ರಾತ್ರೋರಾತ್ರಿ ಕಲ್ಲು ಬಂಡೆಗಳು ಬ್ಲಾಸ್ಟ್: ಹತ್ತಾರು ಮನೆಗಳಿಗೆ ಹಾನಿ, ಪ್ರಾಣಾಪಾಯದಿಂದ ಬಾಣಂತಿ, ಮಗು ಪಾರು
ಚಿಕ್ಕಮಗಳೂರಿನ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯಿಂದ ಸ್ಥಳೀಯರ ಮನೆಗಳಿಗೆ ಹಾನಿಯಾಗಿದೆ. ರಾತ್ರಿ ವೇಳೆ ನಡೆದ ಬಂಡೆ ಬ್ಲಾಸ್ಟಿಂಗ್ನಿಂದ ಸಿಡಿದ ಕಲ್ಲುಗಳು ಮನೆಗಳ ಮೇಲೆ ಬಿದ್ದಿವೆ. ಗ್ರಾಮಸ್ಥರು ಆತಂಕದಲ್ಲಿದ್ದು, ಪೊಲೀಸ್ ದೂರು ದಾಖಲಿಸಿದ್ದಾರೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.

ಚಿಕ್ಕಮಗಳೂರು, ಜನವರಿ 31: ಅದು ಮೂರ್ನಾಲ್ಕು ಜಿಲ್ಲೆಯ ರೈತರಿಗೆ ನೀರಿನ ಕೊರತೆ ನೀಗಿಸುವ ಯೋಜನೆ. ಆದರೆ ಲಕ್ಷಾಂತರ ರೈತರ ಆಸರೆಯ ಯೋಜನೆಯ ಕಾಮಗಾರಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಕಂಗಲಾಗಿದ್ದಾರೆ. ರಾತ್ರಿ ವೇಳೆ ಸಿಡಿಯುವ (Blast) ಕಲ್ಲುಗಳು ಮನೆಯ ಮೇಲೆ ಬೀಳುತ್ತಿದ್ದು, ಜೀವ ಉಳಿದರೆ ಸಾಕು ಎನ್ನುತ್ತಿದ್ದಾರೆ ಗ್ರಾಮಸ್ಥರು. ಅಷ್ಟಕ್ಕೂ ಆ ಯೋಜನೆ ಏನು? ಗುತ್ತಿಗೆದಾರರ ಎಡವಟ್ಟು ಏನು? ಈ ಯೋಜನೆ ಕಾಮಗಾರಿಯಿಂದ ಗ್ರಾಮಸ್ಥರು ಕಣ್ಣೀರು ಹಾಕುತ್ತಿರುವುದು ಯಾಕೆ? ಎಂಬ ಸಂಪೂರ್ಣ ವಿವರ ಇಲ್ಲಿದೆ.
ಆಮೆ ವೇಗದಲ್ಲಿ ಸಾಗುತ್ತಿರುವ ಯೋಜನೆ: ಗ್ರಾಮಸ್ಥರು ಕಣ್ಣೀರು
ಭದ್ರಾ ಮೇಲ್ದಂಡೆ ಯೋಜನೆ, ಸದ್ಯ ಮೂರ್ನಾಲ್ಕು ಜಿಲ್ಲೆಗಳ ರೈತರ ನೀರಿನ ಸಮಸ್ಯೆ ನೀಗಿಸುವ ಯೋಜನೆ ಆದರೆ ಕಳೆದ ಒಂದುವರೆ ದಶಕದಿಂದ ಆಮೆ ವೇಗದಲ್ಲಿ ಸಾಗುತ್ತಿರುವ ಯೋಜನೆಯಿಂದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಮುತ್ತಿನಕೊಪ್ಪ, ಸಾತ್ಕೊಳಿ ಗ್ರಾಮದ ಜನರು ಕಂಗಲಾಗಿದ್ದಾರೆ. ಒಂದುವರೆ ದಶಕದಿಂದ ಇಂದು ಮುಗಿಯುತ್ತೆ, ನಾಳೆ ಮುಗಿಯುತ್ತೆ ಅನ್ನುವ ಸ್ಥಿತಿಯಲ್ಲಿರುವ ಕಾಮಗಾರಿಯಿಂದ ಗ್ರಾಮಸ್ಥರು ಕಣ್ಣೀರು ಹಾಕುವಂತಾಗಿದೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಂಪನಿ ಮ್ಯಾನೇಜರ್ ಎಂದು ಮಹಿಳೆಗೆ ವಂಚನೆ: ಆರೋಪಿ ಅಂದರ್
ಭದ್ರಾ ಮೇಲ್ದಂಡೆ ಕಾಲುವೆ ಕಾಮಗಾರಿ ವೇಳೆ ಡೈನಮೈಟ್ ಇಟ್ಟು ಬಾರಿ ಪ್ರಮಾಣದಲ್ಲಿ ಬಂಡೆಗಳನ್ನ ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಬಂಡೆಗಳ ಬ್ಲಾಸ್ಟಿಂಗ್ನಿಂದ ಕಾಮಗಾರಿ ನಡೆಯುವ ಸ್ಥಳದ ಸಮೀಪದಲ್ಲೇ ಇರುವ ಸಾತ್ಕೊಳಿ ಗ್ರಾಮದ ಹತ್ತಾರು ಮನೆಗಳ ಮೇಲೆ ಡೈನಮೈಟ್ನಿಂದ ಸಿಡಿದ ಬಂಡೆ ಕಲ್ಲುಗಳು ಬಿಳುತ್ತಿದ್ದು, ಮನೆಗಳಿಗೆ ಹಾನಿಯಾಗಿದೆ. ಬಾರಿ ಶಬ್ದದೊಂದಿಗೆ ಒಂದೇ ಸಮನೆ ಸಿಡಿದ ಬಂಡೆಯಿಂದ ಹಾರಿದ ಕಲ್ಲಿನ ಚುರುಗಳು ಮನೆಗಳ ಮೇಲ್ಚಾವಣಿ, ಗೋಡೆಗಳಿಗೆ ಬಿದ್ದು ಹಾನಿ ಮಾಡಿದರೆ, ಮನೆಯೊಳಗಿದ್ದ ಬಾಣತಿ ಮಗು ಉಳಿದಿದ್ದೆ ಪವಾಡವಾಗಿದೆ.
ರಾತ್ರೋರಾತ್ರಿ ಬಂಡೆಗಳನ್ನ ಡೈನಮೈಟ್ ಇಟ್ಟು ಬ್ಲಾಸ್ಟ್ ಮಾಡಿದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು, ಕಾಮಗಾರಿ ಮಾಡದಂತೆ ಆಕ್ರೋಶ ವ್ಯಕ್ತಪಡಿಸಿದ್ದು NR ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯಿಂದ ಗುತ್ತಿಗೆ ಪಡೆದಿರುವ SEW ಕಂಪನಿಯ ಮೇಲೆ NRಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಬ್ಬಂದಿ ಮಹೇಶ್ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಮತ್ತೆ ಇಬ್ಬರಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ, ರೋಗಿಗಳ ಸಂಖ್ಯೆ 6ಕ್ಕೆ ಏರಿಕೆ
ಮುಂಜಾಗ್ರತಾ ಕ್ರಮವನ್ನ ತೆಗೆದುಕೊಳ್ಳದೆ ಏಕಾಏಕಿ ಬ್ಲಾಸ್ಟಿಂಗ್ ಮಾಡಿದ ಪರಿಣಾಮ ಲಕ್ಷಾಂತರ ಮೌಲ್ಯದ ಮನೆಗಳಿಗೆ ಹಾನಿಯಾಗಿದ್ದು, ಜನರು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಆಮ್ಟೆ, ತರೀಕೆರೆ AC ಕಾಂತರಾಜ್, NR ಪುರ ತಹಶಿಲ್ದಾರ್ ತನುಜಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇನ್ನೂ ಕಾಲುವೆ ಕಾಮಗಾರಿಗಾಗಿ ನಲವತ್ತಕ್ಕೂ ಅಧಿಕ ಬಂಡೆಗಳ ಬಳಿ ಡೈನಮೈಟ್ ತುಂಬಿ ಬ್ಲಾಸ್ಟಿಂಗ್ಗೆ ಸಿದ್ದತೆ ಮಾಡಲಾಗಿದ್ದು, ಜನರು ಆತಂಕಗೊಂಡಿದ್ದಾರೆ. ಮೊದಲೇ ಬಂಡೆಗಳ ಒಳಗೆ ಡೈನಮೈಟ್ ತುಂಬಿರುವುದರಿಂದ ಬ್ಲಾಸ್ಟಿಂಗ್ ಅನಿವಾರ್ಯವಾಗಿದ್ದು, ಗ್ರಾಮದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.