
ಬೀದರ್, ಫೆಬ್ರವರಿ 16: ಆಕಸ್ಮಿಕವಾಗಿ ಕಾರಂಜಾ ಡ್ಯಾಂನ ಕಾಲುವೆಗೆ ಬಿದ್ದು ತಂದೆ, ಮಗ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ನಡೆದಿದೆ. ಹಳ್ಳಿಖೇಡ್(ಬಿ) ಗ್ರಾಮದ ವಿಶ್ವನಾಥ(50) ಮತ್ತು ಅಮರೇಶ(23) ಮೃತ ದುರ್ದೈವಿಗಳಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೋಲಿಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿದ್ದಾರೆ. ಮೃತ ದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಕಾಲುವೆಯಿಂದ ಹೊರ ತೆಗೆದಿದ್ದಾರೆ.
ಬೀದರ್ನಲ್ಲಿ ಸಿಮೆಂಟ್ ಖಾಲಿ ಮಾಡಿ ವಾಪಸ್ ಊರಿನತ್ತ ತಂದೆ-ಮಗ ಇಬ್ಬರೂ ಪ್ರಯಾಣ ಬೆಳೆಸಿದ್ದರು. ಈ ವೇಳೆ ನೀರು ಕಂಡ ಹಿನ್ನೆಲೆ ಅಮರೇಶ್ ಕೈಕಾಲು ತೊಳೆದುಕೊಳ್ಳಲೆಂದು ಕಾಲುವೆಗೆ ಇಳಿದಿದ್ದ. ಆ ಸಂದರ್ಭ ಕಾಲು ಜಾರಿ ಕಾರಂಜಾ ಡ್ಯಾಂನ ಕಾಲುವೆಗೆ ಆತ ಬಿದ್ದಿದ್ದಾನೆ. ಮಗ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ತಂದೆ ವಿಶ್ವನಾಥ ಜಮಾದಾರ್ ಕೂಡಲೇ ಆತನ ರಕ್ಷಣೆಗೆಂದು ಹೋಗಿದ್ದಾರೆ. ಆದರೆ ದುರಾದೃಷ್ಟವಶಾತ್ ತಂದೆ-ಮಗ ಇಬ್ಬರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಧನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ತಡೆಗೋಡೆಗೆ ಕ್ರೂಸರ್ ವಾಹನ ಡಿಕ್ಕಿ; ಸ್ಥಳದಲ್ಲಿಯೇ ಮೂವರು ಸಾವು!
ಜಮಖಂಡಿ ನಗರದಲ್ಲಿ ಧನ್ವಂತರಿ ಆಸ್ಪತ್ರೆ ಸಮೀಪ ಅಂಗಡಿಯೊಂದರ ಮುಂಭಾಗ ಶವವೊಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಜಂಬಗಿ ಗ್ರಾಮದ ನಿವಾಸಿ ಉಮೇಶ್ ತೋಟದ(45) ಎಂದು ಗುರುತಿಸಲಾಗಿದ್ದು,ಅನಾರೋಗ್ಯದ ಹಿನ್ನೆಲೆ ರಾತ್ರಿ ಮಲಗಿದ್ದ ಸ್ಥಳದಲ್ಲೇ ಈತ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಜಮಖಂಡಿ ನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಮಗುಚಿ ಬಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೇರೂರು ಬ್ರೀಡ್ಜ್ ಮೇಲೆ ನಡೆದಿದೆ. ಕೆಂಪೇಗೌಡ ಮೃತ ವ್ಯಕ್ತಿಯಾಗಿದ್ದು, ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿದ್ದಾರೆ. ಮೃತದೇಹ ಕುಣಿಗಲ್ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.