AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಆಕ್ರೋಶಕ್ಕೆ ಸಿಎಂ ಬೊಮ್ಮಾಯಿ – ಸಿಟಿ ರವಿ ಏನಂದರು?

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಅವರು ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ಸಹ ಪ್ರತಿಕ್ರಿಯೆ ನೀಡಿದ್ದು, ತಮ್ಮ ಸ್ವಅನುಭವವನ್ನು ಉದಾಹರಣೆಯಾಗಿ ಉಲ್ಲೇಖಿಸಿ, ಪ್ರತಿಕ್ರಿಯಿಸಿದ್ದಾರೆ. ಕಲ್ಲು ಹೊಡೆಯುವ ಬಗ್ಗೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿಕೆ ವಿಚಾರದಲ್ಲಿ ಅನುಭವ ಅನ್ನೋದು ಅನುಭವದಿಂದಲೇ‌ ಬರುವ ಸಂಗತಿ. ನಾನು 30 ವರ್ಷದ ಹಿಂದೆ ಎಗರಾಡುತ್ತಿದ್ದ ರೀತಿ ಈಗ ಇಲ್ಲ. ಜೀವನದ ಅನುಭವಗಳು ನಮ್ಮನ್ನು ಪಕ್ವತೆಯ ಕಡೆಗೆ ತೆಗೆದುಕೊಂಡು ಹೋಗುತ್ತವೆ ಎಂದಿದ್ದಾರೆ.

ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಆಕ್ರೋಶಕ್ಕೆ ಸಿಎಂ ಬೊಮ್ಮಾಯಿ - ಸಿಟಿ ರವಿ ಏನಂದರು?
ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಆಕ್ರೋಶಕ್ಕೆ ಸಿಎಂ ಬೊಮ್ಮಾಯಿ - ಸಿಟಿ ರವಿ ಏನಂದರು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 01, 2022 | 8:41 PM

ಕೊಪ್ಪಳ: ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ (Praveen Nettar) ಭೀಕರ ಹತ್ಯೆಯಿಂದ ರಾಜ್ಯ ಬಿಜೆಪಿಯ ಯುವ ಘಟಕ ಕೊತಕೊತನೆ ಕುದಿಯುತ್ತಿದೆ. ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಸಹ ರಾಜ್ಯ ಬಿಜೆಪಿ ಹಿರಿಯ ನಾಯಕರು ಮತ್ತು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ, ಆಕ್ರೋಶ ಹೊರಹಾಕಿದ್ದಾರೆ. ಹಿಂದೂ ಯುವಕರ ಹತ್ಯೆ ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜೊತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ನಿರ್ವೀರ್ಯವಾಗಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದರು. ಇದರಿಂದ ಬಿಜೆಪಿ ಹಿರಿಯ ನಾಯಕರಲ್ಲಿ ಒಂದು ಮಟ್ಟಿನ ತಲ್ಲಣ ಉಂಟಾಗಿದೆ. ಇದರ ಕುರಿತು ಆಯಕಟ್ಟಿನ ಜಾಗಗಳಲ್ಲಿರುವ ಹಿರಿಯ ನಾಯಕರು ಕಿರಿಯ ಕಾರ್ಯತಕರ್ತರನ್ನು ಸಮಾಧಾನಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ಕೊಪ್ಪಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಕ್ರವರ್ತಿ ಸೂಲಿಬೆಲೆ ವಿಚಾರವಾಗಿ ಪತ್ರಕರ್ತರು ಪ್ರಶ್ನೆ ಕೇಳಿದ್ದಕ್ಕೆ ಸಿಎಂ ಗರಂ ಆಗಿದ್ದಾರೆ. ತಡೀರಿ ಒಂದು ನಿಮಿಷ ತಡೀರಿ ಎಂದು ಗರಂ ಆದ ಸಿಎಂ ಬೊಮ್ಮಾಯಿ, ಸೂಲಿಬೆಲೆ ನಮ್ಮ ಆತ್ಮೀಯರು. ಹಿಂದೂತ್ವದ ಪರ ದೊಡ್ಡ ಧ್ವನಿ ಎತ್ತಿದವರು. ಹಿಂದೂಗಳ ಕೊಲೆಯಾದಾಗ ಸಹಜವಾಗಿ ನೋವಾಗಿದೆ. ತನಿಖೆಯ ಪ್ರಗತಿ ಅವರಿಗೆ ತಿಳಿಸ್ತೀನಿ ಎಂದು ಸಮಾಧಾನದ ಮಾತನ್ನಾಡಿದ್ದಾರೆ.

ಇನ್ನು, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಅವರೂ ಸಹ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮೂಲಕ ಟೀಕೆ ವಿಚಾರ ಪ್ರಸ್ತಾಪಿಸಿದ್ದಾರೆ. ಸೂಲಿಬೆಲೆ ವೈಚಾರಿಕವಾಗಿ ಅಪ್ಪಟ ರಾಷ್ಟ್ರವಾದಿ. ವ್ಯತಿರಿಕ್ತವಾಗಿ ಟ್ವೀಟ್ ಮಾಡಿದ್ದರೂ ಅವರ ಜೊತೆ ವೈಯಕ್ತಿಕವಾಗಿ ಮಾತಾಡುತ್ತೇವೆ. ಸಿಟ್ಟು ಹತ್ತಾರು ಕಾರಣಕ್ಕೆ ಬಂದಿರುತ್ತದೆ, ಸಮಾಧಾನಪಡಿಸುವ ಕೆಲಸ ಮಾಡುತ್ತೇವೆ. ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ವ್ಯಕ್ತಿಗತವಾಗಿ, ಗುಂಪಿನಲ್ಲಿ ಕುಳಿತು ಮಾತಾಡಿಸಬೇಕಾದ ಸನ್ನಿವೇಶ ಇರುತ್ತದೆ. ನಾಲಿಗೆಯೂ ನಮ್ಮದೇ, ದವಡೆಯೂ ನಮ್ಮದೇ. ದವಡೆ ನಾಲಿಗೆಯನ್ನು ಕಚ್ಚಿತು ಅಂತಾ ದವಡೆ ಉದುರಿಸಿಕೊಳ್ಳುವ ಕೆಲಸ ಮಾಡಲ್ಲ. ಅವರೆಲ್ಲರೂ ನಮ್ಮ ಹಿತೈಷಿಗಳೇ, ದೂರ ಇರಿಸುವ ಕೆಲಸ ಮಾಡಲ್ಲ ಎಂದು ಸಮಾಧಾನಕರ ಮಾತನ್ನಾಡಿದ್ದಾರೆ.

ಇನ್ನು ಕಾರ್ಯಕರ್ತರ ಬಗ್ಗೆ ಹಿರಿಯ ನಾಯಕರಾದ ಈಶ್ವರಪ್ಪ ಮತ್ತು ಸಿದ್ದೇಶ್ವರ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಟಿ ರವಿ ನಾನು ಅವರ ಅಭಿಪ್ರಾಯ ಒಪ್ಪುವುದಿಲ್ಲ. ಪ್ರತೀ ಕಾರ್ಯಕರ್ತ ನಮ್ಮ ಆಸ್ತಿ. ಸಾವಿರಾರು ಕಾರ್ಯಕರ್ತರು ಮೆಟ್ಟಿಲಾಗಿ ನಾಯಕನನ್ನು ಮೇಲಕ್ಕೆ ಹತ್ತಿಸಿರುತ್ತಾರೆ. ನಮ್ಮ ಕಾರ್ಯಕರ್ತರನ್ನು ಕಳೆದುಕೊಳ್ಳಲು ಇಷ್ಟಪಡಲ್ಲ. ಪ್ರಶ್ನಿಸಲಾರದ ಪಕ್ಷ ನಮ್ಮದಲ್ಲ. ಸೂಕ್ತ ವೇದಿಕೆಗಳಲ್ಲಿ ಪ್ರಶ್ನಿಸಬೇಕಿತ್ತು ಅಂತಾ ಅಷ್ಟೇ. ಪ್ರಶ್ನಿಸುವುದೇ ಅಪರಾಧ ಎಂದು ಭಾವಿಸುವ ನಿರಂಕುಶ ಪ್ರಭುತ್ವದ ಪಕ್ಷ ನಮ್ಮದಲ್ಲ. ಸರ್ಕಾರದ ಕಡೆಯಿಂದಲೂ ತಪ್ಪಿದ್ದರೆ ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ. ನಮ್ಮ ತಪ್ಪಿನಿಂದಾಗಿ ಯಾರೂ ದೂರ ಹೋಗಬಾರದು. ದುರುದ್ದೇಶಪೂರ್ವಕ ಹೇಳಿಕೆ ನೀಡಿದರೆ ಪಕ್ಷದ ವೇದಿಕೆಯಲ್ಲಿ ಕ್ರಮ‌ ಆಗುತ್ತದೆ. ನಮ್ಮ‌ಹೋರಾಟ ಇರಬೇಕಿರುವುದು ಸೈದ್ದಾಂತಿಕ ವಿರೋಧಿಗಳ ವಿರುದ್ಧ, ನಮ್ಮವರ ವಿರುದ್ಧವೇ ಅಲ್ಲ ಎಂದು ಸ್ಪಷ್ಟೋಕ್ತಿಯಲ್ಲಿ ಹೇಳಿದ್ದಾರೆ.

ಇದೇ ವೇಳೆ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಅವರು ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ಸಹ ಪ್ರತಿಕ್ರಿಯೆ ನೀಡಿದ್ದು, ತಮ್ಮ ಸ್ವಅನುಭವವನ್ನು ಉದಾಹರಣೆಯಾಗಿ ಉಲ್ಲೇಖಿಸಿ, ಪ್ರತಿಕ್ರಿಯಿಸಿದ್ದಾರೆ. ಕಲ್ಲು ಹೊಡೆಯುವ ಬಗ್ಗೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿಕೆ ವಿಚಾರದಲ್ಲಿ ಅನುಭವ ಅನ್ನೋದು ಅನುಭವದಿಂದಲೇ‌ ಬರುವ ಸಂಗತಿ. ನಾನು 30 ವರ್ಷದ ಹಿಂದೆ ಎಗರಾಡುತ್ತಿದ್ದ ರೀತಿ ಈಗ ಇಲ್ಲ. ಜೀವನದ ಅನುಭವಗಳು ನಮ್ಮನ್ನು ಪಕ್ವತೆಯ ಕಡೆಗೆ ತೆಗೆದುಕೊಂಡು ಹೋಗುತ್ತವೆ. ಅವರವರ ಅನುಭವದ ಮಟ್ಟದಲ್ಲಿ ಅವರು ಮನವೊಲಿಸಲು ಪ್ರಯತ್ನ ಮಾಡಿರುತ್ತಾರೆ. ತೇಜಸ್ವಿ ಸೂರ್ಯ ಮನವೊಲಿಸಲು ಪ್ರಯತ್ನಿಸಿದ್ದೇ ಹೊರತು ದುರುದ್ದೇಶ ಇಲ್ಲ. ಕೆಲವು ಎಲ್ಲವೂ ನಮ್ಮ ಕೈಯಲ್ಲಿ ಇರಲ್ಲ. ಕೆಲವು ಬಾರಿ ನಾವೊಂದು ಬಗೆದರೆ ದೈವವೊಂದು ಬಗೆಯುತ್ತದೆ. ನಮ್ಮ ಸರ್ಕಾರಕ್ಕೆ ಮೂರು ವರ್ಷ, ಬಸವರಾಜ ಬೊಮ್ಮಾಯಿ‌ ಸರ್ಕಾರಕ್ಕೆ ಒಂದು ವರ್ಷ. ಕೆಲವು ಕಾರ್ಯಕರ್ತರು ಸಿಟ್ಟಾಗಿದ್ದಾರೆ. ಅವರನ್ನು ಯಾವ ರೀತಿ ಸಮಾಧಾನಿಸಬೇಕು ಅಂತಾನೂ ಗೊತ್ತಿದೆ ಎಂದು ಹೇಳಿದರು.

Published On - 3:42 pm, Mon, 1 August 22