ಚಿಕ್ಕಮಗಳೂರು: 6 ಮತಗಳ ಅಂತರದಿಂದ ಬಿಜೆಪಿಗೆ ಗೆಲುವು; ಮರು ಮತ ಎಣಿಕೆಗೆ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ

ಚಿಕ್ಕಮಗಳೂರು ವಿಧಾನ ಪರಿಷತ್ ಕ್ಷೇತ್ರದಲ್ಲಿ ಮರು ಮತ ಎಣಿಕೆಗೆ ಆಗ್ರಹ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅಡ್ಡಗಟ್ಟಿದ್ದಾರೆ.

ಚಿಕ್ಕಮಗಳೂರು: 6 ಮತಗಳ ಅಂತರದಿಂದ ಬಿಜೆಪಿಗೆ ಗೆಲುವು; ಮರು ಮತ ಎಣಿಕೆಗೆ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ
ಪ್ರಾತಿನಿಧಿಕ ಚಿತ್ರ
Edited By:

Updated on: Dec 14, 2021 | 3:58 PM

ಚಿಕ್ಕಮಗಳೂರು: ಇಲ್ಲಿನ ವಿಧಾನ ಪರಿಷತ್ ಚುನಾವಣೆ ಕ್ಷೇತ್ರದಲ್ಲಿ ಮರು ಮತ ಎಣಿಕೆಗೆ ಆಗ್ರಹ ಕೇಳಿಬಂದಿದೆ. ಬಿಜೆಪಿ ಅಭ್ಯರ್ಥಿಗೆ ಕೇವಲ 6 ಮತಗಳ ಅಂತರದ ಜಯ ಹಿನ್ನೆಲೆ ಮರು ಮತ ಎಣಿಕೆಗೆ ಆಗ್ರಹಿಸಿ ಕಾಂಗ್ರೆಸ್​ ಕಾರ್ಯಕರ್ತರು ಧರಣಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಕಾರು ತಡೆದು ಕಾಂಗ್ರೆಸ್ ಕಾರ್ಯಕರ್ತರು ಮರು ಮತ ಎಣಿಕೆ ನಡೆಸುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡುವಂತಾಗಿದೆ.

ಚಿಕ್ಕಮಗಳೂರು ವಿಧಾನ ಪರಿಷತ್ ಕ್ಷೇತ್ರದಲ್ಲಿ ಮರು ಮತ ಎಣಿಕೆಗೆ ಆಗ್ರಹ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅಡ್ಡಗಟ್ಟಿದ್ದಾರೆ. ಮತ ಎಣಿಕೆ ಕೇಂದ್ರದ ಒಳಗೆ ಹೋಗಲು ಹೊರಟಿದ್ದ ಪ್ರಾಣೇಶ್ ಅವರನ್ನು ತಡೆದು ಮೋಸ, ಮೋಸ, ಮೋಸ ಎಂದು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಮತ ಎಣಿಕೆ ಕೇಂದ್ರದ ಮುಂಭಾಗ ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮರುಎಣಿಕೆ ಮಾಡುವಂತೆ ಹೈ ಕೋರ್ಟ್​ಗೆ ಹೋಗ್ತೀವಿ
ಕೇವಲ ಮೂರು ಮತಗಳ ಅಂತರದಿಂದ ಸೋಲು ಅನುಭವಿಸಿದ್ದೇನೆ. ತಾಂತ್ರಿಕ ಕಾರಣದಿಂದ, ಮತ ಎಣಿಕೆ ಪ್ರಕ್ರಿಯೆಯಲ್ಲಿ ಲೋಪವಾಗಿದೆ. ಹಾಗಾಗಿ ಮರು ಎಣಿಕೆಯಾಗಬೇಕೆಂದು ಚುನಾವಣೆ ಅಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಮರುಎಣಿಕೆ ಮಾಡುವಂತೆ ಹೈ ಕೋರ್ಟ್​ಗೆ ಹೋಗ್ತೀವಿ ಎಂದು ಚಿಕ್ಕಮಗಳೂರಿನಲ್ಲಿ ಪರಾಜಿತ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಮತ ಎಣಿಕೆ ಕೇಂದ್ರದಿಂದ ಹೊರಬಂದು ಗಾಯತ್ರಿ ಶಾಂತೇಗೌಡ ಕಣ್ಣೀರಿಟ್ಟಿದ್ದಾರೆ.

ವಿಧಾನ ಪರಿಷತ್​ಗೆ ಬರಲು ವೋಟ್​ಗೆ ಲಕ್ಷ ಲಕ್ಷ ಕೊಟ್ಟು ಗೆದ್ದು ಬರುತ್ತಿರೋದು ವಿಷಾದನೀಯ
ಆಡಳಿತ ಪಕ್ಷದ ಸರಿಸಮನಾಗಿ ಕಾಂಗ್ರೆಸ್ ಗೆದ್ದಿರೋದು ಒಳ್ಳೆಯ ದಿಕ್ಸೂಚಿಯಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಮುಂದಿನ ವಿಧಾನ ಸಭೆ ಚುನಾವಣೆಗೆ ಇದು ದಿಕ್ಸೂಚಿ. ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ಮುಂದಿನ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಕೂಡ ಅಷ್ಟೇ ಸತ್ಯ. ಬೀದರ್ ನಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಿರೋದು ಖುಷಿ ನೀಡಿದೆ. ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದಗಳನ್ನ ಹೇಳುತ್ತೇನೆ. ಪ್ರವಾಹ, ಅತಿವೃಷ್ಟಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಪರಿಹಾರ ನೀಡುವಲ್ಲಿ ಈ ಸರ್ಕಾರ ಎಡವಿದೆ ಎಂದು ಬಿಜೆಪಿ ವಿರುದ್ಧ ಎಸ್.ಆರ್ ಪಾಟೀಲ್ ಗುಡುಗಿದ್ದಾರೆ.

ವಿಧಾನ ಪರಿಷತ್​ಗೆ ಬರಲು ವೋಟ್​ಗೆ ಲಕ್ಷ ಲಕ್ಷ ಕೊಟ್ಟು ಗೆದ್ದು ಬರುತ್ತಿರೋದು ವಿಷಾದನೀಯವಾಗಿದೆ. ಮೇಲ್ಮನವಿ ಈ ರೀತಿಯ ಆಯ್ಕೆ ಸರಿಯಲ್ಲ. ಹಾಗಂತ ಮೇಲ್ಮನವಿಯನ್ನೇ ರದ್ದು ಮಾಡಬೇಕು ಅಂತಾ ಈಶ್ವರಪ್ಪ ಹೇಳೋದು ಸರಿಯಿಲ್ಲ. ಇದನ್ನ ಯಾವರೀತಿ ಸರಿಪಡಿಸಬೇಕು ಅನ್ನೋದರ ಬಗ್ಗೆ ನಾವೂ ಯೋಚಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: MLC Election Result: ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಎದುರು ಸೋಲುಂಡ ಕೋಟಿಗಳ ಧನಿಕ ಕಾಂಗ್ರೆಸ್​ ಅಭ್ಯರ್ಥಿ ಕೆಜಿಎಫ್ ಬಾಬು

ಇದನ್ನೂ ಓದಿ: Vidhan Parishad Election 2021: ಕಾಂಗ್ರೆಸ್, ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದ ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಭೀಮರಾವ್​ ಪಾಟೀಲ್​ ಗೆಲುವು

Published On - 2:57 pm, Tue, 14 December 21