ಚಿತ್ರದುರ್ಗ: ಕಾಲೇಜು ಆವರಣದಲ್ಲೇ ಧರಣಿ ಕುಳಿತ ನರ್ಸಿಂಗ್ ವಿದ್ಯಾರ್ಥಿಗಳು: ಮೂಲ ಸೌಕರ್ಯ ಕಲ್ಪಿಸುವಂತೆ ಪಟ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 31, 2023 | 9:40 PM

ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ಕಾಲೇಜಿನಲ್ಲಿ ಸೂಕ್ತ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು ಇಂದು ಧರಣಿ ಮಾಡಿದ್ದಾರೆ. ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಒಂದೇ ಕಟ್ಟಡದಲ್ಲಿ ಇರುವುದು ಅನೇಕರಿಗೆ ಮುಜುಗರ ತರುತ್ತಿದೆ. ಅಲ್ಲದೆ ನರ್ಸಿಂಗ್​ ಕಾಲೇಜಿಗೆ ಸೂಕ್ತ ಕಟ್ಟಡ, ಕೊಠಡಿ, ಲ್ಯಾಬ್, ಶೌಚಾಲಯ ಮತ್ತು ವಾಹನ ವ್ಯವಸ್ಥೆಯೂ ಇಲ್ಲವಾಗಿದೆ.

ಚಿತ್ರದುರ್ಗ: ಕಾಲೇಜು ಆವರಣದಲ್ಲೇ ಧರಣಿ ಕುಳಿತ ನರ್ಸಿಂಗ್ ವಿದ್ಯಾರ್ಥಿಗಳು: ಮೂಲ ಸೌಕರ್ಯ ಕಲ್ಪಿಸುವಂತೆ ಪಟ್ಟು
ವಿದ್ಯಾರ್ಥಿಗಳಿಂದ ಧರಣಿ
Follow us on

ಚಿತ್ರದುರ್ಗ, ಆಗಸ್ಟ್​ 31: ಸೂಕ್ತ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು (Students) ಧರಣಿ ಮಾಡಿರುವಂತಹ ಘಟನೆ ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ಕಾಲೇಜು ಬಳಿ. ಹಳೇ ಕಟ್ಟಡದಲ್ಲಿ ಅನೇಕ ವರ್ಷಗಳಿಂದ ಎಎನ್ ಎಂ ಕಾಲೇಜು (ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ ಮತ್ತು ವಸತಿ ನಿಲಯ) ಮತ್ತು ವಸತಿ ನಿಲಯವಿದೆ. ಒಂದೂವರೆ ವರ್ಷದಿಂದ ಇದೇ ಕಟ್ಟಡಕ್ಕೆ ಸರ್ಕಾರಿ ನರ್ಸಿಂಗ್ ಕಾಲೇಜು ಮತ್ತು ವಸತಿ ನಿಲಯವೂ ಶಿಫ್ಟ್ ಮಾಡಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಜಿಲ್ಲಾಸ್ಪತ್ರೆ ಆವರಣದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದ್ದು ಕೆಲ ಕಟ್ಟಡಗಳ ತೆರವಿಗೆ ನಿರ್ಧರಿಸಲಾಗಿದೆ. ಹೀಗಾಗಿ, ಜಿಎನ್ ಎಂ ಕಾಲೇಜು ಮತ್ತು ವಸತಿ ನಿಲಯ ಸಹ ( ಜೆನರಲ್ ನರ್ಸಿಂಗ್ ಅಂಡ್ ಮಿಡ್ವೆಫರಿ) ಇದೇ ಕಟ್ಟಡಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಹೀಗಾಗಿ, ಇರುವ ಅಲ್ಪ ಕೋಣೆಗಳಲ್ಲೇ ನರ್ಸಿಂಗ್ ಕಾಲೇಜಿನ 150 ವಿದ್ಯಾರ್ಥಿಗಳು ಸೇರಿ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರಬೇಕಾದ ದುಸ್ಥಿತಿ ನಿರ್ಮಾಣ ಆಗಿದೆ.

ಇದನ್ನೂ ಓದಿ: ಸಿದ್ರಾಮಣ್ಣನೇ ನಮ್ ಬಂಧು ಬಳಗ ಎಂದು ಹಾಡಿ ಕುಣಿದ ಅಜ್ಜಿ, ವಿಡಿಯೋ ವೈರಲ್

ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಒಂದೇ ಕಟ್ಟಡದಲ್ಲಿ ಇರುವುದು ಅನೇಕರಿಗೆ ಮುಜುಗರ ತರುತ್ತಿದೆ. ಅಲ್ಲದೆ ನರ್ಸಿಂಗ್​ ಕಾಲೇಜಿಗೆ ಸೂಕ್ತ ಕಟ್ಟಡ, ಕೊಠಡಿ, ಲ್ಯಾಬ್, ಶೌಚಾಲಯ ಮತ್ತು ವಾಹನ ವ್ಯವಸ್ಥೆಯೂ ಇಲ್ಲವಾಗಿದೆ. ಈಗಾಗಲೇ ಅನೇಕ ಸಲ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾರೊಬ್ಬರು ಸಮಸ್ಯೆ ಬಗೆಹರಿಸಿಲ್ಲ. ಮೆಡಿಕಲ್ ವಿದ್ಯಾರ್ಥಿಗಳು ಮತ್ತು ನರ್ಸಿಂಗ್​ ವಿದ್ಯಾರ್ಥಿಗಳ ಬಗ್ಗೆ ಸರ್ಕಾರ ಭೇದ ಮಾಡುತ್ತಿದೆ. ಹೀಗಾಗಿ, ಅನಿರ್ಧಿಷ್ಠಾವಧಿ ತರಗತಿ ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದೇವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಧರಣಿ ವಿಷಯ ತಿಳಿದು ಉಪವಿಭಾಗಧಿಕಾರಿ ಕಾರ್ತಿಕ್, ಡಿಹೆಚ್ಓ ಡಾ.ರಂಗನಾಥ್, ಡಿಎಸ್ ಡಾ.ದೇವರಾಜ್​ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದರು. ಈ ವೇಳೆ ನರ್ಸಿಂಗ್ ಕಾಲೇಜು ಪ್ರಿನ್ಸಿಪಾಲ್​ ಅನಸೂಯಾ ಅವರನ್ನು ಕೇಳಿದರೆ ಕಳೆದ ಒಂದು ವರ್ಷದಿಂದಲೂ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಇಲ್ಲದಂತಾಗಿದೆ. ನಾವು ಸಹ ಅನೇಕ ಸಲ ಮೇಲಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದೇವೆ. ಈವರೆಗೆ ಯಾವುದೇ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕೇವಲ ಭರವಸೆ ನೀಡಿದ್ದಾರೆ ಎನ್ನುತ್ತಾರೆ.

ಇದನ್ನೂ ಓದಿ: ಚಿತ್ರದುರ್ಗ: ಲಾರಿ ಹರಿದು 20ಕ್ಕೂ ಹೆಚ್ಚು ಕುರಿಗಳ ದುರ್ಮರಣ; ಚಾಲಕ ಪರಾರಿ

ಕೋಟೆನಾಡು ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣಕ್ಕೇ ಜಿಲ್ಲಾಸ್ಪತ್ರೆಯ ಆವರಣದ ಸ್ಥಳ ಫಿಕ್ಸ್ ಆಗಿದೆ. ಆದರೆ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ ವಿವಿಧ ಕಟ್ಟಡಗಳ ತೆರವು ಮಾಡುವ ಸಂದರ್ಭ ಮತ್ತಷ್ಟು ಸಮಸ್ಯೆಗಳು ಉದ್ಭವಿಸುತ್ತಿವೆ. ಹೀಗಾಗಿ, ಮೆಡಿಕಲ್ ಕಾಲೇಜು ಕಟ್ಟಡ ನಗರದ ಹೊರವಲಯದಲ್ಲಿ ನಿರ್ಮಿಸುವುದೇ ಒಳಿತು ಎಂಬ ಕೂಗು ಜೋರಾಗಿದೆ.

ಸರ್ಕಾರ ಮತ್ತು ಜಿಲ್ಲಾಡಳಿತ ಯಾವ ನಿರ್ಧಾರ ಕೈಗೊಳ್ಳಲಿದೆ. ನರ್ಸಿಂಗ್ ಕಾಲೇಜು, ಎಎನ್ ಎಂ, ಜಿಎನ್ ಎಂ ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತ ಸೌಕರ್ಯ, ಗುಣಮಟ್ಟದ ಶಿಕ್ಷಣಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.