
ಬೀದರ್, ಮೇ 30: ದಶಕಗಳಿಂದ ಮನೆಯಿಲ್ಲದೆ ಗುಡಿಸಲಿನಲ್ಲಿಯೇ ಹಕ್ಕಿಪಿಕ್ಕಿ (Hakki-Pikki) ಜನಾಂಗ ವಾಸಮಾಡುತ್ತಿದೆ. ಚಳಿಗಾಲ, ಮಳೆಗಾಲ, ಬೆಸಿಗೆ ಕಾಲದಲಿಯೂ ಗುಡಿಸಿಲೇ ಇವರಿಗೆ ಆಸರೆ. ರಾಜಕಾರಣಿಗಳು ವೋಟ್ ಹಾಕಿಸಿಕೊಳ್ಳುವುದಕ್ಕೆ ಮಾತ್ರ ಇವರನ್ನ ಸೀಮಿತಗೊಳಿಸಿದ್ದಾರೆ. ತಲೆಗೊಂದು ಸೂರಿಲ್ಲದೇ, ವಿದ್ಯುತ್ ಬೆಳಕನ್ನೇ ಕಾಣದೆ ಪ್ರಾಣಿಗಳಿಗಿಂತ ಕಡೆಯಾಗಿ ಜೀವಿಸುತ್ತಿರುವ ಹಕ್ಕಿಪಿಕ್ಕಿ ಜನಾಂಗ ಕರುಣಾಜನಕ ಸ್ಥಿತಿ ಇದು.
ಇನ್ನೂರಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬಗಳು ದಶಕಗಳಿಂದ ಸೂರಿಲ್ಲದೆ ಹಾದಿಬದಿಯ ಗುಡಿಸಲುಗಳಲ್ಲೇ ಕಣ್ಣೀರಿನ ಬದುಕು ಸಾಗಿಸುತ್ತಿವೆ. ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಇಂತಹದ್ದೊಂದು ದುಸ್ಥಿತಿ ಇರುವುದು ಬೇರೆ ಎಲ್ಲೋ ಅಲ್ಲ, ರಾಜ್ಯದ ಗಡಿ ಜಿಲ್ಲೆ ಬೀದರ್ನಲ್ಲಿ.
ಇದನ್ನೂ ಓದಿ: ಆಪರೇಷನ್ ಮಾಡದೆ ಸುಳ್ಳು ಹೇಳಿ ಹಣ ಪೀಕಿದ ವೈದ್ಯ?: ಸ್ಕ್ಯಾನಿಂಗ್ ವರದಿ ಕಂಡು ರೋಗಿಗೆ ಶಾಕ್!
ಬೀದರ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಸಮುದಾಯದ ಕುಟುಂಬಗಳು ವಾಸಿಸುತ್ತಿವೆ. ಹರಿದುಹೋದ ಹಳೇ ಬಟ್ಟೆಗಳನ್ನೇ ಹೊದಿಸಿ ಸಣ್ಣ ಸಣ್ಣ ಗುಡಿಸಲುಗಳನ್ನು ನಿರ್ಮಿಸಿಕೊಂಡು ದಶಕಗಳಿಂದ ಇವರು ವಾಸಿಸುತ್ತಿದ್ದಾರೆ. ಪ್ರತಿ ರಾತ್ರಿಯನ್ನೂ ಕತ್ತಲಲ್ಲೇ ಕಳೆಯಬೇಕಾದ ಅನಿವಾರ್ಯತೆ ಇದೆ. ಪೌಷ್ಟಿಕಾಂಶದ ಕೊರತೆಯಿಂದಾಗಿ ಇಲ್ಲಿನ ಅದೆಷ್ಟೋ ಮಕ್ಕಳು ರೋಗಗ್ರಸ್ತರಾಗುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಜಿಲ್ಲೆಯ ಯಾವೊಬ್ಬ ರಾಜಕಾರಣಿಯೂ ಇವರ ಕಡೆ ಮುಖ ಮಾಡಿಲ್ಲ.
ತಲೆಯ ಮೇಲೆ ಮರಗೆಮ್ಮ ದೇವಿಯ ಮೂರ್ತಿಯನ್ನು ಹೊತ್ತು ಭಿಕ್ಷೆ ಬೇಡುವುದೇ ಈ ಸಮುದಾಯದ ದಿನನಿತ್ಯದ ಕಾಯಕವಾಗಿದೆ. ಬಡತನ ಬೆನ್ನಿಗಟ್ಟಿದ್ದರಿಂದ ಸಾವಿರಾರು ಮಕ್ಕಳು ಶಿಕ್ಷಣದಿಂದ ವಂಚಿರಾಗಿದ್ದಾರೆ. ಈ ಸಮುದಾಯದಲ್ಲಿ ಯಾರೊಬ್ಬರು ಕೂಡ ಕಲಿತ ಉದಾಹರಣೆಯಿಲ್ಲ. ಹೀಗಾಗಿ ಸರಕಾರದ ಸೌಲತ್ತುಗಳು ಇವರಿಗೆ ಮರಿಚಿಕೆಯಾಗಿವೆ. ವೋಟ್ ಹಾಕಿಸಿಕೊಳ್ಳುವ ಉದ್ದೇಶದಿಂದ ಇವರಿಗೆ ಜನ ಪ್ರತಿನಿಧಿಗಳು ವೋಟರ್ ಐಡಿಯನ್ನ ಮಾಡಿಕೊಟ್ಟಿದ್ದಾರೆ. ಆದರೆ ಇಲ್ಲಿಯವರೆಗೂ ಅವರಿಗೆ ಮನೆಗಳನ್ನ ಕಟ್ಟಿಸಿಕೊಟ್ಟಿಲ್ಲ. ಹೀಗಾಗಿ ನಾವು ಗುಡಿಸಲಿನಲ್ಲಿಯೇ ವಾಸ ಮಾಡುವಂತಾಗಿದೆ ಎಂದು ಪಿಂಟಮ್ಮ ಎಂಬುವವರು ಅಳಲುತೋಡಿಕೊಂಡರು.
ಈ ಜನರ ದುಸ್ಥಿತಿ ಇಂದು ನಿನ್ನೆಯದಲ್ಲ, ಬರೋಬ್ಬರಿ 50 ವರ್ಷಗಳಿಂದ ಇವರು ಇದೇ ನರಕಸದೃಶ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಮನುಷ್ಯರು ಇರಲಿ, ಪ್ರಾಣಿಗಳೂ ಬದುಕಲಾರದಂತಹ ಜಾಗದಲ್ಲಿ ಇವರು ವಾಸಿಸುತ್ತಿದ್ದಾರೆ. ಕುಡಿಯಲು ಶುದ್ಧ ನೀರಿಲ್ಲ, ಸರಿಯಾದ ಗಾಳಿ-ಬೆಳಕಿನ ವ್ಯವಸ್ಥೆಯೂ ಇಲ್ಲ. ನಿತ್ಯವೂ ಪಕ್ಕದಲ್ಲೇ ಹರಿಯುವ ಚರಂಡಿಯ ದುರ್ವಾಸನೆ ಸಹಿಸಿಕೊಂಡೇ ಬದುಕಬೇಕಿದೆ. ದುರ್ವಾಸನೆ ಹಾಗೂ ಕಲುಷಿತ ವಾತಾವರಣದಿಂದಾಗಿ ಇಲ್ಲಿನ ಜನ ನಿರಂತರವಾಗಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಇಲ್ಲಿನ ಬಹುತೇಕ ಕುಟುಂಬಗಳ ಹೆಸರು ಪಡಿತರ ಚೀಟಿ ಹಾಗೂ ಮತದಾರರ ಪಟ್ಟಿಯಲ್ಲಿದೆ. ಪ್ರತಿಯೊಂದು ಚುನಾವಣೆಯಲ್ಲೂ ಇವರು ತಪ್ಪದೇ ಮತ ಚಲಾಯಿಸುತ್ತಾ ಬಂದಿದ್ದಾರೆ. ಆದರೆ ಈವರೆಗೂ ಇವರಿಗೆ ಒಂದು ಸೂರು ಕಲ್ಪಿಸಲು ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಮುಂದಾಗಿಲ್ಲ. ಈ ವರ್ಷ ಮನೆ ಸಿಗಬಹುದು, ಮುಂದಿನ ವರ್ಷ ಸಿಗಬಹುದು ಎಂದು ಕಾಯುತ್ತಲೇ 50 ವರ್ಷಗಳು ಕಳೆದುಹೋಗಿವೆ. ಕೆಲವರಂತೂ ಇದೇ ಗುಡಿಸಲಿನಲ್ಲಿ ಹುಟ್ಟಿ, ಬೆಳೆದು, ಇಹಲೋಕ ತ್ಯಜಿಸಿದ್ದಾರೆ. ಈಗ ಅವರ ಮುಂದಿನ ಪೀಳಿಗೆಯೂ ಅದೇ ಆಸೆಯ ಕಣ್ಣುಗಳಿಂದ ಸೂರು ಸಿಗಬಹುದೆಂಬ ನಿರೀಕ್ಷೆಯಲ್ಲಿದೆ. ಇನ್ನು ಸ್ವಂತ ನಿವೇಶನ ಹಾಗೂ ವಸತಿಗಾಗಿ ಪುರಸಭೆಯಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿವರೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಇವರ ಹೋರಾಟಕ್ಕೆ ಯಾವುದೇ ಪ್ರತಿಫಲ ಸಿಕ್ಕಿಲ್ಲ ಎಂದು ಇವರ ಪರವಾಗಿ ಧ್ವನಿ ಎತ್ತಿದ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ತೈಲ ಬೆಲೆ ಏರಿಕೆ ಬಿಸಿ: ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮರಳಿದ ರೈತರು; ಟ್ರ್ಯಾಕ್ಟರ್ ಬದಲಾಗಿ ಎತ್ತುಗಳಿಂದ ಉಳುಮೆ
ಸರ್ಕಾರ ಅದೆಷ್ಟೇ ಯೋಜನೆಗಳನ್ನ ತಂದರು ಅದು ಉಳ್ಳವರ ಪಾಲಾಗುತ್ತಿದ್ದು, ಅತೀ ಹಿಂದೂಳಿದ ಜನಾಂಗಕ್ಕೆ ಮಾತ್ರ ಅದರ ಪ್ರಯೋಜನವಾಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಒಂದೇ ಸ್ಥಳದಲ್ಲಿ ಹತ್ತಾರು ವರ್ಷಗಳಿಂದ ಬದುಕುತ್ತಿರುವ ಈ ಜನಾಂಗಕ್ಕೆ ಇವರೆಗೂ ಸರ್ಕಾರ ಯಾವ ಸೌಲಭ್ಯಗಳು ಕೊಡದಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವ ವಿಚಾರವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.