ಜಾತಿ ಗಣತಿ ವಿರೋಧ: ಶಾಮನೂರು ಶಿವಶಂಕರಪ್ಪ ನಿರ್ಧಾರಕ್ಕೆ ಸ್ವಾಮೀಜಿಗಳ ಸಹಮತ

| Updated By: ಗಣಪತಿ ಶರ್ಮ

Updated on: Nov 11, 2023 | 1:08 PM

ವೀರಶೈವ ಮಹಾಸಭಾ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಮತ್ತು ಶಾಮನೂರು ಹೇಳಿಕೆಗೆ ಸಮುದಾಯದ ಸ್ವಾಮೀಜಿಗಳ ಸಹಮತ ವ್ಯಕ್ತವಾಗ್ತಿದೆ. ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿರೋ ಬಸವ ಜಯಮೃತ್ಯುಂಜಯ ಶ್ರೀಗಳು, ಕಾಂತರಾಜ ವರದಿಯಲ್ಲಿ ಲಿಂಗಾಯತರು ಕಡಿಮೆ ಇದ್ದಾರೆಂದು ತೋರಿಸಲಾಗಿದೆ ಅಂತಾ ಆತಂಕ ವ್ಯಕ್ತಪಡಿಸಿದ್ದಾರೆ.

ಜಾತಿ ಗಣತಿ ವಿರೋಧ: ಶಾಮನೂರು ಶಿವಶಂಕರಪ್ಪ ನಿರ್ಧಾರಕ್ಕೆ ಸ್ವಾಮೀಜಿಗಳ ಸಹಮತ
ಶಾಮನೂರು ಶಿವಶಂಕರಪ್ಪ
Follow us on

ಬೆಂಗಳೂರು, ನವೆಂಬರ್ 11: ಜಾತಿ ಗಣತಿ (Caste census) ವರದಿ ಕುರಿತ ಚರ್ಚೆ ಈಗ ಕಾಂಗ್ರೆಸ್ ಸರ್ಕಾರಕ್ಕೆ (Congress Government) ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಿದ್ಧಪಡಿಸಿರೋ ಕಾಂತರಾಜ್ ವರದಿ, ಇದೀಗ ಸರ್ಕಾರಕ್ಕೆ ಕಬ್ಬಿಣದ ಕಡಲೆಯಾಗಿದೆ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ವಿರೋಧ ವ್ಯಕ್ತವಾಗ್ತಿದ್ದು, ಮತ್ತೊಮ್ಮೆ ಜಾತಿಗಣತಿ ನಡೆಸುವಂತೆ ಒಕ್ಕೊರಲ ಕೂಗು ಕೇಳಿಬರ್ತಿದೆ. ಕಾಂತ್​ರಾಜ್ ವರದಿ ಸ್ವೀಕರಿಸಲು ಸರ್ಕಾರ ಸಿದ್ಧವಾಗುತ್ತಿದ್ದಂತೆಯೇ ಈ ವರದಿ ತಿರಸ್ಕರಿಸುವಂತೆ ಒಕ್ಕಲಿಗ ಸಮುದಾಯ ಆಗ್ರಹಿಸಿದೆ.

ಈ ಮಧ್ಯೆ, ಬೆಂಗಳೂರಲ್ಲಿ ಸಭೆ ನಡೆಸಿದ ವೀರಶೈವ ಮಹಾಸಭಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅದ್ರಲ್ಲೂ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಈ ವರದಿಯನ್ನ ಮನೆಯಲ್ಲೇ ಕೂತು ಬರೆದಿದ್ದಾರೆ. ಜಾತಿ ಗಣತಿ ಅಂಕಿ ಅಂಶಗಳಲ್ಲಿ ಸಾಕಷ್ಟು ಲೋಪ ದೋಷಗಳಿವೆ ಎಂದಿದ್ದಾರೆ.

ವೀರಶೈವ ಮಹಾಸಭಾ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಮತ್ತು ಶಾಮನೂರು ಹೇಳಿಕೆಗೆ ಸಮುದಾಯದ ಸ್ವಾಮೀಜಿಗಳ ಸಹಮತ ವ್ಯಕ್ತವಾಗ್ತಿದೆ. ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿರೋ ಬಸವ ಜಯಮೃತ್ಯುಂಜಯ ಶ್ರೀಗಳು, ಕಾಂತರಾಜ ವರದಿಯಲ್ಲಿ ಲಿಂಗಾಯತರು ಕಡಿಮೆ ಇದ್ದಾರೆಂದು ತೋರಿಸಲಾಗಿದೆ ಅಂತಾ ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ವೈಜ್ಞಾನಿಕವಾಗಿ ವರದಿ ಸಿದ್ದವಾಗಲಿ ಅಂತಾ ಆಗ್ರಹಿಸಿದ್ದಾರೆ.

ಲಿಂಗಾಯತ ಶಾಸಕರ ಸಭೆ ಕರೆಯಲು ವೀರಶೈವ ಮಹಾಸಭಾ ನಿರ್ಧಾರ!

ಜಾತಿಗಣತಿಗೆ ಲಿಂಗಾಯತ ಸಮುದಾಯ ವಿರೋಧ ವ್ಯಕ್ತಪಡಿಸಿದ್ದು, ಈ ತಿಂಗಳ ಅಂತ್ಯಕ್ಕೆ ಲಿಂಗಾಯತ ಶಾಸಕರ ಸಭೆ ಕರೆಯಲು ನಿರ್ಧರಿಸಿದ್ದಾರೆ. 51ಕ್ಕೂ ಶಾಸಕರು ಭಾಗಿಯಾಗುವ ಸಾಧ್ಯತೆ ಇದ್ದು, ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುತ್ತೆ.

ಈ ಕುರಿತು ಪ್ರತಿಕ್ರಿಯಿಸಿರೋ ಸಚಿವ ರಾಮಲಿಂಗಾರೆಡ್ಡಿ, ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ ಎಂದಿದ್ದಾರೆ. ವರದಿ ಸ್ವೀಕರಿಸ್ಬೇಕು, ಬಹಿರಂಗಪಡಿಸ್ಬೇಕು ಅಂತಾ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ಇದನ್ನೂ ಓದಿ: ಮನೆಯಲ್ಲೇ ಕುಳಿತು ಜಾತಿ ಗಣತಿ ವರದಿ ಸಿದ್ಧಪಡಿಸಿದ್ದಾರೆ: ತಮ್ಮದೇ ಸರ್ಕಾರದ ವಿರುದ್ಧ ಶಾಮನೂರು ಶಿವಶಂಕರಪ್ಪ ಕಿಡಿ

ದಿನದಿಂದ ದಿನಕ್ಕೆ ಜಾತಿಗಣತಿ ವಿರುದ್ಧ ಎದ್ದಿರೋ ವಿರೋಧದ ಅಲೆ ಜ್ವಾಲೆಯಾಗ್ತಿದೆ. ತಿಂಗಳಾಂತ್ಯಕ್ಕೆ ವರದಿ ಸಲ್ಲಿಕೆಯಾಗೋ ಸಾಧ್ಯತೆ ಇದ್ದು, ಸರ್ಕಾರ ಜಾತಿ ಜಟಾಪಟಿಯನ್ನ ಹೇಗೆ ನಿಭಾಯಿಸುತ್ತೆ ಅನ್ನೋದನ್ನ ಕಾದುನೋಡ್ಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ