ಬೆಂಗಳೂರು: ಸೋಷಿಯಲ್ ಮೀಡಿಯಾದಿಂದ ಹೆಚ್ಚಿದ ಅಪರಾಧ, ಕಳೆದ ವರ್ಷಕ್ಕಿಂತ ಶೇ 21 ಹೆಚ್ಚಳ

ಸಾಮಾಜಿಕ ಮಾಧ್ಯಮಗಳಿಗೆ ಮೂಗುದಾರ ಎಂಬುದೇ ಇಲ್ಲ. ಯಾರು ಏನ್ ಬೇಕಾದರೂ ಪೋಸ್ಟ್ ಮಾಡಬಹುದು. ಯಾರಿಗೆ ಏನ್ ಮೆಸೇಜ್ ಬೇಕಿದ್ದರೂ ಕಳುಹಿಸಬಹುದು. ಸೋಷಿಯಲ್ ಮೀಡಿಯಾದಿಂದಾಗಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ತಿಳಿದುಬಂದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಅಪರಾಧ ಪ್ರಕರಣಗಳು ಶೇ 21 ರಷ್ಟು ಹೆಚ್ಚಳವಾಗಿದೆ.

ಬೆಂಗಳೂರು: ಸೋಷಿಯಲ್ ಮೀಡಿಯಾದಿಂದ ಹೆಚ್ಚಿದ ಅಪರಾಧ, ಕಳೆದ ವರ್ಷಕ್ಕಿಂತ ಶೇ 21 ಹೆಚ್ಚಳ
ಸಾಂದರ್ಭಿಕ ಚಿತ್ರ

Updated on: Oct 14, 2025 | 7:32 AM

ಬೆಂಗಳೂರು, ಅಕ್ಟೋಬರ್ 14: ಸೋಷಿಯಲ್ ಮೀಡಿಯಾ (Social Media) ಜನರನ್ನು ಆವರಿಸಿಕೊಂಡು ವರ್ಷಗಳೇ ಉರುಳಿ ಹೋಗಿವೆ. ಆದರೆ ಇದೇ ಸಾಮಾಜಿಕ ಮಾಧ್ಯಮಗಳಲ್ಲಿ ಇಲ್ಲಸಲ್ಲದ ವಿಚಾರಗಳನ್ನು ಪೋಸ್ಟ್ ಮಾಡುವವರು, ಕಾಮೆಂಟ್ ಮಾರುವವರಿಗೆ ಕಡಿವಾಣ ಇಲ್ಲದಂತಾಗಿದೆ. ಇದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕಾನೂನು‌ ಮೀರಿ ವರ್ತಿಸುವವರ ವಿರುದ್ಧ ದಾಖಲಾಗುವ ಅಪರಾಧ ಪ್ರಕರಣಗಳು (Crime Cses) ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. ಕಳೆದ 9 ತಿಂಗಳುಗಳಲ್ಲಿ 953 ಪ್ರಕರಣಗಳು ದಾಖಲಾಗಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 21 ರಷ್ಟು ಹೆಚ್ಚಳವಾಗಿದೆ.

ಸೋಷಿಯಲ್ ಮೀಡಿಯಾ ಕ್ರೈಂ

  • ಬೆಂಗಳೂರು ಪೊಲೀಸರ ದತ್ತಾಂಶಗಳ ಪ್ರಕಾರ ಸೋಷಿಯಲ್ ಮೀಡಿಯಾದಿಂದಾಗಿ ಆಗುತ್ತಿರುವ ಅಪರಾಧ ಪ್ರಕರಣಗಳುಹೆಚ್ಚಾಗಿವೆ.
  • 2024ರಲ್ಲಿ ಈ ಸಂಬಂಧ 784 ದಾಖಲಾಗಿದ್ದು, 21% ಕೇಸ್ ಹೆಚ್ಚಳವಾಗಿದ್ದವು.
  • ಸದ್ಯ ಈ ರೀತಿಯ 300 ಪೋಸ್ಟ್ ಮಾಡಿದ್ದ 50 ಅಕೌಂಟ್​​ಗಳನ್ನು ಪೊಲೀಸರು ಬ್ಲಾಕ್ ಮಾಡಿದ್ದಾರೆ.
  • ಇಂತಹ ಪ್ರಕರಣದಲ್ಲಿ ಸಿಲುಕೋದೇ ಹೆಚ್ಚು ಯುವಕ/ಯುವತಿಯರು.
  • ಹೀಗಾಗಿ ಸದ್ಯ ಸೋಷಿಯಲ್ ಮೀಡಿಯಾ ಮೂಲಕ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಸೋಷಿಯಲ್ ಮೀಡಿಯಾಗಳ ಮೂಲಕ ವಂಚನೆ, ಮೋಸ, ಪ್ರಚೋದನಾಕಾರಿ ಪೋಸ್ಟ್, ಬೆದರಿಕೆ ಹಾಕುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ನಟಿ ರಮ್ಯಾ ವಿರುದ್ಧ ಅವಹೇಳನಕಕಾರಿ ಕಾಮೆಂಟ್ ಮಾಡಿದ್ದ 12 ಜನರನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಅದೇ ರೀತಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಕಾಮೆಂಟ್ ಹಾಕಿದವರ ಮೇಲೂ ಕೇಸ್ ದಾಖಲಾಗಿದೆ. ಕೆಲ ದಿನಗಳ ಹಿಂದೆ ಸಿಜೆಐ ಗವಾಯಿಗೆ ಶೂ ಎಸೆದ ಕೇಸ್ ಸಂಬಂದ ಹಾಕಲಾಗಿದ್ದ ಪೋಸ್ಟ್​​ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಐವರ ವಿರುದ್ಧವೂ ಸಿಸಿಬಿ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹೀಗೆ ಹೆಚ್ಚು ಲೈಕ್ಸ್, ಹೆಚ್ಚು ಶೇರ್​ಗಾಗಿ ಸೋಷಿಯಲ್ ಮೀಡಿಯಾ ಮುಖಾಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರ ಸಂಖ್ಯೆ ಹೆಚ್ಚಾಗಿವೆ. ಸದ್ಯ ಇಂತಹ ಸೈಬರ್ ಅಪರಾಧಗಳ ತನಿಖೆಗೆ ಪ್ರತ್ಯೇಕ ಸೈಬರ್ ಕಮಾಂಡ್ ಸೆಂಟರ್ ಶೀಘ್ರದಲ್ಲೇ ಚಾಲ್ತಿಗೆ ಬರಲಿದ್ದು, ಸೋಷಿಯಲ್ ಮೀಡಿಯಾ ಕ್ರೈಂಗೆ ಕಡಿವಾಣ ಬೀಳಲಿದೆ‌.

ಇದನ್ನೂ ಓದಿ: ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ಇ-ಚಲನ್ ಬಂದರೆ ಎಚ್ಚರ! ಲಕ್ಷಾಂತರ ರೂ. ದೋಚಿದ್ದಾರೆ ದುಷ್ಕರ್ಮಿಗಳು

ಇನ್ನು ಮುಂದಾದರೂ ಸೋಷಿಯಲ್ ಮೀಡಿಯಾವನ್ನು ಬಳಸುವವರು ಎಚ್ಚರಿಕೆಯಿಂದ ಇರಬೇಕು. ಲೈಕ್, ಕಾಮೆಂಟ್​​ಗಳಿಗಾಗಿ, ಹಣದ ಆಸೆಗಾಗಿ ಕ್ರೈಂಗಳಲ್ಲಿ ಭಾಗಿಯಾದರೆ ಕಾನೂನು‌ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬ ಸಂದೇಶವಂತೂ ಪೊಲೀಸರಿಂದ ರವಾನೆಯಾಗಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ