ಪತ್ರ ಬರೆದಿಟ್ಟು ನಾಪತ್ತೆಯಾದ ಮೂವರು ಬಾಲಕಿಯರು, 9 ದಿನ ಕಳೆದರೂ ಮಕ್ಕಳ ಸುಳಿವಿಲ್ಲ

ಸೆ.6ರಂದು ಮೂವರು ಶಾಲಾ ಬಾಲಕಿಯರು ನಾಪತ್ತೆಯಾಗಿದ್ದು ಈ ಬಗ್ಗೆ ಪೋಷಕರು ಪುಲಕೇಶಿನಗರ ಠಾಣೆಗೆ ದೂರು ನೀಡಿದ್ದಾರೆ.

ಪತ್ರ ಬರೆದಿಟ್ಟು ನಾಪತ್ತೆಯಾದ ಮೂವರು ಬಾಲಕಿಯರು, 9 ದಿನ ಕಳೆದರೂ ಮಕ್ಕಳ ಸುಳಿವಿಲ್ಲ
ವರುಣಿಕಾ, ನಂದಿನಿ, ಶಕ್ತೀಶ್ವರಿ
Edited By: ಆಯೇಷಾ ಬಾನು

Updated on: Sep 14, 2022 | 11:26 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೂವರು ಶಾಲಾ ಬಾಲಕಿಯರು ನಾಪತ್ತೆಯಾಗಿದ್ದು ಈ ಬಗ್ಗೆ ಪೋಷಕರು ಪುಲಕೇಶಿನಗರ ಠಾಣೆಗೆ ದೂರು ನೀಡಿದ್ದಾರೆ. ಶಕ್ತೀಶ್ವರಿ (15), ವರುಣಿಕಾ (16), ನಂದಿನಿ(15) ನಾಪತ್ತೆಯಾದ ಬಾಲಕಿಯರು.

ಸೆ.6ರಂದು ಬೆಂಗಳೂರಿನ ಪ್ರಾಮನೆಡ್ ರಸ್ತೆಯಲ್ಲಿರುವ ಸೇಂಟ್​ ಜೋಸೆಫ್ ಕಾನ್ವೆಂಟ್ ಹೈ ಪ್ರೈಮರಿ ಶಾಲೆಯಿಂದ ಬಾಲಕಿಯರು ನಾಪತ್ತೆಯಾಗಿದ್ದಾರೆ. ಕಾಣೆಯಾಗಿ 9 ದಿನವಾದರೂ ಇನ್ನೂ ಕೂಡ ಮಕ್ಕಳು ಪತ್ತೆಯಾಗಿಲ್ಲ. ಪೋಷಕರು ಎಷ್ಟೇ ಹುಡುಕಿದರೂ ಬಾಲಕಿಯರು ಪತ್ತೆಯಾಗಿಲ್ಲ. ಅಲ್ಲದೆ ಶಾಲೆಯಲ್ಲಿ ಕೇಳದರು ಸಿಬ್ಬಂದಿ ಸರಿಯಾಗಿ ಉತ್ತರ ನೀಡ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ. ಮತ್ತೊಂದೆಡೆ ಮನೆಯಲ್ಲಿ ಸಮಸ್ಯೆ ಹಾಗಾಗಿ ಮನೆ ಬಿಟ್ಟು ಹೋಗ್ತಿದ್ದೀವಿ. ಓದಲು ಇಷ್ಟವಿಲ್ಲ ಹಾಗಾಗಿ ಮನೆ ಬಿಟ್ಟು ಹೋಗುತ್ತಿದ್ದೇವೆ ಎಂದು ಬಾಲಕಿಯರು ಪತ್ರ​​ ಬರೆದು ಮನೆಯಿಂದ ನಾಪತ್ತೆಯಾಗಿದ್ದಾರೆ.

ಶಾಲೆ ಆವರಣದಲ್ಲಿ ಪೋಷಕರ ಪ್ರತಿಭಟನೆ

ವರುಣಿಕ ಮತ್ತು ನಂದಿನಿ ಸೆಂಟ್ ಜೋಸೆಫ್ ಕಾನ್ವೆಂಟ್ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ರು. ಶಕ್ತೀಶ್ವರಿ ಮನೆಯಿಂದಲೇ ಶಾಲೆಗೆ ಬಂದು ಹೋಗ್ತಿದ್ರು. ಶಾಲೆಯಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರು ನಿಂದಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ನೀವೆಲ್ಲ ಸ್ಲಂ ನವರು, ಜೋಪಡಿಯವರು ಎಂದು ನಿಂದಿಸಿದ್ದಾರೆನ್ನಲಾಗಿದೆ. ಅಲ್ಲದೆ ಶಾಲೆ ಆಡಳಿತ ಮಂಡಳಿಗೆ ಮಕ್ಕಳ ಬಗ್ಗೆ ಕೇಳಿದರೆ ಬಾಯ್ ಫ್ರೆಂಡ್ಸ್ ಜೊತೆಗೆ ಹೋಗಿದ್ದಾರೆಂದ್ರು ಹೇಳುತ್ತಿದ್ದಾರೆ. ಹೀಗಾಗಿ ಶಾಲೆ ಎದುರು ಮೂವರು ಬಾಲಕಿಯರ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಶಾಲೆ ಮುಂಭಾಗದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರಾಂಶುಪಾಲರ ಜೊತೆಗೆ ಮಾತನಾಡಲು ಪೋಷಕರನ್ನು ಒಳಗೆ ಬಿಡದಂತೆ ಸೆಕ್ಯೂರಿಟಿ ಗಾರ್ಡ್ ಗೆ ತಿಳಿಸಲಾಗಿದೆಯಂತೆ. ಹೀಗಾಗಿ ಪೋಷಕರು ಶಾಲೆ ಗೇಟ್ ತಳ್ಳಿ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಘಟನಾ ಸ್ಥಳಕ್ಕೆ ಪುಲಕೇಶಿನಗರ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಬೆಳಗಾವಿ, ಕೊಪ್ಪಳದಲ್ಲಿ ಹೆಚ್ಚಾದ ಮಕ್ಕಳ ಕಳ್ಳರ ವದಂತಿ: ಇದು ಸುಳ್ಳು ಸುದ್ದಿ, ಇದಕ್ಕೆ ಕಿವಿ ಕೊಡ ಬೇಡಿ ಎಂದ ಎಸ್​ಪಿ

ಬೆಳಗಾವಿ: ಕೊಪ್ಪಳ ಹಾಗೂ ಬೆಳಗಾವಿಯಲ್ಲಿ ಮಕ್ಕಳ ಕಳ್ಳರು ಇದ್ದಾರೆ ಎಂಬ ವದಂತಿ ಹರಿದಾಡುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ವಿವಿಧೆಡೆ ಮಕ್ಕಳು ಕಳ್ಳರು ಬಂದಿದ್ದಾರೆ ಎಂಬ ವದಂತಿ ಬಗ್ಗೆ ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ ಮಾಹಿತಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ವಿವಿಧೆಡೆ ಮಕ್ಕಳು ಕಳ್ಳರು ಬಂದಿದ್ದಾರೆ ಅಂತಾ ವದಂತಿ ಹರಿದಾಡುತ್ತಿದೆ. ಮಕ್ಕಳನ್ನ ಕದ್ದು ಅವರ ದೇಹದ ಭಾಗಗಳನ್ನ ತೆಗೆದು ಮಾರಾಟ ಮಾಡ್ತಿದ್ದಾರೆ ಅನ್ನೋ ವದಂತಿ ಹಬ್ಬುತ್ತಿವೆ. ಈ ರೀತಿ ಘಟನೆಗಳು ಬೆಳಗಾವಿ ಜಿಲ್ಲೆಯಲ್ಲಿ ನಡೆದಿಲ್ಲ. ನಂದಗಡದಲ್ಲಿ ರಗ್ಗು ಮಾರುವವರನ್ನ ಹಿಡಿದು ಮಕ್ಕಳ ಕಳ್ಳರಂತಾ ತಿಳಿದುಕೊಂಡಿದ್ದರು. ಇನ್ನೊಂದು ಪ್ರಕರಣದಲ್ಲಿ ಅಸ್ವಸ್ಥನನ್ನ ಮಕ್ಕಳ ಕಳ್ಳ ಅಂತಾ ಹೇಳಲಾಗುತ್ತಿತ್ತು. ವಿಚಾರಿಸಿದಾಗ ಆತ ಮಾನಸಿಕ ಅಸ್ವಸ್ಥ ಅಂತಾ ಗೊತ್ತಾದ ಬಳಿಕ ಕುಟುಂಬಸ್ಥರಿಗೆ ಸೇರಿಸಲಾಗಿದೆ. ಕೌಜಲಗಿ ಗ್ರಾಮದಲ್ಲಿ ಸಿಕ್ಕವರು ಸಾಧುಗಳಾಗಿದ್ದು ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳತನ ಪ್ರಕರಣಗಳು ಈವರೆಗೂ ನಡೆದಿಲ್ಲ. ಯಾರು ಕೂಡ ಇದನ್ನ ನಂಬದೇ ಕಾನೂನು ಕೈಗೆ ತೆಗೆದುಕೊಳ್ಳಬಾರದು. ನಿಮ್ಮ ಪ್ರದೇಶದಲ್ಲಿ ಅಪರಿಚಿತರು ಕಂಡು ಬಂದ್ರೇ 112ಗೆ ಕರೆ ಮಾಡಿ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದು ಸತ್ಯಾಸತ್ಯತೆ ಪರಿಶೀಲನೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನರು ಕೈಜೋಡಿಸುವಂತೆ ಎಸ್‌ಪಿ ಡಾ‌.ಸಂಜೀವ ಪಾಟೀಲ್ ಮನವಿ‌ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:36 am, Wed, 14 September 22

Web contact

TV9 Kannada

Read More
Follow Us