ಮತ್ತೆ ಮುನ್ನೆಲೆಗೆ ಬಂದ ಗಡಿ ಮೆಟ್ರೋ ಯೋಜನೆ: ಬೊಮ್ಮಸಂದ್ರ-ಅತ್ತಿಬೆಲೆ ಮಾರ್ಗದ ಡಿಪಿಆರ್ಗೆ ಬಿಎಂಆರ್ಸಿಎಲ್ಗೆ ಸರ್ಕಾರ ಸೂಚನೆ
Attibele Metro Project: ತಾಂತ್ರಿಕ ಕಾರಣಗಳಿಂದ ಕೈಬಿಡಲಾಗಿದ್ದ ಕರ್ನಾಟಕ-ತಮಿಳುನಾಡು ಗಡಿ ಭಾಗದ ಮೆಟ್ರೋ ವಿಸ್ತರಣಾ ಯೋಜನೆಗೆ ಇದೀಗ ಮತ್ತೆ ಜೀವ ಬಂದಿದೆ. ಆರ್.ವಿ. ರಸ್ತೆ–ಬೊಮ್ಮಸಂದ್ರ ಯೆಲ್ಲೋ ಲೈನ್ ಮಾರ್ಗದ ಮುಂದುವರಿದ ಭಾಗವಾಗಿ ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸಲು ಡಿಪಿಆರ್ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರ ಬಿಎಂಆರ್ಸಿಎಲ್ಗೆ ಸೂಚನೆ ನೀಡಿದೆ.

ಬೆಂಗಳೂರು, ಆಗಸ್ಟ್ 18: ಈ ಹಿಂದೆ ರಾಜ್ಯ ಸರ್ಕಾರ ಅತ್ತಿಬೆಲೆಗೆ ನಮ್ಮ ಮೆಟ್ರೋ ರೈಲನ್ನು ಓಡಿಸಲು ಪ್ಲ್ಯಾನ್ ಮಾಡಿತ್ತು. ಬಿಎಂಆರ್ಸಿಎಲ್ (BMRCL Namma) ಫಿಸಿಬಲಿಟಿ ಸ್ಟಡಿ ಕೂಡ ಮಾಡಿತ್ತು. ತಾಂತ್ರಿಕ ಸಮಸ್ಯೆ ಎದುರಾಗಬಹುದು ಎಂಬ ಕಾರಣದಿಂದ ಈ ಯೋಜನೆಯನ್ನು ಕೈಬಿಟ್ಟಿತು. ಕಳೆದ ವಾರ ತಮಿಳುನಾಡಿನ ಬಜೆಟ್ನಲ್ಲಿ ಬೊಮ್ಮಸಂದ್ರಕ್ಕೆ ಮೆಟ್ರೋ ಯೋಜನೆ ಮಾಡುತ್ತೇವೆ ಎಂದು ಘೋಷಣೆ ಮಾಡಿರುವ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಅತ್ತಿಬೆಲೆ ಮೆಟ್ರೋಗೆ ಡಿಪಿಆರ್ ಸಿದ್ಧಪಡಿಸಲು ಬಿಎಂಆರ್ಸಿಎಲ್ಗೆ ಸೂಚನೆ ನೀಡಿದೆ.
ಡಿಪಿಆರ್ ಸಿದ್ಧಪಡಿಸಲು ಮುಂದಾದ ಬಿಎಂಆರ್ಸಿಎಲ್
ಈ ಹಿಂದೆ ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ಮಾರ್ಗ ವಿಸ್ತರಿಸುವ ಸಂಬಂಧ ಬಿಎಂಆರ್ಸಿಎಲ್ ಕಾರ್ಯಸಾಧ್ಯತಾ ಅಧ್ಯಯನ (Feasibility Study) ನಡೆಸಿತ್ತು. ಆದರೆ, ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಬಹುದು ಎಂಬ ಕಾರಣ ನೀಡಿ ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿತ್ತು.
ಇದನ್ನೂ ಓದಿ: Namma Metro: ನಮ್ಮ ಮೆಟ್ರೋ ಬ್ಲೂ ಲೈನ್ ಕಾರ್ಯಾಚರಣೆ ಮತ್ತಷ್ಟು ವಿಳಂಬ: 2027ಕ್ಕೆ ಗಡುವು!
ಇತ್ತೀಚೆಗೆ ತಮಿಳುನಾಡು ಸರ್ಕಾರ ತನ್ನ ಬಜೆಟ್ನಲ್ಲಿ ಹೊಸೂರಿನಿಂದ ಬೊಮ್ಮಸಂದ್ರದವರೆಗೆ 23 ಕಿ.ಮೀ ವ್ಯಾಪ್ತಿಯಲ್ಲಿ 12 ನಿಲ್ದಾಣಗಳನ್ನೊಳಗೊಂಡ ಮೆಟ್ರೋ ರೈಲು ಯೋಜನೆ ರೂಪಿಸುವುದಾಗಿ ಘೋಷಿಸಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಅತ್ತಿಬೆಲೆವರೆಗಿನ ಡಿಪಿಆರ್ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದೆ.
10.5 ಕಿ.ಮೀ ಮಾರ್ಗದಲ್ಲಿ 9 ನಿಲ್ದಾಣಗಳ ಪ್ಲ್ಯಾನ್
ರಾಜ್ಯ ಸರ್ಕಾರದ ಪ್ರಸ್ತಾವನೆಯಂತೆ ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ರಾಷ್ಟ್ರೀಯ ಹೆದ್ದಾರಿ-44ರ (ಹೊಸೂರು ರಸ್ತೆ) ಬಲಭಾಗದಲ್ಲಿ ಸುಮಾರು 10.5 ಕಿಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಈ ವಿಸ್ತರಿತ ಮಾರ್ಗದಲ್ಲಿ ಒಟ್ಟು 9 ನಿಲ್ದಾಣಗಳು ತಲೆಎತ್ತಲಿವೆ. ಬೊಮ್ಮಸಂದ್ರದ ಬಳಿಕ ನಾರಾಯಣ ಹೃದಯಾಲಯ, ಚೀನಾಪುರ ಸರ್ಕಲ್, ಹಳೇ ಚಂದಾಪುರ, ತಿರುಮಗೊಂಡನಹಳ್ಳಿ, ಬಾಳಗಾನಹಳ್ಳಿ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಯಾದವನಹಳ್ಳಿ, ಅತ್ತಿಬೆಲೆ ಹಾಗೂ ಅತ್ತಿಬೆಲೆ ಟರ್ಮಿನಲ್ ನಿಲ್ದಾಣಗಳು ಬರಲಿವೆ.
ಇದನ್ನೂ ಓದಿ: ತುಮಕೂರು-ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ: ಕೇಂದ್ರದ ಅನುಮತಿಗೆ ರಾಜ್ಯ ಸರ್ಕಾರ ಪತ್ರ!
ಈ ಯೋಜನೆ ಸಾಕಾರಗೊಂಡರೆ ದಕ್ಷಿಣ ಭಾರತದಲ್ಲೇ ಮೊದಲ ಅಂತಾರಾಜ್ಯ ಮೆಟ್ರೋ ಮಾರ್ಗವಾಗಿ ಹೊರಹೊಮ್ಮಲಿದ್ದು, ಗಡಿ ಭಾಗದ ಸಾವಿರಾರು ಉದ್ಯೋಗಿಗಳು ಹಾಗೂ ನಿತ್ಯ ಪ್ರಯಾಣಿಕರಿಗೆ ಸುಲಭ ಸಂಚಾರದ ಹೊಸ ಆಶಾಕಿರಣ ಮೂಡಿದೆ. ಆದರೆ, ಈ ಹಿಂದೆ ತಮಿಳುನಾಡು ಗಡಿಯವರೆಗೆ ಮೆಟ್ರೋ ವಿಸ್ತರಣೆ ಮಾಡುವುದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದೀಗ ಡಿಪಿಆರ್ ಸಿದ್ಧಪಡಿಸಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಹಾಗೂ ಹೋರಾಟಗಾರರ ವಲಯದಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




