ಚಾಮರಾಜನಗರ: ಸಾಲ ವಾಪಸ್ ಕೇಳಿದ್ದಕ್ಕೆ ವೃದ್ಧನ ಕೊಲೆ ಮಾಡಿದ ಆರೋಪ, ಮೂವರ ಬಂಧನ
ಚಾಮರಾಜನಗರದ ಗುಂಡ್ಲುಪೇಟೆ ಹೆದ್ದಾರಿ ಬಳಿ ವೃದ್ಧ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಲ ಮರುಪಾವತಿಸುವಂತೆ ಕೇಳಿದ್ದಕ್ಕಾಗಿ ಸಾಲಗಾರ ವೃದ್ಧನನ್ನು ಹತ್ಯೆಗೈದಿದ್ದು, ಚಿನ್ನಾಭರಣವನ್ನೂ ದೋಚಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ಬಂಧಿತರಿಂದ ಚಿನ್ನ ವಶಪಡಿಸಿಕೊಂಡಿದ್ದು, ಕೊಲೆಗಾರರ ವಿಚಾರಣೆ ಮುಂದುವರೆದಿದೆ.

ಚಾಮರಾಜನಗರ, ನವೆಂಬರ್ 14: ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ (Gundlupete National Highway) ಬಳಿ ಮಂಗಳವಾರ (ನ.11) ಸ್ವಾಮಿ (70) ಎಂಬ ವೃದ್ಧನ ಶವವೊಂದು ಪತ್ತೆಯಾಗಿತ್ತು. ಮೈಮೇಲಿನ ಬಂಗಾರವನ್ನೂ ದೋಚಲಾಗಿತ್ತು. ಶವವನ್ನು ನೋಡಿದ್ದ ಮೃತರ ಹೆಂಡತಿ, ಸ್ವಾಮಿಯನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂದು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಶವದ ಮೇಲಿನ ಚಿನ್ನಾಭರಣ ದೋಚಿದ್ದ ಆರೋಪಿಗಳು
ಗ್ರಾಮಸ್ಥರ ಜಮೀನಿನ ಪಕ್ಕದ ರಾಷ್ಟ್ರೀಯ ಹೆದ್ದಾರಿಯ ಬಳಿ ಬಿದ್ದಿದ್ದ ಸ್ವಾಮಿಯ ಶವವನ್ನು ನೋಡಿದ್ದ ಪತ್ನಿ, ಗಂಡನ ಮೈಮೇಲಿನ ಚಿನ್ನಾಭರಣಗಳು ನಾಪತ್ತೆಯಾಗಿರುವುದನ್ನು ಕಂಡಿದ್ದರು. ಶವದ ಕುತ್ತಿಗೆಯ ಸುತ್ತ ಟವೆಲ್ ಸುತ್ತಿದ್ದು, ಅದು ಸ್ವಾಮಿಗೆ ಸೇರಿದ್ದಲ್ಲವೆಂದು ತಿಳಿದ ಮೇಲೆ ಪೊಲೀಸರ ಮೊರೆಹೋಗಿದ್ದರು. ಪ್ರಕರಣದ ಹಿನ್ನೆಲೆ ತೊಂಡವಾಡಿ ಗ್ರಾಮದ ನಿವಾಸಿ ಪರಶಿವಮೂರ್ತಿ, ಆರೋಪಿ ಸಿದ್ದರಾಜು ಹಾಗೂ ಬೆಲಚಲವಾಡಿ ಗ್ರಾಮದ ಮಹೇಶ್ ಎಂಬ ಮೂವರು ಆರೋಪಿಗಳನ್ನು ಪೊಲೀರು ಬಂದಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಮೃತರ ಬಳಿ ಆರೋಪಿ ಪರಶಿವಮೂರ್ತಿ ಹತ್ತು ಸಾವಿರ ಸಾಲ ಪಡೆದಿದ್ದ. ಸಾಲ ಮರುಪಾವತಿಸುವಂತೆ ಕೇಳಿದ್ದಕ್ಕೆ ಸ್ನೇಹಿತರೊಡನೆ ಸೇರಿ ವೃದ್ಧನನ್ನು ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಬಂಧಿತರಿಂದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ನಡೆದಿದ್ದೇನು?
ಸೋಮವಾರದಂದು ಮನೆಯಿಂದ ಹೊರಗೆ ಹೋಗಿದ್ದ ಸ್ವಾಮಿ, ಕತ್ತಲಾದರೂ ವಾಪಾಸ್ ಆಗದ ಕಾರಣ ಅವರ ಪತ್ನಿ ಆತಂಕಕ್ಕೊಳಗಾಗೊದ್ದರು. ಸ್ಥಳೀಯರೊಬ್ಬರೊಡನೆ ಎಲ್ಲೆಡೆ ಹುಡುಕಿದರೂ ಸ್ವಾಮಿಯ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಸ್ವಾಮಿಯ ಅಣ್ಣನ ಮಗ ಸೋಮನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮರುದಿನ ಬೆಳಿಗ್ಗೆ ಕರೆ ಮಾಡಿದ್ದ ಸೋಮ, ಸ್ವಾಮಿ ಕಮರಹಳ್ಳಿ ಗ್ರಾಮದ ಜಮೀನಿನ ಪಕ್ಕದ ರಾಷ್ಟ್ರೀಯ ಹೆದ್ದಾರಿಯ ಬಳಿ ಕೊಲೆಯಾಗಿದ್ದಾರೆಂದು ತಿಳಿಸಿದ್ದ. ಇದನ್ನು ಕೇಳಿ ಸ್ಥಳಕ್ಕೆ ಧಾವಿಸಿದ ಮೃತರ ಪತ್ನಿ, ಶವದ ಕುತ್ತಿಗೆಯನ್ನು ಒಂದು ಟವೆಲ್ನಿಂದ ಬೀಗಿದಿರುವುದನ್ನು ಕಂಡಿದ್ದರು. ಅದರೊಡನೆ ಸ್ವಾಮಿ ಧರಿಸಿದ್ದ ಸುಮಾರು 100 ಗ್ರಾಂ ಗೂ ಅಧಿಕ ಚಿನ್ನಾಭರಣ ಕಾಣೆಯಾಗಿರುವುದನ್ನು ಗಮನಿಸಿದ್ದರು. ಈ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:51 am, Fri, 14 November 25



