ಚಿಕ್ಕಮಗಳೂರು: ಕಾಡಾನೆ ಸ್ಥಳಾಂತರ ಕಾರ್ಯಚರಣೆ ವೇಳೆ ಆನೆ ದಾಳಿಗೆ ETF ಸಿಬ್ಬಂದಿ ಬಲಿ, DRFOಗೆ ಗಂಭೀರ ಗಾಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 22, 2023 | 10:15 PM

ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆ ಹಿಂಡಿನ ದಾಂಧಲೆ ಮಿತಿಮೀರಿದೆ. ಮಲೆನಾಡು ಗ್ರಾಮಗಳಲ್ಲಿ ದಿಕ್ಕು ದಿಕ್ಕಿನಲ್ಲೂ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಸಿಕ್ಕ ಸಿಕ್ಕವರ ಮೇಲೆ‌ ದಾಳಿ ಮಾಡಿ ಬಲಿ ಪಡೆಯುವ ಮೂಲಕ ಕಾಡಾನೆ ಭಯ ಹುಟ್ಟಿಸಿದೆ‌. ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದ ಕಾಡಾನೆಗಳ ಸ್ಥಳಾಂತರ ಕಾರ್ಯಚರಣೆ ನಡೆಸುತ್ತಿದ್ದ ETF ಸಿಬ್ಬಂದಿ ಕಾಡಾನೆಗೆ ಬಲಿಯಾಗಿದ್ದಾನೆ.

ಚಿಕ್ಕಮಗಳೂರು: ಕಾಡಾನೆ ಸ್ಥಳಾಂತರ ಕಾರ್ಯಚರಣೆ ವೇಳೆ ಆನೆ ದಾಳಿಗೆ ETF ಸಿಬ್ಬಂದಿ ಬಲಿ, DRFOಗೆ ಗಂಭೀರ ಗಾಯ
ಮೃತ ವ್ಯಕ್ತಿ
Follow us on

ಚಿಕ್ಕಮಗಳೂರು, ನ.22: ಕಾಡಾನೆಗಳ ಉಪಟಳ ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಮಲೆನಾಡು ಗ್ರಾಮದಲ್ಲಿ ದಿನದಿಂದ ದಿನಕ್ಕೆ ಮಿತಿಮೀರಿದೆ. ಕಾಡಾನೆಗಳ(Wild Elephant) ಆರ್ಭಟಕ್ಕೆ ಜೀವಗಳು ಬಲಿಯಾಗುತ್ತಿವೆ. ಎರಡು ತಿಂಗಳಿನಿಂದ ಕಾಡಾನೆಗಳ ದಾಳಿಗೆ ಸಿಲುಕಿ ಮೂವರು ಬಲಿಯಾಗಿದ್ದಾರೆ. ಇಂದು(ನ.22) ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನ ಕಾಡಿಗಟ್ಟುವ ಕಾರ್ಯಚರಣೆ ನಡೆಸುವಾಗ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಕಾಡಾನೆ ದಾಳಿಗೆ ಸಿಲುಕಿ ಅರಣ್ಯ ಇಲಾಖೆಯ ಕಾಡಾನೆ ನಿಗ್ರಹ ಪಡೆಯ ಸಿಬ್ಬಂದಿ ಕಾರ್ತಿಕ್ ಸ್ಥಳದಲ್ಲೇ ಮೃತ ಪಟ್ಟಿದ್ರೆ, DRFO ಕಿರಣ್​ ಎಂಬುವವರಿಗೆ ಗಂಭೀರ ಗಾಯವಾಗಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಂಜೆ ಕಾಡಾನೆ ಹಿಂಡು ಬೈರಾಪುರ ಗ್ರಾಮದಲ್ಲಿ ಬೀಡುಬಿಟ್ಟಿರುವುದಾಗಿ ಮಾಹಿತಿ ಬಂದಿತ್ತು. ಅದರಂತೆ ಕಾರ್ಯಚರಣೆಗೆ ಇಳಿದಿದ್ದ ETF ಮತ್ತು ಮೂಡಿಗೆರೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ, ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಚರಣೆ ನಡೆಸುತ್ತಿತ್ತು. ಈ ವೇಳೆ ಬೈರಾಪುರ ಗ್ರಾಮದ ಕಾಡಿನಲ್ಲಿ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು ETF ಸಿಬ್ಬಂದಿ ಕಾರ್ತಿಕ್ ಎಂಬುವವರನ್ನು ಬಲಿ ಪಡೆದಿದೆ. ಕಳೆದ ಮೂರು ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲೂಕುಗಳಾದ ಚಿಕ್ಕಮಗಳೂರು, ಮೂಡಿಗೆರೆಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ ಅದರಲ್ಲೂ ಸಕಲೇಶಪುರ ಭಾಗದಿಂದ ಬಂದಿರುವ ಕಾಡಾನೆ ಗುಂಪು ಮಾನವರ ಮೇಲೆ ದಾಳಿಗೆ ಮುಂದಾಗುತ್ತಿದ್ದು, ಎರಡು ತಿಂಗಳಿನಲ್ಲಿ ಇಬ್ಬರು ಕಾರ್ಮಿಕರು ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಯನ್ನ ಬಲಿ ಪಡೆದಿದೆ.

ಇದನ್ನೂ ಓದಿ:ಮಂಡ್ಯ: ಕಾಡಾನೆ ತುಳಿತಕ್ಕೆ ಮತ್ತೋರ್ವ ಕಾರ್ಮಿಕ ಮಹಿಳೆ ಬಲಿ

ಕಳೆದ ೧೦ ದಿನದ ಹಿಂದೆ ಚಿಕ್ಕಮಗಳೂರು ತಾಲೂಕಿನ ಹೆಡದಾಳು ಗ್ರಾಮದಲ್ಲಿ ಕಾರ್ಮಿಕರ ಮಹಿಳೆ ಮೀನಾ ಮೇಲೆ ‌ದಾಳಿ ಮಾಡಿ ಬಲಿ ಪಡೆದಿತ್ತು ,ಗ್ರಾಮಸ್ಥರು ಸೇರಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಮೂಡಿಗೆರೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಸ್ಯೆ ಬಗೆಹರಿಸುವ ಜೊತೆ ಒಂದು ವಾರದಲ್ಲಿ ಅರಣ್ಯ ಸಚಿವರನ್ನು ಜಿಲ್ಲೆಗೆ ಕಳಿಸುವುದಾಗಿ ಹೇಳಿದ್ದರು. ಇದರಂತೆ ಕಾಡಾನೆಗಳ ಸ್ಥಳಾಂತರ ಕಾರ್ಯಚರಣೆ ಕೂಡ ಆರಂಭ ಮಾಡಲಾಗಿತ್ತು. ಆದ್ರೆ ಕಾರ್ಯಚರಣೆ ನಡೆಸುತ್ತಿದ್ದ ಸಿಬ್ಬಂದಿಗಳ ಮೇಲೆ ಕಾಡಾನೆ ದಾಳಿ ನಡೆಸಿ ಬಲಿ ಪಡೆದಿದೆ.

ಇನ್ನು ETF ಸಿಬ್ಬಂದಿಗಳಿಗೆ ಕಾಡಾನೆ ಕಾರ್ಯಚರಣೆ ಕುರಿತು ಸರಿಯಾದ ತರಭೇತಿ ಜೊತೆಗೆ ಸೌಕರ್ಯ ನೀಡದೆ ಇರುವುದು ದುರಂತಕ್ಕೆ ಕಾರಣವೆಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಮಗಳೂರು DFO ರಮೇಶ್ ಬಾಬುಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೂಡಿಗೆರೆ ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಮಲೆನಾಡಿನ ಗ್ರಾಮದಲ್ಲಿ ನಿತ್ಯವೂ ಕಾಡಾನೆಗಳ ಉಪಟಳಕ್ಕೆ‌ ಜನರು ಜೀವ ಭಯದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ ಕಾಡಿಗಟ್ಟಿ ಎಂದು ಸಿಬ್ಬಂದಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದೀಗ ಕಾರ್ಯಚರಣೆಗೆ ತೆರಳಿದ ಸಿಬ್ಬಂದಿಗಳನ್ನೆ ಕಾಡಾನೆ ಬಲಿ ಪಡೆಯುತ್ತಿದ್ದು, ಜನರು ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ