ಚಿಕ್ಕಬಳ್ಳಾಪುರ, ನವೆಂಬರ್ 20: ಗ್ರಾಮ ಪಂಚಾಯ್ತಿಯೊಂದರ (Gram Panchayat) ವ್ಯಾಪ್ತಿಗೆ ಬರುವ ಹಳೇ ಗ್ರಾಮವನ್ನೇ ರಕ್ಷಿಸಿ ಭದ್ರಪಡಿಸಬೇಕಾಗಿದ್ದ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು, ಅಧಿಕಾರಿಗಳು, ಆ ಗ್ರಾಮವೊಂದರಲ್ಲಿ ಜನವಸತಿ ಇಲ್ಲವೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿವೇಶನಗಳನ್ನಾಗಿ ವಿಂಗಡಿಸಿ, ನನಗೊಂದು, ನನ್ನ ಹೆಂಡತಿ ಮಕ್ಕಳಿಗೂ ಒಂದೊಂದು ಎನ್ನುವ ರೀತಿಯಲ್ಲಿ ನಿವೇಶನಗಳನ್ನು ಅಕ್ರಮವಾಗಿ ಖಾತೆ ಮಾಡಿಕೊಂಡು ಮಾರಾಟ ಮಾಡಿರುವ ಪ್ರಕರಣ ವರದಿಯಾಗಿದೆ. ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕಿನ ಆವಲಗುರ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ (Avalagurki Gram Panchayat) ಮಜರಾ ಬಾರ್ಲಹಳ್ಳಿ ಎನ್ನುವ ಗ್ರಾಮವೊಂದಿದೆ. ಆ ಗ್ರಾಮದಲ್ಲಿ ಪ್ರಸ್ತುತ ಜನವಸತಿ ಇಲ್ಲ. ಆದರೂ ಕಂದಾಯ ಇಲಾಖೆ, ಪಂಚಾಯ್ತಿಯ ದಾಖಲೆಗಳಲ್ಲಿ ಆ ಗ್ರಾಮವಿದೆ. ಆ ಗ್ರಾಮದ ಹೆಸರಿನಲ್ಲಿ ಸುಮಾರು 3-4 ಎಕರೆ ಜಮೀನು ಇದೆ. ಅಲ್ಲಿದ್ದ ಪಾಳುಬಿದ್ದ ಪಾಯ, ಕಟ್ಟಡಗಳನ್ನು ಸಮತಟ್ಟು ಮಾಡಲಾಗಿದೆ. ನಂತರ ಅದೇ ಗ್ರಾಮದ, ಅದೇ ಜಮೀನಿನ ಮೇಲೆ ಕಣ್ಣು ಹಾಕಿ ರಿಯಲ್ ಎಸ್ಟೇಟ್ (Real Estate) ಮಾಡಲಾಗಿದೆ.
ಜನವಸತಿ ಇಲ್ಲದ ಬಾರ್ಲಹಳ್ಳಿ ಗ್ರಾಮದಲ್ಲಿ ಸುಮಾರು 2 ಎಕರೆ ಜಮೀನನ್ನು 55 ನಿವೇಶನಗಳಾಗಿ ಮಾರ್ಪಾಡು ಮಾಡಲಾಗಿದೆ. ಸ್ಥಳೀಯ ಆವಲಗುರ್ಕಿ ಗ್ರಾಮ ಪಂಚಾಯ್ತಿಯಿಂದ 55 ನಿವೇಶನಗಳನ್ನಾಗಿ ದಾಖಲೆ ಸೃಷ್ಟಿಸಲಾಗಿದೆ. ಅಕ್ರಮವಾಗಿ ಸೃಷ್ಟಿಸಲಾದ ನಿವೇಶನಗಳನ್ನು ಆವಲಗುರ್ಕಿ ಗ್ರಾಮ ಪಂಚಾಯ್ತಿಯ ಕೆಲವು ಸದಸ್ಯರುಗಳು, ಅಧಿಕಾರಿ-ಸಿಬ್ಬಂದಿಗಳ ಸಂಬಂಧಿಕರು, ನೆಂಟರು, ಮಕ್ಕಳು ಹಾಗೂ ಹಿತೈಷಿಗಳಿಗೆ ಅಕ್ರಮವಾಗಿ ಖಾತೆ ಮಾಡಲಾಗಿದೆ.
55 ನಿವೇಶನಗಳಲ್ಲಿ ಈಗಾಗಲೇ 38 ನಿವೇಶನಗಳಿಗೆ ಇ-ಆಸ್ತಿಗಳನ್ನು ಸೃಷ್ಟಿಸಲಾಗಿದೆ. ಅದರಲ್ಲಿ ಆವಲಗುರ್ಕಿ ಗ್ರಾಮ ಪಂಚಾಯ್ತಿಯ ಬಿ ಲ್ಕಲೆಕ್ಟರ್ ಪ್ರಕಾಶ್ರವರ ಪತ್ನಿ ಲಕ್ಷ್ಮೀದೇವಮ್ಮ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಗೇರಹಳ್ಳಿ ವೆಂಕಟೇಶ್ರವರ ತಾಯಿ ಪಾರ್ವತಮ್ಮ, ಸ್ಥಳೀಯ ಬಿಜೆಪಿ ಮುಖಂಡ ಜಯರಾಮ ರೆಡ್ಡಿರವರ ಪತ್ನಿ ಜಿ.ಎನ್. ಭವ್ಯ, ಗ್ರಾಮ sಪಂಚಾಯ್ತಿ ಸದಸ್ಯ ಕೆ.ಎಲ್. ಶ್ರೀನಿವಾಸ್ ಅವರ ಅತ್ತೆ ಮುದ್ದಮ್ಮ, ಮಗಳು ಸರೋಜಮ್ಮ, ಗ್ರಾಮ ಪಂಚಾಯ್ತಿ ಸದಸ್ಯೆ ಭಾಗ್ಯಮ್ಮಳ ತಮ್ಮ ಪ್ರಕಾಶ್, ಗ್ರಾಮ ಪಂಚಾಯ್ತಿ ಸದಸ್ಯೆ ಅರಿಕೆರೆ ಗೌತಮ್ಮನವರ ಅತ್ತೆಯರಾದ ರತ್ನಮ್ಮ, ಚಿಕ್ಕತಾಯಮ್ಮ, ಗ್ರಾಮಪಂಚಾಯ್ತಿ ಸದಸ್ಯ ದೇವರಾಜ್ರವರ ಅತ್ತೆ ಅನಸೂಯಮ್ಮ, ಆವಲಗುರ್ಕಿ ಬಿಜೆಪಿ ಮುಖಂಡ ರಾಜಣ್ಣನವರ ಪತ್ನಿ ಮಂಜುಳ, ಗ್ರಾಮಪಂಚಾಯ್ತಿ ಮಾಜಿ ಸದಸ್ಯ ಎಸ್.ಸಿ.ಕೃಷ್ಣಪ್ಪ, ವಡ್ರೇಪಾಳ್ಯ ಗ್ರಾಮಪಂಚಾಯ್ತಿ ಸದಸ್ಯೆ ರೂಪ, ಗ್ರಾಮಪಂಚಾಯ್ತಿ ಸದಸ್ಯ ಎನ್.ಎ.ಆವಲರೆಡ್ಡಿ, ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷೆ ಜಿ.ವಿ.ಸ್ವಾತಿ, ಆವಲಗುರ್ಕಿ ಆಂಜಿನಮ್ಮನವರ ಸಂಬಂಧಿ ಬಿಜೆಪಿ ಮುಖಂಡ ನಾಗರಾಜ್ ಸೇರಿದಂತೆ ಬಂಧು-ಬಳಗ ನೆಂಟರಿಗೆ ಅಕ್ರಮವಾಗಿ ನಿವೇಶನಗಳಿಗೆ ಇ-ಆಸ್ತಿ ನೋಂದಣಿ ಮಾಡಿಕೊಡಲಾಗಿದೆ.
ಕಂದಾಯ ಭೂಮಿಯಲ್ಲಾಗಲೀ, ಸರ್ಕಾರಿ ಭೂಮಿಯಲ್ಲಾಗಲೀ, ಗ್ರಾಮ ಠಾಣಾ ಜಾಗದಲ್ಲಿ ನಿವೇಶನಗಳನ್ನು ವಿಂಗಡಿಸಿ, ನಿವೇಶನ ರಹಿತರಿಗೂ ನಿವೇಶನವನ್ನು ವಿತಸಿರುವ ಅಧಿಕಾರ ಗ್ರಾಮ ಪಂಚಾಯ್ತಿಗೆ ಇಲ್ಲ. ಆಯಾ ಜಿಲ್ಲಾಧಿಕಾರಿಗಳು ಇಲ್ಲವೇ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದಿಂದ ಮಾತ್ರವೇ ನಿವೇಶನಗಳನ್ನು ಹಂಚಿಕೆ ಮಾಡುವ ಅಧಿಕಾರವಿದೆ. ಆದರೂ ಆವಲಗುರ್ಕಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಜನಪ್ರತಿನಿಧಿಗಳು, ಅಕ್ರಮವಾಗಿ, ಕಾನೂನುಬಾಹಿರವಾಗಿ ತಮ್ಮ ಕೋಟ್ಯಾಧಿಪತಿ ಬಂಧು-ಬಳಗ, ರಕ್ತಸಂಬಂಧಿಗಳಿಗೆ ಅಕ್ರಮವಾಗಿ ಖಾತೆಗಳನ್ನು ಮಾಡಿದ್ದಾರೆ.
ಸುಮಾರು 5 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನದಂತಹ ಬೆಲೆಯ ಗ್ರಾಮವನ್ನು ಆವಲಗುರ್ಕಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು ಈಶಾ ಲೈಫ್ ಪ್ರೈವೇಟ್ ಲಿಮಿಟೆಡ್ನ ಪ್ರತಿನಿಧಿ ಸಿ. ಪ್ರಭಾಕರ್ಗೆ ಮಾರಾಟ ಮಾಡಿದ್ದಾರೆ. ಇದರಲ್ಲಿ ಉಪನೋಂದಣಾಧಿಕಾರಿಗಳು, ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸೇರಿದಂತೆ ರಿಯಲ್ ಎಸ್ಟೇಟ್ ಮಾಫಿಯಾ ಕೈವಾಡದ ಶಂಕೆ ವ್ಯಕ್ತವಾಗಿದೆ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಪ್ರಕಾಶ್ ಜೆ.ನಿಟ್ಟಾಲಿರವರು 2 ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿ, ತನಿಖೆಗೆ ಆದೇಶ ನೀಡಿದ್ದಾರೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Mon, 20 November 23