
ಚಿಕ್ಕಮಗಳೂರು, ಫೆಬ್ರವರಿ 11: ಕಾಂಗ್ರೆಸ್ ಶಾಸಕ ಸೇರಿ ಐವರ ಮೇಲೆ ಕಿರುಕುಳ ಆರೋಪ ಮಾಡಿ ಡೆತ್ನೋಟ್ ಬರೆದಿಟ್ಟು ಕಡೂರು ತಾಲೂಕು ಕಚೇರಿಯ ಸಾಂಖ್ಯಿಕ ನಿರೀಕ್ಷಿಕ ಇಕ್ಬಾಲ್ ನಾಪತ್ತೆಯಾಗಿದ್ದ ಘಟನೆ ಆತಂಕಕ್ಕೆ ಕಾರಣವಾಗಿತ್ತು. ಆದರೆ ಕೂಡಲೇ ಅಲರ್ಟ್ ಆದ ಪೊಲೀಸರು ಹುಡುಕಾಟ ನಡೆಸಿದ್ದು, ಈ ವೇಳೆ ಇಕ್ಬಾಲ್ ಚಿಕ್ಕಮಗಳೂರು ನಗರದ ವಿಜಯಪುರದ ತಮ್ಮ ಮನೆಯಲ್ಲಿಯೇ ಪತ್ತೆಯಾಗಿದ್ದಾರೆ. ಡೆತ್ನೋಟ್ನಲ್ಲಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಅಧಿಕಾರಿ ಉಲ್ಲೇಖಿಸಿದ್ದ ಕಾರಣ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು.
ಕಡೂರು ಶಾಸಕ ಆನಂದ್, ಪಿಎ ಮಂಜುನಾಥ್, ಕಡೂರು ತಹಶೀಲ್ದಾರ್ ಪೂರ್ಣಿಮಾ ಸೇರಿ ಐವರ ಬಗ್ಗೆ ಇಕ್ಬಾಲ್ ಗಂಭೀರ ಆರೋಪ ಮಾಡಿದ್ದಾರೆ. ಕಡೂರು ಶಾಸಕ ಮಂಜುನಾಥ್ ತಿಂಗಳು 25 ಸಾವಿರ ಹಣ ಕೊಡುವಂತೆ ಪೀಡಿಸುತ್ತಿದ್ದರು. ಕಳೆದ ಕೆಲದಿನಗಳ ಹಿಂದೆ ಫೇಕ್ ಮರಣಪತ್ರ ನೀಡುವಂತೆ ಕೇಳಿದ್ದರು. ನಾನು ಮುಸ್ಲಿಂ ಎನ್ನುವ ಕಾರಣಕ್ಕೆ ತಹಶೀಲ್ದಾರ್ ಪೂರ್ಣಿಮಾ ಪ್ರತಿದಿನ ಬೈಯುತ್ತಿದ್ದರು. ಮಂಜುನಾಥ್ ನಮ್ಮ ಸಮುದಾಯಕ್ಕೂ ಅವಮಾನಿಸಿದ್ದು, ಈ ಬಗ್ಗೆ ವಿಷಯವನ್ನು ಶಾಸಕರಿಗೆ ತಿಳಿಸಿದರೆ ಅವರೂ ನನಗೆ ಬೈದು ಕಳುಹಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ತನ್ನನ್ನು ವರ್ಗಾವಣೆ ಮಾಡಲಾಗಿದ್ದು, ನಾನು ಆತ್ಮಹತ್ಯೆ ಮಾಡಿಕೊಳ್ಳೋದಂತೂ ನಿಜ. ನನಗೆ ಕಿರುಕುಳ ನೀಡಿದವರು ಜೈಲಿಗೆ ಹೋಗಲೇ ಬೇಕು ಎಂದಿದ್ದಾರೆ.
ಇದನ್ನೂ ಓದಿ: ಫ್ಲ್ಯಾಟ್, ಚಿನ್ನದ ವ್ಯವಹಾರದಲ್ಲಿ ಉದ್ಯಮಿಗೆ ಕೋಟಿ ಕೋಟಿ ದೋಖಾ! ಶೆಟ್ಟಿ ದಂಪತಿ ಮೇಲೆ ಕೇಸ್
ಕಡೂರು ತಾಲೂಕು ಕಚೇರಿಯಲ್ಲಿ ಅತೀ ಹೆಚ್ಚು ನಕಲಿ ವ್ಯವಹಾರಗಳು ನಡೆಯುತ್ತಿದ್ದು ಜಿಲ್ಲೆಯಲ್ಲಿಯೇ ಕಚೇರಿ ಪ್ರಥಮ ಸ್ಥಾನದಲ್ಲಿದೆ. ನಕಲಿ ಮರಣಪತ್ರ ಕೊಡಲ್ಲ ಎಂದಿದ್ದಕ್ಕೆ ನನ್ನ ಮೇಲೆ ಹುನ್ನಾರ ನಡೆಸಲಾಗಿದೆ. ನಾನು ಬದುಕಬೇಕಂದರೆ ನನಗೆ ನೀಡಲಾಗಿರುವ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕು ಎಂದು ಇಕ್ಬಾಲ್ ಆಗ್ರಹಿಸಿದ್ದಾರೆ. ಸ್ಥಳೀಯರಿಂದ ದೂರು ಹಾಗೂ ಅನುಚಿತ ವರ್ತನೆ ಮೇರೆಗೆ ವರ್ಗಾವಣೆ ಮಾಡುವಂತೆ ಶಾಸಕ ಆನಂದ್ ಶಿಫಾರಸ್ಸು ಮಾಡಿದ್ದ ಹಿನ್ನೆಲೆ ಇಕ್ಬಾಲ್ ಟ್ರಾನ್ಸ್ಫರ್ ಮಾಡಲಾಗಿತ್ತು ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.