Nandi Hills: ನಂದಿ ಗಿರಿಧಾಮಕ್ಕೆ ತಾತ್ಕಾಲಿಕ ರಸ್ತೆ ನಿರ್ಮಾಣ; ಪ್ರವಾಸಿಗರಿಗೆ ಮುಂದುವರೆದ ನಿರ್ಬಂಧ

ನಂದಿ ಗಿರಿಧಾಮಕ್ಕೆ ಶಾಶ್ವತ ರಸ್ತೆಯನ್ನು ಪುನಃ ನಿರ್ಮಿಸಲು ಇನ್ನೂ ಹಲವು ದಿನಗಳ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Nandi Hills: ನಂದಿ ಗಿರಿಧಾಮಕ್ಕೆ ತಾತ್ಕಾಲಿಕ ರಸ್ತೆ ನಿರ್ಮಾಣ; ಪ್ರವಾಸಿಗರಿಗೆ ಮುಂದುವರೆದ ನಿರ್ಬಂಧ
ನಂದಿ ಗಿರಿಧಾಮಕ್ಕೆ ನಿರ್ಮಿಸಲಾದ ತಾತ್ಕಾಲಿಕ ರಸ್ತೆ (ಚಿತ್ರಕೃಪೆ; ಬೆಂಗಳೂರು ಮಿರರ್)
Edited By:

Updated on: Aug 28, 2021 | 6:10 PM

ಚಿಕ್ಕಬಳ್ಳಾಪುರ: ಇತ್ತೀಚಿಗಷ್ಟೇ ಸುರಿದ ಭಾರಿ ಮಳೆಯಿಂದ ಸಂಪರ್ಕ ಕಡಿತಗೊಂಡಿದ್ದ ನಂದಿ ಗಿರಿಧಾಮಕ್ಕೆ (Nandi Hills)  ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಗುಡ್ಡೆ ಹಾಗೂ ಬಂಡೆ ಕುಸಿತಕ್ಕೆ ಕೊಚ್ಚಿ ಹೋಗಿದ್ದ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಾತ್ಕಾಲಿಕ ಉಪಯೋಗಕ್ಕೋಸ್ಕರ ದುರಸ್ತಿಗೊಳಿಸಿದ್ದಾರೆ. ಸದ್ಯ ನಿರ್ಮಾಣವಾದ ತುರ್ತು ರಸ್ತೆಯನ್ನು ನಂದಿ ಗಿರಿಧಾಮಕ್ಕೆ ಅಧಿಕೃತ ಕೆಲಸಗಳಿಗಾಗಿ ಓಡಾಡುವ ಸಿಬ್ಬಂದಿ ಮಾತ್ರ ಬಳಸಬಹುದಾಗಿದೆ. ಯಾವುದೇ ಪ್ರವಾಸಿಗರಿಗೆ ತಾತ್ಕಾಲಿಕ ರಸ್ತೆಯ ಬಳಕೆಗೆ ಅನುಮತಿ ನೀಡಲಾಗಿಲ್ಲ. ರಸ್ತೆ ಸಮರ್ಪಕವಾಗಿ ನಿರ್ಮಾಣವಾಗುವವರೆಗೂ ಪ್ರವಾಸಿಗರಿಗೆ ನಂದಿ ಗಿರಿಧಾಮದ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ನಂದಿ ಗಿರಿಧಾಮಕ್ಕೆ ಶಾಶ್ವತ ರಸ್ತೆಯನ್ನು ಪುನಃ ನಿರ್ಮಿಸಲು ಇನ್ನೂ ಹಲವು ದಿನಗಳ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಿರಿಧಾಮದ ಮೇಲ್ಭಾಗದಲ್ಲಿ ದೇವಸ್ಥಾನ, ಅಂಚೆ ಕಚೇರಿ ಮತ್ತು ಪೊಲೀಸ್ ಠಾಣೆಗಳಿರುವ ಕಾರಣ, ಅಲ್ಲಿನ ಸಿಬ್ಬಂದಿಗೆ ತಾತ್ಕಾಲಿಕ ಓಡಾಟದ ಸಲುವಾಗಿ ಈ ರಸ್ತೆಯನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕುಸಿತ ಉಂಟಾದ ದಿನ ಏನಾಗಿತ್ತು?
ನಂದಿ ಗಿರಿಧಾಮದಲ್ಲಿ ಗುಡ್ಡ ಕುಸಿದು ರಸ್ತೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಗಿರಿಧಾಮದಿಂದ ಬೆಂಗಳೂರಿಗೆ ಬರಲು ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ಕಾರುಗಳು ಕೆಳಗೆ ಬರಲಾಗದೆ ಇದ್ದಿದ್ದರಿಂದ ಕಾಲ್ನಡಿಗೆಯಲ್ಲಿ ಸುಲ್ತಾನ ಪೇಟೆ ಮಾರ್ಗವಾಗಿ ಕೆಳಗೆ ಇಳಿಯಲು ಕೆಎಸ್​​ಟಿಡಿಸಿ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದರು.

30ಕ್ಕೂ ಹೆಚ್ಚು ಜನ ಪ್ರವಾಸಿಗರು ಬೆಟ್ಟದಲ್ಲಿ ಸಿಲುಕಿದ್ದರು. ಹೀಗಾಗಿ ಸುಲ್ತಾನಪೇಟೆಯಿಂದ ಬೆಂಗಳೂರು ತಲುಪಲು ಕೆಎಸ್​​ಟಿಡಿಸಿಯ ಬಸ್​ಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್​​ಟಿಡಿಸಿ ಹಿರಿಯ ಅಧಿಕಾರಿ ಟಿವಿ9 ಡಿಜಿಟಲ್​ಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: 

Afghanistan Natural Resources: ಅಫ್ಘಾನಿಸ್ತಾನದಲ್ಲಿ ಅಗಾಧ ಖನಿಜ ಸಂಪತ್ತು ಲೆಕ್ಕಕ್ಕೆ ಸಿಕ್ಕಲ್ಲ, ಕೈಗೆ ದಕ್ಕಲ್ಲ ಏಕೆ ಗೊತ್ತಾ?

ಅಮರುಲ್ಲಾ ಸಲೇಹ್: ಅಫ್ಘಾನಿಸ್ತಾನ ಪ್ರತಿರೋಧ ಹೋರಾಟದ ಕೊನೆಯ ಆಸರೆ, ತಾಲಿಬಾನ್-ಪಾಕಿಸ್ತಾನವನ್ನು ಎಂದಿಗೂ ಒಪ್ಪದ ನಾಯಕನೀತ

(Chikkaballapur Nandi Hills temporary road Construction is done but Continued restriction on tourists)