AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಸಿಜನ್ ಟ್ಯಾಂಕರ್​ ಸಂಚಾರಕ್ಕೆ ಗ್ರೀನ್​ ಕಾರಿಡಾರ್, ರಾಜ್ಯದ ಎಲ್ಲ ಆಸ್ಪತ್ರೆಗಳ ಸ್ಥಿತಿಗತಿ ಪರಿಶೀಲನೆ: ಚಾಮರಾಜನಗರ ದುರಂತದಿಂದ ಪಾಠ ಕಲಿತ ಸರ್ಕಾರ

ತುರ್ತು ಸಂದರ್ಭದಲ್ಲಿ ಆಕ್ಸಿಜನ್ ವಾಹನಗಳ ಚಾಲನೆಗಾಗಿ ಎಲ್‍ಪಿಜಿ ಟ್ಯಾಂಕರ್​ಗಳ ಚಾಲಕರ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡು ಅಗತ್ಯವಿದ್ದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳಲು ಸಭೆ ನಿರ್ಧರಿಸಿತು.

ಆಕ್ಸಿಜನ್ ಟ್ಯಾಂಕರ್​ ಸಂಚಾರಕ್ಕೆ ಗ್ರೀನ್​ ಕಾರಿಡಾರ್, ರಾಜ್ಯದ ಎಲ್ಲ ಆಸ್ಪತ್ರೆಗಳ ಸ್ಥಿತಿಗತಿ ಪರಿಶೀಲನೆ: ಚಾಮರಾಜನಗರ ದುರಂತದಿಂದ ಪಾಠ ಕಲಿತ ಸರ್ಕಾರ
ಆಕ್ಸಿಜನ್ ಉತ್ಪಾದಕರು ಮತ್ತು ಸರಬರಾಜುದಾರರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.
Ghanashyam D M | ಡಿ.ಎಂ.ಘನಶ್ಯಾಮ
|

Updated on: May 03, 2021 | 6:38 PM

Share

ಬೆಂಗಳೂರು: ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 24 ರೋಗಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಇಂಥ ದುರಂತ ಮತ್ಯಾವ ಜಿಲ್ಲೆಯಲ್ಲಿಯೂ ಸಂಭವಿಸಬಾರದು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಆಕ್ಸಿಜನ್ ಉತ್ಪಾದಕರು ಮತ್ತು ಸರಬರಾಜುದಾರರ ಸಭೆ ನಡೆಸಲಾಯಿತು. ಮುಖ್ಯಮಂತ್ರಿ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಭೆ ನಡೆಯಿತು. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್​, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಆಕ್ಸಿಜನ್ ಉತ್ಪಾದಕರು ಮತ್ತು ಸರಬರಾಜುದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಚಾಮರಾಜನಗರದಲ್ಲಿ ನಡೆದಂಥ ದುರಂತ ಇತರ ಯಾವುದೇ ಜಿಲ್ಲೆಯಲ್ಲಿ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಔಷಧಗಳ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲಾಸ್ಪತ್ರೆಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.

ಈಗ ಕೇಂದ್ರ ಸರ್ಕಾರವು ಹಂಚಿಕೆ ಮಾಡಿರುವ ಆಕ್ಸಿಜನ್ ಕೋಟಾದಲ್ಲಿ ಯಾವುದೇ ರೀತಿ ಕಡಿತವಾಗದಂತೆ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆಕ್ಸಿಜನ್ ಟ್ಯಾಂಕರ್​ಗಳ ಫಿಲ್ಲಿಂಗ್ ಅವಧಿ ಕಡಿತಗೊಳಿಸಲು ಕ್ರಮ ಕೈಗೊಳ್ಳಬೇಕು. ಆಕ್ಸಿಜನ್ ಟ್ಯಾಂಕರ್​ಗಳ ತಡೆರಹಿತ ಪ್ರಯಾಣಕ್ಕಾಗಿ ಗ್ರಿನ್ ಕಾರಿಡಾರ್​ ಒದಗಿಸಬೇಕು. ಟೋಲ್‍ಗಳಲ್ಲಿ ಅನಗತ್ಯ ವಿಳಂಬ ತಪ್ಪಿಸಲು ನಿರ್ದೇಶನ ನೀಡುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ನೈಟ್ರೋಜನ್, ಆರ್ಗನ್ ಅನಿಲಗಳ ಸಾಗಣೆ ಟ್ಯಾಂಕರ್​ಗಳನ್ನು ಆಕ್ಸಿಜನ್ ಸಾಗಣೆ ಟ್ಯಾಂಕರ್​ಗಳಾಗಿ ಪರಿವರ್ತಿಸಲು ಕ್ರಮಕೈಗೊಳ್ಳುವ ಬಗ್ಗೆ ಸಲಹೆ ಕೇಳಿಬಂತು. ತುರ್ತು ಸಂದರ್ಭದಲ್ಲಿ ಆಕ್ಸಿಜನ್ ವಾಹನಗಳ ಚಾಲನೆಗಾಗಿ ಎಲ್‍ಪಿಜಿ ಟ್ಯಾಂಕರ್​ಗಳ ಚಾಲಕರ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡು ಅಗತ್ಯವಿದ್ದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳಲು ಸಭೆ ನಿರ್ಧರಿಸಿತು.

ಆಕ್ಸಿಜನ್ ಉತ್ಪಾದಕರು ಮತ್ತು ಸರಬರಾಜುದಾರರು ಆಕ್ಸಿಜನ್ ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ನಿಯೋಜಿಸಲ್ಪಟ್ಟ ಅಧಿಕಾರಿಗೆ ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಡೆರಹಿತವಾಗಿ ಆಕ್ಸಿಜನ್ ಪೂರೈಕೆ ಮಾಡಲು ಕೋರಲಾಯಿತು. ಲಭ್ಯವಿರುವ ಟ್ಯಾಂಕರ್​ಗಳನ್ನು ಗರಿಷ್ಠ ಪ್ರಮಾಣದಲ್ಲಿ‌ ಬಳಸಿಕೊಳ್ಳಲು ಸೂಚಿಸಲಾಯಿತು.

(CM BS Yediyurappa instructs Green Corridor for Oxygen Tanker Decision to review all govt Hospitals)

ಇದನ್ನೂ ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಯಲ್ಲೇ 22 ರೋಗಿಗಳ ಸಾವು | ಮೃತ ಸಂಬಂಧಿಕರ ಆಕ್ರಂದನ

ಇದನ್ನೂ ಓದಿ: ಚಾಮರಾಜನಗರದಲ್ಲುಂಟಾದ ಪರಿಸ್ಥಿತಿ ಬೆಂಗಳೂರಿಗೂ ಬರಲಿದೆ: ಆತಂಕಕಾರಿ ಮಾಹಿತಿಯನ್ನೊಂದು ಬಿಚ್ಚಿಟ್ಟ ಫನಾ ಅಧ್ಯಕ್ಷ