
ಬೆಂಗಳೂರು, ಮೇ 20: ಆನೇಕಲ್ ತಾಲ್ಲೂಕಿನಲ್ಲಿ ನಿರ್ಮಾಣಕ್ಕೆ ಯೋಜಿಸಲಾಗಿರುವ ಹೊಸ ಕ್ರಿಕೆಟ್ ಸ್ಟೇಡಿಯಂ ಯೋಜನೆಗೆ ಭಾರೀ ವಿರೋಧ ಕೇಳಿಬಂದಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಮೀಪ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳು, ಯೋಜನೆಯನ್ನು ರಾಜ್ಯ ಸರ್ಕಾರ ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಇಂಡ್ಲವಾಡಿ ಗ್ರಾಮದ ಸುಮಾರು 70 ಎಕರೆ ಭೂಮಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಇದರ ವೆಚ್ಚ ಸುಮಾರು 900 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಸಾವಿರ ಕೋಟಿ ರೂ. ವೆಚ್ಚದ ಕ್ರೀಡಾ ಸಂಕೀರ್ಣ ನಿರ್ಮಾಣದ ಯೋಜನೆಯೂ ಇದೆ. ಸ್ಟೇಡಿಯಂ ನಿರ್ಮಾಣ ಸ್ಥಳವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದು, ಈ ಉದ್ಯಾನವನವು ಕಾವೇರಿ ವನ್ಯಜೀವಿ ಅಭಯಾರಣ್ಯ ಮತ್ತು ಎಂಎಂ ಹಿಲ್ಸ್ ಪ್ರದೇಶಗಳಿಗೆ ಸಂಪರ್ಕ ಹೊಂದಿದೆ. ಸ್ಟೇಡಿಯಂನಿಂದ ಉಂಟಾಗುವ ಫ್ಲಡ್ಲೈಟ್ಗಳು, ವಾಹನ ಸಂಚಾರ ಹಾಗೂ ಭಾರೀ ಜನಸ್ತೋಮದಿಂದ ವನ್ಯಜೀವಿಗಳಿಗೆ ತೊಂದರೆ ಉಂಟಾಗುವ ಆತಂಕ ಎದುರಾಗಿದೆ. ಹೀಗಾಗಿ ಯೋಜನೆಗೆ ಸಂಬಂಧಿಸಿದ ಪರಿಸರ ಪರಿಣಾಮ ಮೌಲ್ಯಮಾಪನ (EIA) ವರದಿ ಹಾಗೂ ವಿವರವಾದ ಯೋಜನಾ ವರದಿ (DPR) ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು . ಈಗಾಗಲೇ ಬೆಂಗಳೂರಿನಲ್ಲಿ ಹಲವು ಕ್ರಿಕೆಟ್ ಮೈದಾನಗಳಿರುವಾಗ ಮತ್ತೊಂದು ಸ್ಟೇಡಿಯಂ ಅಗತ್ಯವೇನು ಎಂಬ ಪ್ರಶ್ನೆಯನ್ನೂ ಕೆಲವರು ಎತ್ತಿದ್ದಾರೆ.
ಇದನ್ನೂ ಓದಿ: ಫುಟ್ಪಾತ್ಗೂ ಬಂತು ಟಿಂಡರ್ ಮಾದರಿಯ ಆ್ಯಪ್; ಹದಿಹರೆಯದ ಬಾಲಕನ ಐಡಿಯಾಗೆ ನೆಟ್ಟಿಗರು ಫಿದಾ!
ಈ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರು ಹಾಗೂ ಸ್ಥಳಾಂತರಗೊಳ್ಳುವ ಜನರ ಬಗ್ಗೆಯೂ ಆತಂಕ ವ್ಯಕ್ತವಾಗಿದ್ದು, ಸ್ಟೇಡಿಯಂ ಸುತ್ತಮುತ್ತಲಿನ ಭೂ ಮಾಲೀಕತ್ವದ ವಿಚಾರದಲ್ಲಿ ಹಿತಾಸಕ್ತಿ ಸಂಘರ್ಷವೂ ಇರಬಹುದು ಎಂಬ ಆರೋಪ ಕೇಳಿಬಂದಿದೆ. ರಾಜ್ಯ ಸರ್ಕಾರವು ಈ ಸ್ಟೇಡಿಯಂನ್ನು ಉತ್ತರ ಕರ್ನಾಟಕದಂತಹ ಪ್ರದೇಶದಲ್ಲಿ ನಿರ್ಮಿಸಬಹುದು ಎಂಬ ಸಲಹೆಯೂ ಕೇಳಿಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.