ಚಿಕ್ಕಮಗಳೂರು: ಮೂರು ದಿನದಲ್ಲಿ 35ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳ ದಾಳಿ
ಚಿಕ್ಕಮಗಳೂರಿನಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮುಂದುವರಿದಿದೆ. ನಿನ್ನೆ ಒಂದೇ ಏರಿಯಾದಲ್ಲಿ 8 ಜನರ ಮೇಲೆ ನಾಯಿಗಳು ದಾಳಿ ಮಾಡಿವೆ. ಒಂದು ಮಗು ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದೆ. ಹೀಗಿರುವಾಗ ಗುರುವಾರದಂದು 20ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ. 3 ದಿನದಲ್ಲಿ 35ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಲಾಗಿದೆ.

ಚಿಕ್ಕಮಗಳೂರು, ಜುಲೈ 24: ಚಿಕ್ಕಮಗಳೂರು (Chikkamagaluru) ನಗರದಲ್ಲಿ ಬೀದಿ ನಾಯಿಗಳ (Street Dogs) ಹಾವಳಿ ಮಿತಿ ಮೀರಿದೆ. 3 ದಿನದಲ್ಲಿ ಮಕ್ಕಳು ಸೇರಿದಂತೆ 35ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿವೆ. ಎಂ.ಜಿ.ರಸ್ತೆ ಮತ್ತು ಮಾರ್ಕೆಟ್ ರಸ್ತೆಯಲ್ಲಿ 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಲಾಗಿದ್ದು, ಗಾಯಗೊಂಡವರನ್ನು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬೀದಿ ನಾಯಿಗಳ ದಾಳಿಯಿಂದ ಕಂಗಾಲಾಗಿರುವ ಜನ, ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ನಿನ್ನೆ ಒಂದೇ ಏರಿಯಾದಲ್ಲಿ 3 ವರ್ಷದ ಮಗು ಸೇರಿದಂತೆ 8 ಜನರ ಮೇಲೆ ಏಕಾಏಕಿ ನಾಯಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಉಳಿದ 7 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿಗಳಿಗೆ ಬಿಬಿಎಂಪಿ ಬಾಡೂಟ: ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ
ಬೀದಿ ನಾಯಿಗಳ ಹಾವಳಿ ಇಂದಾಗಿ ಒಬ್ಬರೆ ಎಲ್ಲೂ ಹೋಗುವ ಹಾಗಿಲ್ಲ. ಮಕ್ಕಳನ್ನ ಹೊರಗೆ ಬಿಡುವ ಹಾಗಿಲ್ಲ. ಕೈಯಲ್ಲಿ ಕೋಲು ಹಿಡಿದುಕೊಂಡೇ ಹೋಗಬೇಕು. ಇಲ್ಲದಿದರೆ ನಾಯಿ ಅಟ್ಟಾಡಿಸಿಕೊಂಡು ಬರುತ್ತವೆ.
ಈ ಬೀದಿ ನಾಯಿ ಕಾಟಕ್ಕೆ ಪರಿಹಾರ ಕೊಡಿ ಎಂದು ಹಲವಾರು ಬಾರಿ ಮನವಿ ಮಾಡಿದರು ಕೂಡ ಚಿಕ್ಕಮಗಳೂರು ನಗರಸಭೆಯವರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ. ನಾವೇ ಓಟ್ ಹಾಕಿ ಗೆಲ್ಲಿಸಿದವರು ನಮ್ಮ ಬಗ್ಗೆ ಕಾಳಜಿ ತೋರಿಸ್ತಿಲ್ಲ, ಕೇವಲ ತಮ್ಮ ಪಾಕೆಟ್ ತುಂಬಿಸಿಕೊಳ್ಳೋದ್ರಲ್ಲೇ ಬ್ಯುಸಿಯಾಗಿದ್ದಾರೆ ಎಂದು ಆಕ್ರೋಶ ಹೊರಹಾಕ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾದ ಬೀದಿ ನಾಯಿಗಳ ಕಾಟ; ಕಬ್ಬನ್ ಪಾರ್ಕ್ ನಲ್ಲೂ ಸಾಕುನಾಯಿಗಳ ಮಾಲೀಕರಿಂದ ರೂಲ್ಸ್ ಬ್ರೇಕ್
ಒಟ್ಟಿನಲ್ಲಿ ಚಿಕ್ಕಮಗಳೂರು ನಗರದಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಲೇಜು ಹುಡುಗರು, ಮಕ್ಕಳು, ಮಹಿಳೆಯರು ಯಾರೂ ಒಂಟಿಯಾಗಿ ಬರಿಗೈನಲ್ಲಿ ಮನೆಯಿಂದ ಬರುವುದಕ್ಕೂ ಭಯ ಬೀಳುತ್ತಿದ್ದರೆ, ಇತ್ತ ನಗರಸಭೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಚಿಕ್ಕಮಗಳೂರು ನಗರಸಭೆಯವರು ಈಗಲಾದರೂ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:10 pm, Thu, 24 July 25








