ಉಕ್ರೇನ್​ನಲ್ಲಿ ಬಾಂಬ್ ದಾಳಿಗೆ ಮೃತಪಟ್ಟಿದ್ದ ನವೀನ ಕುಟುಂಬವನ್ನು ಭೇಟಿ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ

ಜೂನ್‌ 21ಕ್ಕೆ ಅರಮನೆ ಆವರಣದಲ್ಲಿ ನಡೆಯಲಿವರು ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಕಾರ್ಯಕ್ರಮದ ಮಾರ್ಗಸೂಚಿ ಪ್ರಕಟಿಸಿದರು.

ಉಕ್ರೇನ್​ನಲ್ಲಿ ಬಾಂಬ್ ದಾಳಿಗೆ ಮೃತಪಟ್ಟಿದ್ದ ನವೀನ ಕುಟುಂಬವನ್ನು ಭೇಟಿ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ
ನಿವೀನ್, ಪ್ರಧಾನಿ ನರೇಂದ್ರ ಮೋದಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jun 19, 2022 | 8:16 AM

ಬೆಂಗಳೂರು: ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ (International Yoga Day) ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ಬಾರಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ಉಕ್ರೇನ್​ ಯುದ್ಧದಲ್ಲಿ ಬಾಂಬ್ ದಾಳಿಯಿಂದ ಮೃತಪಟ್ಟಿದ್ದ ನವೀನ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ ಜೂನ್‌ 20ರಂದು ಬೆಂಗಳೂರಿನಲ್ಲಿ ಭೇಟಿ ಮಾಡಲಿದ್ದಾರೆ. ಈ ಕುರಿತಾಗಿ ಟಿವಿ 9ಗೆ ಮೃತ ವಿದ್ಯಾರ್ಥಿ ನವೀನ ತಂದೆ ಶೇಖರಗೌಡ ಗ್ಯಾನಗೌಡರ ಮಾಹಿತಿ ನೀಡಿದರು. ಜೂನ್ 20ರಂದು ಪ್ರಧಾನಿ ಮೋದಿಯವರ ಭೇಟಿಗೆ ನವೀನ ಕುಟುಂಬವನ್ನು ಪ್ರಧಾನಿ ಕಚೇರಿ ಆಹ್ವಾನಿಸಿದೆ. ಪ್ರಧಾನಿ ಭೇಟಿ ಬಗ್ಗೆ ನವೀನ ತಂದೆಗೆ ಸಿಎಂ ಬಸವರಾಜ ಬೊಮ್ಮಾಯಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈಗಾಗಲೆ ಬೆಂಗಳೂರಿನತ್ತ ನವೀನ ಪೋಷಕರು ಪ್ರಯಾಣ ಬೆಳೆಸಿದ್ದು, ನಾಳೆ ಬೆಳಿಗ್ಗೆ ಬೆಂಗಳೂರು ತಲುಪಲಿದ್ದಾರೆ. ನವೀನ ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮೀ ಮತ್ತು ನವೀನ ಸಹೋದರ ಹರ್ಷ ಭೇಟಿಗೆ ಆಹ್ವಾನ‌ ನೀಡಲಾಗಿದೆ. ವಿದ್ಯಾರ್ಥಿ ನವೀನ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಿ. ಮಾರ್ಚ್ 1,2022ರಂದು ಉಕ್ರೇನ್​ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದ.

ಅಂತರಾಷ್ಟ್ರೀಯ ಯೋಗ ದಿನಾಚರಣೆ ಮಾರ್ಗಸೂಚಿ ಪ್ರಕಟ

ಮೈಸೂರು: ನಗರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಜೂನ್‌ 21ಕ್ಕೆ ಅರಮನೆ ಆವರಣದಲ್ಲಿ ನಡೆಯಲಿವರು ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಕಾರ್ಯಕ್ರಮದ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗಳ ತಪಾಸಣೆಗೆ ಸಹಕರಿಸಬೇಕು. ಸುರಕ್ಷತೆಯ ದೃಷ್ಟಿಯಿಂದ ನೀರಿನ ಬಾಟಲ್, ಗಾಜಿನ ಬಾಟಲ್, ಬ್ಯಾಗ್, ವ್ಯಾನಿಟಿ ಬ್ಯಾಗ್‌ ಹರಿತವಾದ ವಸ್ತು ಯಾವದೇ ರೀತಿಯ ಆಯುಧಗಳು, ಲೋಹದ ವಸ್ತುಗಳಿಗೆ ನಿರ್ಬಂಧ ವಿಧಿಸಲಾಗಿದೆ. ಯಾವುದೇ ರೀತಿಯ ಕರಪತ್ರ, ಬ್ಯಾನರ್, ಕಪ್ಪು ಬಟ್ಟೆ, ಬಾವುಟ ಭಿತ್ತಿಪತ್ರಕ್ಕೆ ಅವಕಾಶವಿಲ್ಲ. ಮೊಬೈಲ್‌ ಹೊರತುಪಡಿಸಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶ ಇಲ್ಲ. ಕ್ಯಾಮರಾ, ವಿಡಿಯೋಕ್ಯಾಮರಾ, ಪವರ್ ಬ್ಯಾಂಕ್ ಇಯರ್‌ಫೋನ್‌‌ಗೆ ಅವಕಾಶ ಇಲ್ಲ. ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಬೇಕು. ಬೆಂಕಿ ಉತ್ಪತ್ತಿ ಮಾಡುವ ಬೆಂಕಿಪೊಟ್ಟಣ, ಲೈಟರ್, ಪಟಾಕಿ ಹಾಗೂ ಇತ್ಯಾದಿ ವಸ್ತುಗಳಿಗೂ ನಿರ್ಬಂಧ ವಿಧಿಸಲಾಗಿದೆ. ಕರ್ಕಶ ಶಬ್ದ ಮಾಡುವ ಪೀಪಿ, ತಮಟೆ, ನಗಾರಿ ಇತ್ಯಾದಿ ವಸ್ತುಗಳನ್ನು ನಿಷೇಧಿಸಲಾಗಿದೆ. ವಾರಸುದಾರರಿಲ್ಲದ ಬ್ಯಾಗುಗಳು, ಪೊಟ್ಟಣ, ಆಟದ ಸಾಮಾನು ಇತರೆ ವಸ್ತುಗಳು ಕಂಡು ಬಂದಲ್ಲಿ ಅದನ್ನು ಮುಟ್ಟದೇ ಕೂಡಲೇ ಪೋಲೀಸರಿಗೆ ಮಾಹಿತಿ ನೀಡಬೇಕು. ಇದು ಜೂನ್ 20ರಂದು ಮಹಾರಾಜ‌ ಕಾಲೇಜು ಮೈದಾನದಲ್ಲಿ   ನಡೆಯುವ ಫಲಾನುಭವಿಗಳ ಸಂವಾದ ಸಮಾವೇಶಕ್ಕೂ ಅನ್ವಯವಾಗಲಿದೆ. ಕೇಂದ್ರದ ಯೋಜನೆಯ ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ ಮಾಡಿ.