ಚಿಕ್ಕಮಗಳೂರಿನಲ್ಲಿ ಹೆಚ್ಚಾಯ್ತು ಕೆಎಫ್ಡಿ ಆತಂಕ: 7 ಜನರಿಗೆ ವಕ್ಕರಿಸಿದ ಮಂಗನ ಕಾಯಿಲೆ
ಕಾಫಿನಾಡು ಚಿಕ್ಕಮಗಳೂರಿಗೆ ಮತ್ತೆ ಮಂಗನ ಕಾಯಿಲೆಯ ಭೀತಿ ಆವರಿಸಿದೆ. ಹಗಲಲ್ಲಿ ರಣ ಬಿಸಿಲು, ಸಂಜೆ ಆಗುತ್ತಿದ್ದಂತೆಯೇ ಭಾರೀ ಚಳಿ. ಬೆಳಗಿನ ಜಾವ ಮತ್ತಷ್ಟು ಚಳಿ. ಹವಾಮಾನ ವೈಪರಿತ್ಯಕ್ಕೆ ಜನ ಹೈರಾಣಾಗಿದ್ದಾರೆ. ಈ ಮಧ್ಯೆ ಮಂಗನ ಕಾಯಿಲೆ ಜನರಲ್ಲಿ ಭೀತಿ ಹುಟ್ಟಿಸಿದೆ. ಜಿಲ್ಲೆಯಲ್ಲಿ 7 ಜನ ಸೋಂಕಿತರಾಗಿದ್ದಾರೆ.

ಚಿಕ್ಕಮಗಳೂರು, ಫೆಬ್ರವರಿ 4: ಇನ್ನೇನು ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿದೆ. ಬಿಸಿಲ ಬೇಗೆ ಹೆಚ್ಚಾಗುತ್ತಿದ್ದಂತೆಯೇ ಕಾಫಿನಾಡಿಗೆ ಮಹಾಮಾರಿ ಕೆಎಫ್ಡಿ (ಮಂಗನ ಕಾಯಿಲೆ) ಸದ್ದಿಲ್ಲದೆ ಎಂಟ್ರಿ ಕೊಟ್ಟಿದೆ. ಈ ಮಾರಣಾಂತಿಕ ರೋಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಾರಿ ಆರಂಭದಲ್ಲೇ ತೀವ್ರ ಸ್ವರೂಪ ಪಡೆದಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಮತ್ತಿಖಂಡ ಗ್ರಾಮದ 25 ವರ್ಷದ ಯುವಕನಲ್ಲಿ ಮೊದಲು ಕೆಎಫ್ಡಿ ಕಾಣಿಸಿಕೊಂಡಿತ್ತು. ಆ ನಂತರ ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ 7 ಜನರಲ್ಲಿ ಮಂಗನ ಕಾಯಿಲೆ ಕಾಣಸಿಕೊಂಡಿದ್ದು ಆತಂಕ ಸೃಷ್ಟಿ ಮಾಡಿದೆ.
ಎನ್ಆರ್ ಪುರ ಗ್ರಾಮದ ಮೇಲ್ಪಾಲ್ ಗ್ರಾಮದಲ್ಲೇ ಮೂರು ಜನರಲ್ಲಿ ಕೆಎಫ್ಡಿ ಕಾಣಿಸಿಕೊಂಡಿದೆ. ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕೆಎಫ್ಡಿ ವಾರ್ಡ್ ತೆರೆಯಲಾಗಿದೆ. ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ 132 ಜನರಲ್ಲಿ ಕೆಎಫ್ಡಿ ಕಾಣಿಸಿಕೊಂಡು ನಾಲ್ವರು ಮೃತಪಟ್ಟಿದ್ದರು. ಕಾಡಂಚಿನ ತಾಲೂಕುಗಳಾದ ಚಿಕ್ಕಮಗಳೂರು, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ತನ್ನ ರುದ್ರರೂಪ ತಾಳುವ ಮುನ್ನವೇ ಅರೋಗ್ಯ ಇಲಾಖೆ ಕೆಎಫ್ಡಿ ಅಲರ್ಟ್ ಘೋಷಣೆ ಮಾಡಿದೆ. ಮಂಗನ ಕಾಯಿಲೆ ಪತ್ತೆಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯ ಹೋಬಳಿ ಮತ್ತಿಖಂಡ ಗ್ರಾಮದಲ್ಲಿ ಉಣ್ಣೆಗಳನ್ನ ಸಂಗ್ರಹ ಮಾಡಲಾಗಿದ್ದು, ಅರಣ್ಯದಲ್ಲಿ ಮಂಗಗಳು ಸಾವನ್ನಪ್ಪಿರುವ ಕುರಿತು ಮಾಹಿತಿ ಸಂಗ್ರಹ ಮಾಡಲಾಗಿದೆ.
ಗಾಯದ ಮೇಲೆ ಬರೆ ಎಂಬಂತೆ ಮಲೆನಾಡು ಭಾಗದಲ್ಲಿ ಕೆಎಫ್ಡಿ ಆತಂಕ ಹುಟ್ಟಿಸಿದೆ. ಕಳೆದ ವರ್ಷ ನಾಲ್ವರನ್ನು ಬಲಿ ಪಡೆದಿದ್ದ ಕಾಯಿಲೆ ಇದೀಗ ಮತ್ತೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ರಣಕೇಕೆ ಆರಂಭಿಸಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ, ಎನ್ಆರ್ ಪುರ ತಾಲೂಕಿನ ಮೇಲ್ಪಾಲ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ಅರಣ್ಯಗಳಿಗೆ ತೆರಳದಂತೆ ಎಚ್ಚರಿಕೆ ನೀಡುತ್ತಿದೆ.
ಇದನ್ನೂ ಓದಿ: ರಾತ್ರೋರಾತ್ರಿ ಕಲ್ಲು ಬಂಡೆಗಳು ಬ್ಲಾಸ್ಟ್: ಹತ್ತಾರು ಮನೆಗಳಿಗೆ ಹಾನಿ, ಪ್ರಾಣಾಪಾಯದಿಂದ ಬಾಣಂತಿ, ಮಗು ಪಾರು
ಕಳೆದ ಏಳೆಂಟು ವರ್ಷಗಳಲ್ಲಿ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳದ ಮಂಗನ ಕಾಯಿಲೆ 2024 ರಲ್ಲಿ ತನ್ನ ರೌದ್ರ ರೂಪ ತಾಳಿತ್ತು. ಮಲೆನಾಡಿನ ತಾಲೂಕುಗಳಲ್ಲಿ ಜೀವ ಭಯ ತರಿಸಿತ್ತು. ಈ ಮಂಗನ ಕಾಯಿಲೆ ಮಹಾಮಾರಿ ಇದೀಗ ಮತ್ತೆ ಸದ್ದಿಲ್ಲದೆ ವಕ್ಕರಿಸುತ್ತಿದ್ದು, ಜನರು ಬಹಳಷ್ಟು ಜಾಗರೂಕತೆ ವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ