ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ದುರಂತ; ಪ್ಲಾಂಟ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಅಸ್ವಸ್ಥ!

ಚಿಕ್ಕಬಳ್ಳಾಪುರದ ಅಗಲಗುರ್ಕಿ ಕೈಗಾರಿಕಾ ಪ್ರದೇಶದ ಪ್ರತಿಷ್ಠಿತ ಟೈಟಾನ್ ಕಂಪನಿಯ STP ಪ್ಲಾಂಟ್​ನಲ್ಲಿ ದುರಂತ ಸಂಭವಿಸಿದೆ. ಪ್ಲಾಂಟ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ. ಓರ್ವ ಕಾರ್ಮಿಕನನ್ನು ರಕ್ಷಿಸಲು ಹೋಗಿ ಉಳಿದ ಮೂವರು ಕೂಡ ತೀವ್ರ ಉಸಿರಾಟ ಸಮಸ್ಯೆಗೆ ಒಳಗಾಗಿದ್ದಾರೆ. ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.

ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ದುರಂತ; ಪ್ಲಾಂಟ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಅಸ್ವಸ್ಥ!
ಪ್ರಾತಿನಿಧಿಕ ಚಿತ್ರ
Image Credit source: google
Edited By:

Updated on: Apr 19, 2026 | 10:37 PM

ಚಿಕ್ಕಬಳ್ಳಾಪುರ, ಏಪ್ರಿಲ್​ 19: ಪ್ರತಿಷ್ಠಿತ ಖಾಸಗಿ ಕಂಪನಿಯಾದ ಎಸ್​​ಟಿಪಿ ಪ್ಲಾಂಟ್​ನಲ್ಲಿ (STP plant)  ಉಸಿರುಗಟ್ಟಿ ನಾಲ್ವರು ಕಾರ್ಮಿಕರು (Workers) ಅಸ್ವಸ್ಥಗೊಂಡ ಘಟನೆ ಚಿಕ್ಕಬಳ್ಳಾಪುರದ ಅಗಲಗುರ್ಕಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಪ್ರಶಾಂತ್, ಸುನಿಲ್, ಜಯಪ್ರಕಾಶ್ ಹಾಗೂ ಮದನ್ ಅಸ್ವಸ್ಥಗೊಂಡ ಕಾರ್ಮಿಕರು. ಸದ್ಯ ನಾಲ್ವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಂದಿಗಿರಿಧಾಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು?

ಅಗಲಗುರ್ಕಿ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯ ಎಸ್.ಟಿ.ಪಿ ಪ್ಲಾಂಟ್‌ನ ಸಂಪು ಸ್ವಚ್ಛಗೊಳಿಸಲು ಕಾರ್ಮಿಕರು ಮುಂದಾಗಿದ್ದರು. ಮೊದಲು ಪ್ರಶಾಂತ್ ಎಂಬ ಕಾರ್ಮಿಕ ಪ್ಲಾಂಟ್‌ನ ಒಳಕ್ಕೆ ಇಳಿದಿದ್ದು, ಅನಿಲ ಸೋರಿಕೆಯಿಂದಾಗಿ ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದಾನೆ. ಆತನನ್ನು ರಕ್ಷಿಸಲು ಕೆಳಗಿಳಿದ ಸುನಿಲ್, ಜಯಪ್ರಕಾಶ್ ಹಾಗೂ ಮದನ್ ಕೂಡ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

ಇದನ್ನೂ ಓದಿ: ರಾಜ್ಯದ 5 ಜಿಲ್ಲೆಗಳಲ್ಲಿ 40 ಡಿಗ್ರಿ ದಾಟಿದ ತಾಪಮಾನ: ಬಿಸಿಲಿನ ಝಳದಿಂದ ಪಾರಾಗಲು ಜನರ ನಾನಾ ಕಸರತ್ತು

ಘಟನೆಯಲ್ಲಿ ನಾಲ್ವರು ಯುವಕರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ತಕ್ಷಣವೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಿ ದಾಖಲಿಸಲಾಗಿದೆ. ಸದ್ಯ ಪ್ರಶಾಂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿರ್ಲಕ್ಷ್ಯ ಆರೋಪ

ಕಾರ್ಮಿಕರನ್ನು ಪ್ಲಾಂಟ್‌ನೊಳಗೆ ಇಳಿಸುವ ಮೊದಲು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಸುರಕ್ಷತಾ ಉಪಕರಣಗಳಿಲ್ಲದೆ ಕಾರ್ಮಿಕರನ್ನು ಇಳಿಸಿರುವುದು ಕಂಪನಿಯ ಬೇಜವಾಬ್ದಾರಿತನವನ್ನು ತೋರಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಹಿಳೆ ಸಾವು: ಲಿವಿಂಗ್ ಟುಗೆದರ್​​ನಲ್ಲಿದ್ದ ವ್ಯಕ್ತಿಯನ್ನು ಬಂಧಿಸಿ ಮುಜುಗರಕ್ಕೀಡಾದ ಪೊಲೀಸ್ರು, ಏನಿದು ಕೇಸ್?

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ನಂದಿಗಿರಿಧಾಮ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ನಡೆಸಿದ್ದಾರೆ.

ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ: ಅಪಾರ ಪ್ರಮಾಣದ ಮೆಕ್ಕೆಜೋಳ ಸುಟ್ಟು ಭಸ್ಮ

ಕೊಪ್ಪಳ ನಗರದ ಹೊರವಲಯ ನಗರಸಭೆಯ ಕಸ ವಿಲೇವಾರಿ ಘಟಕದ ಮುಂಭಾಗದಲ್ಲಿ ಜಮೀನಿನಲ್ಲಿ ಬೆಳೆದಿದ್ದ ಅಪಾರ ಮೌಲ್ಯದ ಮೆಕ್ಕೆಜೋಳ ಬೆಂಕಿಗೆ ಆಹುತಿ ಆಗಿರುವ ಘಟನೆ ನಡೆದಿದೆ. ಸಿಂದೋಗಿ ರಸ್ತೆ ಪಕ್ಕದಲ್ಲಿರುವ ಗೇಸುದರಾಜ ಸಿಕ್ಕಲಗಾರ ಹಾಗೂ ಇಸ್ಮಾಯಿಲ್ ಸಿಕ್ಕಲಗಾರ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ನಾಶವಾಗಿದೆ. ಸ್ಥಳಕ್ಕೆ ಅಧಿಕಾರಿಗಳು, ಅಗ್ನಿ ಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸೂಕ್ತ ಪರಿಹಾರ ನೀಡುವಂತೆ ರೈತರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published On - 10:35 pm, Sun, 19 April 26

Follow Us