ಇಂದಿನಿಂದ ಮಾಸ್ಕ್​ ಕಡ್ಡಾಯ, ಯಾವುದೇ ಲಾಕ್​ಡೌನ್​ ಇಲ್ಲ: ಸಿಎಂ ಯಡಿಯೂರಪ್ಪ ಘೋಷಣೆ

ಇನ್ನೆರೆಡು ದಿನಗಳಲ್ಲಿ ಅಂದರೆ ಮಾರ್ಚ್​ 17ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅದಾದ ನಂತರ ಈ ಬಗ್ಗೆ ಅವರ ನಿರ್ಧಾರವೇನು ಎನ್ನುವುದು ಸ್ಪಷ್ಟವಾಗಲಿದೆ. ನಾವು ಕಠಿಣ ನಿಯಮ ಜಾರಿಗೊಳಿಸುವುದು ಬೇಡ ಎಂದೇ ಬಯಸುತ್ತೇವೆ.

ಇಂದಿನಿಂದ ಮಾಸ್ಕ್​ ಕಡ್ಡಾಯ, ಯಾವುದೇ ಲಾಕ್​ಡೌನ್​ ಇಲ್ಲ: ಸಿಎಂ ಯಡಿಯೂರಪ್ಪ ಘೋಷಣೆ
ಸಿಎಂ ಬಿ.ಎಸ್.ಯಡಿಯೂರಪ್ಪ

Updated on: Mar 15, 2021 | 6:58 PM

ಬೆಂಗಳೂರು: ಕೊರೊನಾ ಸೋಂಕಿತರ ಪ್ರಮಾಣ ಮತ್ತೆ ಏರುಗತಿಯಲ್ಲಿ ಸಾಗುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಜ್ಞರ ಜೊತೆ ಸಮಾಲೋಚನಾ ಸಭೆ ನಡೆಸಿದ್ದಾರೆ. ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿರುವ ಮುಖ್ಯಮಂತ್ರಿಗಳು, ಕಳೆದ 14 ದಿನಗಳಲ್ಲಿ ಪಾಸಿಟಿವ್ ರೇಟ್ ಹೆಚ್ಚಾಗಿದೆ. ದೇವರ ದಯೆಯಿಂದ ಮರಣ ಪ್ರಮಾಣ ಕಡಿಮೆ ಇದೆ. ಆದರೆ, ಯಾವುದೇ ಕಾರಣಕ್ಕೂ ಜನ ಮೈಮರೆಯಬಾರದು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ನೈಟ್​ಕರ್ಫ್ಯೂ, ಲಾಕ್​ಡೌನ್​ ಅಥವಾ ಸೀಲ್​ಡೌನ್​ ಬಗ್ಗೆ ಸದ್ಯ ಯಾವುದೇ ಚಿಂತನೆ ಇಲ್ಲ ಎಂದಿರುವ ಯಡಿಯೂಪ್ಪ, ಜನರು ಸ್ವತಃ ಜಾಗೃತಿ ವಹಿಸಿ ಅಂತಹ ಕಠಿಣ ನಿರ್ಧಾರ ಕೈಗೊಳ್ಳದಂತೆ ನಡೆದುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

ಎರಡನೆ ಅಲೆಯ ಮುನ್ಸೂಚನೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಚ್ಚು ಪಾಸಿಟಿವ್ ಇರುವ ಜಿಲ್ಲೆಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸುವುದು, ದೊಡ್ಡ ದೊಡ್ಡ ಅಪಾರ್ಟ್​ಮೆಂಟ್​ಗಳಲ್ಲಿ ಲಸಿಕೆ ನೀಡುವುದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರಿಗೆ ತಕ್ಷಣ ಲಸಿಕೆ ನೀಡುವುದು ಸೇರಿದಂತೆ ಲಸಿಕೆ ವಿತರಣೆ ಕಾರ್ಯವನ್ನು ಚುರುಕುಗೊಳಿಸುವುದಾಗಿ ಹೇಳಿದ್ದಾರೆ.

ಇನ್ನೆರೆಡು ದಿನಗಳಲ್ಲಿ ಅಂದರೆ ಮಾರ್ಚ್​ 17ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅದಾದ ನಂತರ ಈ ಬಗ್ಗೆ ಅವರ ನಿರ್ಧಾರವೇನು ಎನ್ನುವುದು ಸ್ಪಷ್ಟವಾಗಲಿದೆ. ನಾವು ಕಠಿಣ ನಿಯಮ ಜಾರಿಗೊಳಿಸುವುದು ಬೇಡ ಎಂದೇ ಬಯಸುತ್ತೇವೆ. ಜನತೆಗೂ ಅದೇ ಬಯಕೆ ಇದ್ದರೆ ಅವರೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ಸಭೆ, ಸಮಾರಂಭ, ಜಾತ್ರೆಗಳಲ್ಲಿ 100ರಲ್ಲಿ 80 ಭಾಗ ಮಾಸ್ಕ್​ ಧರಿಸುವುದೇ ಇಲ್ಲ. ಇದು ಹಿಂದಿನ ಸ್ಥಿತಿ ಮರುಕಳಿಸುವಂತೆ ಮಾಡಿದೆ. ಹೀಗಾಗಿ ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಒಂದುವೇಳೆ ಅದನ್ನು ಪಾಲಿಸದಿದ್ದರೆ ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ. ಮದುವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗುಂಪುಗೂಡಬೇಡಿ. ಒಂದು ಸಾವಿರ ಜನ ಸೇರುವ ಸಮಾರಂಭದಲ್ಲಿ ವಿಭಜಿಸಿಕೊಳ್ಳಿ. ಸಮಾರಂಭಗಳಲ್ಲಿ 250 ಜನರಂತೆ 4 ಬ್ಯಾಚ್​ನಲ್ಲಿ ಭಾಗವಹಿಸಿ. ಕೊವಿಡ್ ಆಸ್ಪತ್ರೆಗಳು, ಐಸಿಯು ಕೇರ್​ಗಳನ್ನು ಹೆಚ್ಚಿಸುತ್ತೇವೆ. ಮೊದಲಿನಂತೆ ಕೊವಿಡ್ ಸೆಂಟರ್​ಗಳನ್ನು ನಿರ್ಮಿಸುವುದು, ಗ್ರಾಮಾಂತರ, ಸ್ಲಮ್​ಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸುವುದು ಮಾಡುತ್ತೇವೆ. ಆದರೆ, ಜನರು ಎಚ್ಚೆತ್ತುಕೊಳ್ಳುವುದೇ ಒಳ್ಳೆಯ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನ ಮಂತ್ರಿಗಳು ಸಭೆಯಲ್ಲಿ ನೀಡುವ ಸೂಚನೆ ಮೇರೆಗೆ ಮಾರ್ಗಸೂಚಿ ಅನುಸರಿಸುತ್ತೇವೆ. ಒಂದುವೇಳೆ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರ ಬಂದರೆ ಏನೂ ಮಾಡಲಾಗುವುದಿಲ್ಲ. ಶಾಲೆಗಳಿಗೆ ಸಂಬಂಧಿಸಿದ ಯಾವುದೇ ನಿರ್ಣಯ ಕೈಗೊಂಡಿಲ್ಲ. ಇನ್ನೂ ಒಂದು ವಾರದವರೆಗೆ ಯಾವುದೇ ನಿರ್ಣಯ ಕೈಗೊಳ್ಳಲ್ಲ ಎಂದು ತಿಳಿಸಿರುವ ಮುಖ್ಯಮಂತ್ರಿಗಳು, ಜನರು ಹೆಚ್ಚಿನ ಪ್ರಮಾಣದಲ್ಲಿ ಮುಂದೆ ಬಂದು ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:
‘ಕೊರೊನಾ ಹಬ್ಬಲು ಮುಖ್ಯ ಕಾರಣವೆಂದರೆ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ 

ವ್ಯಾಕ್ಸಿನ್ ಹಾಕಿದ್ರಾ?.. ಗೊತ್ತೇ ಆಗ್ಲಿಲ್ಲ -ಕೊರೊನಾ ಲಸಿಕೆ ಪಡೆದ ಬಳಿಕ ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ

Published On - 6:45 pm, Mon, 15 March 21

Loading...
Unable to load recommendations.
Follow Us