ಎನ್ ಮಹೇಶ್ ಬಣದಲ್ಲಿ ಗುರುತಿಸಿಕೊಂಡಿದ್ದ ಕೊಳ್ಳೇಗಾಲ ನಗರಸಭೆಯ 7 ಮಂದಿ ಸದಸ್ಯರ ಸದಸ್ಯತ್ವ ಅನರ್ಹ

Kollegala News: ಕ್ಷೇತ್ರದ ಶಾಸಕ ಎನ್. ಮಹೇಶ್‌ಗೆ ಮುಖಭಂಗ ಆದಂತಾಗಿದೆ. ನಗರಸಭೆ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ನಾಗಮಣಿ, ನಾಗಸುಂದ್ರಮ್ಮ, ಪ್ರಕಾಶ್ ಶಂಕನಪುರ, ರಾಮಕೃಷ್ಣ, ನಾಸಿರ್ ಷರೀಫ್, ಪವಿತ್ರಾ ಸದಸ್ಯತ್ವ ಅನರ್ಹಗೊಳಿಸಲಾಗಿದೆ.

ಎನ್ ಮಹೇಶ್ ಬಣದಲ್ಲಿ ಗುರುತಿಸಿಕೊಂಡಿದ್ದ ಕೊಳ್ಳೇಗಾಲ ನಗರಸಭೆಯ 7 ಮಂದಿ ಸದಸ್ಯರ ಸದಸ್ಯತ್ವ ಅನರ್ಹ
ಎನ್. ಮಹೇಶ್ (ಸಂಗ್ರಹ ಚಿತ್ರ)
Edited By:

Updated on: Sep 06, 2021 | 10:50 PM

ಚಾಮರಾಜನಗರ: ಇಲ್ಲಿನ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಬಣದಲ್ಲಿ ಗುರುತಿಸಿಕೊಂಡು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದ ಕೊಳ್ಳೇಗಾಲ ನಗರಸಭೆಯ 7 ಮಂದಿ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಲಾಗಿದೆ. 7 ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ. ಇದರಿಂದ ಕ್ಷೇತ್ರದ ಶಾಸಕ ಎನ್. ಮಹೇಶ್‌ಗೆ ಮುಖಭಂಗ ಆದಂತಾಗಿದೆ. ನಗರಸಭೆ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ನಾಗಮಣಿ, ನಾಗಸುಂದ್ರಮ್ಮ, ಪ್ರಕಾಶ್ ಶಂಕನಪುರ, ರಾಮಕೃಷ್ಣ, ನಾಸಿರ್ ಷರೀಫ್, ಪವಿತ್ರಾ ಸದಸ್ಯತ್ವ ಅನರ್ಹಗೊಳಿಸಲಾಗಿದೆ.

ಅವರು ಬಿಎಸ್​ಪಿ ಸದಸ್ಯರಾಗಿದ್ದು ವಿಪ್ ಉಲ್ಲಂಘಿಸಿ ಬಿಜೆಪಿಗೆ ಮತಹಾಕಿದ್ದರು. ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಎಸ್​ಪಿ ಸದಸ್ಯೆ ಜಯಮೇರಿ ಕೋರ್ಟ್‌ ಮೊರೆ ಹೋಗಿದ್ದರು. ಆ ಬಳಿಕ, ಇದೀಗ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಡಿಸಿರಿಂದ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ.ಬಿಎಸ್​ಪಿಯಿಂದ ಆಯ್ಕೆಯಾದ ಏಳು ಮಂದಿ ನಗರಸಭಾ ಸದಸ್ಯರ ನೇಮಕ ಅನೂರ್ಜಿತ ಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಶಾಸಕ ಎನ್. ಮಹೇಶ್ ಆಗಸ್ಟ್ 5 ರಂದು ಬಿಜೆಪಿ ಪಕ್ಷಕ್ಕೆ (Karnataka BJP)  ಸೇರ್ಪಡೆಯಾಗಿದ್ದರು. ಬಳಿಕ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಸಿಎಂ ಬಸವರಾಜ ಬೊಮ್ಮಾಯಿ‌, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವರ ಸಮ್ಮುಖದಲ್ಲಿ ಎನ್. ಮಹೇಶ್ ಬಿಜೆಪಿಗೆ ಸೇರ್ಪಡೆಯಾಗಿದ್ದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಬಿಎಸ್​ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್. ಮಹೇಶ್ ಗೆಲುವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಬಿಎಸ್​ಪಿ ಮೈತ್ರಿ ಮಾಡಿಕೊಂಡಿತ್ತು. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಎಸ್​ಪಿಯಿಂದ ಎನ್. ಮಹೇಶ್ ಶಾಸಕರಾಗಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದರು.

ಇದನ್ನೂ ಓದಿ: N Mahesh: ಕೊಳ್ಳೇಗಾಲದ ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್. ಮಹೇಶ್ ಬಿಜೆಪಿಗೆ ಸೇರ್ಪಡೆ

ಇದನ್ನೂ ಓದಿ: N Mahesh: ಬಿಎಸ್​ಪಿಯಿಂದ ಉಚ್ಛಾಟಿತರಾಗಿದ್ದ ಕೊಳ್ಳೇಗಾಲದ ಶಾಸಕ ಎನ್​. ಮಹೇಶ್ ನಾಳೆ ಬಿಜೆಪಿಗೆ ಸೇರ್ಪಡೆ