ಪೀಠಾಧಿಪತಿಯ ಮೊಬೈಲ್ನಲ್ಲಿತ್ತು ಕಾಮಪುರಾಣ, ಮದ್ಯ-ಮಾಂಸದ ಫೊಟೋಸ್! ಬಗೆದಷ್ಟು ಬಯಲಾಗುತ್ತಿದೆ ರಹಸ್ಯ
ಗಡಿನಾಡು ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಲಿಂಗಾಯಿತ ಮಠ ಈಗ ಸಾಕಷ್ಟು ವಿವಾದಕ್ಕೆ ಒಳಗಾಗಿದೆ. ಮುಸ್ಲಿಂ ವ್ಯಕ್ತಿ ಲಿಂಗಾಯತ ಪೀಠಾಧೀಶರಾದ ವಿಚಾರವಾಗಿ ಶುರುವಾದ ವಿವಾದಕ್ಕೆ ಈಗ ಟ್ವಿಸ್ಟ್ ದೊರೆತಿದೆ. ಪೂರ್ವಾಶ್ರಮದಲ್ಲಿ ಮುಸ್ಲಿಂ ಆಗಿದ್ದರು ಎಂಬುದು ಬಹಿರಂಗವಾಗುತ್ತಿದ್ದಂತೆಯೇ ಪೀಠ ತೊರೆದ ನಿಜಲಿಂಗ ಸ್ವಾಮೀಜಿಯ (ಪೂರ್ವಾಶ್ರಮದಲ್ಲಿ ಮಹಮ್ಮದ್ ನಿಸಾರ್) ನಿಜರೂಪ ಈಗ ಒಂದೊಂದಾಗಿ ಬಯಲಾಗುತ್ತಿದೆ.

ಬೆಂಗಳೂರು, ಆಗಸ್ಟ್ 7: ಲಿಂಗದೀಕ್ಷೆ ಪಡೆದು ಮಠಾಧೀಶರಾಗಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ಮೂಲ ಧರ್ಮದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡದೇ ಹಾಗೂ ದಾಖಲಾತಿಗಳಲ್ಲೂ ಮೂಲಧರ್ಮದ ಹೆಸರನ್ನೇ ಉಳಿಸಿಕೊಂಡಿರುವುದು ಬಹಿರಂಗವಾದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಕೇವಲ ಮುಸ್ಲಿಂ ಧರ್ಮದವರು ಎಂಬುದಷ್ಟೇ ಅಲ್ಲದೆ, ಓರ್ವ ಸಲಿಂಗ ಕಾಮಿ ಎಂಬುದೂ ಅವರ ಮೊಬೈಲ್ನಲ್ಲಿರುವ ಪುರಾವೆಗಳಿಂದ ಬಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಮಾಂಸ ಹಾಗೂ ಮದ್ಯ ಸೇವಿಸಿರುವ ಸತ್ಯ ಕೂಡ ಈಗ ಬಹಿರಂಗವಾಗಿದೆ.
ಯಾದಗಿರಿ ಜಿಲ್ಲೆ ಶಹಾಪುರ ಮೂಲದ ಮಹಮ್ಮದ್ ನಿಸಾರ್ ವಿಶ್ವಗುರು ಬಸವಣ್ಣನವರ ತತ್ವ ಚಿಂತನೆಗಳಿಂದ ಪ್ರಭಾವಿತರಾಗಿ ಕಳೆದ ವರ್ಷ ಬಸವಕಲ್ಯಾಣದ ಬಸವಪ್ರಭುಸ್ವಾಮೀಜಿಯಿಂದ ಜಂಗಮ ದೀಕ್ಷೆ ಪಡೆದಿದ್ದರು. ಇವರ ಹೆಸರನ್ನು ನಿಜಲಿಂಗ ಸ್ವಾಮೀಜಿ ಎಂದು ನಾಮಕರಣ ಮಾಡಲಾಗಿತ್ತು. ಬಸವ ತತ್ವ ಪ್ರಚಾರಕರಾಗಿದ್ದ ಇವರನ್ನು ಗುಂಡ್ಲುಪೇಟೆ ತಾಲೂಕು ಚೌಡಹಳ್ಳಿಯಲ್ಲಿ ಗುರುಮಲ್ಲೇಶ್ವರ ಶಾಖಾಮಠದ ನೂತನ ಕಟ್ಟಡ ನಿರ್ಮಿಸಿದ್ದ ಮಹದೇವ ಪ್ರಸಾದ್ ಎಂಬುವರು ಒಂದೂವರೆ ತಿಂಗಳ ಹಿಂದೆ ಸ್ವಾಮೀಜಿಯೊಬ್ಬರ ಶಿಫಾರಿಸ್ಸಿನ ಮೇರೆಗೆ ಕರೆತಂದು ಮಠಾಧೀಶರನ್ನಾಗಿ ಮಾಡಿದ್ದರು. ಕಳೆದ ಒಂದೂವರೆ ತಿಂಗಳಿಂದ ಚೌಡಹಳ್ಳಿಯ ಗುರುಮಲ್ಲೇಶ್ವರ ಮಠದಲ್ಲಿ ಪ್ರವಚನ ಧಾರ್ಮಿಕ ಕಾರ್ಯ ನಡೆಸಿಕೊಂಡು ಬರುತ್ತಿದ್ದ ನಿಜಲಿಂಗಸ್ವಾಮೀಜಿ ತಾವು ಮೂಲತಃ ಮುಸ್ಲಿಂ ಧರ್ಮದ ವ್ಯಕ್ತಿ ಎಂಬುದನ್ನು ಗ್ರಾಮಸ್ಥರಿಗೆ ತಿಳಿಸಿರಲಿಲ್ಲ.
ಮಠದ ಭಕ್ತರಿಗೆ ನೀಡಿದ ಮೊಬೈಲ್ನಿಂದ ಬಯಲಾಯ್ತು ಸತ್ಯ
ನಿಜಲಿಂಗ ಸ್ವಾಮೀಜಿ ಒಮ್ಮೆ ಮಠದ ಭಕ್ತರೊಬ್ಬರಿಗೆ ಮೊಬೈಲ್ ನೀಡಿದ್ದರು. ಆ ಸಂದರ್ಭದಲ್ಲಿ, ಅದರಲ್ಲಿ ಸ್ವಾಮೀಜಿಯ ನಿಜವಾದ ಹೆಸರು, ಎಸ್ಎಸ್ಎಲ್ಸಿ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ವಿವರ ಗೊತ್ತಾಗಿದೆ. ಆಧಾರ್ ಕಾರ್ಡ್ನಲ್ಲಿಯೂ ನಿಸಾರ್ ಮಹಮ್ಮದ್ ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ. ಜೊತೆಗೆ ಆತನ ರಾಸಲೀಲೆ ತಿಳಿದು ಈಗ ಗ್ರಾಮಸ್ಥರೇ ಬೆಚ್ಚಿ ಬಿದ್ದಿದ್ದಾರೆ.
ಇದನ್ನೂ ಓದಿ: ವಿರಕ್ತ ಮಠಕ್ಕೆ ಮುಸ್ಲಿಂ ವ್ಯಕ್ತಿ ಪೀಠಾಧಿಪತಿ: ವಿರೋಧಿಸಿದ ಗ್ರಾಮಸ್ಥರಿಗೆ ತಿಳಿ ಹೇಳಿದ ವಚನಾನಂದ ಶ್ರೀ
ಕಾನೂನು ಹೋರಾಟಕ್ಕೆ ಮುಂದಾದ ಅಖಿಲ ಭಾರತ ವೀರಶೈವ ಮಹಾಸಭಾ
ಮುಸ್ಲಿಂ ಧರ್ಮದಿಂದ ಮತಾಂತರವಾಗಿರುವ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದು ಹಾಗೂ ಮೊಬೈಲ್ನಲ್ಲಿ ಸಿಕ್ಕ ಹಸಿ ಬಿಸಿ ದೃಶ್ಯದ ಆಧಾರದ ಮೇಲೆ ಈಗ ಅಖಿಲ ಭಾರತ ವೀರಶೈವ ಮಹಾಸಭಾ ಈಗ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ತಕ್ಕ ಶಾಸ್ತಿ ಮಾಡುವ ಭರವಸೆ ವ್ಯಕ್ತ ಪಡಿಸಿದೆ.








