ತಾಯ್ನಾಡಿಗೆ ಬಂದ ಯೋಧ ಗಣೇಶ್​​ ಪಾರ್ಥಿವ ಶರೀರ; ರಸ್ತೆ ಮೂಲಕ ಸ್ವಗ್ರಾಮಕ್ಕೆ ತೆರಳಲಿರುವ ಮೃತದೇಹ

ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ನಿವಾಸಿ ಯೋಧ (Soldier) ಎಂ.ಎನ್ ಗಣೇಶ್ ಬಿಹಾರದ ಕಿಶನ್‌ಗಂಜ್ ಪ್ರದೇಶದಲ್ಲಿ ಸಾವನ್ನಪ್ಪಿದ್ದು, ಅವರ   ಪಾರ್ಥಿವ ಶರೀರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣಕ್ಕೆ ಬಂದಿದೆ.

ತಾಯ್ನಾಡಿಗೆ ಬಂದ ಯೋಧ ಗಣೇಶ್​​ ಪಾರ್ಥಿವ ಶರೀರ; ರಸ್ತೆ ಮೂಲಕ ಸ್ವಗ್ರಾಮಕ್ಕೆ ತೆರಳಲಿರುವ ಮೃತದೇಹ
ಯೋಧ ಎಮ್​​. ಎನ್​​ ಗಣೇಶ್​​
Edited By: ವಿವೇಕ ಬಿರಾದಾರ

Updated on: Jun 15, 2022 | 4:12 PM

ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru) ತಾಲೂಕಿನ ಮಸಿಗದ್ದೆ ನಿವಾಸಿ ಯೋಧ (Soldier) ಎಂ.ಎನ್ ಗಣೇಶ್ (M.N Ganesh) ಬಿಹಾರದ (Bihar) ಕಿಶನ್‌ಗಂಜ್ ಪ್ರದೇಶದಲ್ಲಿ ಸಾವನ್ನಪ್ಪಿದ್ದು, ಅವರ   ಪಾರ್ಥಿವ ಶರೀರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣಕ್ಕೆ (kempegowda international airport)  ಬಂದಿದೆ. ಏರ್​ಪೋರ್ಟ್​​ನಲ್ಲಿ ಯೋಧನಿಗೆ CISF​ ಸಿಬ್ಬಂದಿ, ಕಸ್ಟಮ್ಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದ್ದಾರೆ. ಏರ್ಪೋಟ್ ನಿಂದ ಆ್ಯಂಬುಲೇನ್ಸ್​ನಲ್ಲಿ ರಸ್ತೆ ಮೂಲಕ ಚಿಕ್ಕಮಗಳೂರಿನ ಸ್ವಗ್ರಾಮಕ್ಕೆ ತೆರಳಲಿರುವ ಮೃತದೇಹ ಸಾಗಲಿದೆ.

ಯೋಧ  ಎಂ.ಎನ್ ಗಣೇಶ್ ಸಾವು

ಬಿಹಾರದ ಕಿಶನ್‌ಗಂಜ್ ಪ್ರದೇಶದಲ್ಲಿ ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ನಿವಾಸಿ ಯೋಧ  ಎಂ.ಎನ್ ಗಣೇಶ್   ಸಾವನ್ನಪ್ಪಿದ್ದರು ಕಳೆದ ಏಪ್ರಿಲ್ 24ರಂದು ರಜೆ ಮೇಲೆ ಯೋಧ ಗಣೇಶ್ ಊರಿಗೆ ಬಂದಿದ್ದರು. ಜೂನ್ 9 ರಂದು ಗ್ರಾಮದಿಂದ ಯೋಧ ಗಣೇಶ್  ವೃತ್ತಿಗೆ ಹಾಜರಾಗಲು ತೆರಳಿದ್ದರು. ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಯೋಧ ಸಾವನ್ನಪ್ಪಿದ್ದಾರೆ.

ಇದನ್ನು ಓದಿ: PSI Recruitment Scam: ಬ್ಯಾಡರಹಳ್ಳಿ ಪೊಲೀಸ್​ ಠಾಣೆ PSI ಹರೀಶ್​​ನನ್ನು ಠಾಣೆಯಲ್ಲೇ ಬಂಧಿಸಿದ ಸಿಐಡಿ ಅಧಿಕಾರಿಗಳು

ಯೋಧನ ಸಾವಿನ ಸುತ್ತ ಅನುಮಾನಗಳ ಹುತ್ತ

ಯೋಧ ಗಣೇಶ್(36) ಅವರ ಮೃತದೇಹ ಕಿಶನ್ ಗಂಜ್ ರೇಲ್ವೆ ನಿಲ್ದಾಣದ ಸಮೀಪ ಪತ್ತೆಯಾಗಿತ್ತು. ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ಗ್ರಾಮದಿಂದ ಬೆಂಗಳೂರು ಮೂಲಕ ಗುವಾಹಟಿಗೆ ಯೋಧ ಗಣೇಶ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆದ್ರೆ ಮಾರ್ಗಮಧ್ಯೆದಲ್ಲೇ ಅನುಮಾನಸ್ಪದವಾಗಿ ಯೋಧ ಗಣೇಶ್ ಸಾವನ್ನಪ್ಪಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಯೋಧ ಗಣೇಶ್ ತಂದೆಗೆ ಕರೆ ಮಾಡಿ ಸುದ್ದಿ ತಿಳಿಸಿದ ಅಂಬ್ಯುಲೆನ್ಸ್ ಚಾಲಕ!

ಕಿಶನ್ ಗಂಜ್ ರೇಲ್ವೆ ನಿಲ್ದಾಣದಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಹೊಸದಾಗಿ ನಿರ್ಮಾಣಗೊಂಡ ಸೇತುವೆ ಬಳಿ ಯೋಧ ಗಣೇಶ್ ಪತ್ತೆಯಾಗಿತ್ತು. ಇದನ್ನ ನೋಡಿದ ಸ್ಥಳೀಯರು ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ರು, ಮೃತದೇಹವನ್ನ ಅಂಬ್ಯುಲೆನ್ಸ್ಗೆ ಹಾಕಿಕೊಳ್ಳುವಾಗ ಗುರುತಿನ ಚೀಟಿಯೊಂದರಲ್ಲಿ ಮೊಬೈಲ್ ನಂಬರ್ ಪತ್ತೆ ಹಚ್ಚಿ ತಂದೆ ನಾಗಯ್ಯಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ರು.. ಹಿಂದಿಯಲ್ಲಿ ಮಾತನಾಡಿದಾಗ ಯೋಧ ಗಣೇಶ್ ತಂದೆ ನಾಗಯ್ಯ ಅವರಿಗೆ ಸರಿಯಾಗಿ ಅರ್ಥವಾಗಿಲ್ಲ. ಆ ಬಳಿಕ ಯೋಧ ಗಣೇಶ್ ಅವರ ಮಾವ ಮಾತನಾಡಿದಾಗ ಯೋಧ ಗಣೇಶ್ ಇನ್ನಿಲ್ಲ ಅನ್ನೋ ಸುದ್ದಿ ತಿಳಿದಿದೆ.

ಇದನ್ನು ಓದಿ: ಹೊಸಪೇಟೆಯಲ್ಲಿ ಗುತ್ತಿಗೆದಾರನ ಮನೆ ಮೇಲೆ ಐಟಿ ದಾಳಿ, ಎಸಿಬಿ ಬಲೆಗೆ ಆರ್​ಟಿಒ ಟೈಪಿಸ್ಟ್, ವಾಹನ ಕಳ್ಳರ ಬಂಧನ

 ಸೇನಾ ಕರ್ತವ್ಯಕ್ಕೆ ತೆರಳುತ್ತಿದ್ದ ಯೋಧ ಗಣೇಶ್!

ಏಪ್ರಿಲ್ 24ರಂದು ರಜೆ ನಿಮಿತ್ತ ಯೋಧ ಗಣೇಶ್, ಸೇನೆಯಿಂದ ಗ್ರಾಮಕ್ಕೆ ಬಂದಿದ್ರು. ಒಂದೂವರೆ ತಿಂಗಳು ಕುಟುಂಬದೊಂದಿಗೆ ಸಮಯ ಕಳೆದು ಜೂನ್ 12ರಂದು ಕರ್ತವ್ಯಕ್ಕೆ ಹಾಜರಾಗಬೇಕಿದ್ದರಿಂದ ಗುರುವಾರವಷ್ಟೇ (ಜೂನ್ 9) ಬೆಂಗಳೂರು ಮೂಲಕ ಅಸ್ಸಾಂನ ಗುವಾಹಟಿಗೆ ಹಿಂದಿರುಗುತ್ತಿದ್ರು. ಆದರೆ ದುರಂತ ಅಂದ್ರೆ ರೈಲಿನಲ್ಲಿ ಬೆಂಗಳೂರಿನಿಂದ ಬಿಹಾರ ಮೂಲಕ ಅಸ್ಸಾಂ ತಲುಪುವ ಮೊದಲೇ ಯೋಧ ಗಣೇಶ್ ಸಾವನ್ನಪ್ಪಿದ್ದಾರೆ. ಬಿಹಾರದ ಕಿಶನ್ ಗಂಜ್ ರೇಲ್ವೆ ನಿಲ್ದಾಣದ ಲಗೇಜ್ ರೂಂನಲ್ಲಿ ಗಣೇಶ್ ಅವರ ಬ್ಯಾಗ್ ಪತ್ತೆಯಾಗಿವೆ. ಈ ರೇಲ್ವೆ ನಿಲ್ದಾಣದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಗಣೇಶ್ ಅವರ ಮೃತದೇಹ ಸಿಕ್ಕಿದೆ. ಹೋಗುವ ವೇಳೆ ಯೋಧ ಗಣೇಶ್ ಅವರ ಬಳಿ 30 ಸಾವಿರಕ್ಕೂ ಅಧಿಕ ಹಣ ಇತ್ತು, ಈ ಹಣವನ್ನ ನೋಡಿಯೇ ಯಾರಾದ್ರೂ ಗಣೇಶ್ ಅವರ ಪ್ರಾಣಕ್ಕೆ ಕುತ್ತು ತಂದಿರಬಹುದಾ ಅನ್ನೋದು ಸದ್ಯದ ಯಕ್ಷಪ್ರಶ್ನೆಯಾಗಿದೆ.

14 ವರ್ಷದಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ!

ಯೋಧ ಗಣೇಶ್ ಕಳೆದ 14 ವರ್ಷದಿಂದ ಸೇನೆಯಲ್ಲಿರುವ 4 CORPS ಸಿಗ್ನಲ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ರು. ಸೇನೆ, ದೇಶದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಗಣೇಶ್ ಅವರಿಗೆ ಸೈನಿಕನಾಗಬೇಕು ಅನ್ನೋ ಹಂಬಲ ಚಿಕ್ಕದಾಗಿನಿಂದಲೂ ಇತ್ತು. ಹಾಗಾಗಿಯೇ ಪಿಯುಸಿ ಆಗುತ್ತಲೇ ಸೇನೆಗೆ ಸೇರಿಕೊಂಡು ತನ್ನ ಕನಸನ್ನ ನನಸು ಮಾಡಿಕೊಂಡಿದ್ರು. ಇನ್ನೂ ಹಲವು ವರ್ಷ ಸೇನೆಯಲ್ಲಿ ಮುಂದುವರಿಯಬೇಕು ಅನ್ನೋ ಮಹತ್ವಕಾಂಕ್ಷೆ ಕಾಫಿನಾಡಿನ ಯೋಧನದ್ದಾಗಿತ್ತು. ಆದ್ರೆ ವಿಧಿ ಮಾತ್ರ ಅದಕ್ಕೆ ಅವಕಾಶ ಕೊಡದೇ ಇರೋದು ನಿಜಕ್ಕೂ ದುರಂತವೇ ಸರಿ.

ಇಡೀ ಕುಟುಂಬದ ಆಧಾರಸ್ತಂಬವಾಗಿದ್ದ ಯೋಧ!

ನಾಗಯ್ಯ-ಗಂಗಮ್ಮ ದಂಪತಿಯ ಮಗನಾದ ಗಣೇಶ್​ಗೆ 6 ವರ್ಷದ ಹಿಂದೆ ಶ್ವೇತಾ ಎಂಬುವರ ಜೊತೆ ವಿವಾಹವಾಗಿತ್ತು. ದಂಪತಿಗೆ 5 ವರ್ಷದ ಆದ್ಯಾ ಎಂಬ ಮಗಳಿದ್ದಾಳೆ. ಮೂರು ವರ್ಷದ ಹಿಂದೆ ನಾಗಯ್ಯ-ಗಂಗಮ್ಮ ಮತ್ತೊಬ್ಬ ಮಗ, ಗಣೇಶ್ ಅವರ ಸಹೋದರ ಸಾವನ್ನಪ್ಪಿದ್ದರು. ಸದ್ಯ ಇಡೀ ಕುಟುಂಬಕ್ಕೆ ಗಣೇಶ್ ಅವರೇ ಆಧಾರಸ್ತಂಭವಾಗಿದ್ರು. ಇದೀಗ ಈ ದುರಂತ ಕುಟುಂಬಕ್ಕಿದ್ದ ಆಧಾರಸ್ತಂಭವನ್ನೇ ಕಿತ್ತುಕೊಂಡಿದ್ದು, ಗಣೇಶ್ ಅವರ ಸಾವಿನ ಸುದ್ಧಿ ತಿಳಿದು ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:46 pm, Wed, 15 June 22

Web contact

TV9 Kannada

Read More
Follow Us