ನೀವು ಮಾಡಿದ್ದೆಲ್ಲ ಸಹಿಸಿಕೊಂಡು ಬಿರಿಯಾನಿ ಹಾಕುವ ದೇಶ ಇದಲ್ಲ; ಎಸ್​ಡಿಪಿಐ ಮುಖಂಡಗೆ ಸಿಟಿ ರವಿ ತಿರುಗೇಟು

ಮುಸ್ಲಿಮರ ಮೀಸಲಾತಿ ವಾಪಸ್ ಕೊಡದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಡ್ಡಿ ಬಿಚ್ಚಿಸುತ್ತೇವೆ ಎಂದು ಚಿತ್ರದುರ್ಗ ಎಸ್​​ಡಿಪಿಐ ಮುಖಂಡ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಖಾರವಾಗಿ ತಿರುಗೇಟು ನೀಡಿದ್ದಾರೆ.

ನೀವು ಮಾಡಿದ್ದೆಲ್ಲ ಸಹಿಸಿಕೊಂಡು ಬಿರಿಯಾನಿ ಹಾಕುವ ದೇಶ ಇದಲ್ಲ; ಎಸ್​ಡಿಪಿಐ ಮುಖಂಡಗೆ ಸಿಟಿ ರವಿ ತಿರುಗೇಟು
ಸಿಟಿ ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Updated on: Mar 28, 2023 | 8:32 PM

ಚಿಕ್ಕಮಗಳೂರು: ಮುಸ್ಲಿಮರ ಮೀಸಲಾತಿ ವಾಪಸ್ ಕೊಡದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಡ್ಡಿ ಬಿಚ್ಚಿಸುತ್ತೇವೆ ಎಂದು ಚಿತ್ರದುರ್ಗ ಎಸ್​​ಡಿಪಿಐ (SDPI) ಮುಖಂಡ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಖಾರವಾಗಿ ತಿರುಗೇಟು ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಇದು 1947ರ ಭಾರತವಲ್ಲ. ನೀವು ಮಾಡಿದ್ದೆಲ್ಲ ಸಹಿಸಿಕೊಂಡು ಬಿರಿಯಾನಿ ಹಾಕುವ ಭಾರತ ಅಲ್ಲ. ಕೇಸ್ ಹಿಂಪಡೆದು ಮೆರೆಯಲು ಅವಕಾಶ ನೀಡುವ ಸರ್ಕಾರವೂ ಈಗಿಲ್ಲ. ಬಾಲ‌ ಬಿಚ್ಚಿದರೆ ಕತ್ತರಿಸುವುದು ಹೇಗೆಂದು ಗೊತ್ತಿರುವ ಸರ್ಕಾರ ಇದೆ. ಬಾಂಬ್ ಹಾಕುವವರ ತಲೆ ಮೇಲೆಯೇ ತಿರುಗಿಸಿ ಹಾಕುವ ತಾಕತ್ತಿರುವ ಸರ್ಕಾರ ಇದೆ ಎಂಬುದನ್ನು ಎಸ್​​ಡಿಪಿಐಗೆ ಹೇಳಲು ಬಯಸುತ್ತೇನೆ ಎಂದರು.

ನಿಮ್ಮ ಎಸ್​​ಡಿಪಿಐ ಹುಟ್ಟಿದ್ದೇ ಕೇರಳದಲ್ಲಿ, ಅಲ್ಲಿಯೇ ಮೀಸಲಾತಿ‌ ಇಲ್ಲ. ಕೇರಳದಲ್ಲೇ ಕೋಮು ಆಧಾರಿತ, ಮತ ಆಧಾರಿತ ಮೀಸಲಾತಿ ಇಲ್ಲ. ಆಂಧ್ರದಲ್ಲಿ ಕೊಟ್ಟಿದ್ದರು, ಆದರೆ ನಂತರ ಸಂವಿಧಾನ ಬಾಹಿರ ಎಂದು ಅದನ್ನು ರದ್ದು ಮಾಡಿದ್ದಾರೆ. ಕರ್ನಾಟಕದಲ್ಲಿ ಸಂವಿಧಾನ ಬಾಹಿರ ಮೀಸಲಾತಿ ಯಾರಿಗೂ ಕೊಡಲಾಗುವುದಿಲ್ಲ ಎಂದು ರವಿ ಹೇಳಿದ್ದಾರೆ.

ಅದೇನು ಮಾಡ್ತೀಯೋ ಮಾಡು; ರವಿ ಸವಾಲು

ರಾಜ್ಯದಲ್ಲಿ ಸಂವಿಧಾನಬಾಹಿರವಾಗಿ ಮೀಸಲಾತಿ ನೀಡಲಾಗದು. ಅದೇನ್ ತಲೆ ತೆಗೆಯುತ್ತೀಯಾ? ಏನು ಮಾಡುತ್ತೀಯೋ ಮಾಡು. ನಿನ್ನ ತಾಕತ್ತು ತೋರಿಸು. ಆಮೇಲೆ ನಾವು ಉತ್ತರ ಕೊಡುತ್ತೇವೆ. ಸಂವಿಧಾನಬಾಹಿರವಾದ ಸಮರ್ಥನೆಗೆ ಯಾರು ನಿಲ್ಲುತ್ತಾರೋ ನಿಲ್ಲಲಿ. ಧಮ್ಕಿ ಹಾಕುವ ತಾಲಿಬಾನ್ ಮಾದರಿ ಕರ್ನಾಟಕದಲ್ಲಿ ನಡೆಯಲ್ಲ. ಆ ಸರ್ಕಾರ ಈಗಿಲ್ಲ ಎಂದು ರವಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ, ಇದು ತಾಲಿಬಾನ್ ಆಡಳಿತದ ರಾಜ್ಯವಲ್ಲ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Cabinet Decision: ಮುಸ್ಲಿಮರ 2ಬಿ ಮೀಸಲಾತಿ ರದ್ದು, ಒಕ್ಕಲಿಗ, ಲಿಂಗಾಯತರಿಗೆ ಹೆಚ್ಚಳ; ಸಿಎಂ ಬೊಮ್ಮಾಯಿ ಘೋಷಣೆ

ಮುಸ್ಲಿಮರಿಗೆ 2ಬಿ ಅಡಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಿ ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2ಸಿ ಮತ್ತು 2ಡಿ ಅಡಿ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 4ರಿಂದ 6 ಹಾಗೂ ಶೇ 5ರಿಂದ 7ಕ್ಕೆ ಹೆಚ್ಚಿಸುವ ಬಗ್ಗೆ ಕಳೆದ ವಾರ ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿತ್ತು. ಮುಸ್ಲಿಮರಿಗೆ ಆರ್ಥಿಕವಾಗಿ ಹಿಂದುಳಿದವರ ವರ್ಗದಲ್ಲಿ (EWS) ಮೀಸಲಾತಿ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಇದಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿವೆ. ಮುಸ್ಲಿಂ ಸಮುದಾಯದವರಿಂದಲೂ ವಿರೋಧ ವ್ಯಕ್ತವಾಗಿದೆ. ಎಸ್​ಡಿಪಿಐ ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮುಸ್ಲಿಮರ ಮೀಸಲಾತಿ ವಾಪಸ್ ನೀಡುವ ವರೆಗೆ ಹೋರಾಟ ಮಾಡುವುದಾಗಿ ತಿಳಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us