ಚಿಕ್ಕಬಳ್ಳಾಪುರ: ಬಸ್ಸಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮರೆತು ಹೋದವರಿಗೆ ಹಿಂದಿರುಗಿಸಿದ ಕಂಡಕ್ಟರ್!

| Updated By: ರಮೇಶ್ ಬಿ. ಜವಳಗೇರಾ

Updated on: Oct 29, 2023 | 1:27 PM

ರಸ್ತೆಯಲ್ಲಿ ಯಾರದ್ದಾದರೂ ಐದು ಹತ್ತು ರೂಪಾಯಿ ಬಿದ್ದರೂ, ಅದನ್ನು ಮೆಲ್ಲಗೆ ಜೇಬಿಗೆ ಹಾಕಿಕೊಂಡು ಹೋಗುವ ಹಾಗೂ ಬೇರೆಯವರ ಜೇಬಿನಿಂದಲೇ ಹಣ ಎಗರಿಸುವ ಕಾಲ ಇದು. ಇಂತಹ ಕಾಲದಲ್ಲೂ ಪ್ರಾಮಾಣಿಕರು ಇದ್ದಾರೆ ಎಂಬುದು ಚಿಕ್ಕಬಳ್ಳಾಪುರದಲ್ಲಿ (Chikkaballapur) ಸಾಬೀತಾಗಿದೆ. ದಂಪತಿಯು ಬಸ್‌ನಲ್ಲಿ ಮರೆತು ಹೋಗಿದ್ದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಅವರಿಗೆ ಹಿಂತಿರುಗಿಸುವ ಮೂಲಕ ಬಸ್‌ ಕಂಡಕ್ಟರ್‌ ಪ್ರಾಮಾಣಿಕತೆ ಮೆರೆದಿದ್ದಾರೆ.

ಚಿಕ್ಕಬಳ್ಳಾಪುರ: ಬಸ್ಸಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮರೆತು ಹೋದವರಿಗೆ ಹಿಂದಿರುಗಿಸಿದ ಕಂಡಕ್ಟರ್!
ಒಡವೆ ಮರೆತು ಹೋದವರಿಗೆ ವಾಪಸ್‌ ಕೊಟ್ಟ ಕಂಡಕ್ಟರ್!
Follow us on

ಚಿಕ್ಕಬಳ್ಳಾಪುರ, (ಅಕ್ಟೋಬರ್ 29): ಈಗಿನ ಕಾಲದಲ್ಲಿ ಪ್ರಾಮಾಣಿಕತೆಯನ್ನು (Honesty) ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ. ಎಲ್ಲೋ ಕೆಲವರು ಇದ್ದಾರೆ. ಹೌದು… ಬಸ್‌ನಲ್ಲಿ ಮರೆತು ಹೋಗಿದ್ದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕೆಎಸ್​ಆರ್ಟಿಸಿ ಬಸ್ ಕಂಡಕ್ಟರ್ (KSRTC bus conductor) ​ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಬೆಂಗಳೂರಿನ ಆಂಜಿನಪ್ಪ ಲೇಔಟ್‌ ನಿವಾಸಿಗಳಾದ ಪ್ರಕಾಶ್‌ ಹಾಗೂ ಪ್ರಮೀಳಾ ದಂಪತಿಗೆ ಬಸ್‌ ಕಂಡಕ್ಟರ್‌ ಚಿನ್ನಾಭರಣಗಳನ್ನು ಹಿಂತಿರುಗಿಸಿದ್ದಾರೆ. ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ವೇಳೆ ದಂಪತಿಯು ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಬಸ್‌ನಲ್ಲಿಯೇ ಬಿಟ್ಟು ಹೋಗಿದ್ದರು. ಒಡೆಗಳನ್ನು ನೋಡಿದ ಬಸ್‌ ಕಂಡಕ್ಟರ್‌, ಅವುಗಳನ್ನು ಸಾರಿಗೆ ಬಸ್‌ ನಿರ್ವಾಹಕ ಸಿ.ವಿ. ರಮೇಶ್‌ ಅವರಿಗೆ ನೀಡಿದ್ದಾರೆ. ಇದಾದ ಬಳಿಕ ದಂಪತಿಗೆ ಒಡವೆಗಳನ್ನು ಹಸ್ತಾಂತರಿಲಾಗಿದೆ.

ಚಿಕ್ಕಬಳ್ಳಾಪುರ (chikkaballapur) ಜಿಲ್ಲೆ ಗೌರಿಬಿದನೂರಿನ KSRTC ಘಟಕದ KA-40,F-1268 ಬಸ್ ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ವೇಳೆ ಪ್ರಕಾಶ್‌ ಹಾಗೂ ಪ್ರಮೀಳಾ ದಂಪತಿ ಬಸ್ ನಲ್ಲಿ ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ ಒಂದು ಪೋನ್ ಮರೆತು ಹೋಗಿದ್ದರು. ಇದನ್ನು ಗಮನಿಸಿದ ಬಸ್ ಕಂಡಕ್ಟರ್ ಸಿ ವಿ ರಮೇಶ್ ಎತ್ತಿಟ್ಟುಕೊಂಡಿದ್ದರು. ನಂತರ ಪ್ರಕಾಶ್‌ ದಂಪತಿ ಚಿನ್ನಾಭರಣ ಹಾಗೂ ಫೋನ್​ ನೆನಪು ಮಾಡಿಕೊಂಡು ವಾಪಸ್ ಡಿಪೋ ಬಳಿ ಓಡೋಡಿ ಬಂದಿದ್ದಾರೆ. ಆಗ ಬಸ್ ನಿರ್ವಾಹಕರಾದ ರಮೇಶ ಪ್ರಮಾಣಿಕತೆಯಿಂದ ಬಸ್ ನಲ್ಲಿ ಸಿಕ್ಕ ಚಿನ್ನಭರಣಗಳು ಹಾಗೂ ಫೋನ್ ವಾಪಸ್ ನೀಡಿದ್ದಾರೆ.

ಬಸ್‌ನಲ್ಲಿ ಚಿನ್ನಾಭರಣ ಮರೆತುಹೋದ ದಂಪತಿಗೆ ಅವು ವಾಪಸ್‌ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿತ್ತು. ಯಾರೂ ವಾಪಸ್‌ ಕೊಡುವುದಿಲ್ಲ ಎಂದು ಭಾವಿಸಿದ್ದರು. ಆದರೆ, ಬಸ್‌ ನಿರ್ವಾಹಕರು ಪ್ರಮಾಣಿಕತೆಯಿಂದ ಒಡವೆಗಳನ್ನು ಹಿಂತಿರುಗಿಸಿದ್ದಕ್ಕೆ ದಂಪತಿಗೆ ಖುಷಿಯಾಗಿದೆ. ಹಾಗೆಯೇ, ಒಡವೆಗಳನ್ನು ವಾಪಸ್ ಕೊಟ್ಟ ಕಂಡಕ್ಟರ್‌ಗೆ ದಂಪತಿ ಧನ್ಯವಾದ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕೆ.ಎಸ್.ಆರ್.ಟಿ.ಸಿಯ ಹಿರಿಯ ಅಧಿಕಾರಿಗಳು ಬಸ್ ನಿರ್ವಾಹಕರನ್ನು ಅಭಿನಂದಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ