AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ತುರ್ತು ಚಿಕಿತ್ಸೆಗಾಗಿ ವೃದ್ಧನನ್ನು 10 ಕಿ.ಮೀ ಡೋಲಿಯಲ್ಲಿ ಹೊತ್ತುಕೊಂಡು ಹೋದ ಗ್ರಾಮಸ್ಥರು

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 62 ವರ್ಷದ ವ್ಯಕ್ತಿಯನ್ನು ತುರ್ತು ಚಿಕಿತ್ಸೆಗಾಗಿ ಗ್ರಾಮಸ್ಥರು ಬಟ್ಟೆಯಿಂದ ತಯಾರಿಸಿದ ಡೋಲಿಯಲ್ಲಿ 10 ಕಿ.ಮೀ ಹೊತ್ತುಕೊಂಡು ಹೋದ ಘಟನೆ ಗುರುವಾರ (ಜ.19) ರಂದು ಜಿಲ್ಲೆಯ ದೊಡ್ಡಾಣೆ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ: ತುರ್ತು ಚಿಕಿತ್ಸೆಗಾಗಿ ವೃದ್ಧನನ್ನು 10 ಕಿ.ಮೀ ಡೋಲಿಯಲ್ಲಿ ಹೊತ್ತುಕೊಂಡು ಹೋದ ಗ್ರಾಮಸ್ಥರು
ವೃದ್ಧನನ್ನು ಡೋಲಿಯಲ್ಲಿ ಹೊತ್ತುಕೊಂಡಯ ಹೋಗುತ್ತಿರುವುದು
Follow us
TV9 Web
| Updated By: ವಿವೇಕ ಬಿರಾದಾರ

Updated on: Jan 21, 2023 | 7:18 AM

ಚಾಮರಾಜನಗರ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 62 ವರ್ಷದ ವ್ಯಕ್ತಿಯನ್ನು ತುರ್ತು ಚಿಕಿತ್ಸೆಗಾಗಿ ಗ್ರಾಮಸ್ಥರು ಬಟ್ಟೆಯಿಂದ ತಯಾರಿಸಿದ ಡೋಲಿಯಲ್ಲಿ 10 ಕಿ.ಮೀ ಹೊತ್ತುಕೊಂಡು ಹೋದ ಘಟನೆ ಗುರುವಾರ (ಜ.19) ರಂದು ಜಿಲ್ಲೆಯ ದೊಡ್ಡಾಣೆ ಗ್ರಾಮದಲ್ಲಿ ನಡೆದಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಹಿಂದು ಸ್ಥಾನ ಟೈಮ್ಸ್​​ ವರದಿ ಮಾಡಿದೆ. ಗಾಮಸ್ಥರು ವೃದ್ಧನನ್ನು ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ವೈರಲ್​​ ಆಗಿದೆ. ಗ್ರಾಮಸ್ಥರ ಪ್ರಕಾರ ವೃದ್ಧ ಮಹದೇವ್ ಅವರ ಆರೋಗ್ಯ ಗುರುವಾರ ಮಧ್ಯಾಹ್ನ ಹದಗೆಟ್ಟ ಹಿನ್ನೆಲೆ ಕೂಡಲೆ ಅವರನ್ನು ಗ್ರಾಮಸ್ಥರು ಸಮೀಪದ ಸುಲ್ವಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಹೊತ್ತುಕೊಂಡು ಹೋಗಬೇಕಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇನ್ನು ಗ್ರಾಮಕ್ಕೆ ಆಂಬ್ಯುಲೆನ್ಸ್ ಸೇವೆ ಲಭ್ಯವಿಲ್ಲದ ಕಾರಣ ತಾತ್ಕಾಲಿಕ ಸ್ಟ್ರೆಚರ್‌ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.

ರಸ್ತೆ ಮೂಲಸೌಕರ್ಯ ಕೊರತೆ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸ್ಥಳೀಯರ ಪ್ರಕಾರ, ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಸರಿಯಾದ ರಸ್ತೆ ಸೌಕರ್ಯ, ಸಾರಿಗೆ ವ್ಯವಸ್ಥೆ ಇಲ್ಲ. ಗರ್ಭಿಣಿಯರು ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಹೆರಿಗೆಯಾದ ಘಟನೆಗಳು ಮತ್ತು ಕೆಲವು ಸಮಯಕ್ಕೆ ಆಸ್ಪತ್ರೆಗೆ ತಲುಪಲು ಸಾಧ್ಯವಾಗದೆ ಸಾವನ್ನಪ್ಪಿದ ಘಟನೆಗಳು ನಡೆದಿವೆ. ಈ ರೀತಿ ಅನೇಕ ಘಟನೆಗಳು ನಡೆದರೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ, ವಿದ್ಯುತ್ ಇಲ್ಲ. ಯಾರಿಗಾದರೂ ಕಾಯಿಲೆ ಬಿದ್ದರೆ ತಾತ್ಕಾಲಿಕ ಬಟ್ಟೆ ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಸಿ ಮತ್ತು ದಿನಬಳಕೆಯ ವಸ್ತುಗಳನ್ನು ಪಡೆಯಲು ಗ್ರಾಮಸ್ಥರು ಸುಮಾರು 10-12 ಕಿ.ಮೀ. ಹೋಗಬೇಕು. ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ನಡೆದುಕೊಂಡೇ ಹೋಗಬೇಕು ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ