AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2ನೇ ಪೊಕ್ಸೊ ಪ್ರಕರಣ: ಜಿಲ್ಲಾ ನ್ಯಾಯಾಧೀಶರ ಎದುರು ಸಂತ್ರಸ್ತ ಬಾಲಕಿಯರ ಹೇಳಿಕೆ, ಜಾಮೀನು ವಿಚಾರಣೆ ಮುಂದೂಡಿಕೆ

ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮತ್ತು 7ನೇ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ.

2ನೇ ಪೊಕ್ಸೊ ಪ್ರಕರಣ: ಜಿಲ್ಲಾ ನ್ಯಾಯಾಧೀಶರ ಎದುರು ಸಂತ್ರಸ್ತ ಬಾಲಕಿಯರ ಹೇಳಿಕೆ, ಜಾಮೀನು ವಿಚಾರಣೆ ಮುಂದೂಡಿಕೆ
ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Oct 25, 2022 | 1:18 PM

Share

ಚಿತ್ರದುರ್ಗ: ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಜಿಲ್ಲಾ ನ್ಯಾಯಾಧೀಶರ ಎದುರು ಬಾಲಕಿಯರು ಸಿಆರ್​ಪಿಸಿ 164ರ (Code of Criminal Procedure – CRPC) ಅನ್ವಯ ಹೇಳಿಕೆ ದಾಖಲಿಸಿದರು. ಬಾಲಕಿಯರನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತಂದಿದ್ದರು.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮತ್ತು 7ನೇ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಮುರುಘಾ ಶರಣದ ಸಹಾಯಕ ಮಹಾಲಿಂಗ ಈ ಪ್ರಕರಣದ 6ನೇ ಆರೋಪಿಯಾಗಿದ್ದರೆ, ಬಾಣಸಿಗ ಕರಿಬಸಪ್ಪ 7ನೇ ಆರೋಪಿಯಾಗಿದ್ದಾರೆ. ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ಅ 28ಕ್ಕೆ ಮುಂದೂಡಿದೆ.

ಆರೋಪಿಗಳ ಪರವಾಗಿ ವಕೀಲ ಪ್ರತಾಪ್ ಜೋಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಸಂತ್ರಸ್ತ ಬಾಲಕಿಯರ ಪರ ವಕೀಲರು ಇದಕ್ಕೆ ತಕರಾರು ಅರ್ಜಿ ಸಲ್ಲಿಸಿದರು. ಸಂತ್ರಸ್ತರ ಸಮ್ಮುಖದಲ್ಲಿಯೇ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಈ ಕುರಿತು ಯಾವುದೇ ತೀರ್ಮಾನ ಪ್ರಕಟಿಸಿದ ನ್ಯಾಯಾಧೀಶರು, ಜಾಮೂನು ಅರ್ಜಿಯ ವಿಚಾರಣೆ ಮುಂದೂಡಿದರು.

ಸಿಆರ್​ಪಿಸಿ 164ರ ಅಡಿ ಹೇಳಿಕೆ ದಾಖಲಾದರೆ ಕಾನೂನಿನ ಕುಣಿಕೆ ಬಿದ್ದಂತೆಯೇ ಸರಿ

ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್​ಪಿಸಿ (Criminal Procedure Code – CrPC) ಸೆಕ್ಷನ್ 164ರ ಅನ್ವಯ ಸಂತ್ರಸ್ತ ಬಾಲಕಿಯರು ನೇರವಾಗಿ ನ್ಯಾಯಾಧೀಶರ ಎದುರೇ ತಮ್ಮ ಹೇಳಿಕೆ ದಾಖಲು ಮಾಡಿದ್ದಾರೆ. ಮುರುಘಾಶ್ರೀಗಳ ವಿರುದ್ಧದ ಆರೋಪ, ಮುಂದಿನ ಕಾನೂನು ಪ್ರಕ್ರಿಯೆ, ತನಿಖೆಯ ದಿಕ್ಕು, ವಿಚಾರಣೆ, ಶಿಕ್ಷೆಯ ಸಾಧ್ಯತೆ ಸೇರಿದಂತೆ ಪ್ರಕರಣವು ಮುಂದಿನ ದಿನಗಳಲ್ಲಿ ಪಡೆದುಕೊಳ್ಳಬಹುದಾದ ಬಹುತೇಕ ತಿರುವುಗಳನ್ನು ಸಂತ್ರಸ್ತ ಬಾಲಕಿಯರು ಸಿಆರ್​ಪಿಸಿ ಸೆಕ್ಷನ್ 164ರ ಅನ್ವಯ ನೀಡುವ ಹೇಳಿಕೆ ನಿರ್ಧರಿಸುತ್ತದೆ.

ಸಿಆರ್​ಸಿಪಿ ಸೆಕ್ಷನ್ 164ರ ಹೇಳಿಕೆಯ ವೈಶಿಷ್ಟ್ಯವೇನು?

ಕ್ರಿಮಿನಲ್ ಪ್ರಕರಣಗಳಲ್ಲಿ ಮೊದಲು ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸುವುದು ವಾಡಿಕೆ. ಪೊಲೀಸ್ ವಿಚಾರಣೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡರೂ ಅದನ್ನು ನ್ಯಾಯಾಲಯಗಳು ಅನುಮಾನಿಸುವುದೇ ಹೆಚ್ಚು. ಆರೋಪಿಗಳ ಹೇಳಿಕೆಗಳಿಗೆ ಪೊಲೀಸರೇ ಸಾಕ್ಷಿ ಒದಗಿಸಬೇಕಾಗುತ್ತದೆ. ದೂರು ಕೊಟ್ಟವರ ವಿಚಾರದಲ್ಲಿಯೂ ಅಷ್ಟೇ. ಪೊಲೀಸರು ದೂರು ಆಧರಿಸಿ ಎಫ್​ಐಆರ್ ದಾಖಲಿಸಿರುತ್ತಾರೆ. ಆದರೆ ನಂತರ ಅದಕ್ಕೆ ಪೂರಕ ಸಾಕ್ಷ್ಯಗಳನ್ನು ತನಿಖೆಯ ಮೂಲಕ ಒದಗಿಸಬೇಕಾಗುತ್ತದೆ. ಪೊಲೀಸ್ ವಿಚಾರಣೆ, ತನಿಖೆ, ನ್ಯಾಯಾಲಯದ ಕಲಾಪಗಳ ವೇಳೆ ದೂರು ಕೊಟ್ಟವರು ಅಥವಾ ತಪ್ಪೊಪ್ಪಿಕೊಂಡವರು ಉಲ್ಟಾ ಹೇಳಿಕೆಗಳನ್ನು ಕೊಡಬಹುದು. ಆಗ ಪ್ರಕರಣವೇ ಹಳ್ಳ ಹಿಡಿಯುತ್ತದೆ. ಆದರೆ ಸಿಆರ್​ಪಿಸಿ ಸೆಕ್ಷನ್ 164ರ ಅಡಿ ಹೇಳಿಕೆ ದಾಖಲಾದರೆ ಅದನ್ನು ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸುತ್ತವೆ. ಈ ಹೇಳಿಕೆಗಳನ್ನು ಬದಲಿಸುವುದಾಗಲೀ, ಹಿಂಪಡೆಯುವುದಾಗಲೀ ಅಷ್ಟು ಸುಲಭವಲ್ಲ. ಹೀಗಾಗಿಯೇ ಈ ಪ್ರಕ್ರಿಯೆಗೆ ಅಷ್ಟು ಪ್ರಾಮುಖ್ಯತೆ ಎನ್ನುತ್ತಾರೆ ತುಮಕೂರಿನಲ್ಲಿ ವಕೀಲರಾಗಿರುವ ಸಿ.ಕೆ.ಮಹೇಂದ್ರ.

ಏಕಿಷ್ಟು ಪ್ರಾಮುಖ್ಯತೆ?

ಸಿಆರ್​ಪಿಸಿಯ ಸೆಕ್ಷನ್ 164ರ ಅಡಿಯಲ್ಲಿ ಪಡೆಯುವ ಹೇಳಿಕೆಗಳನ್ನು ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರು ಗಂಭೀರವಾಗಿ ಪರಿಗಣಿಸುತ್ತಾರೆ. ಈ ಸೆಕ್ಷನ್ ಅಡಿ ಹೇಳಿಕೆ ನೀಡಲು ಇಚ್ಛಿಸುವವರನ್ನು ಪೊಲೀಸರು ಮೊದಲು ನ್ಯಾಯಾಧೀಶರ ಎದುರು ಹಾಜರುಪಡಿಸಬೇಕು. ಅವರು ಸ್ವಯಿಚ್ಛೆಯಿಂದ ಹೇಳಿಕೆ ಕೊಡುತ್ತಿದ್ದಾರೆ ಎನ್ನುವುದು ನ್ಯಾಯಾಧೀಶರಿಗೆ ಮನವರಿಕೆಯಾದ ನಂತರವೇ ಮುಂದಿನ ಪ್ರಕ್ರಿಯೆಗಳು ಆರಂಭವಾಗುತ್ತವೆ. ಹೇಳಿಕೆ ನೀಡುವವರನ್ನು ಬೇರೊಂದು ದಿನ ಕೋರ್ಟ್​ಗೆ ಬರುವಂತೆ ಸೂಚಿಸುತ್ತಾರೆ. ಅಂದು ಅವರ ಜೊತೆಗೆ ಪೊಲೀಸರು ಇರುವಂತಿಲ್ಲ. ಯಾವುದೇ ಒತ್ತಡ, ಬೆದರಿಕೆ, ಪ್ರಚೋದನೆ, ಪ್ರಲೋಭನೆಯಿಲ್ಲದೆ ತಾನು ಮುಕ್ತವಾಗಿ ಸಾಕ್ಷ್ಯ ನೀಡುತ್ತಿದ್ದೇನೆಂದು ಹೇಳಿಕೆ ನೀಡುವವರು ಪ್ರಮಾಣ ಮಾಡಬೇಕಾಗುತ್ತದೆ. ಹೇಳಿಕೆ ದಾಖಲಿಸುವಾಗ ನ್ಯಾಯಾಧೀಶರು ಮತ್ತು ಸ್ಟೆನೊಗ್ರಾಫರ್ ಬಿಟ್ಟು ಬೇರೆ ಯಾರೂ ಇರುವಂತಿಲ್ಲ.

ಬದಲಿಸಲು ಆಗುವುದಿಲ್ಲವೇ?

ಇದು ಸಂತ್ರಸ್ತರು ಅಥವಾ ಸಾಕ್ಷಿಗಳು ಸ್ವಂತ ಇಚ್ಛೆಯಿಂದ ನೀಡುವ ಹೇಳಿಕೆ. ಸೆಕ್ಷನ್ 164 ಸಿಆರ್​ಪಿಸಿ ಪ್ರಕಾರ ಹೇಳಿಕೆ ದಾಖಲಿಸುವ ನ್ಯಾಯಾಧೀಶರು ವಿಚಾರಣಾ ನ್ಯಾಯಾಧೀಶರೂ ಅಲ್ಲ. ಹೇಳಿಕೆ ನೀಡುವವರು ಮತ್ತು ಹೇಳಿಕೆ ದಾಖಲಿಸುವವರು ಯಾವುದೇ ಒತ್ತಡವಿಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಸೆಷನ್ಸ್ ನ್ಯಾಯಾಧೀಶರು ಹೇಳಿಕೆ ಪಡೆಯಲು ಅವಕಾಶ ಮಾಡಿಕೊಟ್ಟ ನಂತರವೂ ಹೇಳಿಕೆ ನ್ಯಾಯಾಧೀಶರು ಒತ್ತಡ ಮತ್ತು ಪ್ರಲೋಭನೆ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ನಂತರವೇ ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ಪಡೆಯುವ ಪ್ರಕ್ರಿಯೆ ಆರಂಭವಾಗುತ್ತೆ. ಬಹುತೇಕ ಸಂದರ್ಭದಲ್ಲಿ ‘ಇನ್ ಕ್ಯಾಮೆರಾ ಪ್ರೊಸೀಡಿಂಗ್ಸ್​’ ಆಗಿರುತ್ತದೆ. ದೂರುದಾರರು ಏನು ಹೇಳಿಕೆ ಕೊಟ್ಟಿದ್ದಾರೆ ಎನ್ನುವುದನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಆದರೆ ಒಮ್ಮೆ ಈ ಸೆಕ್ಷನ್ ಅಡಿಯಲ್ಲಿ ಹೇಳಿಕೆ ಕೊಟ್ಟ ನಂತರ ಬದಲಿಸುವುದು ಅಥವಾ ದೂರು ಹಿಂಪಡೆಯುವುದು ಕಷ್ಟ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ.