ಭಾರತದಲ್ಲಿದೆ ಬೆಟ್ಟದಷ್ಟು ಬಂಗಾರ! ಸೌದಿಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕ! ಇದು ದೇಶದ ಆರ್ಥಿಕ ಸ್ಥಿರತೆಯ ದ್ಯೋತಕ, ಹೇಗೆ?

|

Updated on: Jun 21, 2024 | 9:44 AM

Businesswise Gold Reserves: ಭಾರತೀಯರಿಗೆ ಚಿನ್ನದ ಮೇಲೆ ವಿಪರೀತ ವ್ಯಾಮೋಹ. ಆದರೆ ಆಪದ್ಬಾಂಧವ ಎನಿಸುವ ಈ ಚಿನ್ನದಿಂದ ಜೀವಭಯವನ್ನು ದೂರ ಮಾಡುವ ಆಶ್ವಾಸನೆ/ ಬೆಟ್ಟದಷ್ಟು ಭರವಸೆ ಇದೆ. ಇಡೀ ದೇಶದಲ್ಲಿ ಜನರ ಬಳಿ ಇರುವ ಬಂಗಾರದ ಲೆಕ್ಕ ನೋಡಿದರೆ ನೀವು ಹೌಹಾರುವುದು ಗ್ಯಾರಂಟಿ. ಅದೆಷ್ಟು ಬಂಗಾರ ದೇಶದಲ್ಲಿದೆ ಎಂಬುದು ನಿಮಗೆ ತಿಳಿದಿದೆಯೇ? ಜಸ್ಟ್​ 2 ಕೋಟಿ ಕೆಜಿಗೂ ಅಧಿಕ ಚಿನ್ನ ಭಾರತದ ಸುಪರ್ದಿಯಲ್ಲಿದೆ!

ಭಾರತದಲ್ಲಿದೆ ಬೆಟ್ಟದಷ್ಟು ಬಂಗಾರ! ಸೌದಿಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕ! ಇದು ದೇಶದ ಆರ್ಥಿಕ ಸ್ಥಿರತೆಯ ದ್ಯೋತಕ, ಹೇಗೆ?
ಸೌದಿ ಅರೇಬಿಯಾಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕವಾಗಿದೆ!
Follow us on

ಭಾರತೀಯರಿಗೆ ಚಿನ್ನದ (Gold) ಮೇಲೆ ವಿಪರೀತ ಎನಿಸುವಷ್ಟು ವ್ಯಾಮೋಹ. ಆದರೆ ಆಪದ್ಬಾಂಧವ ಎನಿಸುವ ಈ ಚಿನ್ನದಿಂದ ಜೀವಭಯವನ್ನು ದೂರ ಮಾಡುವ ಆಶ್ವಾಸನೆ/ ಬೆಟ್ಟದಷ್ಟು ಭರವಸೆ ಇದೆ. ಮಕ್ಕಳ ವಿದ್ಯಾಭ್ಯಾಸ, ಕೃಷಿಗೆ ಸಹಾಯ, ಹೆಣ್ಣುಮಗುವಿನ ಮದುವೆ, ಉದ್ಯಮ ಆರಂಭಿಸುವುದು (Business), ಮನೆ ಕೊಳ್ಳುವುದು ಅದಕ್ಕೆಲ್ಲಾ ಚಿನ್ನ ಶ್ರೀರಾಮ ರಕ್ಷೆಯಾಗಿ ಕೆಲಸ ಮಾಡುತ್ತದೆ. ಬೆಳೆ ಚೆನ್ನಾಗಿ ಕೈಹಿಡಿದರೆ ರೈತ ಖರೀದಿಸುವುದು ಚಿನ್ನವನ್ನೇ (Personal Finance). ಅದೇ ಚಿನ್ನವನ್ನು ಅಡವಿಟ್ಟು ಬೆಳೆ ಬೆಳೆಯಬಲ್ಲ ಚತುರಮತಿ ನಮ್ಮ ರೈತರು. ಇನ್ನು ಇಡೀ ದೇಶದಲ್ಲಿ ಜನರ ಬಳಿ ಇರುವ ಬಂಗಾರದ ಲೆಕ್ಕ ನೋಡಿದರೆ ನೀವು ಹೌಹಾರುವುದು ಗ್ಯಾರಂಟಿ. ಅದೆಷ್ಟು ಬಂಗಾರ ದೇಶದಲ್ಲಿದೆ ಎಂಬುದು ನಿಮಗೆ ತಿಳಿದಿದೆಯೇ? 2 ಕೋಟಿ ಕೆಜಿಗೂ ಅಧಿಕ ಚಿನ್ನ ಭಾರತದ ಸುಪರ್ದಿಯಲ್ಲಿದೆ!

ಪ್ರಪಂಚದಲ್ಲಿರುವ ಚಿನ್ನದ ಪೈಕಿ ಅಂದಾಜು ಶೇ.11 ರಷ್ಟು ಚಿನ್ನ ಭಾರತದಲ್ಲಿದೆ!

ಈಗೀಗ ದೇಶದಲ್ಲಿ ಉದ್ಯೋಗ ಭದ್ರತೆ ಎಂಬುದು ಸಮಾಧಾನಕರವಾಗಿದೆ. ಆದರೆ 20 ಅಥವಾ 30 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಯುವಜನತೆಗೆ ಅದು ತುಂಬಾ ಶೋಚನೀಯ ದಿನಗಳು. ಯಾವಾಗ ನೌಕರಿ ಕಳೆದುಕೊಂಡು ಬದುಕು ತಲೆಕೆಳಗಾಗುತ್ತದೋ ಎಂದು ಆತಂಕದಿಂದ ದಿನ ದೂಡುವ ಪರಿಸ್ಥಿತಿ ನೆಲೆಸಿತ್ತು ಆಗ. ಅಂತಹ ಶೋಚನೀಯ ಪರಿಸ್ಥಿತಿಗಳಲ್ಲಿ ಬೇರೊಬ್ಬರ ಬಳಿ ಕೈ ಚಾಚುವ ಬದಲು ಅಷ್ಟೋ ಇಷ್ಟೋ ಚಿನ್ನ ಖರೀದಿಸಿಟ್ಟುಕೊಂಡು ದುರ್ದಿನಗಳಲ್ಲಿ ಅನೇಕ ಭಾರತೀಯರು ಬಚಾವಾಗುತ್ತಿದ್ದರು. ಕೆಲವು ಅಂಕಿಅಂಶಗಳ ಪ್ರಕಾರ 2021 ರಲ್ಲಿ ಚಿನ್ನದ ಅಡ ಇಟ್ಟು ಸಾಲ ಮಾಡುವುದು ವಿಪರೀತವಾಗಿ ಹೆಚ್ಚಾದವು. ಯಾಕೆ ಗೊತ್ತಾ? ಕೊರೊನಾ ಮಹಾಮಾರಿಯಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದರು . ಪರ್ಸನಲ್ ಲೋನ್ ಮಾಡೋಣವೆಂದರೆ ಮುಂದೆ ಭರವಸೆಯ ದಿನಗಳೇ ಇರಲಿಲ್ಲ. ಆಗೆಲ್ಲ ಕೊರಳಲ್ಲಿದ್ದ ಚಿನ್ನವನ್ನು ಒತ್ತೆ ಇಟ್ಟು ದುರ್ದಿನಗಳನ್ನು ಕಳೆದಿದ್ದಾರೆ. ಆಗ ನಿಜಕ್ಕೂ ಚಿನ್ನ ಆಪತ್ಬಾಂಧವನಂತೆ ಕೈಹಿಡಿದಿದೆ. ಈ ಅನಿರೀಕ್ಷಿತ ಪರಿಸ್ಥಿತಿಯ ನಂತರ ಮೊದಲ ಹೂಡಿಕೆಯಾಗಿ ಚಿನ್ನ ಫಳಫಳನೆ ಹೊಳೆದಿದೆ. ಸಂಬಳ ಸದೃಢಗೊಂಡು ಕೈಗೆ ನಾಲ್ಕು ಕಾಸು ಬರತೊಡಗಿದರೆ ಮೊದಲು ಖರೀದಿಟ್ಟಿಕೊಳ್ಳುವುದೇ ಚಿನ್ನವನ್ನು! ಇನ್ನು ಹುಡುಗಿ ಮದುವೆಯಾದರೆ… ಹೆಣ್ಣು ಮಗುವಿನ ಜತೆಗೆ ಚಿನ್ನ ಕೊಟ್ಟರೆ ಆಕೆಯ ಬದುಕು ಸುರಕ್ಷಿತ ಎಂಬ ಭರವಸೆಯೇ ಕಾರಣವಾಗುತ್ತದೆ. ಹಾಗಾಗಿ ಭಾರತೀಯರು ಚಿನ್ನವನ್ನು ತುಂಬಾ ಪ್ರೀತಿಸುತ್ತಾರೆ. ಹಾಗಾಗಿಯೇ ವಿಶ್ವದ ಶೇ.11ರಷ್ಟು ಚಿನ್ನ ಭಾರತದಲ್ಲಿದೆ.

ಹೆಚ್ಚು ಚಿನ್ನ ಇರುವ ದೇಶಗಳ ಪೈಕಿ ಭಾರತ 9ನೆಯ ಸ್ಥಾನದಲ್ಲಿದೆ

ವರ್ಲ್ಡ್ ಗೋಲ್ಡ್ ಕೌನ್ಸಿಲ್ ವಾರ್ಷಿಕವಾಗಿ ಕೆಲವು ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ. ವರದಿಯ ಪ್ರಕಾರ, ಭಾರತೀಯ ಕುಟುಂಬಗಳು ವಿಶ್ವದ ಇತರರಿಗಿಂತ ಹೆಚ್ಚು ಚಿನ್ನವನ್ನು ಹೊಂದಿವೆ. ಒಂದು ಅಂದಾಜಿನ ಪ್ರಕಾರ ಭಾರತೀಯರ ಮನೆಗಳಲ್ಲಿ ಒಟ್ಟು 2 ಕೋಟಿ 30 ಲಕ್ಷ ಕೆಜಿ ಚಿನ್ನವಿದೆ. ಅಂದರೆ, ಸುಮಾರು 25 ಸಾವಿರ ಟನ್. ಅಮೆರಿಕ ಪ್ರಸ್ತುತ ಚಿನ್ನದ ನಿಕ್ಷೇಪದಲ್ಲಿ ಅಗ್ರ ರಾಷ್ಟ್ರವಾಗಿದೆ. ಈಗ ಅದನ್ನು ಮುಟ್ಟಲು ಭಾರತಕ್ಕೆ ಸಾಧ್ಯವಿಲ್ಲ. ಅಮೆರಿಕದ ಬಳಿ 8,133 ಮೆಟ್ರಿಕ್ ಟನ್ ಚಿನ್ನ ಇದ್ದರೆ, ನಮ್ಮ ಆರ್ ಬಿಐ ಬಳಿ 803 ಮೆಟ್ರಿಕ್ ಟನ್ ಚಿನ್ನವಿದೆ. ಈ ಲೆಕ್ಕಾಚಾರದ ಪ್ರಕಾರ ಸರ್ಕಾರಿ ಖಜಾನೆಯಲ್ಲಿ ಅತಿ ಹೆಚ್ಚು ಚಿನ್ನ ಹೊಂದಿರುವ ದೇಶಗಳ ಪೈಕಿ ಭಾರತ 9ನೇ ಸ್ಥಾನದಲ್ಲಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ ನಮ್ಮ ಬಳಿ ಅಮೆರಿಕಕ್ಕಿಂತ ಹೆಚ್ಚು ಚಿನ್ನವಿದೆ! ಯುನೈಟೆಡ್ ಸ್ಟೇಟ್ಸ್ ಮಾತ್ರವೇ ಏನು? ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು IMF ಎಲ್ಲಾ ಚಿನ್ನವನ್ನು ಹೊಂದಿವೆ. ಆದರೆ ಅದು ನಮ್ಮಲ್ಲಿರುವುದಕ್ಕೆ ಹೋಲಿಸಿದರೆ ಕಡಿಮೆಯದ್ದಾಗಿದೆ.

ಭಾರತದಲ್ಲಿರುವ ದೇವಾಲಯಗಳಲ್ಲಿ 2,500 ಟನ್​ ಬಂಗಾರ ಇದೆ

ಚಿನ್ನವು ನಡೆದಾಡುವ ಆಸ್ತಿಯಾಗಿದೆ. ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದು. (ಸೀರೆಯ) ಅಂಚಿನಷ್ಟು ಬಂಗಾರ ಎಂಬ ಪದವು ಇಲ್ಲಿಂದಲೇ ಬಂದಿದೆ. ಹತ್ತು ಗ್ರಾಂ ಅಥವಾ ನೂರು ಗ್ರಾಂ ಚಿನ್ನವನ್ನು ಸೀರೆಯಲ್ಲಿ ಅಡಗಿಸಿ ಒಯ್ಯಬಹುದು. ಅದೇ ಹತ್ತು ಗ್ರಾಂ ಚಿನ್ನದಿಂದ.. ತಾತ್ಕಾಲಿಕ ಆಪತ್ತು, ತೊಂದರೆಗಳಿಂದ ಮುಕ್ತಿ ಪಡೆಯಬಹುದು. ನೀವು ಮಾರಾಟ ಮಾಡಿದರೂ ಅಥವಾ ಅಡವಿಟ್ಟರೂ ನೀವು ತಕ್ಷಣ ಹಣವನ್ನು ಸ್ವೀಕರಿಸುತ್ತೀರಿ. ಹಾಗಾಗಿಯೇ ಯಾವುದೇ ವಸ್ತುವಿಗೆ ಇಲ್ಲದ ಬೇಡಿಕೆ ಇದಕ್ಕಿದೆ. ನೂರಾರು ವರ್ಷವಾದರೂ ಅದು ಹಾಳಾಗುವುದಿಲ್ಲ. ಕಳ್ಳರ ಭಯವಿಲ್ಲ ಎಂಬುದನ್ನು ಬಿಟ್ಟರೆ ಸಂಗ್ರಹಿಸಿಡಲು ಇದು ಬಲು ಸುಲಭ. ಫ್ರಿಡ್ಜ್ ನಲ್ಲಿಟ್ಟಿರಬೇಕು, ಪಾದರಸವೋ ಮತ್ತೊಂದೋ ಬೆರೆಸಿದರೆ ಮಾತ್ರ ಬಾಳಿಕೆ ಬರುತ್ತದೆ ಎಂಬ ಮಾತುಗಳಿಗೆ ಇಲ್ಲಿ ಅವಕಾಶವಿಲ್ಲ. ಅಲ್ಮೇರಾ ಅಥವಾ ಲಾಕರ್ ಗಳಲ್ಲಿ ಇಟ್ಟರೆ ವರ್ಷಗಟ್ಟಲೆ ಇಟ್ಟ ಹಾಗೆಯೇ ಇರುತ್ತದೆ.

Also Read: ಭರ್ಜರಿಯಾಗಿ ಬೆಳೆಯುತ್ತಿದೆ ಹೆಬ್ಬಾವು ಮಾಂಸ ಮಾರುಕಟ್ಟೆ! ಬನ್ನೀ ಒಂದು ರೌಂಡ್ ಹಾಕಿಬರೋಣ

ಅಷ್ಟೇ ಆಕರ್ಷಕವಾದ ಮತ್ತೊಂದು ಸಂಗತಿಯೆಂದರೆ… ಬೆಲೆ ಅದ್ಭುತವಾಗಿ ಏರುತ್ತದೆ. ಹಳೆಯದಾದಷ್ಟೂ ಅದರ ಮೌಲ್ಯ ಹೆಚ್ಚಾಗುತ್ತಾ ಹೋಗುತ್ತದೆ. ಚಿನ್ನವನ್ನು ಪ್ರಪಂಚದಲ್ಲಿ ಎಲ್ಲಿಯೇ ತೆಗೆದುಕೊಂಡು ಹೋದರೂ ಅಂದಿನ ದಿನಕ್ಕೆ ಕೈ ತುಂಬಾ ಹಣ ಇದ್ದಂತೆ ಸರಿ. ಇನ್ನು ಭಕ್ತಿಯಿಂದ ದೇವರಿಗೆ ಅರ್ಪಿಸುವ ಬಂಗಾರಕ್ಕಂತೂ ಲೆಕ್ಕವಿಲ್ಲ. ರಾಜರ ಕಾಲದಲ್ಲಿ ಈ ರೀತಿ ಹೆಚ್ಚು ಹೆಚ್ಚು ಚಿನ್ನ ದಾನವಾಗಿ ಸಂಗ್ರಹವಾಗುತ್ತಿತ್ತು. ಅದಕ್ಕಾಗಿಯೇ ಕೇರಳದ ಅನಂತಪದ್ಮನಾಭ ಸ್ವಾಮಿ ದೇವಸ್ಥಾನವೊಂದರಲ್ಲಿಯೇ 1,300 ಟನ್ ಚಿನ್ನವಿದೆ ಎಂದು ಅಂದಾಜಿಸಲಾಗಿದೆ. ಇನ್ನು ತಿರುಮಲ ಸೇರಿದಂತೆ ದೇಶದ ಎಲ್ಲ ದೇವಾಲಯಗಳಲ್ಲಿರುವ ಚಿನ್ನವನ್ನು ಲೆಕ್ಕ ಹಾಕಿದರೆ ಅದು 2,500 ಟನ್ ಎಂದು ಅಂದಾಜಿಸಲಾಗಿದೆ.

ವಿದೇಶಿಗರು ನಮ್ಮಂತೆ ಚಿನ್ನಾಭರಣ ಖರೀದಿಸುವುದಿಲ್ಲ. ಅಮೆರಿಕದಂತಹ ದೇಶಗಳಲ್ಲಿ ಸರ್ಕಾರ ಚಿನ್ನವನ್ನು ಖರೀದಿಸಿ ಬಿಸ್ಕತ್ ಆಗಿ ಪರಿವರ್ತಿಸಿ ಖಜಾನೆಯಲ್ಲಿ ಇಡುತ್ತದೆ. ಯಾವುದೇ ಆರ್ಥಿಕ ಸಮಸ್ಯೆಯ ಸಂದರ್ಭದಲ್ಲಿ ದೇಶಕ್ಕೆ ಸಹಾಯ ಮಾಡಲು ಅದು ಊರುಗೋಲಾಗುತ್ತದೆ. ಅಲ್ಲಿ ಅಮೇರಿಕಾ ಸರ್ಕಾರ ಮಾಡುವುದನ್ನು ಇಲ್ಲಿ ಭಾರತೀಯರೇ ಮಾಡುತ್ತಿದ್ದಾರೆ! ಒಂದು ಕಾಸು ಅಥವಾ ಒಂದು ತೊಲ ಎಷ್ಟೇ ಸಾಧ್ಯವಾದರೂ ಮೊದಲು ಚಿನ್ನವನ್ನು ಖರೀದಿಸಲಾಗುತ್ತದೆ. ಭವಿಷ್ಯದಲ್ಲಿ ಏನಾದರೂ ಕಷ್ಟ ಬಂದರೆ ಚಿನ್ನ ಕೈಹಿಡಿಯುತ್ತದೆ ಎಂಬ ನಂಬಿಕೆ ಬಲವಾಗಿದೆ. ಆದ್ದರಿಂದಲೇ ನಮ್ಮ ದೇಶಕ್ಕೆ ಬೇಲ್ ಔಟ್ ಪ್ಯಾಕೇಜ್ ನೀಡುವ ಅಗತ್ಯವಿಲ್ಲ. ಸ್ವಾವಲಂಬಿ ಭಾರತೀಯರು ಕೇವಲ ಚಿನ್ನದಿಂದಾಗಿ ಸುಭದ್ರರು. ಇದರ ಸಮ್ಮುಖದಲ್ಲಿ ಚಿನ್ನದ ಮೇಲಿನ ಮೋಹ ಭಾರತೀಯರಿಗೆ ಎಂದಿಗೂ ಕಡಿಮೆಯಾಗುವುದಿಲ್ಲ.

ಮತ್ತಷ್ಟು  ಪ್ರೀಮಿಯಂ ಸುದ್ದಿಗಳಿಗಾಗಿ    ಇಲ್ಲಿ ಕ್ಲಿಕ್ ಮಾಡಿ

ಪ್ರತಿ ವರ್ಷ ಆಮದು ಮಾಡಿಕೊಳ್ಳುವ ಚಿನ್ನವೇ ಇದಕ್ಕೆ ಉದಾಹರಣೆ. ಚಿನ್ನ ಆಮದು ಮಾಡಿಕೊಳ್ಳುವಲ್ಲಿ ಭಾರತ ನಿರಂತರವಾಗಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. FY 2023 ರಲ್ಲಿ, ಚಿನ್ನದ ಆಮದು 41.88 MT ಆಗಿತ್ತು, ಮತ್ತು 2024 ರಲ್ಲಿ, ಇದು 78.95 MT ತಲುಪಲಿದೆ. ಅಂದರೆ ಚಿನ್ನದ ಆಮದು ಶೇ. 88.5ರಷ್ಟು ಹೆಚ್ಚಾಗುತ್ತಿದೆ. ಈ ಬೇಡಿಕೆ ಎಂದೆಂದಿಗೂ ಕಡಿಮೆಯಾಗುವುದಿಲ್ಲ. ಏಕೆಂದರೆ ಮದುವೆ, ಹಬ್ಬ ಹರಿದಿನಗಳು ನಮ್ಮಲ್ಲಿ ಸರ್ವಮಾನ್ಯ ಮತ್ತು ಸರ್ವೇಸಾಮಾನ್ಯ. ಅದನ್ನು ತಡೆಯುವ ಮಾತೇ ಇಲ್ಲ. ಮದುವೆಗಾಗಿ ಚಿನ್ನ ಖರೀದಿಸಬೇಕು. ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷವಾಗಿ ಆಷಾಢ-ಶ್ರಾವಣ ಮಾಸಗಳಲ್ಲಿ ಚಿನ್ನವನ್ನು ಖರೀದಿಸುತ್ತಲೇ ಇರುತ್ತಾರೆ. ಹಾಗಾಗಿ ಭವಿಷ್ಯದಲ್ಲಿ ಭಾರತಕ್ಕೆ ಟನ್ ಗಟ್ಟಲೆ ಚಿನ್ನ ಹರಿದು ಬರುತ್ತಲೇ ಇರುತ್ತದೆ ಮತ್ತು ಅದರಲ್ಲಿ ಹೆಚ್ಚಿನವು ಆಭರಣಗಳಾಗಿ ಪರಿವರ್ತನೆಗೊಂಡು ಭಾರತೀಯರ ಮೈ-ಮನೆಗಳಲ್ಲಿ ಸೇರುತ್ತವೆ. ಇಂತಹ ಬಂಗಾರದ ಬೆಲೆ ಬಂಗಾರದಂತೆ ಹೆಚ್ಚುತ್ತಲೇ ಸಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಚಿನ್ನದ ಬೆಲೆ ಹೆಚ್ಚುತ್ತಿದ್ದರೂ ಖರೀದಿ ತಗ್ಗುವ ಮಾತೇ ಇಲ್ಲ. ಭಾರತೀಯರ ಸರಾಸರಿ ಆದಾಯ ಹೆಚ್ಚಾಗುತ್ತಿದ್ದಂತೆ ಚಿನ್ನದ ಬೆಲೆಯೂ ಏರುತ್ತಿದೆ. ಹಾಗಂತ ಖರೀದಿ ಮಾತ್ರ ನಿಂತಿಲ್ಲ. ಆದ್ದರಿಂದ, ಚಿನ್ನದೊಂದಿಗೆ ಭಾರತೀಯರನ್ನು ಬೇರ್ಪಡಿಸುವುದು ಅಸಾಧ್ಯದ ಮಾತಾಗಿದೆ.

Also Read: ಕಡಿಮೆ ಕೊಬ್ಬು ಎಂದು ಲೇಬಲ್ ಹಾಕಲಾದ ಉತ್ಪನ್ನವು ಆರೋಗ್ಯಕರ ಎಂದು ಹೇಳಲಾಗುವುದಿಲ್ಲ, ಬದಲಿಗೆ ಅದು ಅಪಾಯಕಾರಿ! ಹೇಗೆ?

ಹೆಚ್ಚಿನ ದೇಶಗಳು ಚಿನ್ನವನ್ನು ಒಂದು ಸರಕಾಗಿ ನೋಡುತ್ತವೆ. ಅಂದರೆ ಅವರ ದೃಷ್ಟಿಯಲ್ಲಿ ಅದೊಂದು ಖರೀದಿ ವಸ್ತು. ದರ ಹೆಚ್ಚಾದಾಗ ಮಾರಾಟ ಮಾಡಿಬಿಡಿ ಎಂಬುದು ಅವರ ಬೀಜಮಂತ್ರ. ಆದರೆ ಭಾರತೀಯರು ಹಾಗಲ್ಲ. ಮಹಾಲಕ್ಷ್ಮಿ ಎಂದು ಅಳೆದಳೆದು ಅದನ್ನು ಮೆರೆಸುತ್ತಾರೆ. ಭಾರತವು ಚಿನ್ನದೊಂದಿಗೆ ಬಲವಾದ ಸಾಂಸ್ಕೃತಿಕ ಸಂಪರ್ಕವನ್ನು ಹೊಂದಿದೆ. ಹಾಗಂತ ಅದನ್ನು ಮಾರಾಟದ ಸರಕಾಗಿ ನೋಡುವುದು ಕಷ್ಟ. ಧನ್​ ತ್ರಯೋದಶಿಯ ದಿನ ಚಿನ್ನ ಕೊಳ್ಳುವುದು ವಾಡಿಕೆಯಷ್ಟೇ ಅಲ್ಲ; ಅದನ್ನು ಸಂಸ್ಕೃತಿಯ ಭಾಗವನ್ನಾಗಿ ಮಾಡಿಕೊಂಡಿದ್ದೇವೆ. ಚಿನ್ನವಿಲ್ಲದೆ ಯಾವುದೇ ಮದುವೆ ಪೂರ್ಣಗೊಳ್ಳುವುದಿಲ್ಲ. ಕುಟುಂಬ ಎಷ್ಟೇ ಬಡವರಾದರೂ ಕೊರಳಲ್ಲಿ ಒಂದೆರಡು ಚಿನ್ನದ ಆಭರಣವಿರಲಿ ಎಂಬುದು ಜನರ ಸಾಮಾನ್ಯ ಬಯಕೆ. ಏಕೆಂದರೆ ಆ ಚಿನ್ನವೇ ಆ ಕುಟುಂಬದ ಶಕ್ತಿ, ಮತ್ತು ಆ ಮನೆಯ ಆರ್ಥಿಕ ಭದ್ರತೆಯೂ ಹೌದು.

ಭಾರತ ಮತ್ತು ಇತರ ಕೆಲವು ದೇಶಗಳನ್ನು ಹೊರತುಪಡಿಸಿ ಇತರೆ ದೇಶಗಳಲ್ಲಿ ಚಿನ್ನವನ್ನು ಆಭರಣವಾಗಿ ನೋಡಲಾರರು. ಹಾಗಾಗಿ, ಭಾರತೀಯರ ಕೊರಳಲ್ಲಿ ಮಿನುಗುವ ಆಭರಣಗಳನ್ನು ಕಂಡು ಅಮೆರಿಕನ್ನರು ಆಶ್ಚರ್ಯ ಪಡುತ್ತಾರೆ. ಅವರಿಗೆ ಚಿನ್ನದಂತಹ ಮಹಾಲಕ್ಷ್ಮಿಯ ಬಗ್ಗೆ ಅಷ್ಟಾಗಿ ಗೊತ್ತಿಲ್ಲ, ಆದರೆ ಹಾಗೆ ಮಾಡಿದರೆ ನಮ್ಮ ಹುಡುಗಿಯರು ನಡೆದಾಡುವ ಮಹಾಲಕ್ಷ್ಮಿಯಂತೆ ಕಾಣುತ್ತಾರೆ. ಒಂದು ರೀತಿಯಲ್ಲಿ ಭಾರತೀಯರ ಮೇಲಿನ ದಾಳಿಗಳಿಗೂ ಈ ಚಿನ್ನವೇ ಕಾರಣ. ಭಾರತೀಯರ ಮನೆ ದೋಚಲು ಹೋದರೆ ಚಿನ್ನ ಸಿಗುತ್ತದೆ ಎಂಬ ಅಪಾರ ಭರವಸೆಯೂ ಮನೆ ಮಾಡಿದೆ.

ಭಾರತ ಸಂಪತ್ತಿನ ತವರು. ಇಲ್ಲಿ ಸಂಪತ್ತು ಚಿನ್ನ, ವಜ್ರ ಅಥವಾ ಮಾಣಿಕ್ಯವಲ್ಲ. ಅಕ್ಕಿ, ಗೋಧಿ, ಧಾನ್ಯಗಳು, ಮಸಾಲೆಗಳು, ಹತ್ತಿಯೂ ಸೇರಿದೆ. ವಿದೇಶದಲ್ಲಿ ಸಿಗದಿದ್ದದ್ದು ನಮ್ಮ ದೇಶದಲ್ಲಿ ಸಿಗುತ್ತಿತ್ತು. ಹೀಗಾಗಿ, ಅವರು ತಮ್ಮಲ್ಲಿದ್ದ ಚಿನ್ನವನ್ನು ನಮಗೆ ಕೊಡುತ್ತಿದ್ದರು. ಮತ್ತು ಅವರಿಗೆ ಬೇಕಾದ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಹಾಗೆ ಕೂಡಿಟ್ಟ ಬಂಗಾರದ ಲೆಕ್ಕವಿಲ್ಲ. ಇಷ್ಟು ಚಿನ್ನವನ್ನು ಏನು ಮಾಡಬೇಕೆಂದು ತಿಳಿಯದೆ ಚಿನ್ನಾಭರಣಗಳನ್ನು ಧರಿಸತೊಡಗಿದರು! ದೇವರ ಚಿನ್ನದ ವಿಗ್ರಹಗಳನ್ನು ಮಾಡಿಸುತ್ತಿದ್ದರು. ಮತ್ತೆ ಚಿನ್ನದ ಆಭರಣಗಳಿಂದ ಅವುಗಳನ್ನು ಅಲಂಕರಿಸುತ್ತಿದ್ದರು. ದೇವಾಲಯದ ಗೋಡೆಗಳು ಮತ್ತು ದೇವಾಲಯದ ಶಿಖರಗಳನ್ನು ಚಿನ್ನದಿಂದ ಮಾಡಲಾಗುತ್ತಿತ್ತು. ಕೊನೆಗೆ ಸೀರೆಯ ಜರಿಗಳ ಅಂಚುಗಳಿಗೆ ಚಿನ್ನವನ್ನು ಸೇರಿಸಲಾಯಿತು. ಅ ಕಡೆ ಆಭರಣ ಭೂಷಣ ಈ ಕಡೆ ಆಪತ್ಕಾಲದಲ್ಲಿ ಕೈಹಿಡಿಯುವ ನೆಂಟ. ಹಾಗೆ ನೋಡಿದರೆ ಭಾರತದಲ್ಲಿ ಇನ್ನೂ ತುಂಬಾ ತುಂಬಾ ಚಿನ್ನ ಇತ್ತು. ಅದರೆ ಬ್ರಿಟಿಷರು ಮತ್ತು ಅದಕ್ಕೂ ಮೊದಲು ವಿದೇಶಿಯರು, ಮೊಘಲರು ಭಾರತದಿಂದ ಲೆಕ್ಕವಿಲ್ಲದಷ್ಟು ಚಿನ್ನವನ್ನು ದೋಚಿಕೊಂಡು ಮಾಡಿದರು. ಘಜಿನಿ ಮೊಹಮ್ಮದ್‌ನಂತಹವರು ಸೋಮನಾಥ ದೇಗುಲದ ಮೇಲೆ ದಾಳಿ ಮಾಡಿ ಕೆಜಿ ಗಟ್ಟಲೇ ಚಿನ್ನವನ್ನು ಕೊಂಡೊಯ್ದರು. ಆದಾಗ್ಯೂ ನಮ್ಮ ದೇಶದಿಂದ ಎಷ್ಟೇ ಚಿನ್ನ ಕದ್ದೊಯ್ದರೂ… ನಾವು ಇನ್ನೂ ಅಗ್ರಸ್ಥಾನದಲ್ಲಿ ಚಿನ್ನವನ್ನು ಶೇಖರಿಸಿಟ್ಟುಕೊಂಡಿದ್ದೇವೆ.

ಕಳೆದ 20 ವರ್ಷಗಳಲ್ಲಿ 65,000 ರೂಪಾಯಿಗೆ ಏರಿದ 10 ಗ್ರಾಂ ಚಿನ್ನದ ದರ

2023ರಲ್ಲಿ ಅಕ್ಷಯ ತೃತೀಯ ದಿನದಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 62,400 ರೂ ಇತ್ತು. ಆದರೆ ವರ್ಷಾಂತ್ಯಕ್ಕೆ ಸುಮಾರು 9 ಸಾವಿರ ರೂ. ಮೇಲಾಗಿ ಆ ವರ್ಷದಲ್ಲೇ ದರ ಗಣನೀಯವಾಗಿ ಏರಿಕೆಯಾಗಿದೆ. ಇನ್ನು 20 ವರ್ಷಗಳ ಹಿಂದಕ್ಕೆ ಹೋದರೆ… 2004ರ ಏಪ್ರಿಲ್ ನಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 5,800 ರೂ. ನಷ್ಟಿತ್ತು. ಆದರೆ ಈಗ 6666 ರೂ ದಾಟಿದೆ. ಅಂದರೆ ಕೇವಲ ಇಪ್ಪತ್ತು ವರ್ಷಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 65,000 ರೂ. ಗೆ ತಲುಪಿದೆ. ಇದು ಯಾರೂ ಕನಸು ಕಾಣದ, ಊಹಿಸಲಾಗದ ಬೆಲೆಯೆರಿಕೆಯಾಗಿದೆ. ಅದಕ್ಕಾಗಿಯೇ ನಮ್ಮ ದೇಶದಲ್ಲಿ ಬಹಳಷ್ಟು ಜನರು ಕೈಗೆ ಸ್ವಲ್ಪವೇ ಹಣ ಬಂದರೂ ಒಂದಷ್ಟು ಚಿನ್ನವನ್ನು ಖರೀದಿಸುತ್ತಾರೆ. ಅದೂ ಹಬ್ಬ ಹರಿದಿನಗಳಲ್ಲಿ ಖರೀದಿಸುವ ಚಿನ್ನಕ್ಕೆ ಹೆಚ್ಚುವರಿಯಾಗಿ! ಹಾಗಾಗಿ ಪ್ರತಿಯೊಂದು ಕುಟುಂಬದಲ್ಲೂ ಒಂದಷ್ಟು ಚಿನ್ನ ಇರುವುದು ಸಾಮಾನ್ಯದ ಸಂಗತಿಯಾಗಿದೆ.

2022ರಲ್ಲಿ ದೇಶದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದ ಕುಟುಂಬಗಳು ಶೇ 15

ಚಿನ್ನವನ್ನು ಆಭರಣವಾಗಿ ಖರೀದಿಸುವುದರ ಹೊರತಾಗಿ, ಭಾರತೀಯರು ಈಗ ಚಿನ್ನವನ್ನು ಹೂಡಿಕೆಯಾಗಿ ಖರೀದಿಸುತ್ತಿದ್ದಾರೆ. ಅಂದರೆ… ಚಿನ್ನ ಉಳಿತಾಯ ಮತ್ತು ಹೂಡಿಕೆಯ ಸಾಧನವಾಗಿ ಕಾಣುತ್ತಿದೆ. ಭಾರತದಲ್ಲಿ 6 ಲಕ್ಷ 50 ಸಾವಿರ ಹಳ್ಳಿಗಳಿದ್ದರೆ 36 ಸಾವಿರ ಹಳ್ಳಿಗಳಲ್ಲಿ ಮಾತ್ರ ಬ್ಯಾಂಕ್ ಶಾಖೆಗಳಿವೆ. ಇವರೆಲ್ಲ ಹಣ ಸಂಗ್ರಹಿಸಿಡುವ ಬದಲು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಲಾಭ ಪಡೆಯಲು ಚಿನ್ನದಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. 2022 ರ ವೇಳೆಗೆ, ಭಾರತದಲ್ಲಿ ಶೇಕಡಾ 15 ರಷ್ಟು ಕುಟುಂಬಗಳು ಚಿನ್ನದ ಮೇಲೆ ಹೂಡಿಕೆ ಮಾಡುತ್ತವೆ. 2023 ರಲ್ಲಿ, ಆ ಸಂಖ್ಯೆ 21 ಪ್ರತಿಶತಕ್ಕೆ ಹೆಚ್ಚಾಗುತ್ತದೆ. ಅದರಿಂದ ಆದಾಯವೂ ಚೆನ್ನಾಗಿದೆ. ಹಾಗಾಗಿ ಭವಿಷ್ಯದಲ್ಲಿ ಚಿನ್ನವನ್ನು ಹೂಡಿಕೆಯ ಸಾಧನವಾಗಿ ಪರಿವರ್ತಿಸುವ ಸಾಧ್ಯತೆ ಹೆಚ್ಚಿದೆ. ಆದುದರಿಂದಲೇ ಚಿನ್ನ ಎಂಬುದು ಸಾಮಾನ್ಯ ಕುಟುಂಬಕ್ಕೆ ಮತ್ತು ಇಡೀ ದೇಶಕ್ಕೆ ಶ್ರೀರಾಮರಕ್ಷೆಯಾಗಿದೆ ಎಂದು ಹೇಳಬೇಕಾಗುತ್ತದೆ.

ಮತ್ತಷ್ಟು  ಪ್ರೀಮಿಯಂ ಸುದ್ದಿಗಳಿಗಾಗಿ    ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Wed, 12 June 24