Chitradurga News: ಕಾದಂಬರಿಕಾರ ಬಿಎಲ್ ವೇಣುಗೆ ಮತ್ತೆ ಜೀವ ಬೆದರಿಕೆ ಪತ್ರ; ಇದು 11ನೇ ಪತ್ರ ಎಂದ ಸಾಹಿತಿ

ಕಳೆದ ಒಂದು ವರ್ಷದಿಂದ ಇಂತಹ ಪತ್ರಗಳು ಬರುತ್ತಿವೆ. ಇದು 11 ನೇ ಪತ್ರ ಎಂದು ವೇಣು ಅವರು ತಿಳಿಸಿದ್ದಾರೆ.

Chitradurga News: ಕಾದಂಬರಿಕಾರ ಬಿಎಲ್ ವೇಣುಗೆ ಮತ್ತೆ ಜೀವ ಬೆದರಿಕೆ ಪತ್ರ; ಇದು 11ನೇ ಪತ್ರ ಎಂದ ಸಾಹಿತಿ
ಬಿಎಲ್ ವೇಣು

Updated on: Jun 08, 2023 | 5:36 PM

ಚಿತ್ರದುರ್ಗ: ಕಾದಂಬರಿಕಾರ ಕುಂ.ವೀರಭದ್ರಪ್ಪ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಪತ್ರ ಬಂದ ಒಂದು ವಾರದ ನಂತರ, ಕಾದಂಬರಿಕಾರ ಬಿಎಲ್ ವೇಣು (BL Venu) ಅವರ ಚಿತ್ರದುರ್ಗದ ನಿವಾಸಕ್ಕೆ ಅಂತಹದ್ದೇ ಪತ್ರ ಬಂದಿದೆ. ಕಳೆದ ಒಂದು ವರ್ಷದಿಂದ ಇಂತಹ ಪತ್ರಗಳು ಬರುತ್ತಿವೆ. ಇದು 11 ನೇ ಪತ್ರ ಎಂದು ವೇಣು ಅವರು ತಿಳಿಸಿದ್ದಾರೆ. ಎಲ್ಲಾ ಪತ್ರಗಳಲ್ಲಿ ಕೈಬರಹ ಒಂದೇ ಆಗಿರುತ್ತದೆ. ಪೊಲೀಸರ ಸಲಹೆಯಂತೆ ನಾನು ಪತ್ರವನ್ನು ಅವರಿಗೆ ಒಪ್ಪಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಆರಂಭದಲ್ಲಿ, ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಗುಪ್ತಚರ ಇಲಾಖೆ ಅವರಿಗೆ ಬೆದರಿಕೆ ಪತ್ರದ ಕುರಿತು ಎಚ್ಚರಿಕೆ ನೀಡಿದ ನಂತರ ಪೊಲೀಸರು ನಮ್ಮ ಮನೆಗೆ ಭೇಟಿ ನೀಡಿದ್ದಾರೆ. ಈಗ ಪೊಲೀಸರು ಅಂತಹ ಪತ್ರಗಳ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದಾರೆ ಮತ್ತು ನಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಅವರು ಗನ್‌ಮ್ಯಾನ್ ಹೊಂದಲು ಸೂಚಿಸಿದ್ದರೂ, ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ ಎಂದು ನಾನು ಅದನ್ನು ನಿರಾಕರಿಸಿದೆ ಎಂದು ವೇಣು ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೂ ಕಿಡಿಗೇಡಿಗಳು ಇಂತಹ ಪತ್ರ ಬರೆಯುವ ಧೈರ್ಯ ಹೇಗೆ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಹಿಂದೂ ಧರ್ಮದ ರಕ್ಷಕರೆಂದು ಹೇಳಿಕೊಂಡು ಕೆಲವರು ಇಂತಹ ಪತ್ರಗಳನ್ನು ಬರೆಯುತ್ತಾರೆ ಎಂದು ನಾವು ಈ ಹಿಂದೆ ಭಾವಿಸಿದ್ದೆವು. ಎರಡೂ ಒಂದೇ ರೀತಿಯ ಸಿದ್ಧಾಂತಗಳನ್ನು ಹೊಂದಿವೆ. ಆದರೆ, ಬಿಜೆಪಿಯೇತರ ಸರ್ಕಾರ ಇದ್ದಾಗಲೂ ಬರಹಗಾರರು, ಕಲಾವಿದರು ಮತ್ತು ಹೋರಾಟಗಾರರಿಗೆ ಇಂತಹ ಪತ್ರಗಳು ಹೆಚ್ಚಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಾಹಿತಿ ಬಿ.ಎಲ್.ವೇಣುಗೆ ಸಹಿಷ್ಣು ಹಿಂದೂ ಹೆಸರಿನಲ್ಲಿ ಎಚ್ಚರಿಕೆ ಪತ್ರ

ಕುಂ ವೀರಭದ್ರಪ್ಪ ಮತ್ತಿತರರಿಗೆ ಬರೆದ ಪತ್ರಗಳಲ್ಲಿ ಹಲವು ಸಾಮ್ಯತೆಗಳಿವೆ. ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಸ ಎಂದೂ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಪರವಾಗಿದೆ ಎಂದೂ ಉಲ್ಲೇಖಿಸಲಾಗಿದೆ. ಮಧ್ಯ ಕರ್ನಾಟಕ ಮತ್ತು ಮಲೆನಾಡಿನ ರಾಣಿಬೆನ್ನೂರು, ತರೀಕೆರೆ, ದಾವಣಗೆರೆ ಮತ್ತಿತರ ಕಡೆಗಳಿಂದ ಈ ಪತ್ರಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ವೇಣು ಅವರಿಗೆ ಇತ್ತೀಚೆಗೆ ಬಂದ ಬೆದರಿಕೆ ಪತ್ರವು ವೀರ ಸಾವರ್ಕರ್ ಅವರ ಬಗ್ಗೆ ನೀಡಿದ್ದ ಹೇಳಿಕೆಗಾಗಿ ಕ್ಷಮೆಯಾಚಿಸಲು ಒತ್ತಾಯಿಸಿದ್ದಾಗಿದೆ.

ಇದನ್ನೂ ಓದಿ: Chamarajanagar News: ಪಠ್ಯಪುಸ್ತಕ ಮರು ಪರಿಷ್ಕರಣೆಗೆ ಸಾಹಿತಿ ಕುಂ. ವೀರಭದ್ರಪ್ಪ ಬೆಂಬಲ

ನಾನು ಸಾವರ್ಕರ್ ಬಗ್ಗೆ ಯಾವಾಗ ಇಂತಹ ಟೀಕೆ ಮಾಡಿದ್ದೇನೆ ಎಂಬುದೇ ನನಗೆ ನೆನಪಿಲ್ಲ. ನಾನು ಸಾವರ್ಕರ್ ಯಾರು ಎಂದು ಕೇಳಿದ್ದೇನೆ ಎಂಬುದು ನನಗೆ ನೆನಪಿದೆ. ನನ್ನ ಕೋಪಕ್ಕೆ ಆಗ ಚಕ್ರವರ್ತಿ ಸೂಲಿಬೆಲೆಯವರ ಸುಳ್ಳು ಭಾಷಣಗಳು ಕಾರಣವಾಗಿದ್ದವು ಅಷ್ಟೆ. ಆದರೆ ಉತ್ತರ ನೀಡುವಂತೆ ಕಿಡಿಗೇಡಿಗಳು ತಮ್ಮ ಪತ್ರದಲ್ಲಿ ಸವಾಲು ಹಾಕಿದ್ದಾರೆ. ಈ ವಿಚಾರದಲ್ಲಿ ನನಗೆ ಧೈರ್ಯವಿದೆ. ಆದರೆ, ತನ್ನ ಗುರುತು ಮತ್ತು ವಿಳಾಸವನ್ನು ಹಂಚಿಕೊಳ್ಳದೆ ಪತ್ರ ಬರೆಯಲು ಅವನಿಗೆ ಯಾವ ರೀತಿಯ ಧೈರ್ಯವಿದೆ ಎಂದು ವೇಣು ಪ್ರಶ್ನಿಸಿದ್ದಾರೆ.

ಈ ಕುರಿತು ಚಿತ್ರದುರ್ಗ ಎಸ್ಪಿ ಕೆ ಪರಶುರಾಮ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ ಎಂದೂ ವರದಿ ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:35 pm, Thu, 8 June 23

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us