ಬೆಂಗಳೂರು: ಕೇಂದ್ರ ಸರ್ಕಾರಕ್ಕೆ ಪಂಗನಾಮ; ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲಿ 935 ಕೋಟಿ ರೂ. ಕಳಪೆ ಕಾಮಗಾರಿ

| Updated By: preethi shettigar

Updated on: Sep 15, 2021 | 4:09 PM

ಪ್ರತಿ ಕಿಲೋ.ಮೀಟರ್ ಸ್ಮಾರ್ಟ್ ಸಿಟಿ ರಸ್ತೆಗೆ ಸುಮಾರು 19 ಕೋಟಿ ರೂಪಾಯಿ ವ್ಯಯ ಮಾಡಲಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ 11 ರಸ್ತೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಿಲಾಗಿದ್ದು, 11 ರಸ್ತೆಗಳ ಪೈಕಿ ಭಾಗಶಃ ರಸ್ತೆ ಕಾಮಗಾರಿ ಕಳಪೆಯಾಗಿದೆ.

ಬೆಂಗಳೂರು: ಕೇಂದ್ರ ಸರ್ಕಾರಕ್ಕೆ ಪಂಗನಾಮ; ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲಿ 935 ಕೋಟಿ ರೂ. ಕಳಪೆ ಕಾಮಗಾರಿ
Follow us on

ಬೆಂಗಳೂರು: ರಾಜಧಾನಿಯನ್ನು ಸ್ಮಾರ್ಟ್ ಮಾಡಲು ಹೊರಟ್ಟಿದ್ದ ಕೇಂದ್ರ ಸರ್ಕಾರದ ಹಣ ಕಳಪೆ ಕಾಮಗಾರಿಯಿಂದ ವ್ಯರ್ಥವಾದಂತಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲಿ 935 ಕೋಟಿ ರೂಪಾಯಿ ಕಾಮಗಾರಿ, ಅಕ್ಷರಶಃ ಕಳಪೆ ಗುಣಮಟ್ಟದ ಕಾಮಗಾರಿಯಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಸದ್ಯ ಟಿವಿ9 ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಬಯಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆ ಅಡಿ ಬೆಂಗಳೂರಿನ ರಸ್ತೆ ಮತ್ತು ಫುಟ್ ಪಾತ್ ಅಭಿವೃದ್ಧಿಗೆ ಮುಂದಾಗಿದ್ದು, ಜನ ಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾಗಿತ್ತು. ಆದರೆ ಫುಟ್ ಪಾತ್ ನಿರ್ಮಾಣ ಮಾಡಲು ಅನುಸರಿಸಬೇಕಾದ ಕ್ರಮ ಪಾಲಿಸದೇ, ಕೇವಲ ಜಲ್ಲಿ ಮಣ್ಣು ಹಾಕಿ ಮೇಲೆ ಕಳಪೆ ಬ್ಲಾಕ್ಸ್ ಹಾಕಿ ಫುಟ್ ಪಾತ್ ನಿರ್ಮಾಣ ಮಾಡಿದ್ದಾರೆ.

ಪ್ರತಿ ಕಿಲೋ.ಮೀಟರ್ ಸ್ಮಾರ್ಟ್ ಸಿಟಿ ರಸ್ತೆಗೆ ಸುಮಾರು 19 ಕೋಟಿ ರೂಪಾಯಿ ವ್ಯಯ ಮಾಡಲಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ 11 ರಸ್ತೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಿಲಾಗಿದ್ದು, 11 ರಸ್ತೆಗಳ ಪೈಕಿ ಭಾಗಶಃ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂಬುವುದು ಟಿವಿ9 ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಬಯಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ನೀಡಲಾಗಿದೆ. 38 ರಸ್ತೆಗಳ ನಿರ್ಮಾಣಕ್ಕೆ ಮೊದಲು ಒಟ್ಟು 913 ಕೋಟಿ ಅನುದಾನ ನೀಡಿದ್ದು, ನಂತರ 253 ಕೋಟಿ ಹೆಚ್ಚುವರಿಯಾಗಿ ಅಳವಡಿಕೆ ಮಾಡಲಾಗಿದೆ. ಒಟ್ಟು 1,166 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಇದಾಗಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆ ಗುಣಮಟ್ಟದ ಕಾಮಗಾರಿ ಎಂದು ಖುದ್ದು ಸಚಿವ ಆರ್.ಅಶೋಕ್ ಒಪ್ಪಿಕೊಂಡಿದ್ದರು.

ಕಮರ್ಷಿಯಲ್ ಸ್ಟ್ರೀಟ್​ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಿದ್ದ ರಸ್ತೆ, ಸಿಎಂ ಉದ್ಘಾಟನೆ ಮಾಡಿದ್ದ ಮಾರನೇ ದಿನವೇ ಕಿತ್ತುಹೋಗಿತ್ತು. ನಂತರ ಆಗಸ್ಟ್ 13 ರಂದು ಖುದ್ದು ಸಚಿವ ಅಶೋಕ್ ಕಮರ್ಷಿಯಲ್ ಸ್ಟ್ರೀಟ್​ಗೆ ಭೇಟಿ ನೀಡಿ ಕಾಮಗಾರಿ ಕಳಪೆಯಾಗಿದೆ ಎಂದು ಒಪ್ಪಿಕೊಂಡಿದ್ದರು.

ಚಾಲುಕ್ಯ ಸಿಗ್ನಲ್‌ ಬಳಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ
ಕಳಪೆ ಸಿಮೆಂಟ್, ಕಳಪೆ ಬ್ಲಾಕ್ಸ್ ಬಳಕೆ ಮಾಡುವ ಮೂಲಕ ಫುಟ್ ಪಾತ್ ನಿರ್ಮಾಣ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯ ಷರತ್ತಿನ ಪ್ರಕಾರ ಗುತ್ತಿಗೆದಾರರು ಕಾಮಗಾರಿ ಮಾಡದೆ ಇರುವುದು ಟಿವಿ9 ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಬಯಲಾಗಿದೆ.

ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ವಿಚಾರವಾಗಿ ಟಿವಿ9 ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಬಿಬಿಎಂಪಿ ಆಯುಕ್ತರ ಬಳಿ ಮಾಹಿತಿ ತರಿಸಿಕೊಳ್ಳುತ್ತೇನೆ. ಕಳಪೆ ಕಾಮಗಾರಿಯಾಗಿದ್ದರೆ ಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಕಾಮಗಾರಿ ಲೋಪದ ಬಗ್ಗೆ ಒಪ್ಪಿಕೊಂಡರಾ ಗೌರವ್ ಗುಪ್ತಾ?
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಳಪೆ ಕಾಮಗಾರಿ ವಿಚಾರಕ್ಕೆ ಸಂಬಂಧಪಟ್ಟಂತೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕಾಮಗಾರಿಯಲ್ಲಿ ಲೋಪದ ಬಗ್ಗೆ ಒಪ್ಪಿಕೊಂಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯನ್ನು ಪ್ರತ್ಯೇಕ ವಿಂಗ್ ನೋಡಿಕೊಳ್ಳುತ್ತದೆ. ಕೂಡಲೇ ನಾವು ಕೂಡ ಆ ಬಗ್ಗೆ ವರದಿಯನ್ನು ತರಿಸಿಕೊಳ್ಳುತ್ತೇವೆ. ಹಾಗೇ ನಮ್ಮ ರಸ್ತೆ‌ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಹಸ್ತಾಂತರ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:
ಕಳಪೆ ಕಾಮಗಾರಿಯಿಂದ ಬೆಂಗಳೂರಿನಲ್ಲಿ ಅನಾಹುತ, ರಸ್ತೆಯೊಳಕ್ಕೆ ಇಳಿಯಿತು ಲಾರಿ ಚಕ್ರ

ಗುಬ್ಬಿ ಪಟ್ಟಣದಲ್ಲಿ ಒಳಚರಂಡಿ ಮಾರ್ಗ ಕಳಪೆ ಕಾಮಗಾರಿ: ಸಾರ್ವಜನಿಕರಿಂದ ತೀವ್ರ ಆಕ್ರೋಶ

Published On - 11:34 am, Wed, 15 September 21