೆಯ ಆಶ್ರಮದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಲ್ಗೊಂಡರು. ಈ ಸಂದರ್ಭದಲ್ಲಿ ಕಮಲದ ಹೂವಿನ ಆಕೃತಿಯಲ್ಲಿ ನಿರ್ಮಾಣ ಮಾಡಲಾಗಿರುವ ಭವ್ಯವಾದ ‘ಧ್ಯಾನ ಮಂದಿರ’ವನ್ನು ಲೋಕಾರ್ಪಣೆಗೊಳಿಸಿದ ಅವರು, ಆಧ್ಯಾತ್ಮಿಕ ಶಕ್ತಿ ಮತ್ತು ಸಮಾಜ ಸೇವೆಯ ಮಹತ್ವದ ಬಗ್ಗೆ ಪ್ರಸ್ತಾಪಿಸಿದರು. ಗುರೂಜಿಯವರ ಮತ್ತು ಆಶ್ರಮದ ಸೇವಾ ಕಾರ್ಯಗಳು ಭಾರತವನ್ನು ‘ವಿಶ್ವಗುರು’ವನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಶ್ಲಾಘಿಸಿದರು.
ತಮ್ಮ ಭಾಷಣದುದ್ದಕ್ಕೂ ‘ಸೇವೆ’ಯ ಮಹತ್ವವನ್ನು ಎತ್ತಿ ಉಲ್ಲೇಖಿಸಿದ ಮೋದಿ, ‘ನಮ್ಮಲ್ಲಿ ಸೇವೆ ಎನ್ನುವುದು ಪರಮ ಧರ್ಮ. ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರತಿ ಕಾರ್ಯಕರ್ತನಲ್ಲೂ ಸೇವಾ ಭಾವನೆ ಎದ್ದು ಕಾಣುತ್ತಿದೆ. ಗುರೂಜಿ ಅವರು ಕಳೆದ 45 ವರ್ಷಗಳ ಹಿಂದೆ ಬಿತ್ತಿದ ಬೀಜ ಇಂದು ವಿಶಾಲವಾದ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ವೃಕ್ಷದ ಸಾವಿರಾರು ಶಾಖೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರ ಬದುಕನ್ನು ಸುಂದರಗೊಳಿಸುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ಸೇವಾ ಭಾವನೆಯಿಂದ ಮಾಡಿದ ಕಾರ್ಯವು ಯಾವಾಗಲೂ ಸುಖದ ಫಲ ನೀಡುತ್ತದೆ ಎಂಬುದಕ್ಕೆ ಈ ಮಂದಿರವೇ ಸಾಕ್ಷಿ. ಈ ಆಶ್ರಮದ ಪವಿತ್ರ ಪರಿಸರದಲ್ಲಿ ಕಾಲ ಕಳೆದ ಸಂದರ್ಭ ಮತ್ತು ಇಲ್ಲಿನ ದಿವ್ಯ ಅನುಭವವು ಸ್ಮೃತಿಯಲ್ಲಿ ಸದಾ ಇರಲಿದೆ ಎಂದು ಮೋದಿ ನುಡಿದರು.
ಬೆಂಗಳೂರು ಕೇವಲ ತಂತ್ರಜ್ಞಾನದ ನಗರವಲ್ಲ, ಇದು ಆಧ್ಯಾತ್ಮಿಕ ಚೇತನದ ಕೇಂದ್ರವೂ ಹೌದು ಎಂದು ಪ್ರಧಾನಿ ಬಣ್ಣಿಸಿದರು. ‘ಬೆಂಗಳೂರು ನಗರವು ವಿಶ್ವಕ್ಕೆ ಸಾಫ್ಟ್ವೇರ್ ಅನ್ನು ನೀಡುತ್ತಿದೆ. ಅದೇ ರೀತಿ ಆರ್ಟ್ ಆಫ್ ಲಿವಿಂಗ್ ಮೂಲಕ ವಿಶ್ವಕ್ಕೆ ಮಾನಸಿಕ ಶಾಂತಿಯ ಸಾಫ್ಟ್ವೇರ್ ಅನ್ನೂ ನೀಡುತ್ತಿದೆ. ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ಭಾರತದ ಸಂಸ್ಕಾರದ ಅವಿಭಾಜ್ಯ ಅಂಗಗಳಾಗಿದ್ದು, ಇವುಗಳನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸುವಲ್ಲಿ ಈ ಸಂಸ್ಥೆಯ ಪಾತ್ರ ಹಿರಿದು’ ಎಂದು ಮೋದಿ ಮೆಚ್ಚುಗೆ ಸೂಚಿಸಿದರು.
ಮುಂದಿನ ತಲೆಮಾರಿನ ಹಿತದೃಷ್ಟಿಯಿಂದ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಹೊಣೆ ಎಂದ ಪ್ರಧಾನಿ, ಆಶ್ರಮದ ಕಾರ್ಯಕರ್ತರಿಗೆ ಕೆಲವು ಮಹತ್ವದ ಕೆಲಸಗಳನ್ನು ವಹಿಸಿದರು. ‘ಕೆಮಿಕಲ್ ಗೊಬ್ಬರಗಳಿಂದ ನಮ್ಮ ಭೂಮಿ ತಾಯಿಯನ್ನು ರಕ್ಷಿಸುವುದು ಕೂಡ ಒಂದು ಆರ್ಟ್ ಆಫ್ ಲಿವಿಂಗ್. ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡಿ. ಜಲ ಸಂರಕ್ಷಣೆ ಮತ್ತು ಪ್ರತಿ ಹನಿ ನೀರನ್ನು ಉಳಿಸುವುದು ಬದುಕಿನ ಅತ್ಯಗತ್ಯ ಕಲೆಯಾಗಲಿ ಎಂದರು.
ಭಾರತದ ಯುವಜನತೆ ಇಂದು ಬಾಹ್ಯಾಕಾಶದಿಂದ ಡಿಜಿಟಲ್ ಪೇಮೆಂಟ್ವರೆಗೆ ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದ ಮೋದಿ, ‘ಯುವಕರು ಮಾನಸಿಕವಾಗಿ ಶಾಂತರಾಗಿದ್ದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಆಧುನಿಕ ಯುಗದ ಒತ್ತಡಗಳನ್ನು ಎದುರಿಸಲು ಧ್ಯಾನ ಮಂದಿರವು ಶಾಂತಿ ಮತ್ತು ಚೈತನ್ಯದ ಕೇಂದ್ರವಾಗಲಿದೆ’ ಎಂದು ಆಶಿಸಿದರು.
ಇದನ್ನೂ ಓದಿ: ಭಾರತವನ್ನು ಜಗತ್ತಿನ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಿಸಿದ ಮೋದಿ ಒಬ್ಬ ‘ನೈಜ ಯೋಗಿ’: ಶ್ರೀ ಶ್ರೀ ರವಿಶಂಕರ್ ಗುರೂಜಿ
ಕೊನೆಯಲ್ಲಿ ‘ಲೋಟಸ್ (ಕಮಲ) ಛತ್ರದ ಅಡಿಯಲ್ಲಿ ನಾವೆಲ್ಲರೂ ಇದ್ದೇವೆ, ಈ ಆಧ್ಯಾತ್ಮಿಕ ಶಕ್ತಿಯೇ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ’ ಎಂದು ಮಾರ್ಮಿಕವಾಗಿ ನುಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ