AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ಗೆ ಭಾರಿ ಶಾಕ್: ಶಾಸಕ ಸ್ಥಾನಕ್ಕೆ ಬೇಳೂರು, ಯಶವಂತರಾಯಗೌಡ ರಾಜೀನಾಮೆ ಘೋಷಣೆ

ಕರ್ನಾಟಕ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕರಲ್ಲಿ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. ಸಚಿವ ಸ್ಥಾನ ಕೈತಪ್ಪಿದ ಸಾಗರ ಕ್ಷೇತ್ರದ ಬೇಳೂರು ಗೋಪಾಲಕೃಷ್ಣ ಮತ್ತು ಇಂಡಿ ಕ್ಷೇತ್ರದ ಯಶವಂತರಾಯಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಬೆದರಿಕೆ ಹಾಕಿದ್ದಾರೆ. ಹಲವೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಆಡಳಿತಾರೂಢ ಸರ್ಕಾರಕ್ಕೆ ರಾಜಕೀಯ ಬಿಕ್ಕಟ್ಟು ಎದುರಾಗಿದೆ.

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ಗೆ ಭಾರಿ ಶಾಕ್: ಶಾಸಕ ಸ್ಥಾನಕ್ಕೆ ಬೇಳೂರು, ಯಶವಂತರಾಯಗೌಡ ರಾಜೀನಾಮೆ ಘೋಷಣೆ
ಶಾಸಕರ ರಾಜೀನಾಮೆ
ಅಕ್ಷಯ್​ ಪಲ್ಲಮಜಲು​​
|

Updated on: Aug 03, 2026 | 3:12 PM

Share

ಮುಖ್ಯಾಂಶಗಳು

  • ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರಗೊಂಡಿರುವ ಶಾಸಕರು
  • ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂಯಶವಂತರಾಯಗೌಡ ರಾಜೀನಾಮೆ ಘೋಷಣೆ
  • ಹಲವು ಕಡೆ ಶಾಸಕರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರತಿಭಟನೆ

ಬೆಂಗಳೂರು, ಆ. 3: ರಾಜ್ಯ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ ಶಾಸಕರ ವಲಯದಲ್ಲಿ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರಗೊಂಡಿರುವ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಟಿವಿ9ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಪ್ರಕಟಿಸಿದ್ದಾರೆ. ಇದರ ಜತೆಗೆ ಇನ್ನು ಹಲವು ಶಾಸಕರು ಅಸಮಾಧನ ಹೊರಹಾಕಿದ್ದಾರೆ. ಇದೀಗ ಹಲವು ಕಡೆ ಶಾಸಕರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರತಿಭಟನೆ ಕೂಡ ಶುರುವಾಗಿದೆ.

ಈ ಇಬ್ಬರೂ ಹಿರಿಯ ನಾಯಕರ ಬಂಡಾಯವು ಆಡಳಿತಾರೂಢ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತಮಗೆ ಉದ್ದೇಶಪೂರ್ವಕವಾಗಿ ಸಚಿವ ಸ್ಥಾನ ತಪ್ಪಿಸಲಾಗಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. “ನಾಳೆ (ಆಗಸ್ಟ್ 4) ಬೆಳಗ್ಗೆ 10 ಗಂಟೆಗೆ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನಗೆ ಸಾಕಷ್ಟು ನೋವಾಗಿದೆ. ಮೂರು ವರ್ಷ ಮಂತ್ರಿಯಾದವರಿಗೇ ಮತ್ತೆ ಅವಕಾಶ ಕೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಮಕ್ಕಳು ಮತ್ತು ಮಂತ್ರಿಗಳ ಮಕ್ಕಳೇ ಸಚಿವರಾಗಬೇಕಾ? ಹೊಸಬರಿಗೆ ಅವಕಾಶ ನೀಡುತ್ತೇವೆ ಅನ್ನುತ್ತಾರೆ, ಇದೇನಾ ಅವರು ಕೊಟ್ಟಿರುವ ಅವಕಾಶ? ನಾಳೆ ನನ್ನ ಜೊತೆ ಸೇರಿದಂತೆ ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ.” ಎಂದು ಹೇಳಿದ್ದಾರೆ.

“ಪ್ರಾಮಾಣಿಕರಿಗೆ ಕಾಲವಲ್ಲ, ಕೊಟ್ಟ ಮಾತು ತಪ್ಪಿದರು”: ಯಶವಂತರಾಯಗೌಡ ಪಾಟೀಲ್

ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ತಮಗೆ ಸಚಿವ ಸ್ಥಾನ ಕೈತಪ್ಪಿದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ಇಂದಿನ ದಿನಗಳಲ್ಲಿ ನಿಷ್ಠಾವಂತರಿಗೆ ಮತ್ತು ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ. ಈ ಬಾರಿ ಸಚಿವ ಸ್ಥಾನ ಸಿಗುವ ಪೂರ್ಣ ನಿರೀಕ್ಷೆ ಇತ್ತು ಹಾಗೂ ಪಕ್ಷದ ವರಿಷ್ಠರು ಕೂಡ ಭರವಸೆ ನೀಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಕೈಬಿಟ್ಟು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಇದರಿಂದ ಮನಸ್ಸಿಗೆ ಭಾರಿ ಬೇಸರವಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ಪೀಕರ್ ಭೇಟಿಗೆ ಸಮಯ ಕೇಳಿದ್ದೇನೆ. ಬೆಂಬಲಿಗರು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ.” ಎಂದು ಹೇಳಿದ್ದಾರೆ.

ಕೋಲಾರ ಜಿಲ್ಲೆಗೆ ನಿರಾಸೆ: ಬಂಗಾರಪೇಟೆ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತ್ಯೇಕ ಸಭೆ

ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ನಾಲ್ವರು ಶಾಸಕರಿದ್ದರೂ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಬಲಗೈ ಸಮುದಾಯದ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಒಕ್ಕಲಿಗ ಸಮುದಾಯದ ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರ ಹೆಸರುಗಳು ಸಚಿವ ಸ್ಥಾನದ ರೇಸ್‌ನಲ್ಲಿದ್ದರೂ ಕೊನೆ ಕ್ಷಣದಲ್ಲಿ ಕೈಬಿಡಲಾಗಿದೆ. ಮಧ್ಯಾಹ್ನ ಬಂಗಾರಪೇಟೆ ಶಾಸಕರ ಬೆಂಬಲಿಗರು ಭಾರಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಸಚಿವ ಸ್ಥಾನ ವಂಚಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರು ನಾಳೆ ಎಸ್.ಎನ್. ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿ ಮುಂದಿನ ರಾಜಕೀಯ ನಡೆ ತೀರ್ಮಾನಿಸಲಿದ್ದಾರೆ.

ಮೈಸೂರಿನಲ್ಲಿ ತನ್ವೀರ್ ಸೇಠ್ ಬೆಂಬಲಿಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಮೈಸೂರಿನ ಹಿರಿಯ ನಾಯಕ ತನ್ವೀರ್ ಸೇಠ್ ಅವರಿಗೆ ಸಂಪುಟದಲ್ಲಿ ಅವಕಾಶ ನೀಡದ್ದಕ್ಕೆ ಆಕ್ರೋಶಗೊಂಡ ಅವರ ಬೆಂಬಲಿಗ ತಬ್ರೇಜ್ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ತಬ್ರೇಜ್ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಪರಿಸ್ಥಿತಿ ಆತಂಕಕಾರಿಯಾಗಿದೆ.

ಇದನ್ನೂ ಓದಿ: ‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಸಚಿವ ಸ್ಥಾನ ಸಿಕ್ಕಿದ್ದಕ್ಕೆ ವರಿಷ್ಠರಿಗೆ ಧನ್ಯವಾದ ಹೇಳಿದ ಶಿವಲಿಂಗೇಗೌಡ

ರಾಯಚೂರು, ಕೊಪ್ಪಳ ಹಾಗೂ ಬೆಂಗಳೂರಿನಲ್ಲಿ ಆಕ್ರೋಶದ ಕಿಡಿ

ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಆಕ್ರೋಶಗೊಂಡ ಬೆಂಬಲಿಗರು ಬೆಂಗಳೂರಿನ ಶಾಸಕರ ಭವನದ ಬಳಿ ಪ್ರತಿಭಟನೆ ನಡೆಸಿದರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಬೆಂಬಲಿಗರು ನಗರದ ಅಶೋಕ್ ವೃತ್ತದಲ್ಲಿ ಧರಣಿ ನಡೆಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ವಿರುದ್ಧ ಘೋಷಣೆ ಕೂಗಿದರು. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಆನೇಕಲ್ ಶಾಸಕ ಬಿ. ಶಿವಣ್ಣ ಅವರು ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ