AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್: ಹೆಸರಿಗೆ ಮಾತ್ರ ಸ್ವಚ್ಚ ಭಾರತ್ ಮಿಷನ್ ಯೋಜನೆ; ಶೇಕಡಾ 95 ರಷ್ಟು ಶೌಚಾಲಯ ಬಳಕೆಯಾಗದೆ ಪಾಳು

ಸರಕಾರ ನಿರ್ಮಿಸಿದ ಶೌಚಾಲಯಗಳು ಯೋಗ್ಯವಾಗಿಲ್ಲ ಮತ್ತು ನೀರಿಲ್ಲ. ಹೀಗಾಗಿ ಶೌಚಾಲಯವನ್ನು ಬಳಕೆ ಮಾಡುತ್ತಿಲ್ಲ ಎಂದು ಇಲ್ಲಿನ ನಿವಾಸಿ ರವಿಕುಮಾರ್ ಕಮಠಾಣ ತಿಳಿಸಿದ್ದಾರೆ.

ಬೀದರ್: ಹೆಸರಿಗೆ ಮಾತ್ರ ಸ್ವಚ್ಚ ಭಾರತ್ ಮಿಷನ್ ಯೋಜನೆ; ಶೇಕಡಾ 95 ರಷ್ಟು ಶೌಚಾಲಯ ಬಳಕೆಯಾಗದೆ ಪಾಳು
ಬಳಕೆಯಾಗದೆ ಪಾಳುಬಿದ್ದ ಶೌಚಾಲಯ
TV9 Web
| Updated By: preethi shettigar|

Updated on: Aug 29, 2021 | 8:51 AM

Share

ಬೀದರ್: ಗ್ರಾಮದ ಸ್ವಚ್ಛತೆಗೆ ಒತ್ತು ನೀಡುವ ಉದ್ದೇಶದಿಂದ ಬೀದರ್ ಜಿಲ್ಲೆಯಲ್ಲಿ ಮನೆಗೊಂದು ಶೌಚಾಲಯ ನಿರ್ಮಿಸಲಾಗಿದೆ. ಆದರೆ ಸ್ವಚ್ಛ ಭಾರತಕ್ಕಾಗಿ ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದ್ದರೂ ಪರಿಣಾಮ ಮಾತ್ರ ಕಂಡಿಲ್ಲ. ಬಯಲು ಶೌಚ ವ್ಯವಸ್ಥೆಯಿಂದ ಬೀದರ್ ಜಿಲ್ಲೆ ಇನ್ನೂ ಮುಕ್ತವಾಗಿಲ್ಲ. ಮನೆಗೊಂದು ಶೌಚಾಲಯಗಳಿದ್ದರೂ, ಅವುಗಳ ಬಳಕೆಯಿಲ್ಲ. ಬದಲಾಗಿ ಶೌಚಾಲಯಗಳು ಗೋದಾಮುಗಳಾಗಿ ಮಾರ್ಪಾಡಾಗಿವೆ. ಇದು ಸಹಜವಾಗಿಯೇ ಈ ಭಾಗದ ನಾಗರಿಕರ ಬೇಸರಕ್ಕೆ ಕಾರಣವಾಗಿದೆ.

ಸರಕಾರಿ ವೈಬ್ ಸೈಟ್ ಪ್ರಕಾರ ದೇಶದ ಎಲ್ಲಾ ಗ್ರಾಮೀಣ ಪ್ರದೇಶಗಳು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಹೇಳಲಾಗುತ್ತಿದೆ. ಆದರೆ ವಾಸ್ತವದಲ್ಲಿ ಸ್ವಚ್ಛ ಭಾರತ್ ಮಿಷನ್ ಮೂಲಕ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಮತ್ತು ಉಪಯೋಗ ಪರಿಣಾಮಕಾರಿಯಾಗಿ ಅನುಷ್ಠಾನ ಆಗಿಲ್ಲ. ಶೌಚಾಲಯ ನಿರ್ಮಾಣದ ಬಹುದೊಡ್ಡ ಆಂದೋಲನಕ್ಕೆ ಚಾಲನೆ ನೀಡಿ ವರ್ಷಗಳೇ ಕಳೆದರೂ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಇನ್ನು ಇದು ಅನುಷ್ಠಾನ ಆಗಿಲ್ಲ ಎಂಬುವುದಕ್ಕೆ ಎರಡು ರಾಜ್ಯದ ಗಡೀ ಹಂಚಿಕೊಂಡಿರುವ ಬೀದರ್ ಜಿಲ್ಲೆಯ ಹಲವು ಗ್ರಾಮಗಳೇ ಸಾಕ್ಷಿಯಾಗಿವೆ.

ಬೀದರ್ ಜಿಲ್ಲೆಯ ಹುಮ್ನಾಬಾದ್, ಔರಾದ್, ಭಾಲ್ಕಿ, ಬಸವಕಲ್ಯಾಣ, ಬೀದರ್ ತಾಲೂಕಿನಲ್ಲಿ 2,21,000 ಸಾವಿರ ಗ್ರಾಮದ ಮನೆ ಮನೆಗೆ ಶೌಚಾಲಯಗಳನ್ನು ಕಟ್ಟಿಸಿಕೊಡಲಾಗಿದೆ. ಆದರೆ ಗ್ರಾಮಗಳಲ್ಲಿ ಬಯಲು ಬಹಿರ್ದೆಸೆ ಇನ್ನೂ ಜೀವಂತವಾಗಿದೆ. ಜಿಲ್ಲೆಯ ಬಹತೇಕ ಗ್ರಾಮಗಳಲ್ಲಿ ಬೆರಳೇಣಿಕೆಯಷ್ಟು ಜನ ಮಾತ್ರ ಶೌಚಾಲಯಗಳನ್ನು ಬಳಸುತ್ತಿದ್ದು, ಇದನ್ನು ಹೊರತುಪಡಿಸಿದರೆ ಬಹುತೇಕ ಜನ ಬಹಿರ್ದೆಸೆಗಾಗಿ ಬಯಲನ್ನೆ ಅವಲಂಬಿಸಿದ್ದಾರೆ.

ಮಳೆಗಾಲದ ಸಂದರ್ಭದಲ್ಲಿ ಬಯಲು ಬಹಿರ್ದೆಸೆಗೆ ಹೋಗಿ ಕಾಲುಜಾರಿ ಬಿದ್ದು ಅದೆಷ್ಟೋ ಜನ ಕೈಕಾಲು ಮುರಿದುಕೊಂಡಿದ್ದಾರೆ. ರಾತ್ರಿ ವೇಳೆ ಹಾವು, ಚೇಳುಗಳತಂಹ ವಿಷಜಂತುಗಳು ಕಚ್ಚಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಕೂಡಾ ಅವರು ಶೌಚಾಲಯವನ್ನು ಮಾತ್ರ ಬಳಕೆ ಮಾಡುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ, ಸರಕಾರ ನಿರ್ಮಿಸಿದ ಶೌಚಾಲಯಗಳು ಯೋಗ್ಯವಾಗಿಲ್ಲ ಮತ್ತು ನೀರಿಲ್ಲ. ಹೀಗಾಗಿ ಶೌಚಾಲಯವನ್ನು ಬಳಕೆ ಮಾಡುತ್ತಿಲ್ಲ ಎಂದು ಇಲ್ಲಿನ ನಿವಾಸಿ ರವಿಕುಮಾರ್ ಕಮಠಾಣ ತಿಳಿಸಿದ್ದಾರೆ.

ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛ ಭಾರತ್ ಮಿಷನ್ ಮೂಲಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಎಲ್ಲೆಲ್ಲಿ ಶೌಚಾಲಯ ನಿರ್ಮಾಣ ಆಗಿದೆಯೋ ಅಲ್ಲೆಲ್ಲ ಶೌಚಾಲಯದ ಉಪಯೋಗ ಆಗುತ್ತಿಲ್ಲ. ಮಾತ್ರವಲ್ಲದೆ, ಗ್ರಾಮೀಣ ಸಮುದಾಯದ ಜನರಲ್ಲಿ ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸುವ ಕೆಲಸ ಕೂಡ ಮಾಡಲಾಗಿಲ್ಲ. ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಸಂಚಾರಿ ವಾಹನದ ಮೂಲಕ, ಕಲಾ ಜಾಥ ಮೂಲಕ ಶ್ರಾವ್ಯ, ದೃಶ್ಯ ಮಾಧ್ಯಮ, ಬೀದಿ ನಾಟಕ, ಇತ್ಯಾದಿ ಸಾಂಸ್ಕತಿಕ ಕಾರ್ಯಕ್ರಮಗಳು ಮತ್ತು ಸಿನಿಮಾ, ಡಾಕ್ಯುಮೆಂಟರಿ, ಜಾಹೀರಾತು, ಕಿರುಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಿದ ಹೊರತಾಗಿಯೂ ನಿರ್ದಿಷ್ಟ ಪ್ರಮಾಣದ ಬದಲಾವಣೆ ಮಾತ್ರ ಕಂಡಿಲ್ಲ.

ಜಿಲ್ಲೆಯಲ್ಲಿ ನಿರ್ಮಾಣ ಮಾಡಿದ ಶೌಚಾಲಯಗಳು ಗುಣಮಟ್ಟದಿಂದ ಕೂಡಿಲ್ಲ. ಇಲ್ಲಿ ನಿರ್ಮಿಸಿರುವ ಶೌಚಾಲಯಗಳಲ್ಲಿ ಒಂದಕ್ಕೆ ಬಾಗಿಲಿದ್ದರೇ ಇನ್ನೊಂದಕ್ಕೆ ಬಾಗಿಲಿಲ್ಲ. ಮೊತ್ತೊಂದಕ್ಕೆ ಮೇಲ್ಛಾವಣಿ ಇದ್ದರೆ ಇನ್ನೊಂದಕ್ಕೆ ಮೆಲ್ವಾವಣಿಯೇ ಇಲ್ಲ. ಹೊರಗಡೆಯಿಂದ ನೋಡಿದರೇ ಶೌಚಾಲಯದ ಹಾಗೇ ಕಾಣುತ್ತವೇ ಆದರೇ ಒಳಗೆ ನೋಡಿದರೇ ಶೌಚಾಲಯಕ್ಕೆ ಬೇಕಾದ ವಸ್ತುಗಳನ್ನೇ ಅಲ್ಲಿ ಹಾಕಲಾಗಿಲ್ಲ. ಹೆಸರಿಗೆ ಮಾತ್ರ ಶೌಚಾಲಯ ನಿರ್ಮಾಣಮಾಡಿಕೊಂಡಿದ್ದಾರೇಯೇ ಹೊರತು ಅದನ್ನು ಬಳಸದೇ ಮತ್ತೆ ಬಯಲಿಗೆ ಹೋಗಿಯೇ ಶೌಚ ಮಾಡುವಂತಾ ಸ್ಥಿತಿ ಇಲ್ಲಿದೆ ಎಂದು ಈ ಭಾಗದ ಜನರು ಆರೋಪಿಸಿದ್ದಾರೆ.

ಗ್ರಾಮ ಪಂಚಾಯತ್ ವ್ಯಾಪ್ತಿಯ ಅದೇಷ್ಟೋ ಹಳ್ಳಿಯ ಜನರು ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದರು ಮತ್ತೆ ಬಯಲನ್ನೇ ಶೌಚಕ್ಕೆ ಬಳಸಿಕೊಳ್ಳುತ್ತಿದ್ದು, ಇಡೀ ಗ್ರಾಮದಲ್ಲಿ ಸ್ವಚ್ಛತೆ ಮಾತ್ರ ಮರಿಚಿಕೆಯಾಗಿದೆ. ಇದರ ಜತೆಗೆ ಜಿಲ್ಲೆಯಲ್ಲಿ ಕೆಲವೂ ಪಂಚಾಯತಿಯ ಪಿಡಿಓಗಳು ಶೌಚಾಲಯವನ್ನು ಕಡಿಮೆ ಬೆಲೆಯ ಸಿದ್ಧ ಶೌಚಾಲಯಗಳನ್ನು ತಂದು ಅಳವಡಿಸಿ ಆ ಹಣವನ್ನು ಲೂಟಿ ಮಾಡಿದ್ದರ ಪರಿಣಾಮವಾಗಿ ಇಂದು ಶೌಚಾಲಯಗಳು ಹೆಸರಿಗೆ ಮಾತ್ರ ಇದ್ದು, ಅವುಗಳು ಬಳಕೆಯಾಗುತ್ತಿಲ್ಲ ಎನ್ನುವುದು ಈ ಭಾಗದ ಜನರ ಪ್ರಮುಖ ಆರೋಪವಾಗಿದೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ: BBMP: ಹೈಕೋರ್ಟ್ ನಿರ್ದೇಶನದ ಬಳಿಕ 25 ಶೌಚಾಲಯ ನಿರ್ಮಾಣ ಆರಂಭ; 55 ಶೌಚಾಲಯಗಳಿಗೆ ಟೆಂಡರ್

ರಾಮನಗರದಲ್ಲಿ ನಿರ್ವಹಣೆ ಇಲ್ಲದೆ ಇ-ಶೌಚಾಲಯಗಳು ಬಂದ್; ನಗರಸಭೆ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ