
ಚಾಮರಾಜನಗರ, ಜುಲೈ 25: ಸದಾ ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷದ (wildlife conflict) ಸುದ್ದಿಯಿಂದ ಸದ್ದು ಮಾಡುತ್ತಿದ್ದ ಚಾಮರಾಜನಗರ (chamarajanagar) ಜಿಲ್ಲೆಗೆ ಅರಣ್ಯಾಧಿಕಾರಿಗಳು ಮದ್ದು ಅರೆಯಲು ಮುಂದಾಗಿದ್ದಾರೆ. ಕಾಡು ಪ್ರಾಣಿಗಳಿಂದ ರೈತರಿಗೆ ಶಾಶ್ವತ ಪರಿಹಾರ ನೀಡಲು ಪಣ ತೊಟ್ಟಿದ್ದಾರೆ. ಬರೋಬ್ಬರಿ 314 ಕಿ.ಮೀ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಸಿದ್ದತೆ ನಡೆಸಿದ್ದಾರೆ. ಆ ಮೂಲಕ ಕಾಡಾನೆ ದಾಳಿಯಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಲು ಮುಂದಾಗಿದ್ದಾರೆ.
ಅತೀ ಹೆಚ್ಚು ಹುಲಿ ಸಂರಕ್ಷಿತ ಪ್ರದೇಶ ಹೊಂದಿರುವ ರಾಜ್ಯದ ಏಕೈಕ ಜಿಲ್ಲೆ ಅಂದ್ರೆ ಅದು ಚಾಮರಾಜನಗರ. ಅದೆ ರೀತಿ ಅತೀ ಹೆಚ್ಚು ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷಕ್ಕೆ ಸಾಕ್ಷಿಯಾದ ಜಿಲ್ಲೆ ಎಂಬ ಅಪಖ್ಯಾತಿ ಕೂಡ ಚಾಮರಾಜನಗರ ಜಿಲ್ಲೆಗೆ ಸಲ್ಲುತ್ತೆ. ಶತಾಯ ಗತಾಯ ಕಾಡು ಪ್ರಾಣಿಗಳು ಮತ್ತು ಮಾನವನ ನಡುವೆ ಸಂಘರ್ಷಕ್ಕೆ ಬ್ರೇಕ್ ಹಾಕಲೇಬೇಕೆಂದು ಪಣ ತೊಟ್ಟಿರುವ ಅರಣ್ಯ ಇಲಾಖೆ ಹೊಸದೊಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಇದನ್ನೂ ಓದಿ: ಬಂಡೀಪುರದಲ್ಲಿ ಏಕಾಏಕಿ ಕಾರುಗಳ ಮೇಲೆ ಕಾಡಾನೆ ದಾಳಿ, ಬೆಚ್ಚಿಬಿದ್ದ ಪ್ರಯಾಣಿಕರು: ವಿಡಿಯೋ ವೈರಲ್
ಕಾಡಾನೆ ದಾಳಿಗೆ ಶಾಶ್ವತ ಪರಿಹಾರವನ್ನ ಅರಣ್ಯಾಧಿಕಾರಿಗಳು ಕಂಡು ಹಿಡಿದಿದ್ದಾರೆ. ರೈಲ್ವೆ ಬ್ಯಾರಿಗೇಡ್ ಅಳವಡಿಸುವ ಮೂಲಕ ಕಾಡಾನೆ ದಾಳಿ, ಬೆಳೆ ಹಾನಿಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿದ್ದಾರೆ. ಇನ್ನು ಕಾಡಂಚಿನ ಪ್ರದೇಶಗಳಲ್ಲಿ ಆಗಾಗ್ಗೆ ಕಾಡು ಬಿಟ್ಟು ನಾಡಿಗೆ ಬರುವ ಆನೆಗಳು ರೈತರು ಬೆಳೆದಿರುವ ಬೆಳೆಗಳನ್ನು ನಾಶಪಡಿಸುತ್ತವೆ. ಅಲ್ಲದೆ ಕೆಲವೊಮ್ಮೆ ಮನುಷ್ಯರ ಮೇಲೆ ದಾಳಿ ಮಾಡಿ ಸಾವನ್ನಪ್ಪಿರುವ ಸಾಕಷ್ಟು ನಿದರ್ಶನಗಳಿವೆ. ರೈತರು ಕೂಡ ಅಕ್ರಮವಾಗಿ ವಿದ್ಯುತ್ ಹರಿಸಿ ವನ್ಯಪ್ರಾಣಿಗಳ ಸಾವಿಗೆ ಕಾರಣವಾಗಿರುವ ಉದಾಹರಣೆಗಳಿವೆ. ಹೀಗಾಗಿ ಆನೆಗಳು ಹೆಚ್ಚಾಗಿ ಕಾಡಿನಿಂದ ಆಚೆ ಬರುವ ಪ್ರದೇಶಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುತಿಸಿ ಅಂತಹ ಜಾಗದಲ್ಲಿ ರೈಲ್ವೆ ಬ್ಯಾರಿಗೇಡ್ಗಳನ್ನು ಅಳವಡಿಸಲು ಮುಂದಾಗಿದ್ದಾರೆ.
ಬಂಡೀಪುರದಲ್ಲಿ ಇಲ್ಲಿಯವರೆಗೂ 60 ಕಿ.ಮೀ ರೈಲ್ವೆ ಬ್ಯಾರಿಕೇಡ್ ಸಿದ್ಧಪಡಿಸಲಾಗಿದ್ದು, ಈ ವರ್ಷ ಮತ್ತೆ 27 ಕಿ.ಮೀ ನಿರ್ಮಿಸಲು ಒಪ್ಪಿಗೆ ಸಿಕ್ಕಿದೆ. ಇದರಿಂದ ಕಾಡಂಚಿನ ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿ ಮತ್ತಷ್ಟು ತಪ್ಪಲಿದೆ. ಇನ್ನೂ ಈ ರೈಲ್ವೆ ಬ್ಯಾರಿಕೇಡ್ ಹಾಕಲು ಹೆಚ್ಚು ದುಬಾರಿ ವೆಚ್ಚ ತಗುಲುತ್ತದೆ. ಒಂದು ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ಹಾಕಲು ಅಂದಾಜು ಒಂದೂವರೆ ಕೋಟಿ ರೂ. ಖರ್ಚಾಗುತ್ತದೆ. ಹೀಗಾಗಿ ಆನೆಗಳು ಹೆಚ್ಚಾಗಿ ಹೊರಗೆ ಬರುವ ಪ್ರದೇಶಗಳನ್ನು ಗುರುತಿಸಿ ಅಂತಹ ಜಾಗಗಳಲ್ಲಿ ಅಧಿಕಾರಿಗಳು ಬ್ಯಾರಿಕೇಡ್ ಅಳವಡಿಸುವ ಕೆಲಸ ನಡೆದಿದೆ.
ಇನ್ನು ಬಂಡೀಪುರ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆನೆ ಉಪಟಳ ಹೆಚ್ಚಾಗಿರುವ ಪ್ರದೇಶದಲ್ಲಿ ಕೂಡ ಮುಂದಿನ ದಿನಗಳಲ್ಲಿ ಈ ರೈಲ್ವೆ ಬ್ಯಾರಿಕೇಡ್ ಅಳವಡಿಸಿದರೆ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪುತ್ತದೆ. ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಬ್ಯಾರಿಕೇಡ್ ಅಳವಡಿಸಲು ಪ್ರಸ್ತಾವನೆ ಸಲ್ಲಿಸುವ ಮೂಲಕ ಶಾಶ್ವತ ಪರಿಹಾರಕ್ಕೆ ಮುಂದಾಗಿದ್ದು, ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.