
ಬೆಂಗಳೂರು, ಏ.27: “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ನಿಜವಾದ ಪ್ರಭುಗಳು. ನಾವು ಮತ್ತು ನೀವು ಅವರ ಸೇವೆಗಾಗಿ ಇದ್ದೇವೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಅಧಿಕಾರಿಗಳಿಗೆ ಸಂವಿಧಾನದ ಆಶಯವನ್ನು ನೆನಪಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸುವಂತೆ ಅವರು ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಅವರು ಬೆಂಗಳೂರಿನಲ್ಲಿ KAS ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಇದೇ ವೇಳೆ ಅವರು ಅಧಿಕಾರಿಗಳ ಪ್ರಮೋಷನ್ ಬಗ್ಗೆಯೂ ಮಾತನಾಡಿದರು. ನಿಮ್ಮ ಪದೋನ್ನತಿ ಬಗ್ಗೆ ವೇದಿಕೆಯಲ್ಲಿ ಅಧಿಕಾರಿಯೊಬ್ಬರಿ ಚೀಟಿ ನೀಡಿದ್ದಾರೆ. “ನನಗೆ ಪ್ರಮೋಷನ್ ಮಾಡಿ ಎಂಬ ಚೀಟಿ ಬಂದಿದೆ. ಈಗಾಗಲೇ ಎರಡು ಸಭೆಗಳನ್ನು ನಡೆಸಿ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಅರ್ಹ ಅಧಿಕಾರಿಗಳಿಗೆ ಪ್ರಮೋಷನ್ ನೀಡುವ ಪ್ರಕ್ರಿಯೆ ನಡೆಯಲಿದೆ,” ಎಂದು ಭರವಸೆ ನೀಡಿದರು.
ಮಾತು ಮುಂದುವರಿಸಿದ ಅವರು, “ನಾವು ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ರಿನಿವಲ್ ಆಗಬೇಕು. ಆದರೆ ನೀವು 30-35 ವರ್ಷ ಸೇವೆ ಸಲ್ಲಿಸುತ್ತೀರಿ. ನಿವೃತ್ತಿಯಾಗುವವರೆಗೆ ಜನರ ಸೇವೆ ಮಾಡುವ ದೊಡ್ಡ ಅವಕಾಶ ನಿಮಗಿದೆ,” ಎಂದರು.”ನಮಗೆ ಸಂಬಳ ಕೊಡುವುದು ಜನರೇ, ಅವರೇ ಪ್ರಭುಗಳು. ನೆಪ ಹೇಳದೆ ಜನರ ಕೆಲಸ ಮಾಡಿಕೊಡಿ. ಅದರಿಂದ ನಿಮ್ಮ ಜೀವನ ಸಾರ್ಥಕವಾಗುತ್ತದೆ,” ಎಂದು ಕಿವಿಮಾತು ಹೇಳಿದರು.
ಸಮಾಜದ ನಾಡಿಮಿಡಿತ ಅರ್ಥ ಮಾಡಿಕೊಳ್ಳದಿದ್ದರೆ ವ್ಯಕ್ತಿತ್ವ ಬೆಳೆಯಲು ಸಾಧ್ಯವಿಲ್ಲ. “ಓದಿಗಿಂತ ಕಾಮನ್ ಸೆನ್ಸ್ ಬಹಳ ಮುಖ್ಯ. ಸಮಾಜದ ಬಗ್ಗೆ ಅರಿವಿದ್ದರೆ ಮಾತ್ರ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯ,” ಎಂದು ಸಿಎಂ ಅಭಿಪ್ರಾಯಪಟ್ಟರು. ಇನ್ನು ಅಧಿಕಾರಿಗಳ ಜೊತೆ ಮಾತನಾಡಲು ಹಳ್ಳಿಯ ಜನರು ಇಂದಿಗೂ ಹೆದರುತ್ತಾರೆ. ಈ ಭಯದಿಂದಾಗಿ ಅವರು ಮಧ್ಯವರ್ತಿಗಳನ್ನು (Agents) ಕರೆದುಕೊಂಡು ಬರುತ್ತಾರೆ. ಇದನ್ನು ತಪ್ಪಿಸಬೇಕು.
ಇದನ್ನೂ ಓದಿ: ಹೆಚ್ಚು ಮಾತನಾಡಬೇಡಿ, ಸುಮ್ಮನೆ ನಿಮ್ಮ ಕೆಲಸ ಮಾಡಿ: ಪಂಚಮಸಾಲಿ ಪೀಠದ ಲೆಕ್ಕ ಕೊಡುವ ವೇಳೆ ಉಮಾಪತಿಗೆ ಸೋಮಣ್ಣ ಕರೆ
“ಗ್ಯಾರಂಟಿ ಯೋಜನೆಗಳ ಹಣ ನೇರವಾಗಿ ಜನರ ಅಕೌಂಟ್ಗೆ ಹೋಗುತ್ತಿರುವುದು ಮಧ್ಯವರ್ತಿಗಳ ಹಾವಳಿ ತಪ್ಪಿಸಲಿಕ್ಕಾಗಿಯೇ. ನಿಮ್ಮ ಕಚೇರಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ಆರ್.ಟಿ.ಒ (RTO) ಕಚೇರಿಗಳಲ್ಲಿ ಏಜೆಂಟ್ಗಳಿಗೆ ಅವಕಾಶ ನೀಡಬೇಡಿ,” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಐಎಎಸ್ ಮತ್ತು ಐಪಿಎಸ್ ವ್ಯವಸ್ಥೆಗಳ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯ ಹಂಚಿಕೊಂಡ ಸಿಎಂ, ಸಮಾಜವಾದಿ ಚಿಂತಕರ ಮಾತುಗಳನ್ನು ಉಲ್ಲೇಖಿಸಿ ಆಡಳಿತದಲ್ಲಿ 33% ಸಿಇಒಗಳನ್ನು ಮಾಡುವ ಪ್ರಸ್ತಾಪದ ಬಗ್ಗೆ ಮಾತನಾಡಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ