
ಬೆಂಗಳೂರು, ಆಗಸ್ಟ್ 20: ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ಹಬ್ಬಕ್ಕೆ (Varamahalakshmi festival) ತಯಾರಿ ಜೋರಾಗಿದ್ದು, ರಾಜಧಾನಿ ಬೆಂಗಳೂರಿನ (Bengaluru) ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ರಂಗೇರಿದೆ. ಹಬ್ಬಕ್ಕೆ ಕೇವಲ ಒಂದು ದಿನಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಮಂದಿ ಕೆಆರ್ ಮಾರ್ಕೆಟ್ (ಕೃಷ್ಣರಾಜೇಂದ್ರ ಮಾರುಕಟ್ಟೆ) ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಿಗೆ ಮುಗಿಬಿದ್ದಿದ್ದಾರೆ. ಆದರೆ, ಹಬ್ಬದ ಪ್ರಯುಕ್ತ ಹೂವು ಮತ್ತು ಹಣ್ಣುಗಳ ದರ ಗಗನಕ್ಕೇರಿದ್ದು, ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ವರಮಹಾಲಕ್ಷ್ಮೀ ಪೂಜೆ ಹಾಗೂ ಅಲಂಕಾರಕ್ಕಾಗಿ ಹೂವು-ಹಣ್ಣುಗಳಿಗೆ ಭಾರಿ ಬೇಡಿಕೆ ಬಂದಿದೆ. ಇದನ್ನು ಬಂಡವಾಳ ಮಾಡಿಕೊಂಡಿರುವ ವ್ಯಾಪಾರಿಗಳು ದರವನ್ನು ದುಪ್ಪಟ್ಟು, ಮುಮ್ಮಡಿಗೆ ಹೆಚ್ಚಿಸಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಹೂವು-ಹಣ್ಣುಗಳ ಬೆಲೆ ಎಷ್ಟೇ ಏರಿಕೆಯಾಗಿದ್ದರೂ, ವರ್ಷಕ್ಕೊಮ್ಮೆ ಬರುವ ವರ ಮಹಾಲಕ್ಷ್ಮೀ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲೇಬೇಕು ಎಂಬ ಉದ್ದೇಶದಿಂದ ಸಾರ್ವಜನಿಕರು ಬೆಲೆ ಏರಿಕೆಯ ನಡುವೆಯೂ ಸಾಲು ಸಾಲಾಗಿ ನಿಂತು ಖರೀದಿ ಮಾಡುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಸಾರ್ವಜನಿಕರ ದಂಡು ಹರಿದುಬರುತ್ತಿದ್ದು, ಸಂಚಾರ ದಟ್ಟಣೆಯೂ ಉಂಟಾಗಿದೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:25 am, Thu, 20 August 26