ಟೊಮ್ಯಾಟೋ ಬೆಳೆಗಾರರಿಗೆ ಗಾಯದ ಮೇಲೆ ಬರೆ: ಕೆಜಿಗೆ 5ರೂ; ಕಟಾವು ಖರ್ಚಿಗೂ ಕಾಸಿಲ್ಲದೆ ಕಂಗಾಲಾದ ಅನ್ನದಾತ!

Tomato price crash: ಬೀದರ್ ಜಿಲ್ಲೆಯ ಟೊಮ್ಯಾಟೋ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಒಂದು ಕಡೆ ಮಳೆ ಕೊರತೆ ಆದರೆ, ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಕೆ.ಜಿ ಟೊಮ್ಯಾಟೋ ದರ ಕೇವಲ ಐದು ರೂಪಾಯಿಗೆ ಕುಸಿದಿರುವುದಕ್ಕೆ ರೈತರು ಕಂಗಾಲಾಗಿದ್ದಾರೆ. ಬೆಳೆ ಕಟಾವು ಮಾಡಬೇಕೋ ಅಥವಾ ಬಿಡಬೇಕೋ ಎಂಬ ಗೊಂದಲದಲ್ಲಿದ್ದಾರೆ.

ಟೊಮ್ಯಾಟೋ ಬೆಳೆಗಾರರಿಗೆ ಗಾಯದ ಮೇಲೆ ಬರೆ: ಕೆಜಿಗೆ 5ರೂ; ಕಟಾವು ಖರ್ಚಿಗೂ ಕಾಸಿಲ್ಲದೆ ಕಂಗಾಲಾದ ಅನ್ನದಾತ!
ಟೊಮ್ಯಾಟೋ
Image Credit source: tv9 kannada
Edited By:

Updated on: Aug 19, 2026 | 8:16 PM

ಬೀದರ್​, ಆಗಸ್ಟ್​ 19: ಬೆವರು ಸುರಿಸಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಬೀದರ್ (bidar) ಜಿಲ್ಲೆಯ ಟೊಮ್ಯಾಟೋ (Tomato) ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಕೊರತೆಯಿಂದ ಕಂಗಾಲಾಗಿದ್ದ ರೈತರಿಗೆ ಇದೀಗ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಕೆ.ಜಿಗೆ ಕೇವಲ ರೂ 5ಕ್ಕೆ ಕುಸಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಿತ್ತನೆ, ಗೊಬ್ಬರ, ಕೀಟನಾಶಕ ಹಾಗೂ ಕೂಲಿಗೆ ಮಾಡಿದ ಸಾವಿರಾರು ರೂಪಾಯಿ ಖರ್ಚು ಕೂಡ ವಾಪಸ್ ಬರದ ಸ್ಥಿತಿ ನಿರ್ಮಾಣವಾಗಿದ್ದು, ಬೆಳೆಗಾರರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ನೀರಿನ ಬರದಲ್ಲೂ ಹರಸಾಹಸ; ಇಳುವರಿಗೂ ಹೊಡೆತ

ಬೀದರ್ ತಾಲೂಕಿನ ರಾಜನಾಳ ಗ್ರಾಮದ ರೈತ ಗೋರಖ್ ತಮ್ಮ ಎರಡು ಎಕರೆ ಜಮೀನಿನಲ್ಲಿ ಉತ್ತಮ ಆದಾಯದ ನಿರೀಕ್ಷೆಯೊಂದಿಗೆ ಟೊಮ್ಯಾಟೋ ಬೆಳೆದಿದ್ದರು. ಆದರೆ ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ಬಾವಿ ಹಾಗೂ ಬೋರ್‌ವೆಲ್‌ಗಳಲ್ಲಿ ನೀರು ಸಂಪೂರ್ಣ ಬತ್ತಿಹೋಗಿತ್ತು. ಅಲ್ಪಸ್ವಲ್ಪ ನೀರಿನಲ್ಲೇ ಹರಸಾಹಸಪಟ್ಟು ಬೆಳೆ ಉಳಿಸಿಕೊಂಡರೂ, ನಿರೀಕ್ಷಿತ ಇಳುವರಿ ಬರಲಿಲ್ಲ.

ಇದನ್ನೂ ಓದಿ: Tomato price down: ಮಾರ್ಕೆಟ್​ನಲ್ಲಿ ಟೊಮ್ಯೊಟೋ ಬೆಲೆ ತೀವ್ರ ಕುಸಿತ! ರೈತರು ಕಂಗಾಲು

ಕಷ್ಟಪಟ್ಟು ಬೆಳೆದ ಅಲ್ಪ ಬೆಳೆಯನ್ನು ಮಾರುಕಟ್ಟೆಗೆ ತಂದರೆ, ಅಲ್ಲಿ ಕೇಳಿಬಂದ 5 ರೂ ದರ ರೈತನಿಗೆ ಬರಸಿಡಿಲು ಬಡಿದಂತಾಗಿದೆ. ಮಾಡಿದ ಖರ್ಚು ಹಾಗಿರಲಿ, ಬೆಳೆ ಕಟಾವು ಮಾಡಿ ಸಾಗಿಸುವ ಕೂಲಿಯೂ ಹುಟ್ಟುತ್ತಿಲ್ಲ ಎಂದು ರೈತರು ಗೋಳಾಡುತ್ತಿದ್ದಾರೆ.

ಕಟಾವು ಮಾಡಬೇಕೋ, ಬಿಡಬೇಕೋ ಎಂಬ ಗೊಂದಲ

ಸಾಮಾನ್ಯವಾಗಿ ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಟೊಮ್ಯಾಟೋ ಬೆಳೆಯುವ ರೈತರಿಗೆ ಈ ಬಾರಿ ಎರಡೂ ಕಡೆಯಿಂದ ಹೊಡೆತ ಬಿದ್ದಿದೆ. ಒಂದೆಡೆ ಬರದ ಛಾಯೆಯಿಂದ ಕಡಿಮೆ ಇಳುವರಿ, ಮತ್ತೊಂದೆಡೆ ಕನಿಷ್ಠ ಬೆಲೆಯೂ ಸಿಗದ ದೌರ್ಭಾಗ್ಯ. ಹೊಲದಿಂದ ಮಾರುಕಟ್ಟೆಗೆ ಸಾಗಿಸಲು ವಾಹನ ಬಾಡಿಗೆ ಹಾಗೂ ಕೂಲಿ ಆಳುಗಳಿಗೇ ಹೆಚ್ಚುವರಿ ಹಣ ಭರಿಸಬೇಕಿದೆ. ಹೀಗಾಗಿ, ಬೆಳೆದ ಟೊಮ್ಯಾಟೋವನ್ನು ಕಟಾವು ಮಾಡಬೇಕೋ ಅಥವಾ ಹೊಲದಲ್ಲೇ ಹಾಗೇ ಬಿಟ್ಟು ಕೊಳೆಯಲು ಬಿಡಬೇಕೋ ಎಂಬ ದಿಕ್ಕುತೋಚದ ಸ್ಥಿತಿಯಲ್ಲಿ ರೈತರಿದ್ದಾರೆ.

ಸರ್ಕಾರದ ನೆರವಿಗೆ ಅನ್ನದಾತನ ಮೊರೆ

ಜಿಲ್ಲೆಯಾದ್ಯಂತ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ನೆಲಕಚ್ಚಿರುವ ಬೆನ್ನಲ್ಲೇ, ತರಕಾರಿ ಬೆಳೆಗಾರರ ಈ ದುಸ್ಥಿತಿ ಗ್ರಾಮೀಣ ಭಾಗದ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿದೆ. ಬೆಲೆ ಮತ್ತಷ್ಟು ಕುಸಿದರೆ ಸಂಪೂರ್ಣ ಸಾಲದ ಸುಳಿಗೆ ಸಿಲುಕುವ ಆತಂಕದಲ್ಲಿರುವ ರೈತರು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ನಷ್ಟ ಪರಿಹಾರ ನೀಡಿ ತಮ್ಮ ನೆರವಿಗೆ ಧಾವಿಸಬೇಕು ಎಂದು ಅಂಗಲಾಚುತ್ತಿದ್ದಾರೆ.

Tomato Rate Down: ಮಳೆ ಕೈಕೊಟ್ಟು ಟೊಮ್ಯಾಟೊ ಇಳುವರಿಯಲ್ಲಿ ಕುಸಿತ.. ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರು| #TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:13 pm, Wed, 19 August 26

Loading...
Unable to load recommendations.
Follow Us