
ಚಿಕ್ಕಮಗಳೂರು, ಜೂನ್ 29: ಹಿಂದೂ ಮುಸ್ಲಿಂರ ನಡುವಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿನ (baba budangiri dargah) ವಿವಾದದ ಜೊತೆಗೆ ಬಾಬಾ ಬುಡನ್ ಸ್ವಾಮಿ ದರ್ಗಾ ಸಮೀಪದ ಮಾಣಿಕ್ಯಧಾರಾ ಬಳಿ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ. ಚಂದ್ರದ್ರೋಣ (Chandradrona) ಪರ್ವತದ ಸಾಲಿನಲ್ಲಿ ಅನಧಿಕೃತ ಗೋರಿಗಳನ್ನ ನಿರ್ಮಾಣ ಮಾಡಿ, ಹಸಿರು ಚಾದರ ಹೊದಿಸಿ, ಹೊಸ ಆಚರಣೆ ಮಾಡಲಾಗುತ್ತಿದೆ. ಹೀಗಾಗಿ ಗೋರಿಗಳಿರುವ ಸ್ಥಳದಲ್ಲೇ ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ.
ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ. ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಮೀಪದ ಮಾಣಿಕ್ಯಧಾರಾ ಸೇರಿದಂತೆ ಮಾಣಿಕ್ಯಧಾರಾಕ್ಕೆ ತೆರಳುವ ರಸ್ತೆಯಲ್ಲಿ ಅನಧಿಕೃತವಾಗಿ ಮರಗಳ ಕೆಳಗೆ ಗೋರಿಗಳನ್ನ ನಿರ್ಮಿಸಿ, ಹಸಿರು ಬಟ್ಟೆಗಳನ್ನ ಹೊದಿಸಿ ಹೊಸಹೊಸ ಆಚರಣೆ ಮಾಡಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಗಂಭೀರ ಆರೋಪ ಮಾಡಿವೆ.
ಇದನ್ನೂ ಓದಿ: 2000 ಅಡಿ ಆಳದ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಈ ಕುರಿತಾಗಿ ಫೋಟೋಗಳನ್ನ ಬಿಡುಗಡೆ ಮಾಡಿ ಏಕಾಏಕಿ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಮುಂಭಾಗ ಪ್ರತಿಭಟನೆ ಮಾಡಲಾಗಿದೆ. ಇನ್ನೂ ಸಂಪೂರ್ಣ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅನಧಿಕೃತ ಗೋರಿಗಳ ನಿರ್ಮಾಣ ಮಾಡಿ ಹೊಸ ಆಚರಣೆ ಮಾಡುವ ಮೂಲಕ ಸಂಪೂರ್ಣ ಇಸ್ಲಾಮೀಕರಣ ಮಾಡುವ ಸಂಚು ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿವೆ.
ಇನ್ನು ವಿವಾದ ಬೆನ್ನಲ್ಲೇ ಮುಜರಾಯಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಗೋರಿಗಳಿರುವ ಮಾಣಿಕ್ಯಧಾರಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಿಪಿಎಸ್ ತಂತ್ರಜ್ಞಾನ ಬಳಸಿ ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳ ಮುಖಂಡ ರಘು ಸಕಲೇಶಪುರ ನೇತೃತ್ವದಲ್ಲಿ ಹಿಂದೂ ಸಂಘಟನೆಗಳು ಮನವಿ ಮಾಡಿವೆ. ಹೊಸ ಆಚರಣೆ ನಡೆಸಿದವರು ಯಾರು ಎಂಬುದರ ಮಾಹಿತಿ ಪತ್ತೆ ಹಚ್ಚಿ ಪ್ರಕರಣ ದಾಖಲು ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪ್ರವಾಸಿಗರ ಸ್ವರ್ಗದಲ್ಲಿ ಹೊಸ ರೂಲ್ಸ್: ಚಿಕ್ಕಮಗಳೂರು ಟ್ರಿಪ್ ಹೋಗುವವರು ತಿಳಿದುಕೊಳ್ಳಲೇಬೇಕು
ಸದ್ಯ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದದ ಬಳಿಕ ಚಂದ್ರದ್ರೋಣ ಪರ್ವತದ ಸಾಲಿನ ಮತ್ತೊಂದು ಸ್ಥಳ ಮಾಣಿಕ್ಯಧಾರಾದಲ್ಲಿ ವಿವಾದ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಯಾವ ಕ್ರಮಕೈಗೊಳ್ಳಲಿದ್ದಾರೆ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.