ಚಿತ್ರದುರ್ಗ: ಮುರುಘಾ ಮಠದಲ್ಲಿದ್ದ ಎಲ್ಲ 103 ಮಕ್ಕಳ ಆಪ್ತಸಮಾಲೋಚನೆಗೆ ಸೂಚನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 20, 2022 | 1:44 PM

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಆಗಸ್ಟ್​ 26 ರಂದು ಇಬ್ಬರು ಬಾಲಕಿಯರು ಹಾಗೂ ಅಕ್ಟೋಬರ್ 13 ರಂದು ನಾಲ್ವರು ಬಾಲಕಿಯರು ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ದೂರು ನೀಡಿದ್ದರು.

ಚಿತ್ರದುರ್ಗ: ಮುರುಘಾ ಮಠದಲ್ಲಿದ್ದ ಎಲ್ಲ 103 ಮಕ್ಕಳ ಆಪ್ತಸಮಾಲೋಚನೆಗೆ ಸೂಚನೆ
ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು
Follow us on

ಚಿತ್ರದುರ್ಗ: ಮುರುಘಾ ಮಠದ ಹಾಸ್ಟೆಲ್​ನಲ್ಲಿರುವ ಎಲ್ಲ ಮಕ್ಕಳ ಆಪ್ತಸಮಾಲೋಚನೆ (Conselling) ನಡೆಸುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಚಿತ್ರದುರ್ಗದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಸೂಚನೆ ನೀಡಿದೆ. ಕೌನ್ಸೆಲಿಂಗ್ ನಡೆಸಿ ನ 30ರ ಒಳಗೆ ವರದಿ ನೀಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಮಠದ ಹಾಸ್ಟೆಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 103 ವಿದ್ಯಾರ್ಥಿನಿಯರು ಆಶ್ರಯ ಪಡೆದಿದ್ದರು. ಪ್ರಕರಣ ಬೆಳಕಿಗೆ ಬಂದ ನಂತರ 49 ಜನ ವಿದ್ಯಾರ್ಥಿನಿಯರನ್ನು ಮಕ್ಕಳ ರಕ್ಷಣಾ ಘಟಕಗಳ ನೆರವಿನೊಂದಿಗೆ ಆಯಾ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದ್ದು, 54 ವಿದ್ಯಾರ್ಥಿನಿಯರನ್ನು ಪಾಲಕರೊಂದಿಗೆ ಕಳುಹಿಸಿಕೊಡಲಾಯಿತು. ಒಟ್ಟು 11 ಜಿಲ್ಲೆಗಳಲ್ಲಿ ಈ ಮಕ್ಕಳು ಇದ್ದಾರೆ.

ದೂರು ನೀಡಿದ ಮಕ್ಕಳಷ್ಟೇ ಅಲ್ಲದೆ, ಹಾಸ್ಟೆಲ್​ನಲ್ಲಿದ್ದ ಎಲ್ಲ ಮಕ್ಕಳನ್ನೂ ಮಾತನಾಡಿಸಬೇಕು. ಆಪ್ತ ಸಮಾಲೋಚನೆಯ ವೇಳೆ ಲೈಂಗಿಕ ದೌರ್ಜನ್ಯದ ಮಾಹಿತಿ ಸಿಕ್ಕರೆ ಹೇಳಿಕೆ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಆಗಸ್ಟ್​ 26 ರಂದು ಇಬ್ಬರು ಬಾಲಕಿಯರು ಹಾಗೂ ಅಕ್ಟೋಬರ್ 13 ರಂದು ನಾಲ್ವರು ಬಾಲಕಿಯರು ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ದೂರು ನೀಡಿದ್ದರು. ನಂತರದ ದಿನಗಳಲ್ಲಿ ತನಿಖಾಧಿಕಾರಿ ದೂರು ನೀಡಿದ ಮಕ್ಕಳು, ಪೋಷಕರು ಹಾಗೂ ಇತರ ಸಂಬಂಧಿಸಿದ ವ್ಯಕ್ತಿಗಳ ಹೇಳಿಕೆ ದಾಖಲಿಸಿದ್ದರು. ಮಕ್ಕಳ ದೂರಿನ ಆಧಾರದ ಮೇಲೆ ಶಿವಮೂರ್ತಿ ಶರಣರನ್ನು ಬಂಧಿಸಲಾಯಿತು.

2ನೇ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ

ಚಿತ್ರದುರ್ಗು ಮುರುಘಾ ಮಠದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ 2ನೇ ದೂರಿನ ಇಬ್ಬರು ಆರೋಪಿಗಳ ನಿರಿಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು 25ಕ್ಕೆ ಮುಂದೂಡಿದೆ. ಆರೋಪಿಗಳಾದ ಮಹಾಲಿಂಗ ಮತ್ತು ಕರಿಬಸಪ್ಪ ಅವರು ನಿರೀಕ್ಷಣಾ ಜಾಮೀನು ಕೋರಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಆರಂಭಿಸಿದ ನ್ಯಾಯಾಧೀಶರು ಸಂತ್ರಸ್ತರ ಹೇಳಿಕೆ ದಾಖಲು ಮಾಡಲು ಸೂಚಿಸಿ, ವಿಚಾರಣೆಯನ್ನು ಮುಂದೂಡಿದರು.

ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಬಾಲ ನ್ಯಾಯ ಕಾಯ್ದೆಯಡಿ ದಾಖಲಾದ ಪ್ರಕರಣದ ತನಿಖೆಯನ್ನು ಆರಂಭಿಸಿದ್ದು ಬುಧವಾರ (ಅ 9) ಸ್ಥಳ ಮಹಜರು ಮಾಡಿದ್ದಾರೆ. ಪಿಎಸ್‌ಐ ಡಿ.ಶಿವಕುಮಾರ್‌ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ. ಪೊಲೀಸರ ತಂಡ ಮುರುಘಾ ಮಠಕ್ಕೆ ಭೇಟಿ ನೀಡಿ, ನಾಲ್ಕೂವರೆ ವರ್ಷದ ಹೆಣ್ಣು ಮಗು ಇದ್ದ ಮಡಿಲು ದತ್ತು ಮಕ್ಕಳ ಕೇಂದ್ರ ಹಾಗೂ 17 ವರ್ಷದ ಬಾಲಕಿ ವಾಸ್ತವ್ಯ ಹೂಡಿದ್ದ ಹಾಸ್ಟೆಲ್‌ನ ಮಹಜರು ಪ್ರಕ್ರಿಯೆ ನಡೆಸಿತು.

Published On - 1:42 pm, Thu, 20 October 22