ಜನಸ್ಪಂದನ: ಡಿಕೆ ಬ್ರದರ್ಸ್​ ಹಾಡಿ ಹೊಗಳಿದ S​.T.ಸೋಮಶೇಖರ್, ಕೆರೆಗಳ ಅಭಿವೃದ್ಧಿಗೆ ಮನವಿ ಮಾಡಿದ ಡಿಕೆ ಸುರೇಶ್

ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಆರ್.ಆರ್.ನಗರ, ಯಶವಂತಪುರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಈ ವೇಳೆ ಮಾತನಾಡಿದ S​.T.ಸೋಮಶೇಖರ್, ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡ ಡಿಸಿಎಂ ಜನರ ನಿರೀಕ್ಷೆ ಈಡೇರಿಸೋ ಕೆಲಸ ಮಾಡ್ತಿದ್ದಾರೆ ಎಂದು ಡಿಕೆ ಸಹೋದರರನ್ನು ಹಾಡಿ ಹೊಗಳಿದ್ದಾರೆ.

ಜನಸ್ಪಂದನ: ಡಿಕೆ ಬ್ರದರ್ಸ್​ ಹಾಡಿ ಹೊಗಳಿದ S​.T.ಸೋಮಶೇಖರ್, ಕೆರೆಗಳ ಅಭಿವೃದ್ಧಿಗೆ ಮನವಿ ಮಾಡಿದ ಡಿಕೆ ಸುರೇಶ್
ಜನಸ್ಪಂದನ
Follow us
| Updated By: ಆಯೇಷಾ ಬಾನು

Updated on: Feb 18, 2024 | 1:07 PM

ಬೆಂಗಳೂರು, ಫೆ.18: ಬಾಗಿಲಿಗೆ ಬಂತು ಸರ್ಕಾರ-ಸೇವೆಗೆ ಇರಲಿ ಸಹಕಾರ ಹೆಸರಿನಲ್ಲಿ ಇಂದು ಆರ್.ಆರ್.ನಗರ, ಯಶವಂತಪುರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಜನಸ್ಪಂದನ (Jana Spandana) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನ ಭಾರತಿ ಮೈದಾನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಅಹವಾಲು ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ‌ ಶಾಸಕ ಮುನಿರತ್ನ, S​.T.ಸೋಮಶೇಖರ್, ಸಂಸದ ಡಿಕೆ‌ ಸುರೇಶ್ ಭಾಗಿಯಾಗಿದ್ದು ಬಿಬಿಎಂಪಿ, ಬಿಡಿಎ, ಬಿಎಂಆರ್​ಸಿಎಲ್​​​, ಬಿಎಂಆರ್​ಡಿಎ, ಬೆಸ್ಕಾಂ, ಜಲಮಂಡಳಿ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗ್ಯಾರಂಟಿ ಯೋಜನೆಗಳ ಸಮಸ್ಯೆ ಕುರಿತು ಸ್ಥಳದಲ್ಲೇ ಡಿಕೆ ಶಿವಕುಮಾರ್ ಪರಿಹಾರ ನೀಡಲಿದ್ದಾರೆ.

ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ಸೋಮಶೇಖರ್ ಮತ್ತು ಮುನಿರತ್ನ ಈ ಇಬ್ಬರೂ ಕಾಂಗ್ರೆಸ್ ಪಕ್ಷದ ಫೌಂಡೇಷನ್, ಭದ್ರವಾಗಿದ್ದವರು. ಬಾಗಲಿಗೆ ಬಂತು‌ ಸರ್ಕಾರ, ಸೇವೆಗೆ ಇರಲಿ‌ ಸಹಕಾರ 20 ಕ್ಷೇತ್ರಗಳನ್ನ ಸುತ್ತಿದ್ದೇನೆ. 12 ಕ್ಷೇತ್ರಗಳನ್ನ ಮುಗಿಸಿದ್ದೇನೆ. 20 ಸಾವಿರಕ್ಕೂ ಹೆಚ್ಚು ಅರ್ಜಿ ನೋಂದಣಿ ಆಗಿದೆ. ಸಿಎಂ ಕೂಡ ಎರಡು ಬಾರಿ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಪ್ರತ್ಯೇಕ ತಂಡ ಮಾಡಿದ್ಧೇವೆ. ಮನೆ ಬಾಗಿಲಿಗೆ ಬಂದ ಉದ್ದೇಶ, ನೀವು ನಮ್ಮ ಮನೆ ಬಾಗಿಲಿಗೆ ಬರಬಾರದು ಅಂತ. ನಮಗೆ ಅನೇಕ ಜವಾಬ್ದಾರಿ, ಕಾನೂನಿನ ಚೌಕಟ್ಟು ಇರುತ್ತೆ. ಜನರನ್ನ ಪ್ರೋತ್ಸಾಹಿಸಲು, ಜನರ ಹಿಂದೆ ನಾವೇ ಹೋಗ್ಬೇಕು ಅಂತೇಳಿ ಜನರ ಅಭಿವೃದ್ಧಿಗಾಗಿ ಈ ಕಾರ್ಯಕ್ರಮ ರೂಪಿಸಿದ್ದೇವೆ. ನಮ್ಮ‌‌‌ ಸರ್ಕಾರ ಸದಾ ನಿಮ್ಮ ಜೊತೆ ಇರುತ್ತೆ. ನಿಮ್ಮ ಸಮಸ್ಯೆಯನ್ನೆಲ್ಲ ಒಂದೇ ದಿನದಲ್ಲಿ ಬಗೆ ಹರಿಸುತ್ತೇನೆ ಅಂತ ನಾನು ಹೇಳೊಲ್ಲ. ಅಧಿಕಾರಗಳಿಂದ ಬಗೆಹರಿಯದ ಕೆಲಸ ಇಲ್ಲಿ ಬಗೆಹರಿಸಿಕೊಳ್ಳೋಕೆ ಬಂದಿದ್ದೀವಿ ಎಂದರು.

ನಾನು ಐತಿಹಾಸಿಕ ನಿರ್ಧಾರವೊಂದನ್ನು ಮಾಡಿದ್ದೇನೆ. ಇಡೀ ಬೆಂಗಳೂರು ನಗರದ ಸ್ವತ್ತಿನ ದಾಖಲೆಯನ್ನು ಇ ಖಾತೆ ಮೂಲಕ ನಿಮ್ಮ ಮನೆಗೆ ತಲುಪಿಸುತ್ತೇನೆ. ಯಾರು ಕೂಡ ಮುಂದಿನ ದಿನಗಳಲ್ಲಿ ಸ್ವತ್ತಿನ ದಾಖಲೆಗಾಗಿ ಅಲೆಯಬಾರದು. ಹೀಗಾಗಿ ದಾಖಲೆಗಳು ಪಾರದರ್ಶಕವಾಗಿ ಇರಬೇಕು ಎಂದು ಡಿಜಿಟಲೈಸ್ ಮಾಡುತ್ತಿದ್ದೇವೆ. ಕೆಲವರು ಸರಿಯಾಗಿ ಟ್ಯಾಕ್ಸ್ ಕಟ್ಟುತ್ತಿಲ್ಲ. ನಾನು ನಿಮಗೆ ಕಷ್ಟ ಕೊಡಬೇಕು ಅಂತಾ ಮಾಡ್ತಿಲ್ಲ. ರಾಜರಾಜೇಶ್ವರಿನಗರ, ಯಶವಂತಪುರ ನನ್ನ ಎರಡು ಕಣ್ಣುಗಳು ಇದ್ದ ಹಾಗೇ. ಈ ಹಿಂದೆ ಈ ಕ್ಷೇತ್ರಗಳು ನನಗೆ ಶಕ್ತಿ ತುಂಬಿವೆ. ನನ್ನ 40 ವರ್ಷದ ಅನುಭವದಲ್ಲಿ ವಾರ್ಡ್ ವಾರ್ಡ್ ಗೆ ಸುತ್ತಿದ್ದ ವ್ಯಕ್ತಿ ಡಿಕೆ.ಸುರೇಶ್ ಬಿಟ್ಟರೇ ಬೇರೆ ಯಾರೂ ಇಲ್ಲ. ಇವತ್ತು ಜನ ಗೆಲ್ಲಿಸಿದ್ದಾರೆ ಅಂದ್ರೆ ಅದು ಡಿ.ಕೆ.ಸುರೇಶ್ ಅವರ ಪರಿಶ್ರಮ ಕಾರಣ ಎಂದರು.

ಡಿಕೆ ಬ್ರದರ್ಸ್​ ಹಾಡಿ ಹೊಗಳಿದ S​.T.ಸೋಮಶೇಖರ್

ಇನ್ನು ಇದೇ ವೇಳೆ ಮಾತನಾಡಿದ S​.T.ಸೋಮಶೇಖರ್, ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡ ಡಿಸಿಎಂ ಜನರ ನಿರೀಕ್ಷೆ ಈಡೇರಿಸೋ ಕೆಲಸ ಮಾಡ್ತಿದ್ದಾರೆ. ಇದುವರೆಗೆ ಎಲ್ಲಾ ಕ್ಷೇತ್ರದ ಕಾರ್ಯಕ್ರಮ ಸಕ್ಸಸ್ ಆಗಿದೆ. ಮನವಿ ಬಗ್ಗೆ ಕೆಲಸಗಳು ಆಗ್ತಿವೆ. ನನ್ನ ಕ್ಷೇತ್ರದ 5 ಕಸದ ಘಟಕಗಳನ್ನ ಬೇರೆಡೆ ಶಿಫ್ಟ್ ಗೆ ಮನವಿ ಮಾಡಿದ್ದೇ, ಬಜೆಟ್ ನಲ್ಲಿ ಬೇರೆಡೆ ಕಸದ ಘಟಕ ಶಿಫ್ಟ್ ಗೆ ಕ್ರಮ ಕೈಗೊಂಡಿದ್ದಾರೆ. ಕುಡಿಯುವ ನೀರಿನ ಹಾಹಾಕಾರ ತಪ್ಪಿಸೋಕು ಕೆಲಸ ಮಾಡ್ತಿದ್ದಾರೆ. ಡಿ.ಕೆ.ಸುರೇಶ್ ಕೂಡ ಆನೇಕಲ್ ಸುತ್ತಮುತ್ತ ಕೆಲಸ ಮಾಡ್ತಿದ್ದಾರೆ. 110 ಹಳ್ಳಿಗಳಿಗೆ ನೀರು ಕೊಡೋ ಕೆಲಸಕ್ಕೂ ಕೆಲಸವಾಗ್ತಿದೆ. ಮಾರ್ಚ್ ಅಂತ್ಯದಲ್ಲಿ ಕಾವೇರಿ 5ನೇ ಹಂತದ ಸಮಸ್ಯೆ ಕ್ಲಿಯರ್ ಆಗುತ್ತೆ. ಕನಕಪುರ ರಸ್ತೆಯನ್ನ ಡಿ.ಕೆ.ಸುರೇಶ್ ಅವರು ಅಭಿವೃದ್ಧಿ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮನೆ ಮುಂದೆ ನಿಲ್ಲಿಸಿದ ನೀರಿನ ಟ್ಯಾಂಕರ್ ಕದ್ದ ಕಿಲಾಡಿಗಳು; ಖದೀಮರ ಕೈ ಚಳಕ ಸಿಸಿಕ್ಯಾಮೆರಾದಲ್ಲಿ ಸೆರೆ

ಶಾಸಕ ಮುನಿರತ್ನ ವೇದಿಕೆಗೆ ಬರ್ತಿದ್ದಂತೆ ಡಿಕೆಗೆ ಜೈಕಾರ

ಶಾಸಕ ಮುನಿರತ್ನ ವೇದಿಕೆಗೆ ಬರ್ತಿದ್ದಂತೆ ಡಿಕೆಗೆ ಜನ ಜೈಕಾರ ಹಾಕಿದರು. ಈ ವೇಳೆ ಸಿಡಿಮಿಡಿಗೊಂಡ ವಿ.ಮುನಿರತ್ನ, ಇದು ಜಿಂದಾಬಾದ್ ಕೂಗುವಂಥ ಕಾರ್ಯಕ್ರಮ ಅಲ್ಲ. ಇದು ಸರ್ಕಾರದ ಕಾರ್ಯಕ್ರಮ. ಘೋಷಣೆ ಕೂಗುವುದು ಬೇಡ ಎಂದರು.

ಮತ್ತೊಂದೆಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಸುರೇಶ್, ದೂರ ದೃಷ್ಟಿಯಿಂದ ಬಹಳ ವಿಶೇಷ ಕಾರ್ಯಕ್ರಮವನ್ನ ಡಿಕೆಶಿಯವರು ಮಾಡ್ತಿದ್ದಾರೆ. ಇವತ್ತು ಈ ಭಾಗದ ಜನರ ಸಮಸ್ಯೆಗಳನ್ನ ಆಲಿಸಲು ಬಂದಿದ್ದಾರೆ. ಎಷ್ಟೋ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬಂದಿರಲ್ಲ. ನಿಮ್ಮ ನಡುವೆ ಬಂದಾಗ ನಿಮ್ಮ ಸಮಸ್ಯೆಗಳು ಅರ್ಥವಾಗುತ್ತೆ. ಈಗಾಗಲೇ ಬೇರೆ ಬೇರೆ ಭಾಗದ ಜನರು ಬಂದಿದ್ದಾರೆ. ಬೆಂಗಳೂರಿನ‌ 8 ವಲಯಗಳಲ್ಲಿ ಈ ಕಾರ್ಯಕ್ರಮ ನಡೆದಿದೆ. ಇಂದು ಕೊನೇ ವಲಯದ ಕಾರ್ಯಕ್ರಮ ನಡೆಯುತ್ತಿದೆ. ಶಿಕ್ಷಕರ ಚುನಾವಣೆ ಇದ್ದ ಕಾರಣ ಈ ಕಾರ್ಯಕ್ರಮ ಮುಂದೂಡಿಕೆ ಆಯ್ತು. ರಾಜ್ಯದಲ್ಲಿ ಬರಗಾಲ ಘೋಷಣೆ ಆಗಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕಾವೇರಿ 5ನೇ ಹಂತಕ್ಕೆ ಹೆಚ್ಚು ಒತ್ತು ನೀಡುವ ಕೆಲಸ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ವಾಟರ್ ಮಾಫಿಯಾ ಅಂತ ಹೇಳುತ್ತಿದ್ದಾರೆ. ಟ್ಯಾಂಕರ್ ಗಳನ್ನ ಇಟ್ಟುಕೊಂಡು ಈ ಮಾಫಿಯಾ ಮಾಡುತ್ತಿದ್ದಾರೆ. ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ. ಈ ಸಮಸ್ಯೆಯನ್ನ ಆದಷ್ಟು ಬೇಗ ಬಗೆಹರಿಸಲಾಗುತ್ತೆ ಎಂದರು.

ಬೇರೆ ಬೇರೆ ಕ್ಷೇತ್ರದಲ್ಲಿ ವಾಟರ್ ಮಾಫಿಯಾ ನಡೆಯುತ್ತಿದೆ. ಜಲಮಂಡಳಿಯ ನೀರನ್ನೇ ಇಟ್ಟುಕೊಂಡು ಮಾಫಿಯ ಮಾಡ್ತಿದ್ದಾರೆ. ಡಿಸಿಎಂ ಅವರು ಈ ಬಗ್ಗೆ ಗಮನಹರಿಸಬೇಕು. ಕೆರೆಗಳು ಕೂಡ ಮಾಯಾ ಆಗ್ತಿವೆ. ಕೆರೆಗಳನ್ನ ಪುನರುಜ್ಜೀವನ ಮಾಡಿ ,ಅಂತರ್ಜಲ ವೃದ್ಧಿ ಮಾಡಿ. ಈ ಕೆಲಸವಾದ್ರೆ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತೆ. ಬೇರೆ ಬೇರೆ ಉದ್ದೇಶಕ್ಕೆ ಕೆರೆಗಳನ್ನ ಬಳಸಿದ್ದಾರೆ. ದಯವಿಟ್ಟು ಸರ್ಕಾರ ಕೆರೆಗಳ ಬಗ್ಗೆ ಗಮನಹರಿಸಿ ಎಂದು ಡಿಕೆ ಸುರೇಶ್ ಮನವಿ ಮಾಡಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ