ಕಾಡಾನೆಗಳ ಉಪಟಳದಿಂದ ಪಾರು ಮಾಡುತ್ತೆ ಟೆಂಟಕಲ್ ಫೆನ್ಸಿಂಗ್: ಹೇಗೆ ಗೊತ್ತೇ?

ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸಾಂಪ್ರದಾಯಿಕ ಪರಿಹಾರಗಳು ಪರಿಣಾಮಕಾರಿಯಾಗಿಲ್ಲ. ಇದಕ್ಕೆ ಪರ್ಯಾಯವಾಗಿ, ಪರಿಸರವಾದಿಗಳು ‘ಟೆಂಟಕಲ್ ಫೆನ್ಸಿಂಗ್’ ಅಥವಾ ತೂಗು ಬೇಲಿ ವಿಧಾನವನ್ನು ಸಲಹೆ ಮಾಡಿದ್ದಾರೆ. ಇದು ಕಡಿಮೆ ವೆಚ್ಚದಲ್ಲಿ ಆನೆಗಳಿಗೆ ಲಘು ವಿದ್ಯುತ್ ಶಾಕ್ ನೀಡಿ ದೂರವಿಡುವ ಪರಿಣಾಮಕಾರಿ ತಂತ್ರಜ್ಞಾನವಾಗಿದ್ದು, ಹೇಗೆ ಕೆಲಸ ಮಾಡುತ್ತೆ ಎಂಬ ಮಾಹಿತಿ ಇಲ್ಲಿದೆ.

ಕಾಡಾನೆಗಳ ಉಪಟಳದಿಂದ ಪಾರು ಮಾಡುತ್ತೆ ಟೆಂಟಕಲ್ ಫೆನ್ಸಿಂಗ್: ಹೇಗೆ ಗೊತ್ತೇ?
ಚಿಕ್ಕಮಗಳೂರು ಕಾಡಾನೆ ಹಾವಳಿ
Image Credit source: tv9
Edited By:

Updated on: Mar 05, 2026 | 8:00 AM

ಚಿಕ್ಕಮಗಳೂರು, ಮಾರ್ಚ್ 5: ಕಾಫಿನಾಡು ಚಿಕ್ಕಮಗಳೂರಿನ (Chikkamagaluru) ಮಲೆನಾಡು ಭಾಗದಲ್ಲಿ ಕಾಡಾನೆಗಳ (Wild Elephants) ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಕಾಫಿ ತೋಟಗಳು, ಭತ್ತದ ಗದ್ದೆಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಕಾಡಾನೆಗಳು ನಿರಂತರ ಸಂಚಾರ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಕಾಡಾನೆ ದಾಳಿಗೆ ಹಲವರು ಮೃತಪಟ್ಟ ಘಟನೆಗಳು ವರದಿಯಾಗಿದ್ದು, ಸ್ಥಳೀಯರು ಭೀತಿಯಲ್ಲಿ ಜೀವನ ನಡೆಸುವಂತಾಗಿದೆ. ಕಾಡಾನೆಗಳ ಶಾಶ್ವತ ನಿಯಂತ್ರಣಕ್ಕಾಗಿ ರೈಲ್ವೆ ಬ್ಯಾರಿಕೇಡ್, ಅಗೆದ ಹೊಂಡಗಳು (ಟ್ರೆಂಚ್), ಸೊಲಾರ್ ಬೇಲಿ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಭರವಸೆ ನೀಡಿದ್ದರು. ಆದರೆ ಇದಕ್ಕೆ ಹೆಚ್ಚಿನ ವೆಚ್ಚ ಹಾಗೂ ಪ್ರಕ್ರಿಯಾತ್ಮಕ ಅಡೆತಡೆಗಳಿರುವುದು ಗಮನಾರ್ಹ.

ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ವಿಧಾನ ಟೆಂಟಕಲ್ ಫೆನ್ಸಿಂಗ್

ಕಾಡಾನೆ ಹಹಾವಳಿ ನಿಯಂತ್ರಣಕ್ಕೆ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಪರಿಹಾರವಾಗಿ ‘ಟೆಂಟಕಲ್ ಫೆನ್ಸಿಂಗ್’ ಅಥವಾ ತೂಗು ಬೇಲಿ ವಿಧಾನವನ್ನು ಅಳವಡಿಸುವಂತೆ ಪರಿಸರವಾದಿಗಳು ಸಲಹೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು–ತತ್ಕೋಳ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಮಾದರಿ ಯಶಸ್ವಿಯಾಗಿದೆ ಎಂದು ಅವರು ಉದಾಹರಣೆ ನೀಡಿದ್ದಾರೆ.

ದಶಕದ ಹಿಂದೆ ಸಾರಗೋಡು, ತತ್ಕೋಳ ಹಾಗೂ ಕುಂದೂರು ಭಾಗಗಳಲ್ಲಿ ಕಾಡಾನೆಗಳ ದಾಳಿಯಿಂದ ರೈತರು ಪ್ರಾಣ ಕಳೆದುಕೊಂಡಿದ್ದರು. ಕಾಫಿ ತೋಟಗಳು ಮತ್ತು ಕೃಷಿಭೂಮಿಗಳು ಹಾನಿಗೊಳಗಾಗಿದ್ದವು. ನಂತರ ಈ ಪ್ರದೇಶವನ್ನು ಮೀಸಲು ಅರಣ್ಯವಾಗಿ ಘೋಷಿಸಿ, ಅರಣ್ಯ ಇಲಾಖೆ ಸ್ಥಳೀಯರ ಸ್ಥಳಾಂತರ ಮತ್ತು ಪುನರ್ವಸತಿ ಕಾರ್ಯ ಕೈಗೊಂಡಿತು. ಆದರೂ ಕಾಡಾನೆಗಳು ಕಾಡು ಬಿಟ್ಟು ಹೊರಬರುವ ಘಟನೆಗಳು ಮುಂದುವರಿದವು. ಈ ಹಿನ್ನೆಲೆಯಲ್ಲಿ ಟೆಂಟಕಲ್ ಫೆನ್ಸಿಂಗ್ ಅಳವಡಿಸಲಾಯಿತು.

ಹೇಗೆ ಕಾರ್ಯನಿರ್ವಹಿಸುತ್ತೆ ಟೆಂಟಕಲ್ ಫೆನ್ಸಿಂಗ್ / ತೂಗು ಬೇಲಿ?

ಟೆಂಟಕಲ್ ಫೆನ್ಸಿಂಗ್ ಅಥವಾ ಈ ತೂಗು ಬೇಲಿಯಲ್ಲಿ ಹಲವು ಹಂತಗಳಲ್ಲಿ ತಂತಿ ಜಾಲ ಇರುತ್ತದೆ. ಕಾಡಾನೆಗಳು ತಂತಿಯನ್ನು ಮೇಲಕ್ಕೆತ್ತಲು ಅಥವಾ ಕಿತ್ತುಹಾಕಲು ಯತ್ನಿಸಿದರೆ, ಮತ್ತೊಂದು ತಂತಿಯಿಂದ ಲಘು ವಿದ್ಯುತ್ ಶಾಕ್ ಅನುಭವಿಸಿ ಹಿಂದಕ್ಕೆ ಸರಿಯುತ್ತವೆ. ಇದರ ಪರಿಣಾಮವಾಗಿ ಆ ಪ್ರದೇಶದಲ್ಲಿ ಕಾಡಾನೆಗಳ ಪ್ರವೇಶ ಗಣನೀಯವಾಗಿ ಕಡಿಮೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಟೆಂಟಕಲ್ ಫೆನ್ಸಿಂಗ್ ಯಾಕೆ ಉತ್ತಮ?

ಟ್ರೆಂಚ್‌ಗಳನ್ನು ಅಗೆದರೂ ಅವುಗಳನ್ನು ಮಣ್ಣು ತುಂಬಿ ಮುಚ್ಚುವ ಸಾಧ್ಯತೆ ಇದೆ. ಸೊಲಾರ್ ಬೇಲಿಗೆ ಮರದ ತುಂಡು ಹಾಕಿ ಮುರಿಯುವ ಉದಾಹರಣೆಗಳೂ ಕಂಡುಬಂದಿವೆ. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಮತ್ತು ರೈಲ್ವೆ ಇಲಾಖೆಯ ಸಹಕಾರ ಅಗತ್ಯವಿದೆ. ಆದರೆ ಟೆಂಟಕಲ್ ಫೆನ್ಸಿಂಗ್ ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದಾದ ವಿಧಾನವಾಗಿದ್ದು, ಇದರ ನಿರ್ವಹಣೆಗೆ ಸ್ಥಳೀಯರಿಗೆ ಉದ್ಯೋಗಾವಕಾಶವೂ ಸಿಗುತ್ತದೆ ಎಂಬುದು ಪರಿಸರವಾದಿಗಳ ಅಭಿಪ್ರಾಯ.

ಇದನ್ನೂ ಓದಿ: ಮರಿಗಳ ಜೊತೆ ಕಾಫಿ ತೋಟದಲ್ಲಿ ಕಾಡಾನೆಗಳ ಜಾಲಿ ರೌಂಡ್ಸ್​​: ಸ್ಥಳೀಯರಲ್ಲಿ ಆತಂಕ

ಈಗಾಗಲೇ ಯಶಸ್ಸು ಕಂಡಿರುವ ಈ ಮಾದರಿಯನ್ನು ಮಲೆನಾಡಿನ ಇತರೆ ಕಾಡಾನೆ ಸಮಸ್ಯೆ ಪ್ರದೇಶಗಳಲ್ಲೂ ಜಾರಿಗೊಳಿಸುವಂತೆ ಆಗ್ರಹ ಕೇಳಿಬಂದಿದೆ. ಸರ್ಕಾರವು ತಜ್ಞರ ತಂಡವನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:59 am, Thu, 5 March 26

Follow Us