ತಾಕತ್ತಿದ್ದರೆ ಪರೇಶ್ ಮೆಸ್ತಾ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರನ್ನು ಬಂಧಿಸಿ: ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ ಖರ್ಗೆ ವಾಗ್ದಾಳಿ

'ಪಿಎಫ್ಐ ಭಾಗ್ಯ' ಪೋಸ್ಟರ್ ಅಂಟಿಸಿದವರ ಬಂಧನ ಬೇಡ. ಪರೇಶ್ ಮೆಸ್ತಾ ಕೇಸ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರನ್ನು ಬಂಧಿಸಿ ಎಂದು ಬಿಜೆಪಿ ವಿರುದ್ಧ ಪ್ರಿಯಾಂಕ ಖರ್ಗೆ ವಾಗ್ದಾಳಿ

ತಾಕತ್ತಿದ್ದರೆ ಪರೇಶ್ ಮೆಸ್ತಾ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರನ್ನು ಬಂಧಿಸಿ: ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ ಖರ್ಗೆ ವಾಗ್ದಾಳಿ
ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ
Edited By:

Updated on: Oct 11, 2022 | 6:29 PM

ಚಿತ್ರದುರ್ಗ: ಪೇಸಿಎಂ (PayCM) ಪೋಸ್ಟರ್ ಅಂಟಿಸಿದ ಕೈ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ತನಿಖೆಗೆ ನೀಡಿದ್ದಾರೆ. ‘ಪಿಎಫ್ಐ ಭಾಗ್ಯ’ (PFI Poster) ಪೋಸ್ಟರ್ ಅಂಟಿಸಿದವರ ಬಂಧನ ಬೇಡ. ಪರೇಶ್ ಮೆಸ್ತಾ ಕೇಸ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರನ್ನು ಬಂಧಿಸಿ ಎಂದು ಬಿಜೆಪಿ ವಿರುದ್ಧ ಚಿತ್ರದುರ್ಗದಲ್ಲಿ ಕಾಂಗ್ರೆಸ್​ ಶಾಸಕ ಪ್ರಿಯಾಂಕ ಖರ್ಗೆ (Priyank Kharge) ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್​ನ​ ‘ಪೇಸಿಎಂ’ ಅಭಿಯಾನಕ್ಕೆ ತಿರುಗೇಟು ನೀಡಲು ಚಿತ್ರದುರ್ಗ ಬಿಜೆಪಿ ಯುವ ಕಾರ್ಯಕರ್ತರು ಪಿಎಫ್ಐ ಭಾಗ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿದ ಕುರಿತು ಮಾತನಾಡಿದ ಅವರು ಬಿಜೆಪಿ ಅದ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗ್ಡೆ ಮೇಲೆ‌ ಕೇಸ್ ಹಾಕಿ ಬಂಧಿಸಿ. ತಾಕತ್ತು, ಧಮ್ಮು, ಧೈರ್ಯ ಇದ್ದರೆ ಬಂಧಿಸಿ ತೋರಿಸಿ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಹಿನ್ನೆಲೆ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ತಂತ್ರ ರೂಪಿಸಿದೆ. ಭ್ರಷ್ಟಾಚಾರ ಕೇಸಲ್ಲಿ ಬಂಧಿತ ಐಪಿಎಸ್ ಅಧಿಕಾರಿ ನ್ಯಾಯಾಂಗ ತನಿಖೆಗೆ ಕೇಳಿದ್ದಾರೆ. ಎಲ್ಲವನ್ನೂ ಜಡ್ಜ್ ಎದುರು ಹೇಳುವುದಾಗಿ ಹೇಳಿದ್ದಾರೆ. ಆದರೆ, ಸರ್ಕಾರ ನ್ಯಾಯಾಂಗ ತನಿಖೆಗೆ ನೀಡಿಲ್ಲ ಎಂದರು.

ಪಿಎಫ್​ಆಯ್​ ಪೋಸ್ಟರ್ ಬಿಡುಗಡೆ ಬಿಜೆಪಿಯ ದಿವಾಳಿತನ ತೋರುತ್ತೆ: ಬಿಕೆ ಹರಿಪ್ರಸಾದ

ಪಿಎಫ್​ಆಯ್​ ಪೋಸ್ಟರ್ ಬಿಡುಗಡೆ ಬಿಜೆಪಿಯ ದಿವಾಳಿತನ ತೋರುತ್ತೆ. ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ ಗರಂ ಆಗಿದ್ದಾರೆ.

ಗೃಹ ಸಚಿವರು ಈಗಾಗಲೇ ಜೈಲಿಗೆ ಹೋಗಲು ಸಿದ್ಧವಾಗಿದ್ದಾರೆ. ಪರಪ್ಪನ ಅಗ್ರಹಾರ ಚೆನ್ನಾಗಿ ನೋಡಿಕೊಂಡು ಬಂದಿದ್ದಾರೆ. 6 ತಿಂಗಳ ಬಳಿಕ ಸಚಿವ ಆರಗ ಜ್ಞಾನೇಂದ್ರ ಜೈಲಿಗೆ ಹೋಗುತ್ತಾರೆ. PSI ಹಗರಣ, ಸಂತೋಷ್​ ಆತ್ಮಹತ್ಯೆ ಕೇಸ್​ನಲ್ಲಿ ಜೈಲುಪಾಲಾಗುತ್ತಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಬಿ ರಿಪೋರ್ಟ್ ಮಾಡಿದ್ದಾರೆ ಎಂದು ಹೇಳಿದರು.

ಇದೇನು ಬನಾನಾ ರಿಪಬ್ಲಿಕ್ ಅಲ್ಲ, ಸ್ವತಂತ್ರ ದೇಶ ಭಾರತ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಕಾಂಗ್ರೆಸ್ ಆಡಳಿತದಲ್ಲಿ ತಪ್ಪಾಗಿದ್ದರೆ ತನಿಖೆ ನಡೆಸಲಿ. ರಾಷ್ಟ್ರದ್ರೋಹ, ಅಸಂವಿಧಾನಿಕ ಕೆಲಸ ಮಾಡಿದ್ದರೆ ಹೇಳಲಿ. ಪಿಎಫ್ಐ ಪೋಸ್ಟರ್ ಬಿಡುಗಡೆ ಹೇಡಿಗಳ ಕೆಲಸ. ಬ್ರಿಟಿಷರ ಕಾಲದಲ್ಲಿ ಅವರ ಗೂಢಾಚಾರರಾಗಿದ್ದವರು ಇವರು. ಮಹಿಳಾ ಸುರಕ್ಷತೆ ಇಲ್ಲ, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪರಿಹಾರದ ಬದಲು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.‘

ಮುಂದೆ ಪೇಪಿಎಂ, ಪೇಅದಾನಿ, ಪೇಅಂಬಾನಿ ಬರಲಿದೆ. ಬಿಜೆಪಿ ಸರ್ಕಾರ ದೇಶ ಮಾರಿ ಲೂಟಿ ಹೊಡೆಯುತ್ತಿದೆ. ಬಿಜೆಪಿ ನಾಯಕರು ಲೀಲೆಗಳನ್ನು ಮಾಡುತ್ತಿದ್ದರು. ಮತ್ತೆ ಲೀಲೆಗಳು ಬಯಲಾಗುವ ಭಯದಿಂದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕರ್ತರು ಪಿಎಫ್ಐ ಪೋಸ್ಟರ್ ಬಿಡುಗಡೆ ಮಾಡಿದ ಹಿನ್ನೆಲೆ ಚಳ್ಳಕೆರೆ ಠಾಣೆಯಲ್ಲಿ ಐವರ ವಿರುದ್ಧ ದೂರು ದಾಖಲಾಗಿದೆ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದರ್ಶನ್ ಕಾಟಪ್ಪನಹಟ್ಟಿಯ ತಿಪ್ಪೇಶಿ, ಈಶ್ವರ ನಾಯಕ್, ಪಾಲನೇತ್ರ ನಾಯಕ್, ರಾಜು, ಮನೋಜ ನಾಯಕ್ ವಿರುದ್ಧ ದೂರು ನೀಡಿದ್ದಾರೆ.
ಭಾರತ ಜೋಡೋ ಯಾತ್ರೆಗೆ ಆಗಮಿಸುವ ವೇಳೆ ಕಾಂಗ್ರೆಸ್ ನಾಯಕರ ಬಗ್ಗೆ ಅಪಪ್ರಚಾರ ಮಾಡಿದ್ದಾರೆಂದು ಆರೋಪದ ಮೇಲೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಕಲಂ 143, 505ಬಿ, 149 ಅಡಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Tue, 11 October 22

Follow Us