ಚಿತ್ರದುರ್ಗ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಅಮಾನತಿನಲ್ಲಿಡುವಂತೆ ಒತ್ತಾಯ

ಮುರುಘಾ ಮಠದ ವಸತಿ ಶಾಲೆಯ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವನ್ನು ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸುವಂತೆ ಒಡನಾಡಿ ಸಂಸ್ಥೆ ಮುಖ್ಯಸ್ಥ ಸ್ಟ್ಯಾನ್ಲಿ ಒತ್ತಾಯಿಸಿದ್ದಾರೆ.

ಚಿತ್ರದುರ್ಗ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಅಮಾನತಿನಲ್ಲಿಡುವಂತೆ ಒತ್ತಾಯ
ಚಿತ್ರದುರ್ಗ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಅಮಾನತಿನಲ್ಲಿಡುವಂತೆ ಒತ್ತಾಯ
Edited By: Rakesh Nayak Manchi

Updated on: Nov 18, 2022 | 1:38 PM

ಮೈಸೂರು: ಮುರುಘಾ ಮಠದ (Murugha Mutt) ವಸತಿ ಶಾಲೆಯ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual assault) ಎಸಗಿದ ಪ್ರಕರಣವನ್ನು ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸುವಂತೆ ಒಡನಾಡಿ ಸಂಸ್ಥೆ ಮುಖ್ಯಸ್ಥ ಸ್ಟ್ಯಾನ್ಲಿ ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಮಕ್ಕಳ ಮೇಲೆ ಪೋಷಕರಿಂದಲೇ ಒತ್ತಡ ಹೇರಲಾಗುತ್ತಿದೆ. ಚಿತ್ರದುರ್ಗ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ (Child Rights Protection Committee)ಯನ್ನು ಅಮಾನತಿನಲ್ಲಿಡಬೇಕು. ಇದು ಪ್ರಕರಣದ ಮೊದಲ ದಿನದಿಂದ ಆರೋಪಿಗಳ ಪರ ಕೆಲಸ ಮಾಡುತ್ತಿದೆ. ಈ ಬಗ್ಗೆ ಒಂದು ವಾರದಲ್ಲಿ ಉತ್ತರ ನೀಡುವಂತೆ ರಾಜ್ಯ ಸಮಿತಿ ನೋಟಿಸ್ ಕೂಡ ನೀಡಿದೆ. ಬಾಲ ಮಂದಿರದಲ್ಲಿದ್ದಾಗಲೇ ಬಾಲಕಿ ಮೇಲೆ ತಂದೆಯಿಂದ ಒತ್ತಡ ಹೇರಲಾಗಿದೆ. ಬಾಲಮಂದಿರದ ಸಿಬ್ಬಂದಿ ಸಹ ಇದನ್ನು ಕೇಳಿಸಿಕೊಂಡಿದ್ದಾರೆ. ಹೀಗಾಗಿ ಸರ್ಕಾರವು ಪ್ರಕರಣವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿ ಎಲ್ಲರನ್ನೂ ವಿಚಾರಣೆ ಮಾಡಿ ಸತ್ಯಾಂಶ ಹೊರ ತರಬೇಕು ಎಂದು ಒತ್ತಾಯಿಸಿದರು.

ಒಡನಾಡಿ ಸೇವಾಸಂಸ್ಥೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಆರೋಪಿಗಳ ಮಂಪರು ಪರೀಕ್ಷೆ ನಡೆಸುವಂತೆ ಆಗ್ರಹಿಸಿ ಒಡನಾಡಿ ಸೇವಾಸಂಸ್ಥೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಮೈಸೂರಿನ ನ್ಯಾಯಾಲಯದ ಬಳಿ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು, ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ಸಮಗ್ರ ತನಿಖೆಯಾಗಬೇಕು, ಕರ್ತವ್ಯ ಲೋಪವೆಸಗಿರುವ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಬೇಕು, ಸಂತ್ರಸ್ತ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: Murugha math: ಮುರುಘಾ ಶ್ರೀ ಜೈಲಿಗೆ ಹೋದ ಮೇಲೆ ಮಠದ ಕಾರ್ಯ ವೈಖರಿ ಹೇಗಿದೆ? ಸರ್ಕಾರಕ್ಕೆ 70 ಪುಟಗಳ ವರದಿ ಸಲ್ಲಿಸಿದ ಡಿಸಿ

ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾ ಶರಣರ ವಿರುದ್ಧ ಇಬ್ಬರು ಬಾಲಕಿಯರು ದೂರು ನೀಡಿದ್ದರು. ತನಿಖೆ ಭಾಗಶಃ ಪೂರ್ಣಗೊಂಡಿದ್ದು ಚಾರ್ಜ್​ಶೀಟ್​ ಸಲ್ಲಿಸಲಾಗಿದೆ ಎಂದು ಚಿತ್ರದುರ್ಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್​ ಹೇಳಿದ್ದರು. ಅಕ್ಟೋಬರ್​ 27ರಂದೇ ತನಿಖಾಧಿಕಾರಿ ಅನಿಲ್ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. 2ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಚಾರ್ಜ್​ಶೀಟ್​ನ ಸಿಸಿ ನಂಬರ್​ ಬರುವುದು ಬಾಕಿಯಿದೆ. ಈ ಮಧ್ಯೆ, ಎ1 ಡಾ. ಶಿವಮೂರ್ತಿ ಮುರುಘಾ ಶರಣರು, ಎ2 ವಾರ್ಡನ್​ ರಶ್ಮಿ ಮತ್ತು ಎ4 ಪರಮಶಿವಯ್ಯ ವಿರುದ್ಧ ಆರೋಪಗಳು ದೃಢಪಟ್ಟಿವೆ ಎಂದು ಚಿತ್ರದುರ್ಗ ಎಸ್​ಪಿ ಹೇಳಿದ್ದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Fri, 18 November 22

Web contact

TV9 Kannada

Read More
Follow Us