
ಬೆಂಗಳೂರು, ಸೆಪ್ಟೆಂಬರ್ 06: ನಾಳೆ (ಸೆ.07) ಆಗಸದಲ್ಲಿ ರಕ್ತಚಂದ್ರಗ್ರಹಣ (Blood Moon Eclipse) ಗೋಚರ ಆಗಲಿದೆ. ಸುಮಾರು ಐದು ಗಂಟೆಗಳ ಕಾಲ ಶಶಿಯ ಅಂದಕ್ಕೆ ಭೂಮಿ ಭಂಗ ತರಲಿದೆ. ನಾಳಿನ ರಕ್ತ ಚಂದಿರನ ದರ್ಶನದ ಭಾರತದಲ್ಲೂ ಸಿಗಲಿದೆ. ಈ ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಾಳೆ ಹಲವು ದೇಗುಲಗಳು (Temples) ಬಂದ್ ಆಗಲಿದ್ದು, ಪೂಜೆ, ದರ್ಶನದ ಸಮಯದಲ್ಲೂ ಬದಲಾವಣೆ ಆಗಲಿದೆ.
ನಭೋ ಮಂಡಲದಲ್ಲಿ ಜರುಗುವ ಚಂದ್ರಗ್ರಹಣ ವಿದ್ಯಮಾನವನ್ನ, ಖಗೋಳ ತಜ್ಞರು ಅಧ್ಯಯನ ದೃಷ್ಟಿಯಿಂದ ನೋಡಲು ಕಾಯುತ್ತಿದ್ದಾರೆ. ಬೆಂಗಳೂರಿನ ನೆಹರು ಪ್ಲಾನಿಟೋರಿಯಂನಲ್ಲೂ ಚಂದ್ರಗ್ರಹಣ ವೀಕ್ಷಣೆಗೆ ಅವಕಾಶ ಸಿಗಲಿದೆ. ಆದರೆ, ಧಾರ್ಮಿಕ ನಂಬಿಕೆ ಹೊಂದಿರೋದು ಚಂದ್ರಗ್ರಹಣವನ್ನ ಬೇರೆ ದೃಷ್ಟಿಕೋನದಿಂದಲೇ ನೋಡುತ್ತಾರೆ. ಹೀಗಾಗಿ ನಾಳೆಯ ಚಂದ್ರಗ್ರಹಣ ದೇಗುಲಗಳಿಗೆ ತಟ್ಟಲಿದೆ.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ರಾತ್ರಿ 9 ಗಂಟೆಗೆ ಬಂದ್ ಆಗಲಿದೆ. ಗ್ರಹಣ ಆರಂಭ, ಅಂತ್ಯ ಕಾಲದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಈ ವೇಳೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇನ್ನು, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ರಾತ್ರಿ 8 ಗಂಟೆಗೆ ಬಂದ್ ಆಗುತ್ತೆ. ಹಾಗೇ, ಕೊಪ್ಪಳದ ಹುಲಿಗೆಮ್ಮ, ಅಂಜನಾದ್ರಿಯಲ್ಲಿ ಸಂಜೆ 5ರ ಬಳಿಕ ದರ್ಶನ ಇರುವುದಿಲ್ಲ.
ಇದನ್ನೂ ಓದಿ: ರಾಹುಗ್ರಸ್ತ ರಕ್ತ ಚಂದ್ರಗ್ರಹಣ ವಿಶೇಷತೆ ಏನು? ಬರಿಗಣ್ಣಿನಿಂದಲೇ ವೀಕ್ಷಿಸಬಹುದೇ?
ಹೊರನಾಡು ಅನ್ನಪೂರ್ಣೇಶ್ವರಿ ಗುಡಿಯಲ್ಲಿ ಮಧ್ಯಾಹ್ನ 3ಕ್ಕೆ ಅನ್ನದಾನ ಸ್ಥಗಿತ ಆಗಲಿದೆ. ಉಡುಪಿ ಕೃಷ್ಣ ಮಠದಲ್ಲಿ ಬೆಳಗ್ಗೆ 10.30ರಿಂದ 12 ಗಂಟೆ ಒಳಗೆಯೇ ಪ್ರಸಾದ ವ್ಯವಸ್ಥೆ ಮುಕ್ತಾಯ ಮಾಡಲಾಗುತ್ತೆ. ಇನ್ನು, ಚಿಕ್ಕಬಳ್ಳಾಪುರದ ಪ್ರಮುಖ ದೇಗುಲಗಳು ನಾಳೆ ಸಂಜೆ 4 ಗಂಟೆಗೆ ಬಂದ್ ಆಗಲಿವೆ.
ಕೋಲಾರ ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ದೇಗುಲಗಳ ಬಾಗಿಲಿಗೆ ಬೀಗ ಬೀಳಲಿದೆ. ಹಾಸನದ ಬೇಲೂರಿನ ಚನ್ನಕೇಶವ ದೇಗುಲ ಮಧ್ಯಾಹ್ನದ 3.30ಕ್ಕೆ ಕ್ಲೋಸ್ ಆಗುತ್ತೆ. ಹಾಗೇ, ಮಡಿಕೇರಿ ಓಂಕಾರೇಶ್ವರ ದೇಗುಲ, ತಲಕಾವೇರಿ ಸನ್ನಿಧಿ ಸಂಜೆ 5ಕ್ಕೆ ಬಂದ್ ಆಗಲಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮದಪ್ಪಗೆ ಗ್ರಹಣ ತಟ್ಟಲ್ಲ, ಹೀಗಾಗಿ ನಾಳೆ ಎಂದಿನಂತೆಯೇ ದರ್ಶನ ಇರಲಿದೆ. ಗ್ರಹಣದ ಸಂದರ್ಭದಲ್ಲಿ ಸಾಮಾನ್ಯವಾಗಿ ಇತರೆ ದೇವಾಲಯಗಳು ಮುಚ್ಚಲ್ಪಡುತ್ತವೆ. ಆದರೆ ಗ್ರಹಣದ ವೇಳೆ ಮಾದೇಶ್ವರನಿಗೆ ತ್ರಿಕಾಲ ಪೂಜೆ, ಭಕ್ತರಿಗೆ ದರ್ಶನ ಇರುತ್ತೆ. ಆ ಮೂಲಕ ಮಾದಪ್ಪನ ಬೆಟ್ಟದಲ್ಲಿ ವಿಶಿಷ್ಟ ಪರಂಪರೆ ಇದೆ.
ನಾಳೆ ಚಂದ್ರಗ್ರಹಣ ಹಿನ್ನೆಲೆ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಆತ್ಮಲಿಂಗದ ದರ್ಶನದಲ್ಲಿ ಬದಲಾವಣೆ ಮಾಡಲಾಗಿದೆ. ಗ್ರಹಣ ಕಾಲದ ರಾತ್ರಿ 9.45 ರಿಂದ ಮಧ್ಯರಾತ್ರಿ 1.26ರವರೆಗೆ ಆತ್ಮಲಿಂಗದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗೋಕರ್ಣದಲ್ಲಿ ರಾತ್ರಿ ಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಬೆಳಗ್ಗೆ 10:45ರ ವರೆಗೆ ಮಾತ್ರ ಆತ್ಮಲಿಂಗದ ಸ್ಪರ್ಶ ದರ್ಶನಕ್ಕೆ ವ್ಯವಸ್ಥೆ ಇದೆ. ಇನ್ನು ಐತಿಹಾಸಿಕ ಬಾದಾಮಿ ಬನಶಂಕರಿ ದೇಗುಲ ಕೂಡ ಬಂದ್ ಇಲ್ಲ. ಚಂದ್ರ ಗ್ರಹಣದ ವೇಳೆ ದೇವಿಗೆ ನಿರಂತರ ಜಲಾಭಿಷೇಕ ನಡೆಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.