ಬಿರುಗಾಳಿಗೆ ದ್ರಾಕ್ಷಿ ತೋಟದ ಮೇಲೆ ಬಿದ್ದ ತೆಂಗಿನ ಮರ! ಲಕ್ಷಾಂತರ ರೂಪಾಯಿ ನಷ್ಟ

ಬಿರುಗಾಳಿ ಸಹಿತ ಭಾರೀ ಮಳೆಗೆ ಬೃಹತ್ ತೆಂಗಿನ ಮರವೊಂದು ದ್ರಾಕ್ಷಿ ತೋಟದ ಮೇಲೆ ಉರುಳಿಬಿದ್ದ ಪರಿಣಾಮ ಫಸಲು ತುಂಬಿದ್ದ ದ್ರಾಕ್ಷಿ ತೋಟ ನೆಲಕಚ್ಚಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ದ್ರಾಕ್ಷಿ ನಷ್ಟವಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಬಿರುಗಾಳಿಗೆ ದ್ರಾಕ್ಷಿ ತೋಟದ ಮೇಲೆ ಬಿದ್ದ ತೆಂಗಿನ ಮರ! ಲಕ್ಷಾಂತರ ರೂಪಾಯಿ ನಷ್ಟ
ದ್ರಾಕ್ಷಿ ತೋಟದ ಮೇಲೆ ಬಿದ್ದ ತೆಂಗಿನ ಮರ
Updated By: ಕಿರಣ್ ಹನುಮಂತ್​ ಮಾದಾರ್

Updated on: May 25, 2024 | 7:33 PM

ಚಿಕ್ಕಬಳ್ಳಾಪುರ, ಮೇ.25: ಬಿರುಗಾಳಿ ಸಹಿತ ಭಾರೀ ಮಳೆಗೆ ಬೃಹತ್ ತೆಂಗಿನ ಮರವೊಂದು ದ್ರಾಕ್ಷಿ(Grapes) ತೋಟದ ಮೇಲೆ ಉರುಳಿಬಿದ್ದ ಘಟನೆ ಚಿಕ್ಕಬಳ್ಳಾಪುರ(Chikkaballapur) ತಾಲೂಕಿನ ಸೂಲಕುಂಟೆ ಗ್ರಾಮದಲ್ಲಿ ನಡೆದಿದೆ. ಇದರ ಪರಿಣಾಮ ಫಸಲು ತುಂಬಿದ್ದ ದ್ರಾಕ್ಷಿ ತೋಟ ನೆಲಕಚ್ಚಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ದ್ರಾಕ್ಷಿ ನಷ್ಟವಾಗಿದೆ. ನಿನ್ನೆ(ಮೇ.24) ತಡರಾತ್ರಿ ಜಿಲ್ಲೆಯ ವಿವಿಧೆಡೆ ಧಾರಾಕರ ಮಳೆ ಹಾಗೂ ಬಿರುಗಾಳಿ ಬಿಸಿದ್ದು, ವಿವಿಧೆಡೆ ಮರಗಳು ಧರೆಗುರುಳಿವೆ.

ಅದೃಷ್ಟವಶಾತ್ ಎಲ್ಲಿಯೂ ಏನು ಅವಾಂತರಗಳು ಆಗಿಲ್ಲ. ಆದ್ರೆ, ರೈತ ರಾಮಕೃಷ್ಣಪ್ಪ ಎಂಬುವವರಿಗೆ ಸೇರಿದ ದ್ರಾಕ್ಷಿ ತೋಟದಲ್ಲಿ ಆಗಬಾರದ ಘಟನೆವೊಂದು ಆಗಿದೆ. ಹೌದು, ತೋಟದ ಬದಿಯಲ್ಲಿ ಬೃಹತ್ ತೆಂಗಿನ ಮರವೊಂದು ಬಿರುಗಾಳಿಗೆ ಬುಡಸಮೇತ ಕಿತ್ತು, ದ್ರಾಕ್ಷಿ ಚಪ್ಪರದ ಮೇಲೆ ಬಿದ್ದಿದೆ. ಇದರಿಂದ ಕಟಾವು ಹಂತದಲ್ಲಿದ್ದ ದ್ರಾಕ್ಷಿ ತೋಟದ ಕಲ್ಲು, ಕೂಚಾಗಳು ಮುರಿದುಬಿದ್ದು, ದ್ರಾಕ್ಷಿ ಚಪ್ಪರ ನೆಲಕಚ್ಚಿದೆ.

ಇದನ್ನೂ ಓದಿ:ರಣ ಬಿಸಿಲಿನಿಂದ ಬಳ್ಳಿಯಲ್ಲೇ ಬಾಡ್ತಿದೆ ದ್ರಾಕ್ಷಿ; ವಾಟರ್ ಸ್ಪ್ರೇ ಮಾಡುವ ಮೂಲಕ ರಕ್ಷಣೆಗೆ ಮುಂದಾದ ರೈತ

ಇನ್ನು ಕಟಾವು ಹಂತದಲ್ಲಿದ್ದ ದ್ರಾಕ್ಷಿ ಫಸಲು ಮಣ್ಣು ಪಾಲಾಗಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. 30 ಕ್ಕೂ ಹೆಚ್ಚು ಕಲ್ಲು ಕೂಚಾಗಳು ಮುರಿದು ಹೋಗಿದ್ದು, ಇಡೀ ಚಪ್ಪರಕ್ಕೆ ಎಣಿದಿರುವ ಕಂಬಿಯನ್ನು ಮರು ಜೋಡಣೆ ಮಾಡಬೇಕಿದೆ. ಇಂದು(ಮೇ.25) ಬೆಳಿಗ್ಗೆ ವ್ಯಾಪಾರಸ್ಥರು ದ್ರಾಕ್ಷಿ ಕಟಾವು ಮಾಡಬೇಕಿತ್ತು. ಅಷ್ಟರಲ್ಲಿ ರಾತ್ರಿ ತೋಟ ಮಣ್ಣು ಪಾಲಾಗಿದೆ.

ರೈತನಿಗೆ ವರ್ಷ, ದೊಣ್ಣೆಗೆ ನಿಮಿಷ ಎನ್ನುವ ಹಾಗೆ ಲಕ್ಷಾಂತರ ರೂಪಾಯಿ ಸಾಲ ಸೂಲ ಮಾಡಿ ದ್ರಾಕ್ಷಿ ಬೆಳೆದರೆ, ನಿನ್ನೆ ರಾತ್ರಿ ಬಿಸಿದ ಬಿರುಗಾಳಿಗೆ ತೆಂಗಿನ ಮರವೊಂದು ದ್ರಾಕ್ಷಿ ಚಪ್ಪರದ ಮೇಲೆ ಬಿದ್ದು ಕೆಲವೇ ನಿಮಿಷಗಳಲ್ಲಿ ದ್ರಾಕ್ಷಿ ಫಸಲನ್ನು ಮಣ್ಣುಪಾಲಾಗುವಂತೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ