ಮುಚ್ಚುವ ಸ್ಥಿತಿಗೆ ಬಂದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ; ಬೀದಿಗೆ ಬಂತು ಕಾರ್ಮಿಕರ ಬದುಕು 

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 10, 2024 | 8:06 PM

ಒಂದು ಕಾಲದಲ್ಲಿ ಅತೀ ಹೆಚ್ಚು ಕಬ್ಬುನುರಿಸಿ ಪ್ರಶಸ್ತಿ ಪಡೆದಿದ್ದ ಸಕ್ಕರೆ ಕಾರ್ಖಾನೆ ತನ್ನ ಕೊನೆಯ ದಿನಗಳನ್ನ ಎಣಿಸುತ್ತಿದೆ. ಐದು ದಶಕದಿಂದ ಇದೇ ಕಾರ್ಖಾನೆಯನ್ನ ನಂಬಿಕೊಂಡು ಬದುಕುಕಟ್ಟಿಕೊಂಡಿದ್ದ ನೂರಾರು ಕಾರ್ಮಿಕರ ಬದುಕು ಅಂತತ್ರವಾಗಿದೆ. ನೂರಾರು ಕೋಟಿ ರೂಪಾಯಿ ಸಾಲದ ಸುಳಿಗೆ ಸಿಲುಕಿರುವ ಸಕ್ಕರೆ ಕಾರ್ಖಾನೆ ಸಂಪೂರ್ಣವಾಗಿ ಬಂದ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ.

ಮುಚ್ಚುವ ಸ್ಥಿತಿಗೆ ಬಂದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ; ಬೀದಿಗೆ ಬಂತು ಕಾರ್ಮಿಕರ ಬದುಕು 
ಮುಚ್ಚುವ ಸ್ಥಿತಿಗೆ ಬಂದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ
Follow us on

ಬೀದರ್, ಆ.10: ಐದು ದಶಕದಷ್ಟೂ ಹಳೆಯದಾದ ಸಹಕಾರಿ ಕ್ಷೇತ್ರದ ಮೊದಲ ಸಕ್ಕರೆ ಕಾರ್ಖಾನೆ(Sugar Factory) ಎಂಬ ಹೆಗ್ಗಳಿಕೆ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಗಿದೆ. ಒಂದು ದಶಕದಿಂದ ಬಂದ್ ಆಗಿದ್ದು, ಒಂದು ವರ್ಷ ಆರಂಭವಾದರೆ, ಇನ್ನೊಂದು ವರ್ಷ ಸಾಲಾ ಮಾಡಿ ಕಾರ್ಖಾನೆ ಆರಂಭಿಸುತ್ತಾರೆ. ಮತ್ತೆ ಎರಡ್ಮೂರು ವರ್ಷ ಬಂದ್ ಆಗುತ್ತದೆ. ಹೀಗೆ ಕಳೆದ ಹತ್ತು ವರ್ಷದಿಂದ ಬೀದರ್ ಸಕ್ಕರೆ ಕಾರ್ಖಾನೆ ಈ ಸ್ಥಿತಿಗೆ ಬಂದು ತಲುಪಿದೆ. ಕಳೆದೊಂದು ದಶಕದಿಂದ ಸಾಲದ ಸುಳಿಗೆ ಸಿಲುಕಿಕೊಂಡು ನರಳುತ್ತಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ, ಜಿಲ್ಲೆಯ ವಿವಿಧ ಬ್ಯಾಂಕ್​ನಿಂದ ನೂರಾರು ಕೋಟಿ ರೂಪಾಯಿ ಸಾಲ ಮಾಡಿಕೊಂಡಿದೆ.

ಅದರಲ್ಲಿಯೂ ವಿಶೇಷವಾಗಿ ಬೀದರ್ ಜಿಲ್ಲಾ ಸಹಕಾರಿ ಬ್ಯಾಂಕ್​ನಿಂದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಆಢಳಿತ ಮಂಡಳಿಯವರು 143.33 ಎಕರೆಯಷ್ಟು ಜಮೀನನ್ನ ಅಡಮಾನವಾಗಿ ಇಟ್ಟು, ಡಿಸಿಸಿ ಬ್ಯಾಂಕ್​ನಿಂದ 126.12 ಕೋಟಿ ರೂಪಾಯಿ ಸಾಲವನ್ನ ನೀಡಲಾಗಿತ್ತು. ಅಸಲು ಹಾಗೂ ಬಡ್ಡಿ ಸೇರಿಕೊಂಡು ಒಟ್ಟಾರೆ ಬಿಎಸ್​ಎಸ್​ಕೆ ಸಕ್ಕರೆ ಕಾರ್ಖಾನೆ ಮೇಲೆ 186 ಕೋಟಿ ರೂಪಾಯಿ ಸಾಲವಾಗಿತ್ತು. ಈ ಸಾಲವನ್ನ ಹಿಂದಿರುಗಿಸಲಾಗದ ಕಾರಣ, ಕಾರ್ಖಾನೆ, ಅಡಮಾನವಿಟ್ಟ ಜಮೀನು ಈಗ ಡಿಸಿಸಿ ಬ್ಯಾಂಕ್ ಹಸ್ತಾಂತರ ಮಾಡಿಕೊಂಡಿದೆ. ಹೀಗಾಗಿ ಈ ಕಾರ್ಖಾನೆ ಇನ್ನೂ ಮುಂದೆ ಆರಂಭವಾಗುವುದು ಡೌಟ್ ಇದ್ದು, ಸಂಪೂರ್ಣವಾಗಿ ಈ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿದೆ.

ಇದನ್ನೂ ಓದಿ:ವಿಜಯಪುರ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್, ಕಲಬುರಗಿಯಲ್ಲಿ ಆಕ್ಸಿಜನ್ ಘಟಕ ಸ್ಫೋಟ

ರಾಜಕಾರಣಿಗಳ ಇಚ್ಚಾಶಕ್ತಿಯ ಕೊರೆತೆಯಿಂದ ಈ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಗೆ ಆಯ್ಕೆಯಾಗುವ ಆಢಳಿತ ಮಂಡಳಿಯವರ ಹಣದ ದಾಹಕ್ಕೆ ಈ ಕಾರ್ಖಾನೆ ಮುಚ್ಚಿದೆ ಎಂದು ಈ ಸಕ್ಕರೆ ಕಾರ್ಖಾನೆಯ ಷೇರುದಾರರು ಹೇಳುತ್ತಿದ್ದಾರೆ. ಈ ಸಕ್ಕರೆ ಕಾರ್ಖಾನೆಗೆ 173 ಕ್ಕೂ ಅಧಿಕ ಎಕರೆಯಷ್ಟು ಭೂಮಿಯಿದೆ. ಈ ಫೈಕಿ 143.33 ಎಕರೆಯಷ್ಟು ಜಮೀನನ್ನ ಸಕ್ಕರೆ ಕಾರ್ಖಾನೆ ಆಢಳಿತ ಮಂಡಳಿ ಭೂಮಿಯನ್ನ ಬ್ಯಾಂಕ್​ಗೆ ಹಸ್ತಾಂತರ ಮಾಡಿದೆ. ಒಂದು ಕಾಲದಲ್ಲಿ ಸದೃಢವಾಗಿದ್ದ ಸಕ್ಕರೆ ಕಾರ್ಖಾನೆ, ಆಡಳಿತ ವೈಫಲ್ಯದಿಂದಾಗಿ ಸಾಲದ ಹೊರೆ ಹೆಚ್ಚಾಗಿ ಸಕ್ಕರೆ ಕಾರ್ಖಾನೆಯ ಆಸ್ತಿಯನ್ನ ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದ್ದು, ಸಾಲದ ಹೊರೆಯಿಂದಾಗಿ ಕಾರ್ಖಾನೆ ಬಾಗಿಲು ಮುಚ್ಚಿಕೊಂಡಿದೆ.

ಇಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಖಾಯಂ ಕಾರ್ಮಿಕರು 161, ಹಂಗಾಮಿ ಕಾರ್ಮಿಕರು 222 ಹಾಗೂ ಗುತ್ತಿಗೆ ಆದಾರದಲ್ಲಿ 4 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಇವರೆಲ್ಲರಿಗೂ ಕೂಡ ಕಳೆದ ನಾಲ್ಕು ವರ್ಷದಿಂದ ಸಂಬಳವನ್ನ ನೀಡಿಲ್ಲ. ಹೀಗಾಗಿ ಇವರ ಬದುಕು ಮಾತ್ರ ಅಂತ್ರತ್ರ ಸ್ಥಿತಿಯಲ್ಲಿದೆ. ಈ ಕಾರ್ಖಾನೆಯ ಆಸ್ತಿಯನ್ನ ಸಾಲದಿಂದಾಗಿ ಬ್ಯಾಂಕ್​ನವರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇದನ್ನ ನೋಡಿದರೆ ಈ ಕಾರ್ಖಾನೆ ಶಾಶ್ವತವಾಗಿ ಬಂದ್ ಆಗುವ ಎಲ್ಲಾ ಲಕ್ಷಣಗಳು ಇಲ್ಲಿ ಗೋಚರವಾಗಿದೆ.

ಇದನ್ನೂ ಓದಿ:ಸಂಪುಟ ಸಭೆಯ ನಿರ್ಣಯಗಳು: ಬಾಗಲಕೋಟೆ ಸಕ್ಕರೆ ಕಾರ್ಖಾನೆ ಖಾಸಗಿ ಗುತ್ತಿಗೆ, ಸಬ್ ರಿಜಿಸ್ಟ್ರಾರ್​ಗಳ ವರ್ಗಾವಣೆ

ಬೀದರ್ ಜಿಲ್ಲೆಯಲ್ಲಿ ಆರಂಭವಾದ ಮೊಟ್ಟಮೊದಲ ಕಾರ್ಖಾನೆ

ಈ ಕಾರ್ಖಾನೆ ಬೀದರ್ ಜಿಲ್ಲೆಯಲ್ಲಿ ಆರಂಭವಾದ ಮೊಟ್ಟಮೊದಲ ಕಾರ್ಖಾನೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. 1963 ರಲ್ಲಿ ಆರಂಭವಾದ ಕಾರ್ಖಾನೆಯೂ ರಾಜ್ಯದಲ್ಲಿಯೇ ಅತೀಹೆಚ್ಚು ಕಬ್ಬು ನುರಿಸಿ ಪ್ರಶಸ್ತಿ ಕೂಡ ಬಾಚಿಕೊಂಡಿರುವ ಕಾರ್ಖಾನೆಯಿದು. ಇಂದು ಈ ಕಾರ್ಖಾನೆ ಅಧೋಗತಿಗೆ ಇಳಿದಿದೆ. ಈ ಕಾರ್ಖಾನೆಯನ್ನ ನಂಬಿಕೊಂಡು 5 ನೂರು ಕುಟುಂಬಗಳ ಬದುಕುಕಟ್ಟಿಕೊಂಡಿವೆ. ಇದರ ಜೊತೆಗೆ ಸಾವಿರಾರು ರೈತರು ಈ ಕಾರ್ಖಾನೆಗೆ ಕಬ್ಬನ್ನ ಹಾಕಿ ತಕ್ಷಣದಲ್ಲಿಯೇ ಹಣವನ್ನ ಪಡೆದುಕೊಂಡು ಹಾಯಾಗಿದ್ದರು. ಆದರೆ ಕಾರ್ಖಾನೆ ಶಾಶ್ವತವಾಗಿ ಬಂದ್ ಆಗುತ್ತಿರುವುದು ಇಲ್ಲಿನ ಕಾರ್ಮಿಕರು ಹಾಗೂ ರೈತರ ನಗುವನ್ನ ಕಸಿದುಕೊಂಡಿದೆ.

ರಾಜಕೀಯದ ಬಣ ಪ್ರತಿಷ್ಠೆಯಿಂದ ಹಾಗೂ ಸಾಲದ ಸುಳಿಗೆ ಸಿಲುಕಿ ಐದು ದಶಕದ ಇತಿಹಾಸ ಹೊಂದಿರುವ ಬೀದರ್ ಸಕ್ಕರೆ ಕಾರ್ಖಾನೆ ಬಂದ್ ಆಗಿದೆ. ಕಷ್ಟಪಟ್ಟು ದುಡಿದು ಸಂಪಾದಿಸಿದ ಸಂಬಳ ಬರದಿದ್ದರೆ, ಅವರ ಕುಟುಂಬ ಯಾವ ಸ್ಥಿತಿಗೆ ಬರುತ್ತವೆ ಎನ್ನುವುದನ್ನು ಅರಿಯದೇ ತಮ್ಮ ಹಿತಕ್ಕಾಗಿ ಸಂಬಳ ನೀಡದೆ ಸತಾಯಿಸಲಾಗುತ್ತಿದೆ. ಈ ಸಂಬಳವನ್ನೇ ಅವಲಂಭಿಸಿರುವ ಕುಟುಂಬಗಳಿಗೆ ಈ ಕೂಡಲೇ ವೇತನ ನೀಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ