ಶರಣಾದ ಮಾಜಿ ನಕ್ಸಲರಿಗಿಲ್ಲ ಸೌಲಭ್ಯ; ಮಾತುಕೊಟ್ಟು ಸರ್ಕಾರ ಮಾಡಿದ್ದೇನು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 19, 2024 | 7:21 PM

ಕೃಷಿ ಮಾಡುವುದಕ್ಕೆ ಭೂಮಿ, ವಸತಿ ಜೊತೆ ಉದ್ಯೋಗವನ್ನು ಕೊಡುತ್ತೆವೆ. ಆರೋಪಿತರ ಎಲ್ಲಾ ಕೆಸ್ ಕ್ಲೋಸ್ ಮಾಡುತ್ತೇವೆ. ಬನ್ನಿ ಕಾನೂನಿಗೆ ಶರಣಾಗಿ ಎಂದಿದ್ದ ಸರ್ಕಾರ ಈಗ ಗಪ್ ಚುಪ್ ಆಗಿದೆ. ಸೌಲಭ್ಯ ಕೊಡುವುದಿರಲಿ, ಕೇಸ್ ಕೂಡ ಕ್ಲೋಸ್ ಆಗಿಲ್ಲ. ಯಾಕಾದರೂ ಶರಣಾದೆವೊ ಎನ್ನುವ ಮನಸ್ಥಿತಿಗೆ ಬಂದಿದ್ದಾರೆ ಮಾಜಿ ನಕ್ಸಲರು. ಮಾತುಕೊಟ್ಟು ಸರ್ಕಾರ ಮಾಡಿದ್ದೇನು..?. ಒಂದು ಕಾಲದ ಮಲೆನಾಡಿನ ಮಾಜಿ ಕೆಂಪು ಉಗ್ರರ ವಾದವೇನು ಗೊತ್ತಾ? ಈ ಸ್ಟೋರಿ ಓದಿ.

ಶರಣಾದ ಮಾಜಿ ನಕ್ಸಲರಿಗಿಲ್ಲ ಸೌಲಭ್ಯ; ಮಾತುಕೊಟ್ಟು ಸರ್ಕಾರ ಮಾಡಿದ್ದೇನು?
ಶರಣಾದ ಮಾಜಿ ನಕ್ಸಲರಿಗಿಲ್ಲ ಸೌಲಭ್ಯ
Follow us on

ಚಿಕ್ಕಮಗಳೂರು, ಸೆ.19: 2016 ಹಾಗೂ 2017ರಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬಂದರೆ ನಿಮಗೆ ಭೂಮಿ, ವಸತಿ, ಉದ್ಯೋಗ ಸೇರಿ ನಿಮ್ಮ ಮೇಲಿನ ಕೇಸ್ ಕ್ಲೋಸ್ ಮಾಡುವ ಜೊತೆಗೆ ಬರಪೂರ ಸೌಲಭ್ಯ ಕೊಡುತ್ತೇವೆ ಎಂದು ಸರ್ಕಾರ ನಂಬಿಸಿ ಚಿಕ್ಕಮಗಳೂರು(Chikkamagaluru) ಸೇರಿ ರಾಜ್ಯದ ವಿವಿಧ ಕಡೆಗಳ ನಕ್ಸಲರನ್ನು(Naxal) ಅಂದು ಶರಣಾಗುವಂತೆ ಮಾಡಿತ್ತು. ಶರಣಾಗಿದ್ದೆ ಬಂತು ಸರ್ಕಾರ ಕೊಟ್ಟ ಭರವಸೆ ಇಂದಿಗೂ ಕಡತಗಳಿಗಷ್ಟೇ ಸೀಮಿತವಾಗಿದೆ. ಹೀಗಾದರೆ ಈಗಲೂ ಕಾಡಿನಲ್ಲಿ ಕುಳಿತು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವ ತಂಡ, ಸರ್ಕಾರದ ಭರವಸೆ ನಂಬಿ ಬರುವುದು ಸಂಶಯವಾಗಿದೆ. ಕೊಟ್ಟ ಮಾತಿನಂತೆ ನಮಗೆ ಸೌಲಭ್ಯ ಕೊಡಿ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಮಾಜಿ ನಕ್ಸಲರು ಮನವಿ ಮಾಡುವ ಮೂಲಕ ಒತ್ತಾಯಿಸಿದ್ದಾರೆ.

2016ರಲ್ಲಿ ನಾಲ್ಕು ಜನ, 2017ರಲ್ಲಿ ಮೂರು ಜನ ನಕ್ಸಲರು ಮುಖ್ಯ ವಾಹಿನಿಗೆ ಶರಣಾಗಿದ್ದರು. ಈ ವೇಳೆ ಕನ್ಯಾಕುಮಾರಿ ಎಂಬ ನಕ್ಸಲ್ ಮಹಿಳೆ ಶರಣಾಗುವ ಮುನ್ನ ಪ್ರಕರಣಗಳನ್ನು ತುರ್ತಾಗಿ ಇತ್ಯರ್ಥ ಮಾಡಿ ಬಿಡುಗಡೆಗೊಳಿಸುವ ಭರವಸೆ ನೀಡಿದರು. ಆದರೆ, ಆಗಿದ್ದೇ ಬೇರೆ. ಎಂಟು ವರ್ಷ ಕಳೆದರೂ ಆಕೆ ಜೈಲಿನಲ್ಲಿ ಕೊಳೆಯುವಂತಾಗಿದೆ. ಐದು ವರ್ಷ ಮಗು ಕೂಡ ಸೆರೆವಾಸ ಅನುಭವಿಸಿ ಇದೀಗ ಹೊರ ಬಂದಿದೆ. ಜಿಲ್ಲಾಡಳಿತ ಹಾಗೂ ಸರ್ಕಾರ ನಂಬಿ ನಕ್ಸಲ್ ಚಟುವಟಿಕೆ ಬಿಟ್ಟು ಆರೋಪದಿಂದ ಹೊರ ಬಂದರೂ ನಮಗೆ ಸೌಲಭ್ಯವಿರಲಿ ಕನಿಷ್ಠ ನಾಗರಿಕ ಪರಿಹಾರಗಳನ್ನು ನೀಡಲು ಸರ್ಕಾರ ಮುಂದಾಗದಿರುವುದು ಮಾಜಿ ನಕ್ಸಲರಿಗೆ ಇನ್ನಿಲ್ಲದ ಸಿಟ್ಟು ತರಿಸಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಹರಿಯಾಣ ಮೂಲದ ನಕ್ಸಲ್ ಬಂಧನ ಕೇಸ್​: ಅನಿರುದ್ಧ ರಾಜನ್​ ಪ್ರೇಯಸಿಗೆ ಸಿಸಿಬಿ ನೋಟಿಸ್​​

ಕೊಟ್ಟ ಮಾತು, ಇಟ್ಟ ಭರವಸೆ ಹುಸಿಯಾದ ಬೆನ್ನಲ್ಲೇ ಮಾಜಿ ನಕ್ಸಲರ ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿರುವ ನಕ್ಸಲ್ ಆರೋಪಿತರ ಪರ ನಾಗರೀಕ ಆಯೋಗ ಎಚ್ಚರಿಕೆಯನ್ನು ನೀಡಿದೆ. ಒಟ್ಟಾರೆ ನಕ್ಸಲರ ನಿಗ್ರಹಕ್ಕಾಗಿ ರಾಜ್ಯ ಸೇರಿ ಕೇಂದ್ರ ಸರ್ಕಾರ ವರ್ಷಕ್ಕೆ ಕೋಟಿ ಕೋಟಿ‌ ನೀಡುತ್ತೆ, ಹಲವರು ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ತಾವೇ ಶರಣಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದವರ ಪಾಡು ಅಡಕತ್ತರಿಯಲ್ಲಿ ಸಿಲುಕಿದೆ. ಹಾಗಾದರೆ, ಸರ್ಕಾರ ಕೊಟ್ಟ ಮಾತು ಮರೆತು ಶರಣಾಗಲು ಬರುವ ನಕ್ಸಲ್​ರಿಗೆ ನೀಡುತ್ತಿರುವ ಸಂದೇಶ ಏನು? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಸರ್ಕಾರವೇ ನೇರ ಹೊಣೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:18 pm, Thu, 19 September 24