ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕಿಚ್ಚು: ಸಮಯ ಬಂದ್ರೆ ನ್ಯಾಯದ ತಕ್ಕಡಿ ಹಿಡಿದೇ ಹೋಗ್ತೀನಿ ಎಂದ ಸಿಟಿ ರವಿ

ಒಕ್ಕಲಿಗರ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತು ನ್ಯಾಯದ ತಕ್ಕಡಿ ಹಿಡಿದು ಹೋಗುತ್ತೇನೆ ಎಂದು ಶಾಸಕ ಸಿ. ಟಿ ರವಿ ಹೇಳಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕಿಚ್ಚು: ಸಮಯ ಬಂದ್ರೆ ನ್ಯಾಯದ ತಕ್ಕಡಿ ಹಿಡಿದೇ ಹೋಗ್ತೀನಿ ಎಂದ ಸಿಟಿ ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಿ.ಟಿ.ರವಿ
Edited By: ವಿವೇಕ ಬಿರಾದಾರ

Updated on: Oct 18, 2022 | 3:24 PM

ಬೆಂಗಳೂರು: ಒಕ್ಕಲಿಗ (Vokkalig) ಸಮುದಾಯಕ್ಕೂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸುವುದು ನಮ್ಮ ಹೊಣೆಯಾಗಿದೆ. ಸಮಯ ಬಂದರೆ ನ್ಯಾಯದ ತಕ್ಕಡಿ ಹಿಡಿದು ಹೋಗುತ್ತೇನೆ ಎಂದು ಒಕ್ಕಲಿಗರ ಸಮುದಾಯಕ್ಕೆ ಸೇರಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ (CT Ravi) ಭರವಸೆ ನೀಡಿದ್ದಾರೆ. . ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರದ ಮೀಸಲಾತಿ ದುರ್ಬಲ ವರ್ಗಗಳಿಗೆ ಸಿಗಬೇಕು. ಕಾಲಕಾಲಕ್ಕೆ ಮೀಸಲಾತಿ ಹಂಚಿಕೆ ಮಾರ್ಪಾಡು ಆಗಬೇಕು. ಮೀಸಲಾತಿ ನ್ಯಾಯಯುತವಾಗಿ ಪರಿಶೀಲನೆ ಮಾಡಬೇಕು. ನ್ಯಾಯಸಿಗದ ವರ್ಗಕ್ಕೆ ಮೀಸಲಾತಿ ನೀಡುವ ಕೆಲಸ ಆಗಬೇಕು ಎಂದರು.

ಎಸ್​​ಸಿ, ಎಸ್​​ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೇವೆ. ಮೀಸಲಾತಿ ಬಹಳ ಸೂಕ್ಷ್ಮ ವಿಚಾರವಾಗಿದೆ. ರಾಜಕಾರಣದಲ್ಲಿ ಸಾಂದರ್ಭಿಕವಾಗಿ ಹೇಳುವುದು ತಪ್ಪಾಗುತ್ತದೆ. ಮೀಸಲಾತಿ ದುರ್ಬಲರ ಪರವಾಗಿ ಇರಬೇಕು. ನಾನು ನಮ್ಮ ಸಮುದಾಯದ ನಿರ್ಮಲಾನಂದ ಸ್ವಾಮೀಜಿ ಪರವಾಗಿಯೇ ಹೇಳಬೇಕು, ಇಲ್ಲ ಅಂದರೆ ಅದು ತಪ್ಪಾಗುತ್ತದೆ. ಆ ವಿಚಾರವೇ ಬೇಡ ಬಿಡಿ ಎಂದು ಜಾರಿಕೊಂಡರು.

ಬೇರೆ ಬೇರೆ ಸಣ್ಣ, ಬಡ ಸಮುದಾಯ ಇದೆ ಅವರಿಗೆ ಮೀಸಲಾತಿ ಸಿಗಲಿ. ಬಿಜೆಪಿ ಎಲ್ಲರನ್ನೂ ಪ್ರತಿನಿಧಿಸುವ ಪಕ್ಷವಾಗಿದೆ. ಮೀಸಲಾತಿಯನ್ನು ನ್ಯಾಯಯುತವಾಗಿ ಪರಿಶೀಲನೆ ಮಾಡಬೇಕು. ಯಾವ ವರ್ಗಕ್ಕೆ ನ್ಯಾಯ ಸಿಕ್ಕಿಲ್ಲವೋ ಅವರಿಗೆ ಕೊಡುವ ಕೆಲಸ ಮಾಡಬೇಕು. ಎಸ್.ಸಿ, ಎಸ್.ಟಿ. ಸಮುದಾಯಕ್ಕೆ ನ್ಯಾಯ ಕೊಡಬೇಕು ಅಂತಲೇ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಸಣ್ಣ ಸಮುದಾಯಗಳಿಗೆ ಧ್ವನಿ ಕೊಟ್ಟು ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಒಕ್ಕಲಿಗ ಸಮುದಾಯ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತು ಬೀದಿಗಿಳಿದರೇ, ಅವರಿಗೆ ಬೆಂಬಲಿಸುವ ವಿಚಾರ ಬಂದಾಗ ನೋಡೋಣ. ಸಮಯ ಬಂದರೆ ನ್ಯಾಯದ ತಕ್ಕಡಿ ಹಿಡಿದೇ ಹೋಗೋದು. ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದಂತೆ ಹಾಗೂ ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸೋದೇ ನಮ್ಮ ಹೊಣೆ ಎಂದು ಸ್ಪಷ್ಟಪಡಿಸಿದರು.

ಟೆಕ್ನಾಲಜಿ ಬಳಸಿಕೊಂಡು ನಗರದಲ್ಲಿನ ರಸ್ತೆ ಗುಂಡಿ ಮುಚ್ಚಬೇಕು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಅನೇಕ ಜೀವಗಳು ಪ್ರಾಣ ಬಿಟ್ಟಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಟೆಕ್ನಾಲಜಿ ಬಳಸಿಕೊಂಡು ನಗರದಲ್ಲಿನ ರಸ್ತೆ ಗುಂಡಿ ಮುಚ್ಚಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ. ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಜವಾಬ್ದಾರಿ ಸರ್ಕಾರದ ಮೇಲಿದೆ. ಬೆಂಗಳೂರಿಗೆ 6 ಸಾವಿರ ಕೋಟಿ ವಿಶೇಷ ಅನುದಾನ ಕೊಟ್ಟಿದ್ದಾರೆ. ಗುಂಡಿ ಮುಚ್ಚುನ ಕೆಲಸ ಸರ್ಕಾರ ಮಾಡಲಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Tue, 18 October 22

Web contact

TV9 Kannada

Read More
Follow Us